"ಯಾರೂ ಕೂಡ ಉದ್ದೇಶಪೂರ್ವಕವಾಗಿ ಅಥವಾ ಬೇಕು ಅಂತ ತಪ್ಪು ಮಾಡಲ್ಲ. ನಾನು ಇಲ್ಲಿಯವರೆಗೆ ದೇವರ ಬಗ್ಗೆ ಅದ್ಭುತವಾದ ಹಾಡುಗಳನ್ನು ಬರೆದಿದ್ದೇನೆ. ಅಣ್ಣ-ತಮ್ಮಂದಿರ ಬಾಂಧವ್ಯ, ಅಮ್ಮನ ಸೆಂಟಿಮೆಂಟ್, ಪ್ರೀತಿ ಹೀಗೆ ಪ್ರತಿಯೊಂದು ವಿಷಯದ ಮೇಲೂ ಹಾಡುಗಳನ್ನು ಕಟ್ಟಿಕೊಟ್ಟಿದ್ದೇನೆ. ನೀವೆಲ್ಲರೂ ನನ್ನನ್ನು ಬೆಳೆಸಿದ್ದೀರಾ. ಇನ್ನೂ ಏನಂದ್ರು ನೋಡಿ..

ಸ್ಯಾಂಡಲ್‌ವುಡ್‌ನಲ್ಲಿ ‘ಕೆಡಿ’ ಸಾಂಗ್ ಕಿಚ್ಚು: ಕೊನೆಗೂ ಮೌನ ಮುರಿದ ಜೋಗಿ ಪ್ರೇಮ್! ಕ್ಷಮೆಯಾಚಿಸಿ ಬಿಗ್ ಡಿಸಿಷನ್ ತಗೊಂಡ ‘ಶೋ ಮ್ಯಾನ್’!

Add Asianetnews Kannada as a Preferred SourcegooglePreferred

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಭಾರಿ ಕುತೂಹಲ ಮೂಡಿಸಿರುವ ಚಿತ್ರ ಎಂದರೆ ಅದು 'ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್‌ನ ‘ಕೆಡಿ’ (KD: The Devil). ಅನೌನ್ಸ್ ಆದ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಈ ಸಿನಿಮಾ ಸೌಂಡ್ ಮಾಡುತ್ತಲೇ ಇದೆ. ಆದರೆ, ಇತ್ತೀಚೆಗೆ ಈ ಚಿತ್ರದ ಹಾಡೊಂದರ ಸಾಹಿತ್ಯ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ನಾಂದಿ ಹಾಡಿತ್ತು. ಈ ವಿವಾದದ ಕಿಚ್ಚು ಜೋರಾಗುತ್ತಿದ್ದಂತೆಯೇ, ಈಗ ಖುದ್ದು ನಿರ್ದೇಶಕ ಪ್ರೇಮ್ ಅವರೇ ರಂಗಕ್ಕಿಳಿದು ಎಲ್ಲದಕ್ಕೂ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಯಾರೂ ಬೇಕು ಅಂತ ತಪ್ಪು ಮಾಡಲ್ಲ!

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಅತ್ಯಂತ ವಿನಮ್ರವಾಗಿ ಪ್ರತಿಕ್ರಿಯಿಸಿರುವ ಪ್ರೇಮ್, ಅಭಿಮಾನಿಗಳ ಮತ್ತು ಸಾರ್ವಜನಿಕರ ಭಾವನೆಗೆ ಬೆಲೆ ನೀಡಿದ್ದಾರೆ. "ಯಾರೂ ಕೂಡ ಉದ್ದೇಶಪೂರ್ವಕವಾಗಿ ಅಥವಾ ಬೇಕು ಅಂತ ತಪ್ಪು ಮಾಡಲ್ಲ. ನಾನು ಇಲ್ಲಿಯವರೆಗೆ ದೇವರ ಬಗ್ಗೆ ಅದ್ಭುತವಾದ ಹಾಡುಗಳನ್ನು ಬರೆದಿದ್ದೇನೆ. ಅಣ್ಣ-ತಮ್ಮಂದಿರ ಬಾಂಧವ್ಯ, ಅಮ್ಮನ ಸೆಂಟಿಮೆಂಟ್, ಪ್ರೀತಿ ಹೀಗೆ ಪ್ರತಿಯೊಂದು ವಿಷಯದ ಮೇಲೂ ಹಾಡುಗಳನ್ನು ಕಟ್ಟಿಕೊಟ್ಟಿದ್ದೇನೆ. ನೀವೆಲ್ಲರೂ ನನ್ನನ್ನು ಬೆಳೆಸಿದ್ದೀರಾ. ಪ್ರೇಮ್ ಸಿನಿಮಾದ ಹಾಡುಗಳು ಅಂದ್ರೆ ಅಷ್ಟೊಂದು ನಿರೀಕ್ಷೆ ಇಟ್ಟುಕೊಂಡು ಕಾಯುತ್ತೀರಾ ಎಂಬುದು ನನಗೂ ತಿಳಿದಿದೆ," ಎಂದು ಭಾವುಕರಾಗಿ ನುಡಿದಿದ್ದಾರೆ.

‘ಉಪ್ಪಿನ ಕಾಯಿ’ ಸಾಂಗ್ ವಿವಾದದ ಅಸಲಿಯತ್ತೇನು?

ವಿವಾದಕ್ಕೆ ಗುರಿಯಾಗಿದ್ದ ‘ಒಂದು ಬಟ್ಲು ಉಪ್ಪಿನ ಕಾಯಿ’ ಹಾಡಿನ ಬಗ್ಗೆ ಮಾತನಾಡಿದ ಅವರು, "ನಾನು ಈ ಹಾಡನ್ನು ನನ್ನದೇ ಆದ ಒಂದು ದೃಷ್ಟಿಕೋನದಲ್ಲಿ ಬರೆದಿದ್ದೆ. ಆದರೆ ಅದನ್ನು ಯಾರು ಹೇಗೆ ಅರ್ಥ ಮಾಡಿಕೊಂಡರೋ ಗೊತ್ತಿಲ್ಲ. ಆದರೆ ಈ ಹಾಡಿನ ಸಾಹಿತ್ಯದಿಂದ ಅಥವಾ ನನ್ನ ಪ್ರಯತ್ನದಿಂದ ಯಾರಿಗಾದರೂ ನೋವಾಗಿದ್ದರೆ, ಅದಕ್ಕಾಗಿ ನಾನು ಮೊದಲು ಕ್ಷಮೆಯಾಚಿಸುತ್ತೇನೆ. ಜನರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನನಗಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.

ಶೂಟಿಂಗ್ ಕ್ಯಾನ್ಸಲ್.. ಮತ್ತೆ ಹೊಸದಾಗಿ ಚಿತ್ರೀಕರಣ!

ಇಲ್ಲಿ ಪ್ರೇಮ್ ಅವರು ತೆಗೆದುಕೊಂಡಿರುವ ನಿರ್ಧಾರ ಸಿನಿವಲಯದಲ್ಲಿ ಈಗ ಹಾಟ್ ಟಾಪಿಕ್ ಆಗಿದೆ. ಸಾಮಾನ್ಯವಾಗಿ ಒಂದು ಹಾಡಿನ ಚಿತ್ರೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಆದರೂ ಪ್ರೇಮ್ ಅವರು ಜನರ ಮನಸ್ಸಿಗೆ ಬೆಲೆ ಕೊಟ್ಟಿದ್ದಾರೆ. "ನಾನು ಈ ಹಾಡನ್ನು ಸಂಪೂರ್ಣವಾಗಿ ಕೈಬಿಡುತ್ತಿದ್ದೇನೆ. ಈ ಹಾಡಿನ ಸಾಹಿತ್ಯವನ್ನು ಮತ್ತೊಮ್ಮೆ ಬೇರೆಯದೇ ರೀತಿಯಲ್ಲಿ ಬರೆದು, ಹೊಸದಾಗಿ ಶೂಟಿಂಗ್ ಮಾಡುತ್ತೇನೆ," ಎಂದು ಬಿಗ್ ಅಪ್‌ಡೇಟ್ ನೀಡಿದ್ದಾರೆ.

ನಿರ್ದೇಶಕರ ಈ ದಿಟ್ಟ ನಿರ್ಧಾರಕ್ಕೆ ಈಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಪ್ಪು ಎಂದು ಅನಿಸಿದಾಗ ಅದನ್ನು ತಿದ್ದಿಕೊಳ್ಳುವ ದೊಡ್ಡ ಗುಣ ತೋರಿದ ಪ್ರೇಮ್, ಈಗ ‘ಕೆಡಿ’ ಚಿತ್ರದ ಮೇಲಿರುವ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಧ್ರುವ ಸರ್ಜಾ ಅಭಿಮಾನಿಗಳು ಕೂಡ ಈಗ ವಿವಾದಕ್ಕೆ ವಿರಾಮ ಬಿದ್ದಿರುವುದಕ್ಕೆ ನಿಟ್ಟುಸಿರು ಬಿಟ್ಟಿದ್ದು, ಹೊಸ ಶೈಲಿಯ ಹಾಡಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಒಟ್ಟಿನಲ್ಲಿ, ‘ಕೆಡಿ’ಯ ಈ ಹೊಸ ಅಪ್‌ಡೇಟ್ ಈಗ ಸ್ಯಾಂಡಲ್‌ವುಡ್‌ನ ಟ್ರೆಂಡಿಂಗ್ ವಿಷಯವಾಗಿದೆ!

View post on Instagram