Asianet Suvarna News Asianet Suvarna News

ಸುದೀಪ್‌ ಅವ್ರ ತೇಜೋವಧೆಗೆ ಇಳಿದಿದ್ದಾರೆ, ಮಾನಹರಣವಷ್ಟೇ ಇದರ ಹಿಂದಿನ ಉದ್ದೇಶ: ವೀರಕಪುತ್ರ ಶ್ರೀನಿವಾಸ್ ಆಕ್ರೋಶ

ಸುದೀಪ್‌ ಅವ್ರ ತೇಜೋವಧೆಗೆ ಇಳಿದಿದ್ದಾರೆ, ಮಾನಹರಣವಷ್ಟೇ ಇದರ ಹಿಂದಿನ ಉದ್ದೇಶ ಎಂದು ವೀರಕಪುತ್ರ ಶ್ರೀನಿವಾಸ್ ಆಕ್ರೋಶ ಹೊರಹಾಕಿದ್ದಾರೆ. 

veerakaputra srinivasa long note about Kiccha Sudeep and MN Kumar controversy sgk
Author
First Published Jul 13, 2023, 11:11 AM IST

ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಮ್ ಎನ್ ಕುಮಾರ್ ವಿವಾದ ದಿಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.  ಈ ವಿವಾದಲ್ಲಿ ಇದೀಗ ಮತ್ತೋರ್ವ ಖ್ಯಾತ ನಿರ್ಮಾಪಕರ ಹೆಸರು ಕೇಳಿ ಬರುತ್ತಿದೆ. ಸುದೀಪ್ ವಿರುದ್ಧದ ಷಡ್ಯಂತರದಲ್ಲಿ ಮತ್ತೋರ್ವ ನಿರ್ಮಾಪಕ ಕೈವಾಡವಿದೆ ಎಂದು ವೀರಕಪುತ್ರ ಶ್ರೀನಿವಾಸ್ ಕಿಡಿ ಕಾರಿದ್ದಾರೆ. ಈ ಬಗ್ಗೆ ವೀರಕಪುತ್ರ ಶ್ರೀನಿವಾಸ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್ ಶೇರ್ ಮಾಡಿದ್ದಾರೆ. 

ವೀರಕಪುತ್ರ ಶ್ರೀನಿವಾಸ್ ಪತ್ರ

ಬಿಡಿಗಾಸಿಲ್ಲದೆಯೂ ಬಿಗ್‌ ಬಜೆಟ್‌ ಸಿನಿಮಾ ಮಾಡುವುದ್ಹೇಗೆ ಗೊತ್ತಾ? 

'ಇತ್ತೀಚೆಗೆ ಕಿಚ್ಚ ಸುದೀಪ್‌ ಅವ್ರ ಕುರಿತಾಗಿ ತುಂಬಾ ಮಾತುಗಳು ಕೇಳಿಬರ್ತಿವೆ. ಅವ್ರು ನಿರ್ಮಾಪಕರಿಗೆ ಹಣ ಕೊಡ್ಬೇಕಂತೆ,  ಕಾಲ್ ಶೀಟ್‌ ಕೊಡಬೇಕಂತೆ, ಆದ್ರೆ ಸಾಕ್ಷಿಗಳಿಲ್ಲವಂತೆ. ಅದಂತೆ, ಇದಂತೆ... ಅನ್ನೋ ಅಂತೆ ಕಂತೆಗಳು ತುಂಬಾನೇ ಹರಿದಾಡ್ತಿವೆ. ಈ ಪ್ರಕರಣದ ಬೆಳವಣಿಗೆಗಳನ್ನು ಒಂದು ವಾರದಿಂದ ಗಮನಿಸುತ್ತಿದ್ದೇನೆ. ಇದೊಂದು ಹಣದ ವಿಷಯವಾಗಿ ಮಾತ್ರ ಉಳಿದಿದೆ ಅಂತ ನನಗನ್ನಿಸುತ್ತಿಲ್ಲ. ಈ ಪ್ರಕರಣ ಮಾನಹರಣಕ್ಕೆ ಮಾತ್ರ ಮೀಸಲಾಗಿರುವುದು ಸ್ಪಷ್ಟವಾಗಿದೆ. ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ತಂದು ಕೊಟ್ಟ ಖ್ಯಾತನಟನ ವಿರುದ್ದವಾಗಿ ಇಷ್ಟೆಲ್ಲಾ ನಡೆಯುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಹಾಗಂತ ಸುದೀಪ್‌ ಅವ್ರು ಪ್ರಶ್ನಾತೀತರಲ್ಲ. ತಪ್ಪು ಮಾಡಿದಾಗ ಅವರನ್ನೂ ಪ್ರಶ್ನಿಸಬೇಕು. ಆದ್ರೆ ಪ್ರಶ್ನಿಸುತ್ತಿರುವವರ ಅಸಲೀಯತ್ತು, ಪ್ರಮಾಣಿಕತೆಯನ್ನು ಓರೆಗೆ ಹಚ್ಚಬೇಕಿದೆ. ಅಂತಹ ಕೆಲವು ಸಂಗತಿಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ. ನಾನ್ಯಾಕೆ ಹಂಚಿಕೊಳ್ಳಬೇಕು ಅಂದ್ರೆ ಸುದೀಪ್‌ ಸರ್‌ ಅವ್ರ ಜೊತೆ ಮಾತ್ರವಲ್ಲ ಈ ಆರೋಪಗಳನ್ನು ಮಾಡುತ್ತಿರುವ ಇಬ್ಬರು ನಿರ್ಮಾಪಕರ ಜೊತೆಗೂ ನನಗೆ ಅಷ್ಟೇ ಒಡನಾಟವಿರುವುದರಿಂದ ಈ ಮಾತುಗಳನ್ನು ನಾನು ಹೇಳಲೇಬೇಕು' ಎಂದಿದ್ದಾರೆ. 

'ಸುದೀಪ್‌ ಅವ್ರ ಬಗ್ಗೆ ಕುಮಾರ್‌ ಅವ್ರು ಆರೋಪ ಮಾಡಿದ್ರು. ಸುದೀಪ್ ನನಗೆ ಒಂಭತ್ತು ಕೋಟಿ ಹಣ ಕೊಡಬೇಕು ಅಂತ. ಆದರೆ ಅದಕ್ಕೆ ಯಾವುದೇ ಸಾಕ್ಷಿಯಿಲ್ಲ ನಮ್ಮ ಮನಸಾಕ್ಷಿಯೇ ಸಾಕ್ಷಿ ಅಂತ. ಈ ಮನಸಾಕ್ಷಿ, ವನಜಾಕ್ಷಿ, ಮೀನಾಕ್ಷಿಯನ್ನಿಟ್ಟುಕೊಂಡು ವ್ಯವಹಾರ ಮಾಡೋದನ್ನು ಗಾಂಧಿನಗರದವರು ಎಲ್ಲಿಂದ ಕಲಿತರು ಅಂತ? ನಮ್ಮ ಹಳ್ಳಿಗಳಲ್ಲಿ ಅಂಗಡಿಗೆ ಹೋಗಿ ಕಾಫಿಪುಡಿ ಸಾಲದ ರೂಪದಲ್ಲಿ ತಂದ್ರೂ ಅದನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಾನೆ ಆ ಅಂಗಡಿಯವನು. ಅಂತಹುದರಲ್ಲಿ ಕುಮಾರ್‌ ಅವ್ರು ಅಷ್ಟು ದೊಡ್ಡ ಮೊತ್ತವನ್ನು ಏನೂ ದಾಖಲೆಗಳಿಲ್ಲದೆ ಕೊಟ್ಟರೆಂದರೆ ಯಾರಾದ್ರೂ ನಂಬ್ತಾರೆ? ಯಾಕಾದ್ರೂ ನಂಬಬೇಕು? ಅಂದ್ರೆ ಅವರ ಬಳಿ ಅಷ್ಟೊಂದು ಹಣ ಇದೆಯಾ? ಮುಂದುವರಿದು ಅವ್ರು ಹೇಳ್ತಾರೆ.. ನನಗೆ ಹಣ ಬೇಡ ಆದ್ರೆ ಕಾಲ್ ಶೀಟ್ ಕೊಡಿ ಅಂತ. ಇತ್ತ ಕಡೆ ಆರೋಪ ಮಾಡುತ್ತಲೇ, ಅತ್ತ ಕಡೆ ಅವಕಾಶ ಕೇಳುತ್ತಿರುವ ಒಂದು ಕೆಟ್ಟ ವಿದ್ಯಮಾನವಾಗಿ ಕರ್ನಾಟಕ ಚಲನಚಿತ್ರ ಇತಿಹಾಸದಲ್ಲಿ ಇದು ದಾಖಲಾಗಿ ಉಳಿಯಲಿದೆ' ಎಂದಿದ್ದಾರೆ. 

ಸುದೀಪ್ - MN ಕುಮಾರ್​ ವಿವಾದ: ಕುಮಾರ್ ಭುಜದ ಮೇಲೆ ಗನ್ ಇಟ್ಟು ಹೊಡಿತ್ತಿದ್ದಾರೆ- ಜಾಕ್ ಮಂಜು ಕಿಡಿ

'ಸುದೀಪ್‌ ಏನೂ ಇಲ್ಲದೇ ಇದ್ದಾಗ ನಾವು ಜೊತೆಗಿದ್ವಿ, ಈಗ ಆತ ಎತ್ತರಕ್ಕೆ ಬೆಳೆದುಬಿಟ್ಟಿದ್ದಾರೆ. ಆದ್ದರಿಂದ ನಾವು ಕಷ್ಟಕ್ಕೆ ಸಿಕ್ಕಿಕೊಂಡಾಗಲೆಲ್ಲಾ ಸುದೀಪ್‌ ಸಹಾಯ ಹಸ್ತ ಚಾಚ್ತಾ ಇರ್ಬೇಕು? ಇದೆಂತಾ ನ್ಯಾಯ ಸ್ವಾಮಿ. ಮೋದಿಯವರು ಕೂಡ ಟೀ ಮಾರುತ್ತಿದ್ರು ಹಾಗಂತ ಅವ್ರನ್ನು ಈಗಲೂ ಟೀ ಅಂಗಡಿಯಲ್ಲೇ ಕೂತಿರಿ ಅಂತ ಹೇಳೋಕಾಗುತ್ತಾ?  ನಿಮ್ಮಂತಹ ಸ್ನೇಹಿತರನ್ನು ನಂಬಿಕೊಂಡು ಸುದೀಪ್ ಅವ್ರು ಮಾಡಿದ ಸಿನಿಮಾಗಳೆಷ್ಟು ಅಂತ ಒಂದ್ಸಲ ಲೆಕ್ಕಮಾಡಿ ನೋಡಿ. ಮತ್ತು ಅವುಗಳು ಬಿಡುಗಡೆ‌ ಸಂದರ್ಭದಲ್ಲಿ ಎದುರಿಸಿದ ಕಷ್ಟಗಳು ಎಷ್ಟು ಎಂತಹವು ಗೊತ್ತಾ..? ರನ್ನ ಸಿನಿಮಾ ಬಿಡುಗಡೆ ಮುನ್ನಾ ದಿನ ಎಂಥಾ ಇಕ್ಕಟ್ಟಿಗೆ ಸಿಕ್ಕಿಕೊಂಡಿತು? ಕೋಟಿಗೊಬ್ಬ 3 ಬಿಡುಗಡೆಯೇ ಆಗಲಿಲ್ಲ. ಇದಕ್ಕೆಲ್ಲಾ ಕಾರಣ ಯಾರು? ಅದೇ ಸ್ನೇಹಿತರಲ್ಲವೇ' ಎಂದು ಪ್ರಶ್ನಿಸಿದ್ದಾರೆ. 

'ಸೂರಪ್ಪ ಬಾಬು ಅಂತ ಒಬ್ಬರಿದ್ದಾರೆ. ಈ ಪ್ರಕರಣದಲ್ಲಿ ಅವ್ರು ಎಲ್ಲೂ ಕಾಣಿಸ್ತಿಲ್ಲ ಅಷ್ಟೇ, ಆದ್ರೆ ಇದರ ಹಿಂದೆ ನಿಂತು ನಡೆಸ್ತಿರೋರಲ್ಲಿ ಅವ್ರೂ ಒಬ್ರು. ಸೂರಪ್ಪ ಬಾಬು ಅವರು ನನಗೆ ಆತ್ಮೀಯರಾಗಿದ್ದವರು. ಅದೇ ಕಾರಣಕ್ಕೆ ಅವ್ರು ನಾನು ಅನೇಕ ವಿಷ್ಯಗಳ ಬಗ್ಗೆ ಅನೇಕ ವರ್ಷಗಳಿಂದ ಮಾತನಾಡ್ತಾ ಬಂದಿದ್ದೇವೆ. ಅವುಗಳ ಬಗ್ಗೆ ಈಗ ಹೇಳುವುದು ನನ್ನ ವ್ಯಕ್ತಿತ್ವ ಅಲ್ಲ. ಆದ್ರೆ ಅವರ ಮನಸಲ್ಲಿ ಒಳ್ಳೇತನವಿಲ್ಲ ಎಂಬುದು ಮಾತ್ರ ಸತ್ಯ. ಅವರಿಗೆ ವಿಷ್ಣು ಸರ್‌ ಬಗ್ಗೆಯೂ ಗೌರವವರಿಲಿಲ್ಲ, ಸುದೀಪ್‌ ಸರ್‌ ಬಗ್ಗೆಯೂ ಗೌರವವಿರಲಿಲ್ಲ. ನನ್ನ ಜೊತೆ ಮಾತನಾಡುವಾಗಲೆಲ್ಲಾ ಅವರಿಬ್ಬರನ್ನು ಏಕವಚನದಲ್ಲಿಯೇ ಸಂಭೋದಿಸಿದ್ದಾರೆ. ಕೇವಲ ವ್ಯವಹಾರಕ್ಕೆ ಮಾತ್ರ ಇವ್ರು ಅವರಿಬ್ಬರ ಜೊತೆ ಚೆನ್ನಾಗಿದ್ದರು ಅಷ್ಟೇ. ಇದೇ ಸೂರಪ್ಪಬಾಬು ಅವ್ರು ಬಸವೇಶ್ವರ ನಗರದ ಹೋಟೆಲ್‌ ಒಂದರಲ್ಲಿ ಅನ್ನದ ಎದುರು ಕೂತು ಹೇಳಿದ್ದ ಮಾತು 'ಕೋಟಿಗೊಬ್ಬ 2ರಲ್ಲಿ ನನ್ನಿಂದ ಸುದೀಪ್‌ ಅವ್ರಿಗೆ ಸ್ವಲ್ಪ ಬೇಸರವಾಗಿದೆ. ನನ್ನ ಸ್ವಯಂಕೃತ ಅಪರಾಧಗಳಿಂದಾಗಿ ಸಿನಿಮಾ ಹಿಟ್ ಆದ್ರೂ ನನಗೆ ಲಾಭವಾಗಲಿಲ್ಲ. ಹೇಗೋ ನನಗೆ ಇಬ್ಬರು ಹೆಣ್ಮಕ್ಕಳ್ಳಿರುವ ವಿಷ್ಯ ಸುದೀಪ್‌ ಅವ್ರಿಗೆ ಗೊತ್ತಾದ ಮೇಲೆ ಅವರೇ ಕರೆದು ಕೋಟಿಗೊಬ್ಬ 3 ಸಿನಿಮಾ ಮಾಡೋಕೆ ಅವಕಾಶ ಕೊಟ್ರು' ಅಂತ ಹೇಳಿದ್ದರು. 

ನಿರ್ಮಾಪಕ MN ಕುಮಾರ್ ವಿವಾದ: ಫಿಲ್ಮ್ ಚೇಂಬರ್‌ಗೆ ದೀರ್ಘ ಪತ್ರ ಬರೆದ ಕಿಚ್ಚ ಸುದೀಪ್

'ಆದ್ರೆ ಅದೇ ಸೂರಪ್ಪಬಾಬು ಇವತ್ತು ಈ ಷಡ್ಯಂತ್ರದ ಭಾಗವಾಗಿದ್ದಾರೆ. ಸುದೀಪ್‌ ಅವ್ರ ತೇಜೋವಧೆಗೆ ಇಳಿದಿದ್ದಾರೆ. ಅನೇಕ ಪತ್ರಕರ್ತರಿಗೆ ಕರೆಮಾಡಿ, ನಾಳೆ ಸುದೀಪ್‌ ವಿರುದ್ದ ಪ್ರೆಸ್ಮೀಟ್‌ ಇದೆ, ನಿಮ್ಮ ಫುಲ್‌ ಸಪೋರ್ಟ್‌ ಬೇಕು ಅಂತ ಕೇಳಿದ್ದಾರೆ. ತಪ್ಪಲ್ವಾ ಸೂರಪ್ಪ ಬಾಬು ಅವರೇ ನಿಮ್ಮ ಕಷ್ಟಕ್ಕೆ ಅಂತ ಜೊತೆಯಾದ ವ್ಯಕ್ತಿ ಬಗ್ಗೆ ಹೀಗೆಲ್ಲಾ ಮಾಡುವುದು ತಪ್ಪಲ್ವಾ..? ಇವತ್ತು ಸುದೀಪ್‌ ಅವ್ರು ಮತ್ತೆ ಕಾಲ್‌ಶೀಟ್‌  ಕೊಡ್ತಿಲ್ಲ ಅಂತ ನೀವು ಆರೋಪ ಮಾಡಲು ಪ್ರೆಸ್ಮೀಟ್‌ ಮಾಡಿಸ್ತೀದ್ದೀರಲ್ವಾ.  ನಿಮ್ಮ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ನಿಂತು ಹೋದ ದಿನ,  ನಾನು ಜಾಕ್‌ ಮಂಜು ಅವರ ಮೂಲಕ ಹಣ ಕಳುಹಿಸಿಕೊಟ್ಟೆ ಅದನ್ನು ನೀವು ಎರಡೂವರೆ ವರ್ಷಗಳ ಕಾಲ ಕಾಡಿಸಿ, ಆಡಿಸಿ, ನೋಯಿಸಿ ವಾಪಸ್ಸು ಮಾಡಿದ್ರಿ. ಇನ್ನೂ ಸ್ವಲ್ಪ ಹಣ ಬಂದೇ ಇಲ್ಲ! ಅದರ ಬಗ್ಗೆ ನಾನೂ ಪ್ರೆಸ್ಮೀಟ್‌ ಮಾಡ್ಲಾ? ನಿಮ್ಜೊತೆಗಿನ ಸ್ಕ್ರೀನ್‌ ಶಾಟ್‌ ಗಳನ್ನು ಶೇರ್‌ ಮಾಡ್ಲಾ?  ನೀವು ಜೊತೆಗಿದ್ದವರಿಗೆ ಹೀಗೆ ಬೆನ್ನಿಗೆ ಚೂರಿ ಹಾಕುವುದಾದರೆ, ನಾನೂ ಹಾಕಬಹುದಿತ್ತಲ್ಲವಾ? ಆದ್ರೆ ನಾನು ಆ ಕೆಲಸ ಮಾಡಲಿಲ್ಲ ಏಕೆಂದರೆ ನನ್ನ ಯಜಮಾನ್ರು ಆ ಸಂಸ್ಕಾರ ನನಗೆ ಕಲಿಸಿಲ್ಲ. ಬಟ್‌ ಯಜಮಾನ್ರ ಗರಡಿಯಲ್ಲಿ ಪಳಗಿದ ನಿಮಗ್ಯಾಕೆ ಆ ಸಂಸ್ಕಾರ ಬರಲಿಲ್ಲ?' ಎಂದು ವೀರಕ ಪುತ್ರ ಶ್ರೀನಿವಾಸ್ ಪ್ರಶ್ನಿಸಿದ್ದಾರೆ. 

Follow Us:
Download App:
  • android
  • ios