Asianet Suvarna News Asianet Suvarna News

ಅಗಲಿದ ನಟಿ ಲೀಲಾವತಿ ವೃತ್ತಿ-ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ; ಮುಗ್ಧತೆಯಿಂದ ಕಳೆದುಕೊಂಡಿದ್ದೇ ಹೆಚ್ಚು!

ನಟಿ ಲೀಲಾವತಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ತುಳು ಸೇರಿ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಅವರು ಅಂದು ಗಳಿಸಿದ ಹಣದಲ್ಲಿ ಸಾಕಷ್ಟು ಹಣವನ್ನು ತಮ್ಮ ಮುಗ್ಧತೆಯಿಂದ ಕಳೆದುಕೊಂಡಿದ್ದರು ಎನ್ನಲಾಗುತ್ತದೆ. 

Senior actress Leelavathi faced many problems in her profession and life srb
Author
First Published Dec 8, 2023, 8:23 PM IST

ಕನ್ನಡ ಮೂಲದ ನಟಿ ಲೀಲಾವತಿ ಅವರು ಕನ್ನಡ ಸೇರಿದಂತೆ, ತುಳು, ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ, ನಟಿ ಲೀಲಾವತಿಯವರು ತಮ್ಮ ವೃತ್ತಿ ಜೀವನದಲ್ಲಿ 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ, ಕಪ್ಪು-ಬಿಳುಪು ಚಿತ್ರಗಳ ಕಾಲದಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ಲೀಲಾವತಿ ಅವರದು ಚಿತ್ರರಂಗದಲ್ಲಿ ಬಹಳ ರೋಚಕ ಪಯಣವಾಗಿದೆ. 

ನಟಿ ಲೀಲಾವತಿ ಅವರು ನಾಟಕಗಳ ಮೂಲಕ ತಮ್ಮ ನಟನೆಯ ವೃತ್ತಿ ಪ್ರಾರಂಭಿಸಿದರು. ಹಲವಾರು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಲೀಲಾವತಿ ಅವರು ಬಳಿಕ ಚಿತ್ರರಂಗಕ್ಕೆ ಬಂದರು. ಅಂದಿನ ಕಾಲದಲ್ಲಿ ಒಂದು ಊರಿಂದ ಇನ್ನೊಂದು ಊರಿಗೆ ಹೋಗಲು ವಾಹನದ ಸೌಲಭ್ಯ ಸಾಕಷ್ಟು ಇರಲಿಲ್ಲ. ಅದರಲ್ಲೂ ಹೆಣ್ಣೊಬ್ಬಳು ಪುರುಷರ ಸಂಗಡ ಹೋಗುವುದು ನಿಷಿದ್ಧ ಎಂಬ ಕಾಲದಲ್ಲಿ ನಟಿ ಲೀಲಾವತಿ ಅವರು ಅನಿವಾರ್ಯವಾಗಿ ಹಲವರ ಜತೆ ಸಂಚಾರ ಮಾಡಬೇಕಾದ ಪರಿಸ್ಥಿತಿ ಇತ್ತು. ಹಾಗೆ ಪ್ರಯಾಣ ಮಾಡುತ್ತಿದ್ದ ನಟಿ ಲೀಲಾವತಿ ಅಂದಿನ ಸಂಪ್ರದಾಯಸ್ಥ ಸಮಾಜದಿಂದ ಹಲವು ಕೆಟ್ಟ ಮಾತುಗಳನ್ನು ಕೇಳಿ ಸಹಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು.

ಅಂದಿನ ಕಾಲದಲ್ಲಿ ಪುರುಷರೇ ಚಿತ್ರರಂಗಕ್ಕೆ ಬರಲು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ರಾತ್ರಿ-ಹಗಲು ಭೇದವಿಲ್ಲದೇ ಒಬ್ಬಳು ನಟಿಯಾಗಿ ವೃತ್ತಿ ನಿಭಾಯಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೆ, ಧೈರ್ಯಗುಂದದೇ ನಟಿ ಲೀಲಾವತಿ ತಮ್ಮ ವೃತ್ತಿ ಜೀವನವನ್ನು ಮುಂದುವರೆಸಿಕೊಂಡು ಹೋಗಿದ್ದು ದೊಡ್ಡ ಸಾಧನೆಯೇ ಸರಿ. ಹೆಚ್ಚಾಗಿ ಅಂದು ಮದ್ರಾಸ್ ಎಂದು ಕರೆಯುತ್ತಿದ್ದ ಚೆನ್ನೈನಲ್ಲಿಯೇ ಕನ್ನಡ ಚಿತ್ರಗಳ ಶೂಟಿಂಗ್ ಹಾಗೂ ನಿರ್ಮಾಣ ನಡೆಯುತ್ತಿತ್ತು. ಆದ್ದರಿಂದ ನಟಿ ಲೀಲಾವತಿಯವರು ಹೆಚ್ಚಾಗಿ ಕರ್ನಾಟಕದಿಂದ ಹೊರಗಡೆಯೇ ಇರಬೇಕಾಗುತ್ತಿತ್ತು. 

ಲೀಲಾವತಿ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ; ಕಲಾ ಸಾಧನೆ ಅಜರಾಮರ

ನಟಿ ಲೀಲಾವತಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ತುಳು ಸೇರಿ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಅವರು ಅಂದು ಗಳಿಸಿದ ಹಣದಲ್ಲಿ ಸಾಕಷ್ಟು ಹಣವನ್ನು ತಮ್ಮ ಮುಗ್ಧತೆಯಿಂದ ಕಳೆದುಕೊಂಡಿದ್ದರು ಎನ್ನಲಾಗುತ್ತದೆ. ಬಹಳಷ್ಟು ಸಮಾಜ ಸೇವೆಯನ್ನೂ ಮಾಡುತ್ತಿದ್ದ ನಟಿ ಲೀಲಾವತಿ ಉಳಿದ ಹಣದಲ್ಲಿ ಬೆಂಗಳೂರಿನ ನೆಲಮಂಗಲದ ಬಳಿಯ ಸೋಲದೇವನಹಳ್ಳಿಯಲ್ಲಿ ಜಮೀನು ಖರೀದಿಸಿ ಅಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಮಗ ವಿನೋದ್ ರಾಜ್ ಅವರು ತಾಯಿಯನ್ನು ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿಕೊಳ್ಳುತ್ತಿದ್ದರು. ಅವರನ್ನು ಆಧುನಿಕ ಕಾಲದ ಶ್ರವಣ ಕುಮಾರ ಎಂದೇ ಕರೆಯಲಾಗುತ್ತದೆ. 

ತಾಯಿ ಲೀಲಾವತಿ ಅಗಲಿಕೆ ಆಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದ ಪುತ್ರ ವಿನೋದ್ ರಾಜ್!

ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಚಿತ್ರದಲ್ಲಿನ ಲೀಲಾವತಿಯವರ ಮನೋಜ್ಞ ಅಭಿನಯ ಅವರಿಗೆ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿತ್ತು. ಚಿತ್ರರಂಗದ ಜೊತೆ ಕೃಷಿಯ ಬಗ್ಗೆಯೂ ಒಲವು ಬೆಳೆಸಿಕೊಂಡಿದ್ದ ಲೀಲಾವತಿ ತಮ್ಮ ಪುತ್ರ ವಿನೋದ್ ರಾಜ್ ಜೊತೆ ನೆಲಮಂಗಲದಲ್ಲಿ‌ ಮಣ್ಣಿನ ಕಾಯಕದಲ್ಲೂ ತೊಡಗಿದ್ದರು.‌ ಸಮಾಜಮುಖಿ ಕಾರ್ಯಗಳಲ್ಲೂ ಲೀಲಾವತಿ ಕೈ ಜೋಡಿಸಿದ್ದರು. ನೆಲಮಂಗಲದಲ್ಲಿ ಪಶು ಆಸ್ಪತ್ರೆಯನ್ನು ಸಹ ಸ್ಥಾಪಿಸಿದ್ದರು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಅವರ ಕೈ ಸದಾ ಮುಂದಿರುತ್ತಿತ್ತು. ಇಂಥ ನಟಿ ಲೀಲಾವತಿ ಇಂದು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಇಡೀ ಕನ್ನಡ ಚಿತ್ರರಂಗ ಸೇರಿದಂತೆ ಅಪಾರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. 

Latest Videos
Follow Us:
Download App:
  • android
  • ios