Asianet Suvarna News Asianet Suvarna News

ನೀವು ಜೀವ ಮೀರಿದ ಒಂದು ಪ್ರಪಂಚ: ಅಂಬಿ ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ಸುಮಲತಾ!

ಇರುವುದೊಂದೇ ಜೀವನ ಅದೆಷ್ಟು ವ್ಯತ್ಯಾಸವಿದೆ. ಎಂದೆಂದಿಗೂ ನಮ್ಮ ನೆನಪುಗಳಲ್ಲಿ, ಸುಖ, ದುಃಖ, ನಗು, ಕಣ್ಣೀರು. ಪ್ರತಿಯೊಂದು ಕ್ಷಣವೂ ನೀವು ಬಿಟ್ಟ ನಿರ್ವಾತವನ್ನು ಅಳೆಯಲಾಗದು. ನಾನು ಆ ಪ್ರೀತಿಯನ್ನು ಕಾಪಿಟ್ಟುಕೊಳ್ಳುತ್ತೇನೆ.

sumalatha ambareesh emotional post on ambareesh 5th death anniversary gvd
Author
First Published Nov 25, 2023, 2:30 AM IST

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರು ಅಗಲಿ ಐದು ವರ್ಷಗಳಾಗಿವೆ. ಅವರ ಪುಣ್ಯಸ್ಮರಣೆಯ ನಿಮಿತ್ತ ಹಲವಾರು ಕಾರ್ಯಕ್ರಮಗಳನ್ನು ಅಂಬರೀಶ್ ಅವರ ಕುಟುಂಬ ಮತ್ತು ಅಭಿಮಾನಿಗಳು ಆಯೋಜಿಸಿದ್ದರು. ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವಾರು ಚಿತ್ರೋದ್ಯಮದ ಗಣ್ಯರು ಮತ್ತು ಅಂಬಿ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದರು. 

ಅಂಬಿ ಸ್ಮರಣೆ ಕುರಿತಂತೆ ಸುಮಲತಾ ಅಂಬರೀಶ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಇರುವುದೊಂದೇ ಜೀವನ ಅದೆಷ್ಟು ವ್ಯತ್ಯಾಸವಿದೆ. ಎಂದೆಂದಿಗೂ ನಮ್ಮ ನೆನಪುಗಳಲ್ಲಿ, ಸುಖ, ದುಃಖ, ನಗು, ಕಣ್ಣೀರು. ಪ್ರತಿಯೊಂದು ಕ್ಷಣವೂ ನೀವು ಬಿಟ್ಟ ನಿರ್ವಾತವನ್ನು ಅಳೆಯಲಾಗದು. ನಾನು ಆ ಪ್ರೀತಿಯನ್ನು ಕಾಪಿಟ್ಟುಕೊಳ್ಳುತ್ತೇನೆ, ನಷ್ಟವನ್ನಲ್ಲ. ಅನೇಕರನ್ನು ಒಳಗೊಂಡ ಜೀವನವನ್ನು ಎಂದಿಗೂ ಕಳೆದುಕೊಳ್ಳಲು ಆಗುವುದಿಲ್ಲ. ನೀವು ಶಾಶ್ವತವಾಗಿರುತ್ತೀರಿ. ನೀವು ಜೀವ ಮೀರಿದ ಒಂದು ಪ್ರಪಂಚ. ಇಂದು ನನಗೆ ಖಾತ್ರಿಯಿದೆ, ನೀವು ಅತ್ಯಂತ ಹೆಮ್ಮೆಯಿಂದ ಸಂಭ್ರಮದಲ್ಲಿರುವಿರಿ ಮತ್ತು ನಿಮ್ಮ ಆ ಪ್ರಪಂಚದಿಂದ ಅಭಿಷೇಕ್ ಚಲನಚಿತ್ರವನ್ನು ಆಶೀರ್ವದಿಸುತ್ತೀರಿ’ ಎಂದು ಬರೆದುಕೊಂಡಿದ್ದಾರೆ.


ಐದನೇ ವರ್ಷದ ಪುಣ್ಯಸ್ಮರಣೆಗೆ ಮಂಡ್ಯ ಮತ್ತು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮತ್ತು ಈ ವರ್ಷ ಅಂಬರೀಶ್ ಅವರ ಹೆಸರಿನಲ್ಲಿ ಡಾ.ಅಂಬರೀಶ್ ಫೌಂಡೇಶನ್ ಕೂಡ ಶುರು ಮಾಡಲಾಗುತ್ತಿದ್ದು, ಹಲವಾರು ಜನಪರ ಕೆಲಸಗಳನ್ನು ಈ ಫೌಂಡೇಶನ್ ಮಾಡಲಿದೆಯಂತೆ. ಇನ್ನು ಮಾಧ್ಯಮದವರ ಜೊತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಇಂದು ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ. ಮಂಡ್ಯದಲ್ಲಿಂದು ಅಂಬಿ ಕನಸಿನ ಫೌಂಡೇಶನ್ ಲೋಕಾರ್ಪಣೆಯಾಗುತ್ತಿದೆ. ಅಭಿಮಾನಿಗಳು ಅಂಬಿ ಅವರನ್ನು ಕಲಿಯುಗದ ಕರ್ಣ ಎಂದು ಕರೆದರು. ಅದೇ ಹಾದಿಯಲ್ಲಿ ಅವರ ಲೆಗೆಸಿ ಮುಂದುವರೆಸುತ್ತೇವೆ. ಹಾಗಾಗಿ, ಅವರ ಪುಣ್ಯಸ್ಮರಣೆಯ ದಿನದಂದು ಅಂಬರೀಶ್ ಫೌಂಡೇಶನ್ ಉದ್ಘಾಟನೆಯಾಗುತ್ತಿದೆ. 

ಒಂದು ವರ್ಗದಿಂದ ನಟ ದರ್ಶನ್ ಟಾರ್ಗೆಟ್: ಸಂಸದೆ ಸುಮಲತಾ ಹೇಳಿದ್ದೇನು?

ಅಂಬಿ ಅವರನ್ನು ಯಾರೂ ಮರೆತಿಲ್ಲ. ನಾನು ಹೋದ ಕಡೆಯಲ್ಲಾ ಅಂಬರೀಶ್ ಅವರನ್ನು ನೆನೆಯುತ್ತಾರೆ. ಅವರ ಬಗ್ಗೆ ಪ್ರತಿದಿನ, ಪ್ರತಿಕ್ಷಣ ಮಾತನಾಡುತ್ತಾರೆ. ಅಂಬಿ ನೆನಪಾಗದ ದಿನ, ಕ್ಷಣವೇ ಇಲ್ಲ ಎಂದು ತಿಳಿಸಿದರು.ಅಭಿ ನಟನೆಯ ಸಿನಿಮಾ ಈ ದಿನವೇ ರಿಲೀಸ್‌ ಆಗುತ್ತೆ ಎಂದು ನಾವು ಅಂದುಕೊಂಡಿರಲಿಲ್ಲ. ಅಂಬರೀಶ್ ಅವರ ಆಶೀರ್ವಾದದಿಂದಲೇ ಇಂದು ಬ್ಯಾಡ್​ ಮ್ಯಾನರ್ಸ್​ ಚಿತ್ರ ರಿಲೀಸ್​ ಆಗಿದೆ ಎನಿಸುತ್ತಿದೆ. ಅಭಿಮಾನಿಗಳು ಅಂಬರೀಶ್ ಅವರನ್ನು ಅಭಿಯಲ್ಲಿ ಕಾಣ್ತಾರೆ. ಹಂತಹಂತವಾಗಿ ಕಷ್ಟಪಟ್ಟು ಅಭಿ ಬೆಳೆದು ಬರಬೇಕು. ತಂದೆಯಂತೆ ಅಭಿ ಕೂಡ ಅಭಿಮಾನಿಗಳ ಪ್ರೀತಿ ಸಂಪಾದನೆ ಮಾಡಬೇಕು. ಇಂದಿನ ಸಂಪೂರ್ಣ ದಿನ ಅಂಬರೀಶ್ ಅವರಿಗಾಗೇ ಮೀಸಲು. ಹಾಗಾಗಿ ಇಂದು ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಲ್ಲ. ಅಂಬರೀಶ್ ಅವರ ಕನಸನ್ನು ಮುಂದುವರಿಸುವುದಷ್ಟೇ ನಮ್ಮ ಕೆಲಸ ಎಂದು ತಿಳಿಸಿದರು. 

Latest Videos
Follow Us:
Download App:
  • android
  • ios