ಮೊನ್ನೆ ಕನಸಲ್ಲಿ ಬಂದಿದ್ದ ಸ್ಪಂದನಾ, ಮಗನ ಹೋಮ್ವರ್ಕ್ ಬಗ್ಗೆ ಕೇಳಿದ್ಲು: ವಿಜಯ್ ರಾಘವೇಂದ್ರ
ಸ್ಪಂದನಾ ಸಾವಿನ ನಂತರ ಇದೇ ಮೊದಲ ಬಾರಿಗೆ ಮೊನ್ನೆ ಕನಸಿಗೆ ಬಂದು, ಮಗ ಶೌರ್ಯ ಹೋಮ್ ವರ್ಕ್ ಮಾಡಿದ್ದ ಬಗ್ಗೆ ವಿಚಾರಿಸಿ ಕಾಳಜಿಯನ್ನು ತೋರಿಸಿದ್ದಳು.
ಬೆಂಗಳೂರು (ಆ.31): ಸ್ಪಂದನಾ ನಮ್ಮ ನಡುವೆ ಇಲ್ಲವೆಂಬ ಸತ್ಯದ ನಡುವೆ ಮೊನ್ನೆ ಬೆಳಗಿನ ಜಾವದ ನಿದ್ದೆಯಲ್ಲಿ ಮೊದಲ ಬಾರಿಗೆ ಕನಸಿಗೆ ಬಂದಿದ್ದಳು. ಅದು ಕೂಡ ಮಗ ಶೌರ್ಯ ಹೋಮ್ವರ್ಕ್ ಮಾಡಿದ್ದಾನೋ ಇಲ್ಲವೋ ನೋಡಿ ಎಂದು ವಿಚಾರಿಸಿದ್ದಳು ಎಂದು ಸ್ಪಂದನಾ ಪತಿ ವಿಜಯ್ ರಾಘವೇಂದ್ರ ಹೇಳಿದರು.
ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಗುರುವಾರ ನಡೆದ 'ವಿಜಯ ಸ್ಪಂದನಾ' ಸಂದರ್ಶನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಮೊನ್ನೆ ಸ್ಪಂದನಾ ನನ್ನ ಕನಸಿಗೆ ಬಂದಿದ್ದಳು. ಆಗಲೂ ಅದು ಕೂಡ ಮಗನ ಕಾಳಜಿ ಮಾಡುವ ಉದ್ದೇದಿಂದ ಬಂದಿದ್ದು, ಮಗನ ಹೋಮ್ವರ್ಕ್ ಬಗ್ಗೆ ಕೇಳಿದ್ದಳು. ಶಾಲೆಯ ಪೇರೆಂಟ್ಸ್ ಗ್ರೂಪ್ನಲ್ಲಿ ಹೋಮ್ವರ್ಕ್ ನೋಡಿ ಶೌರ್ಯ ಜಿಯೋಗ್ರಫಿ ಹೋಮ್ವರ್ಕ್ ಮಾಡಿದ್ದಾನೋ ಇಲ್ಲವೋ ನೋಡಿ ಎಂದಳು. ಆಗ ಬೆಳಗ್ಗೆ ಎದ್ದು ಶೌರ್ಯನಿಗೆ ಹೋಮ್ವರ್ಕ್ ಮಾಡಿದ ಬಗ್ಗೆ ವಿಚಾರಿಸಿದಾಗ ಎಲ್ಲವನ್ನೂ ಮಾಡಿದ್ದಾಗಿ ಹೇಳಿದನು. ಆಗ ಮಗ ಹೇಳಿದ ತ್ತರವನ್ನು ಯಾರಿಗೆ ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ ಎಂದು ಕನಸಿನ ಬಗ್ಗೆ ತಿಳಿಸಿದರು.
ದೇವರು ಒಂದು ಅವಕಾಶ ಕೊಟ್ಟಿದ್ದರೂ ಸ್ಪಂದನಾ ಸಾವು ಗೆದ್ದು ಬಿಡುತ್ತಿದ್ದಳು: ವಿಜಯ್ ರಾಘವೇಂದ್ರ
ಮಗ ಶೌರ್ಯನ ಬಗ್ಗೆ ಸ್ಪಂದನಾಳ ಆಸೆ ಏನಾಗಿತ್ತು?: ಸ್ಪಂದನಾಳಿಗೆ ತನ್ನ ಮಗನಿಗೆ ಬಾಸ್ಕೆಟ್ ಬಾಲ್ ಪ್ಲೇಯರ್ ಮಾಡುವುದು ಹಾಗೂ ನಟನೆ ಬಗ್ಗೆ ಕಲಿಸಲು ಪ್ರೇರಣೆ ಕೊಡುತ್ತಿದ್ದಳು. ಈಗ ಅವಳಿಲ್ಲದ ಮನೆಯಲ್ಲಿ ಮಗನ ಭವಿಷ್ಯವನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ. ನಾನು ಇಂದಿಗೂ ಸ್ಪಂದನಾಳೊಂದಿಗೆ ಜೀವಿಸುತ್ತಿದ್ದೇನೆ ಎಂಬ ಭಾವನೆಯಿಂದಲೇ ಬದುಕುತ್ತಿದ್ದೇನೆ. ಪ್ರತಿದಿನ ನಾನು ಮತ್ತು ನನ್ನ ಮಗ ಬೆಳಗ್ಗೆ ಒಂದು ಸುತ್ತಿನ ಮಾತುಕತೆ ಮಾಡಿಕೊಂಡೇ ಮುಂದಿನ ಹೆಜ್ಜೆಯನ್ನು ಇಡುತ್ತಿದ್ದೇವೆ. ಶೌರ್ಯ ಈಗ ಅಮ್ಮ ಇಲ್ಲವೆಂಬ ಖಾಲಿತನವನ್ನು ಅನುಭವಿಸುತ್ತಿದ್ದಾನೆ. ಅವನನ್ನು ಕೆದಕಿ ಮಾತನಾಡಿಸುವವರೆಗೂ ಮಾತನಾಡುವುದಿಲ್ಲ. ಸ್ಪಂದನಾಳಂತೆಯೇ ಅವನಿಗೂ ಗಟ್ಟಿ ಮನಸ್ಸಿನ ಸ್ವಭಾವವಿದೆ ಎಂದು ಹೇಳಿದರು.
ನಮ್ಮದು ಲವ್ ಸ್ಟೋರಿಯಲ್ಲ, ಕದ್ದು ಮುಚ್ಚಿ ಓಡಾಡಿಲ್ಲ: ನನಗೆ ಮನೆಯಲ್ಲಿ ಮದುವೆ ಮಾಡುವುದಕ್ಕೆ ಹೆಣ್ಣು ನೋಡುತ್ತಿದ್ದರು. ಆಗ ನಾನು ಕೂಡ ಒಂದು ಮದುವೆ ಕಾರ್ಯಕ್ರಮಕ್ಕೆ ಹೋದಾಗ ಸ್ಪಂದನಾಳನ್ನು ನೋಡಿದ್ದೆನು. ಅಲ್ಲಿಗೆ ಹೋಗುವಷ್ಟರಲ್ಲಿ ಅಲ್ಲಿ ಸಿಗಲಿಲ್ಲ. ನಂತರ ಕೆಫೆನಲ್ಲಿ ನೊಡಿದೆನು. ನಂತರ ಜಿಮ್ನಲ್ಲಿ ನೋಡಿದೆನು. ಇದರ ನಂತರ, ನಮ್ಮ ಮನೆಯಲ್ಲಿ ಹೆಣ್ಣು ಹುಡುಕುತ್ತಿದ್ದ ಧೈರ್ಯವಿದ್ದ ಕಾರಣ ನಮ್ಮ ಮಾವನ ಬಳಿ ಹೋಗಿ ಮದುವೆ ಮಾಡಿಕೊಡುವಂತೆ ಕೇಳಿದ್ದೆವು. ಎಲ್ಲರೂ ಸೇರಿಕೊಂಡೇ ನಮ್ಮ ಮದುವೆ ಮಾಡಿದ್ದಾರೆ. ನಾವು ಎಂದಿಗೂ ಕದ್ದು ಮುಚ್ಚಿ ಓಡಾಡಿಲ್ಲ. ಕೆಲವು ಮಾಧ್ಯಮಗಳಲ್ಲಿ ಕದ್ದುಮುಚ್ಚಿ ಓಡಾಡಿದ್ದರು ಎಂಬುದೆಲ್ಲಾ ಸುಳ್ಳು. ನಮ್ಮದು ಲವ್ ಸ್ಟೋರಿಯಲ್ಲ ಎಂದು ಲವ್ ಸ್ಟೋರಿ ಬಗ್ಗೆ ಗೊಂದಲವನ್ನು ಬಗೆಹರಿಸಿದರು.
ಬೆಂಗಳೂರು ಶಿವಮೊಗ್ಗ ವಿಮಾನ ಸಂಚಾರಕ್ಕೆ ಸಬ್ಸಿಡಿ ಘೋಷಿಸಿದ ರಾಜ್ಯ ಸರ್ಕಾರ
ಓದಲು ಬಿಡಲಿಲ್ಲವೆಂದು ರೇಗಿಸುತ್ತಿದ್ದ ಸ್ಪಂದನಾ: ಇನ್ನು ನಮ್ಮ ಮದುವೆ ಆದಾಗ ಸ್ಪಂದನಾ ಎಂಇಎಸ್ ಕಾಲೇಜಿನಲ್ಲಿ ಬಿಎ (ಸೈಕಾಲಜಿ ವಿಭಾಗ) ಅಭ್ಯಾಸ ಮಾಡುತ್ತಿದ್ದಳು. ಮದುವೆ ಫಿಕ್ಸ್ ಆದ ನಂತರ ಓದುವುದನ್ನು ಅರ್ಧಕ್ಕೆ ನಿಲ್ಲಿಸಿದಳು. ಇದರಿಂದ ಮದುವೆಯಾದ ನಂತರ ಕೆಲವೊಮ್ಮೆ ನನ್ನನ್ನು ಓದುವುದಕ್ಕೇ ಬಿಡಲಿಲ್ಲವೆಂದು ರೇಗಿಸುತ್ತಿದ್ದಳು. ಆದರೆ, ಅವಳಿಗೆ ಪುನಃ ಓದುವುಕ್ಕೆ ಹೋಗುವ ಬಗ್ಗೆ ಆಸಕ್ತಿ ಇರಲಿಲ್ಲ. ನಂತರ, ನನ್ನ ವೃತ್ತಿ ಜೀವನದ ಬಗ್ಗೆ ಅವಳೂ ಕೂಡ ಗಮನ ಹರಿಸುತ್ತಿದ್ದಳು. ಎಲ್ಲರೊಂದಿಗೆ ಹೊಂದಿಕೊಂಡು ಸಂಸಾರ ಸಾಗಿಸುತ್ತಿದ್ದಳು. ಅಡಿಗೆ ಮಾಡುವುದಲ್ಲಿ ಪ್ರವೀಣೆ ಆಗಿದ್ದಳು. ಪುನೀತ್ ರಾಜ್ಕುಮಾರ್ ಸೇರಿದಂತೆ ನನ್ನ ಮತ್ತು ಅವಳ ಬಹುತೇಕ ಸ್ನೇಹಿತರು ಅವಳ ಅಡಿಗೆಯನ್ನು ಹೆಚ್ಚು ಇಷ್ಟಪಡುತ್ತಿದ್ದರು ಎಂದು ಜೀವನದ ಕ್ಷಣಗಳ ಬಗ್ಗೆ ಹಂಚಿಕೊಂಡರು.