Asianet Suvarna News Asianet Suvarna News

Omicron: ಸ್ಯಾಂಡಲ್‌ವುಡ್‌ ನೆತ್ತಿ ಮೇಲೆ ಓಮಿಕ್ರಾನ್‌ ತೂಗುಗತ್ತಿ

ಹೊಸ ವರ್ಷ 2022, ಆರಂಭದಲ್ಲೇ ಚಿತ್ರರಂಗಕ್ಕೆ ಹೊಡೆತ ನೀಡುವ ಲಕ್ಷಣ ಕಾಣುತ್ತಿದೆ. ದೇಶದೆಲ್ಲೆಡೆ ಹೆಚ್ಚುತ್ತಿರುವ ಓಮಿಕ್ರಾನ್‌ ಹಾವಳಿಯಿಂದ ಚಿತ್ರರಂಗದಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ರಿಲೀಸ್‌ ಡೇಟ್‌ ಪ್ರಕಟಿಸಿರುವ ಬಿಗ್‌ ಬಜೆಟ್‌ ಚಿತ್ರಗಳು ಗೊಂದಲಕ್ಕೆ ಬಿದ್ದಿವೆ. 
 

Sandalwood movies postponed amid rising coronavirus cases gvd
Author
Bangalore, First Published Jan 3, 2022, 3:52 PM IST

ಹೊಸ ವರ್ಷ 2022, ಆರಂಭದಲ್ಲೇ ಚಿತ್ರರಂಗಕ್ಕೆ (Sandalwood) ಹೊಡೆತ ನೀಡುವ ಲಕ್ಷಣ ಕಾಣುತ್ತಿದೆ. ದೇಶದೆಲ್ಲೆಡೆ ಹೆಚ್ಚುತ್ತಿರುವ ಓಮಿಕ್ರಾನ್‌ (Omicron) ಹಾವಳಿಯಿಂದ ಚಿತ್ರರಂಗದಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ರಿಲೀಸ್‌ ಡೇಟ್‌ ಪ್ರಕಟಿಸಿರುವ ಬಿಗ್‌ ಬಜೆಟ್‌ ಚಿತ್ರಗಳು ಗೊಂದಲಕ್ಕೆ ಬಿದ್ದಿವೆ. ಕಳೆದ ಬಾರಿಯಂತೆ ಲಾಕ್‌ಡೌನ್‌, ಚಿತ್ರಮಂದಿರಗಳಲ್ಲಿ ಶೇ.50 ಸೀಟು ಇತ್ಯಾದಿ ರಗಳೆಗಳು ಆರಂಭಗೊಂಡು ಎಲ್ಲಿ ಸಿನಿಮಾಗಳಿಗೆ ಹೊಡೆತ ಬೀಳುವುದೋ ಅನ್ನುವ ಆತಂಕದಲ್ಲೇ ದಿನದೂಡುತ್ತಿವೆ. ಸದ್ಯದ ಸ್ಥಿತಿ ನೋಡಿದರೆ ಬಹುನಿರೀಕ್ಷಿತ ಚಿತ್ರಗಳ ಬಿಡುಗಡೆ ತಡವಾಗುವುದು ಬಹುತೇಕ ಖಚಿತವೆನಿಸುತ್ತಿದೆ.

ವಿಕ್ರಾಂತ್‌ ರೋಣ ರಿಲೀಸ್‌ ಸಂದಿಗ್ಧ: ಸುದೀಪ್‌ (Sudeep) ನಟನೆಯ ‘ವಿಕ್ರಾಂತ್‌ ರೋಣ’ (Vikrant Rona) ಚಿತ್ರತಂಡ ಫೆ.24ಕ್ಕೆ ಚಿತ್ರ ಬಿಡುಗಡೆ ಘೋಷಿಸಿದೆ. ಆದರೆ ಈ ನೂರು ಕೋಟಿ ಬಜೆಟ್‌ನ ಸಿನಿಮಾ ಅಂದುಕೊಂಡ ದಿನಾಂಕದಂದು ಬಿಡುಗಡೆ ಆಗುವುದು ಅನುಮಾನ. ಈ ಪ್ಯಾನ್‌ ಇಂಡಿಯಾ ಚಿತ್ರಕ್ಕೆ ಮತ್ತೊಂದು ಕಂಟಕವೂ ಎದುರಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್‌ (LockDown), ಚಿತ್ರಮಂದಿರ ಬಂದ್‌, ಶೇ.50 ಆಸನಕ್ಕೆ ಅನುಮತಿ ಇತ್ಯಾದಿ ಸಮಸ್ಯೆಗಳು ಶುರುವಾಗಿವೆ. ಒಂದು ವೇಳೆ ಅಂದುಕೊಂಡ ದಿನಾಂಕದಂದೇ ಸಿನಿಮಾ ರಿಲೀಸ್‌ ಮಾಡುವುದಿದ್ದರೂ ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡುವುದೋ ಅಥವಾ ಬೇರೆ ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡುವುದೋ ಎಂಬ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳಲು ಚಿತ್ರತಂಡಕ್ಕೆ ಸಾಧ್ಯವಾಗುತ್ತಿಲ್ಲ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಿತ್ರದ ನಿರ್ದೇಶಕ ಅನೂಪ್‌ ಭಂಡಾರಿ (Anup Bhandari), ‘ಪರಿಸ್ಥಿತಿ ಹಿಂದಿನಂತಿದ್ದಿದ್ದರೆ ನಾವು ಇಷ್ಟುಹೊತ್ತಿಗೆ ಪ್ರಚಾರ ಶುರು ಮಾಡಬೇಕಿತ್ತು. ಇವೆಂಟ್‌ (Event) ಮಾಡಲೂ ಯೋಜಿಸಿದ್ದೆವು. ಆದರೆ ಸದ್ಯದ ಸ್ಥಿತಿ ಹೀಗಿರುವ ಕಾರಣ ಮುಂದುವರಿದಿಲ್ಲ. ನಮ್ಮ ಸಿನಿಮಾ ವಿಶ್ವಾದ್ಯಂತ ರಿಲೀಸ್‌ ಆಗುವ ಕಾರಣ ವಿಶ್ವದೆಲ್ಲೆಡೆ ವಿಷಮ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಮಾತ್ರ ಚಿತ್ರ ಬಿಡುಗಡೆ ಮಾಡುವುದೋ, ಬೇರೆ ಬೇರೆ ಭಾಷೆಗಳಲ್ಲೂ ಮಾಡಬೇಕೋ ಎಂಬ ಬಗ್ಗೆ ನಿರ್ಧಾರಕ್ಕೆ ಬರಲಾಗುತ್ತಿಲ್ಲ’ ಎಂದಿದ್ದಾರೆ.

Kichcha Sudeep: ಕಬ್ಜ ಚಿತ್ರದ ರೆಟ್ರೋ​ ಲುಕ್‌ ರಿವೀಲ್​ ಮಾಡಿದ ಅಭಿನಯ ಚಕ್ರವರ್ತಿ

ಅವತಾರ ಪುರುಷ ಬಿಡುಗಡೆ ಗೊಂದಲ: ಓಮಿಕ್ರಾನ್‌ ಭೀತಿ ಆವರಿಸುತ್ತಿರುವಂತೆ ಮೊದಲು ರಿಲೀಸ್‌ ಡೇಟ್‌ ಮುಂದೆ ಹಾಕಿದ್ದು ಶರಣ್‌ ನಟನೆಯ ‘ಅವತಾರ ಪುರುಷ’ (Avatara Purusha) ಚಿತ್ರ. ಕಳೆದ ವರ್ಷವೇ ಮೇ 28ಕ್ಕೆ ಬಿಡುಗಡೆ ಆಗಬೇಕಿದ್ದ ಸಿನಿಮಾ ಕೋವಿಡ್‌ ಭೀತಿಯಿಂದ ದಿನಾಂಕ ಮುಂದಕ್ಕೆ ಹಾಕಿತ್ತು. ಬಳಿಕ ಡಿಸೆಂಬರ್‌ 10ಕ್ಕೆ ಬಿಡುಗಡೆ ದಿನಾಂಕ ಪ್ರಕಟಿಸಿ ಅದನ್ನೂ ಜನವರಿ 14ಕ್ಕೆ ಮುಂದೂಡಿತ್ತು. ಇದೀಗ ಮತ್ತೆ ಓಮಿಕ್ರಾನ್‌ ಹಾವಳಿ ಹೆಚ್ಚಾಗಿದೆ. ಈ ಚಿತ್ರತಂಡ ಮತ್ತೆ ತುಯ್ದಾಟಕ್ಕೆ ಸಿಲುಕಿದೆ. 

ಈ ಬಗ್ಗೆ ಮಾತನಾಡಿದ ನಿರ್ದೇಶಕ ಸಿಂಪಲ್‌ ಸುನಿ (Simple Suni), ‘ಸಿನಿಮಾ ದಿನಾಂಕ ಮುಂದಕ್ಕೆ ಹಾಕಿ ಹಾಕಿ ಬೇಸತ್ತಿದ್ದೇವೆ. ಆದರೂ ಇದೇ ಸ್ಥಿತಿ ಮುಂದಿನವಾರವೂ ಇದ್ದರೆ ಮಾತ್ರ ಸಿನಿಮಾ ಬಿಡುಗಡೆ ಮಾಡುತ್ತೇವೆ. ಥೇಟರ್‌ಗಳಲ್ಲಿ ಶೇ.50 ಸೀಟು, ಓಮಿಕ್ರಾನ್‌ ತೀವ್ರತೆ ಹೆಚ್ಚಳವಾದರೆ ಈ ದಿನಾಂಕವನ್ನೂ ಮುಂದಕ್ಕೆ ಹಾಕುವುದು ಅನಿವಾರ್ಯ’ ಎಂದಿದ್ದಾರೆ. ನಿರ್ಮಾಪಕ ಪುಷ್ಕರ್‌ ಅಧಿಕಾರಿಗಳು, ಡಾಕ್ಟರ್ಸ್‌ ಮೊದಲಾದವರನ್ನು ಸಂಪರ್ಕಿಸಿ ಸಮಸ್ಯೆಯ ಗಂಭೀರತೆ ಕುರಿತು ಚರ್ಚಿಸುತ್ತಿದ್ದಾರೆ.

ಇದಲ್ಲದೇ ಜ.21 ರಂದು ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಚಿತ್ರ ಬಿಡುಗಡೆ ಕಾಣಬೇಕಿದೆ. ‘ಲವ್‌ ಮಾಕ್‌ಟೇಲ್‌ 2’ ಹಾಗೂ ‘ಓಲ್ಡ್‌ ಮಾಂಕ್‌’ ಚಿತ್ರಗಳು ಫೆ.11ಕ್ಕೆ ಬಿಡುಗಡೆಯ ದಿನಾಂಕ ಘೋಷಿಸಿವೆ. ಏಪ್ರಿಲ್‌ 14 ರಂದು ಯಶ್‌ ನಟನೆಯ ಬಹು ನಿರೀಕ್ಷಿತ ‘ಕೆಜಿಎಫ್‌ 2’ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ರಕ್ಷಿತ್‌ ಶೆಟ್ಟಿ (Rakshit Shetty) ನಟನೆಯ ‘777 ಚಾರ್ಲಿ’ ಡಿ.31ಕ್ಕೆ ರಿಲೀಸ್‌ ಆಗಬೇಕಿದ್ದದ್ದು ತಾಂತ್ರಿಕ ಕಾರಣಗಳಿಗೆ ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಿದೆ. ಇವುಗಳ ಜೊತೆಗೆ ಕಡಿಮೆ ಬಜೆಟ್‌ನ ಒಂದಿಷ್ಟುಸಿನಿಮಾಗಳೂ ರಿಲೀಸ್‌ ದಿನಾಂಕ ಪ್ರಕಟಿಸಿವೆ. ಆದರೆ ಈ ಎಲ್ಲ ಚಿತ್ರಗಳ ಬಿಡುಗಡೆ ತೂಗುಯ್ಯಾಲೆಯಲ್ಲಿದೆ. ವಿಶ್ವಾದ್ಯಂತ ಓಮಿಕ್ರಾನ್‌ ಕೇಸ್‌ಗಳ ಹೆಚ್ಚಳ ಸ್ಯಾಂಡಲ್‌ವುಡ್‌ಗೆ ದುಃಸ್ವಪ್ನವಾಗಿ ಪರಿಣಮಿಸಿದೆ.

RRR Release Postponed: ಅಡ್ವಾನ್ಸ್ ಬುಕ್ಕಿಂಗ್‌ನ 10 ಕೋಟಿ ರಿಫಂಡ್..!

ಆರ್‌ಆರ್‌ಆರ್‌ ದಿನಾಂಕ ಮುಂದಕ್ಕೆ: ಕೊನೆಯ ಕ್ಷಣದವರೆಗೂ ‘ಆರ್‌ಆರ್‌ಆರ್‌’ (RRR) ನಿರ್ದೇಶಕ ರಾಜಮೌಳಿ ಜ.7ರಂದೇ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ದೇಶಾದ್ಯಂತ ಭರ್ಜರಿ ಪ್ರಚಾರವನ್ನೂ ಕೈಗೊಳ್ಳಲಾಗಿತ್ತು. ಟ್ರೈಲರ್‌ ಬಿಡುಗಡೆಯೂ ಆಗಿತ್ತು. ಆದರೆ ಈಗ ಬಿಡುಗಡೆ ದಿನಾಂಕವನ್ನು ಅನಿವಾರ್ಯವಾಗಿ ಮುಂದಕ್ಕೆ ಹಾಕಿದ್ದಾರೆ. ಆದರೆ ಪ್ರಭಾಸ್‌ (Prabhas) ನಟನೆಯ ‘ರಾಧೇ ಶ್ಯಾಮ್‌’ (Radhe Shyam) ಚಿತ್ರವನ್ನು ಮಾತ್ರ ಅಂದುಕೊಂಡ ದಿನಾಂಕದಂದೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಜ.14ರಂದೇ ಥೇಟರ್‌ಗೆ ಬರುವುದಾಗಿ ಗಟ್ಟಿನಿರ್ಧಾರ ಪ್ರಕಟಿಸಿದೆ.

ಈಗಾಗಲೇ ಘೋಷಿಸಿದಂತೆ ಫೆ.24 ರಂದೇ ‘ವಿಕ್ರಾಂತ್‌ ರೋಣ’ ಬಿಡುಗಡೆ ಮಾಡುವುದೇ ಬೇಡವೇ ಅನ್ನುವ ಬಗ್ಗೆ ಗೊಂದಲವಿದೆ. ಪರಿಸ್ಥಿತಿ ಹೀಗೇ ಇದ್ದರೆ, ಓಮಿಕ್ರಾನ್‌ ತೀವ್ರತೆ ಹೆಚ್ಚಾಗದಿದ್ದರೆ ಚಿತ್ರ ಬಿಡುಗಡೆ ಮಾಡುತ್ತೇವೆ. ಇಲ್ಲವಾದರೆ ದಿನಾಂಕ ಮುಂದೂಡುವಿಕೆ ಅನಿವಾರ್ಯ.-ಅನೂಪ್‌ ಭಂಡಾರಿ, ನಿರ್ದೇಶಕ

ಸಖತ್‌ ಸಿನಿಮಾಕ್ಕೂ ಆರಂಭದಲ್ಲಿ ಓಮಿಕ್ರಾನ್‌ ಭೀತಿ ಕಾಡಿತ್ತು. ಈಗ ಅವತಾರ ಪುರುಷಕ್ಕೂ ಇದೇ ಸ್ಥಿತಿ ಒದಗಿದೆ. ಸರ್ಕಾರದ ನಿರ್ಣಯಗಳು, ರೋಗದ ತೀವ್ರತೆ ನೋಡಿಕೊಂಡು ಸಿನಿಮಾ ಬಿಡುಗಡೆ ಬಗ್ಗೆ ಚಿಂತಿಸುತ್ತೇವೆ.-ಸಿಂಪಲ್‌ ಸುನಿ, ನಿರ್ದೇಶಕ

Follow Us:
Download App:
  • android
  • ios