ಸುದೀರ್ಮನ್ ಕಪ್ಗೆ ಭಾರತ ತಂಡ ಪ್ರಕಟ; ಎಚ್.ಎಸ್.ಪ್ರಣಯ್, ಪಿ.ವಿ.ಸಿಂಧು ಮೇಲೆ ಎಲ್ಲರ ಚಿತ್ತ
* ಸುದೀರ್ಮನ್ ಕಪ್ ಟೂರ್ನಿಗೆ ಭಾರತ ಬ್ಯಾಡ್ಮಿಂಟನ್ ತಂಡ ಪ್ರಕಟ
* ಮೇ 14 ರಿಂದ 21ರವರೆಗೆ ಚೀನಾದಲ್ಲಿ ನಡೆಯಲಿರುವ ಟೂರ್ನಿ
* ಭಾರತದ ಸವಾಲನ್ನು ಎಚ್.ಎಸ್.ಪ್ರಣಯ್, ಪಿ.ವಿ.ಸಿಂಧು ಮುನ್ನಡೆಸಲಿದ್ದಾರೆ
ನವದೆಹಲಿ(ಏ.20): ಪ್ರತಿಷ್ಠಿತ 2023ರ ಸುದೀರ್ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿ ಮೇ 14ರಿಂದ 21ರ ವರೆಗೆ ಚೀನಾದ ಸೂಝ್ಹೊದಲ್ಲಿ ನಡೆಯಲಿದ್ದು, ಭಾರತದ ಸವಾಲನ್ನು ಎಚ್.ಎಸ್.ಪ್ರಣಯ್, ಪಿ.ವಿ.ಸಿಂಧು ಮುನ್ನಡೆಸಲಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಕಿದಂಬಿ ಶ್ರೀಕಾಂತ್ ಕೂಡಾ ಸ್ಪರ್ಧಿಸಲಿದ್ದು, ಲಕ್ಷ್ಯ ಸೇನ್ ಮೀಸಲು ಆಟಗಾರನಾಗಿ ತಂಡದ ಜೊತೆಗಿರಲಿದ್ದಾರೆ.
ಸಿಂಧು ಜೊತೆ ಅನುಪಮಾ ಉಪಾಧ್ಯಾಯ ಮಹಿಳಾ ಸಿಂಗಲ್ಸ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್-ಚಿರಾಗ್, ಅರ್ಜುನ್-ಧೃವ್ ಕಪಿಲಾ, ಮಹಿಳಾ ಡಬಲ್ಸ್ನಲ್ಲಿ ಗಾಯತ್ರಿ-ತ್ರೀಸಾ, ಅಶ್ವಿನಿ-ತನೀಷಾ, ಮಿಶ್ರ ಡಬಲ್ಸ್ನಲ್ಲಿ ತನೀಷಾ-ಸಾಯಿ ಪ್ರತೀಕ್ ಸ್ಪರ್ಧಿಸಲಿದ್ದಾರೆ. ಚಾಂಪಿಯನ್ಶಿಪ್ನಲ್ಲಿ 16 ತಂಡಗಳು ಪಾಲ್ಗೊಳ್ಳಲಿದ್ದು, 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ ‘ಸಿ’ ಗುಂಪಿನಲ್ಲಿ ಮಲೇಷ್ಯಾ, ಚೈನೀಸ್ ತೈಪೆ ಹಾಗೂ ಆಸ್ಪ್ರೇಲಿಯಾ ಜೊತೆ ಸ್ಥಾನ ಪಡೆದಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ಮುಂದಿನ ತಿಂಗಳು ರಾಜ್ಯ ಯುವ ಬಾಸ್ಕೆಟ್ಬಾಲ್
ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆ(ಕೆಎಸ್ಬಿಎ) ಮೇ ತಿಂಗಳ ಮೊದಲ ವಾರ ಅಂಡರ್-16 ಬಾಲಕ, ಬಾಲಕಿಯರಿಗಾಗಿ ರಾಜ್ಯ ಯುವ ಬಾಸ್ಕೆಟ್ಬಾಲ್ ಚಾಂಪಿಯನ್ಶಿಪ್ ಆಯೋಜಿಸುತ್ತಿದೆ. ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದ್ದು, 2007ರ ಜನವರಿ 1ರ ಬಳಿಕ ಜನಿಸಿದವರು ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆಯಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಮೇ 14ಕ್ಕೆ ರಾಜ್ಯ ಫುಟ್ಬಾಲ್ ರೆಫ್ರಿಗಳ ಅರ್ಹತಾ ಪರೀಕ್ಷೆ
ಬೆಂಗಳೂರು: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್ಎಫ್ಎ)ಯು ಫುಟ್ಬಾಲ್ ರೆಫ್ರಿ ಆಗ ಬಯಸುವ ಆಸಕ್ತರಿಗೆ ಮೇ 14ರಂದು ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಅರ್ಹತಾ ಪರೀಕ್ಷೆ ಏರ್ಪಡಿಸಿದೆ. ಇದರ ಭಾಗವಾಗಿ ಮೇ 11ರಿಂದ 13ರ ವರೆಗೆ ತರಬೇತಿ ಶಿಬಿರ ಆಯೋಜಿಸಿದೆ. ಎಸ್ಸೆಸ್ಸೆಲ್ಸಿ ತೇರ್ಗಡೆಗೊಂಡ, ಕರ್ನಾಟಕದ 18ರಿಂದ 35 ವರ್ಷ ವಯೋಮಾನದ ಅಭ್ಯರ್ಥಿಗಳು ಎಐಎಫ್ಎಫ್ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕೆಎಸ್ಎಫ್ಎ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 8660621556, 9535379025 ಸಂಪರ್ಕಿಸಬಹುದು.
ಭಾರತದಲ್ಲಿ ಮೊದಲ ಬಾರಿ ಅಂತಾರಾಷ್ಟ್ರೀಯ ಸರ್ಫ್ ಕೂಟ
ಚೆನ್ನೈ: ಇದೇ ಮೊದಲ ಬಾರಿಗೆ ವಿಶ್ವ ಸಫ್ರ್ ಲೀಗ್(ಡಬ್ಲ್ಯುಎಸ್ಎಲ್) ಭಾಗವಾದ ಅಂತಾರಾಷ್ಟ್ರೀಯ ಮುಕ್ತ ಸರ್ಫ್ ಚಾಂಪಿಯನ್ಶಿಪ್ ಆತಿಥ್ಯ ಹಕ್ಕು ಭಾರತಕ್ಕೆ ಲಭಿಸಿದ್ದು, ತಮಿಳುನಾಡಿದ ಮಹಾಬಲಿಪುರಂನಲ್ಲಿ ಆಗಸ್ಟ್ 14ರಿಂದ 20ರ ವರೆಗೆ ಕೂಟ ನಡೆಯಲಿದೆ. ಇದನ್ನು ತಮಿಳುನಾಡು ಕ್ರೀಡಾ ಸಚಿವ ಉಧಯನಿಧಿ ಸ್ಟಾಲಿನ್ ಮಂಗಳವಾರ ಖಚಿತಪಡಿಸಿದರು. ಕೂಟದಲ್ಲಿ 12ರಿಂದ 14 ದೇಶಗಳ ಸುಮಾರು 100ರಷ್ಟು ಸರ್ಫರ್ಗಳು ಪಾಲ್ಗೊಳ್ಳಲಿದ್ದಾರೆ. ಭಾರತದ 10 ಮಂದಿ ಸರ್ಫರ್ಗಳು ಕೂಟಕ್ಕೆ ವೈಲ್ಡ್ ಕಾರ್ಡ್ ಪ್ರವೇಶ ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು.
ಅರ್ಜುನ್ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಕ್ಷಣ ಕಂಡು ಕಣ್ಣೀರಿಟ್ಟಿದ್ದ ಸಚಿನ್!
ಕಿರಿಯರ ಕುಸ್ತಿ: ರಾಜ್ಯದ ಶ್ವೇತಾಗೆ ಚಿನ್ನದ ಪದಕ
ಬೆಂಗಳೂರು: ರಾಷ್ಟ್ರೀಯ ಕಿರಿಯರ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಇದೇ ಮೊದಲ ಬಾರಿ ಕರ್ನಾಟಕ ಚಿನ್ನದ ಪದಕದ ಸಾಧನೆ ಮಾಡಿದೆ. ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದ ಅಂಡರ್-17 ವಿಭಾಗದ ಕೂಟದಲ್ಲಿ ರಾಜ್ಯದ ಕುಸ್ತಿಪಟು ಶ್ವೇತಾ ಅಣ್ಣಕೇರಿ 49 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇದೇ ವೇಳೆ 69 ಕೆ.ಜಿ. ವಿಭಾಗದಲ್ಲಿ ಮನಿಷಾ ಸಿದ್ಧಿ ಕಂಚಿನ ಪದಕ ಪಡೆದರೆ, 57 ಕೆ.ಜಿ. ಸ್ಪರ್ಧೆಯಲ್ಲಿ ಲಕ್ಷ್ಮಿ ಪಾಟೀಲ್ ಕೂಡಾ ಕಂಚು ಗೆದ್ದರು.