Shivanna: 'ನಮ್ಮೂರ ಮಂದಾರ ಹೂವೆ' ಶೂಟಿಂಗ್ ವೇಳೆ ಸಾತೊಡ್ಡಿ ಜಲಪಾತದಲ್ಲಿ ನಡೆದ ಜೇನು ದಾಳಿಯ ವೇಳೆ ಶಿವರಾಜ್ಕುಮಾರ್ ಮಕ್ಕಳನ್ನು ರಕ್ಷಿಸಿದ ಘಟನೆಯನ್ನು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಹಂಚಿಕೊಂಡಿದ್ದಾರೆ.
‘ಶಿವಣ್ಣ ಅಷ್ಟು ದೊಡ್ಡ ನಟನಾದರೂ ಅಹಂ, ದೊಡ್ಡಸ್ತಿಕೆ ಇಟ್ಟುಕೊಂಡವರಲ್ಲ. ಬಹಳ ಸ್ವಚ್ಛ ಮನಸ್ಸು ಅವರದು’ ಎಂದು ಹಿರಿಯ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಹೇಳಿದ್ದಾರೆ. ಅದಕ್ಕೆ ಉದಾಹರಣೆಯಾಗಿ ‘ನಮ್ಮೂರ ಮಂದಾರ ಹೂವೆ’ ಸಿನಿಮಾ ಶೂಟಿಂಗ್ನಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಒಮ್ಮೆ ಸಾತೊಡ್ಡಿ ಜಲಪಾತದ ಬಳಿ ಕೇಳೇ ಕೋಗಿಲೆ ಹಾಡಿನ ಶೂಟಿಂಗ್ ನಡೆಯುತ್ತಿತ್ತು. ಅಲ್ಲೆಲ್ಲ ದೊಡ್ಡ ಗಾತ್ರ ಕಾಡು ಜೇನು ಗೂಡಿತ್ತು. ಶೂಟಿಂಗ್ ನಡುವೆ ಯಾರೋ ಅದಕ್ಕೆ ಕಲ್ಲು ಹೊಡೆದಿದ್ದಾರೆ. ಶೂಟಿಂಗ್ನಲ್ಲಿದ್ದವರ ಮೇಲೆಲ್ಲ ಹೆಜ್ಜೇನಿನ ದಾಳಿ.
ಆ ಜೇನುಗಳ ಕಡಿತ ಹೇಗಿರುತ್ತದೆ ಅಂದರೆ ಮೂರ್ನಾಲ್ಕು ಜೇನು ಕಡಿತವಾದರೆ ಜನ ಪ್ರಜ್ಞೆ ತಪ್ಪುತ್ತಾರೆ. ಅದಕ್ಕೂ ಮೀರಿ ದಾಳಿಯಾದರೆ ಜೀವಕ್ಕೇ ಅಪಾಯ. ನಾವೆಲ್ಲ ಅದರಿಂದ ಪಾರಾಗಲು ಜೀವಭಯದಲ್ಲಿ ಓಡುತ್ತಿದ್ದೆವು. ನಡುವೆ ನಾನೊಮ್ಮೆ ಹಿಂದೆ ತಿರುಗಿ ನೋಡಿದೆ ಶಿವಣ್ಣ ತನ್ನ ಎರಡೂ ಕೈಗಳಲ್ಲಿ ಎರಡು ಮಕ್ಕಳನ್ನು ಎತ್ತಿಕೊಂಡು ಓಡೋಡಿ ಬರುತ್ತಿದ್ದರು.
ಜೀವ ಪಣಕ್ಕಿಟ್ಟಿದ್ದರು
ಆ ಕ್ಷಣದಲ್ಲಿ ಅವರ ಬಗೆಗಿನ ಗೌರವ ಮತ್ತೂ ಹೆಚ್ಚಾಯ್ತು. ಎಲ್ಲರೂ ತಮ್ಮ ಜೀವ ಉಳಿಸಿಕೊಳ್ಳಲು ಓಡುತ್ತಿದ್ದರೆ ಇವರು ಮಕ್ಕಳ ಜೀವ ಕಾಯಲು ತನ್ನ ಜೀವ ಪಣಕ್ಕಿಟ್ಟಿದ್ದರು. ಶಿವಣ್ಣ ನಾನು ಕಂಡ ಅತ್ಯಂತ ಹೃದಯವಂತ ನಟ ಎಂದು ಸುನೀಲ್ ಕುಮಾರ್ ದೇಸಾಯಿ ಹೇಳಿದ್ದಾರೆ.


