ನಟ ನಿರ್ದೇಶಕ ರಿಷಬ್ ಶೆಟ್ಟಿ ಮನೆಯಲ್ಲಿ ಪೂಜೆ ಸೇರಿದಂತೆ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದಿದೆ. ವಿಶೇಷ ಅಂದರೆ ರಿಷಬ್ ಶೆಟ್ಟಿ ಖುದ್ದು ಕುಣಿತ ಭಜನೆ ಮಾಡಿ ಭಕ್ತಿ ಮೆರೆದಿದ್ದಾರೆ. ಇಷ್ಟೇ ಅಲ್ಲ ಪುತ್ರ ಯಕ್ಷಗಾನ ರಂಗಪ್ರವೇಶ ಮಾಡಿ ಗಮನಸೆಳೆದಿದ್ದಾರೆ.
ಕುಂದಾಪುರ (ಜೂ.28) ನಟ ನಿರ್ದೇಶಕ ರಿಷಬ್ ಶೆಟ್ಟಿ ಬಿಗ್ ಬಜೆಟ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ರಿಷಬ್ ಶೆಟ್ಟಿ ಮನಯೆಲ್ಲಿ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ಪ್ರತಿ ವರ್ಷ ನಡೆಯುವ ಹಲವು ಪೂಜಾ ಕಾರ್ಯಕ್ರಮಗಳು, ಕುಣಿತ ಭಜನೆ, ಸಾಂಸ್ಕೃತಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿದೆ. ವಿಶೇಷ ಅಂದರೆ ಖುದ್ದು ರಿಷಬ್ ಶೆಟ್ಟಿ ಕುಣಿತ ಭಜನೆಯಲ್ಲಿ ಪಾಲ್ಗೊಂಡರೆ, ರಿಷಬ್ ಶೆಟ್ಟಿ ಪುತ್ರ ಯಕ್ಷಗಾನದಲ್ಲಿ ಪಾತ್ರ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.
ಶ್ರೀಮಂತ ಸಂಸ್ಕೃತಿಯಲ್ಲಿ ಬೆಳೆದ ನಟ
ದೈವ, ದೇವರು, ಯಕ್ಷಗಾನ ಸೇರಿದಂತೆ ಶ್ರೀಮಂತ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ರಿಷಬ್ ಶೆಟ್ಟಿ ತಮ್ಮ ಸಿನಿಮಾಗಳಲ್ಲೂ ಇದರ ಮಹತ್ವ ಸಾರಿದ್ದಾರೆ. ದೈವ ದೇವರುಗಳ ಭಕ್ತನಾಗಿರುವ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಮನೆಯಲ್ಲಿ ಪ್ರತಿ ವರ್ಷ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇದೀಗ ಮನೆಯಲ್ಲಿ ನಡೆದ ಪೂಜೆ, ನಾಗರಾಧಾನೆ, ದೈವರಾಧನೆ, ಯಕ್ಷಗಾನ, ಕುಣಿತ ಭಜನೆ ಸೇರಿದಂತೆ ಇತರ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಗಳ ವಿಡಿಯೋ ಲಭ್ಯವಾಗಿದೆ. ರಿಷಬ್ ಶೆಟ್ಟಿ, ಕುಟುಬಂಸ್ಥರು, ಆಪ್ತರು, ಊರಿನವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕುಣಿತ ಭಜನೆ ಮಾಡಿದ ರಿಷಬ್ ಶೆಟ್ಟಿ
ಕುಣಿತ ಭಜನೆ ಹಿಂದೂ ಭಕ್ತಿ ಪರಂಪರೆಯ ಮಾರ್ಗವಾಗಿ ಬೆಳೆದು ಬಂದಿದೆ. ರಿಷಬ್ ಶೆಟ್ಟಿ ಮನೆಯ ಪೂಜೆಯಲ್ಲಿ ಕುಣಿತ ಭಜನೆಯೂ ವಿಶೇಷವಾಗಿತ್ತು. ಕೆಲ ಯುವಕರ ತಂಡ ಕುಣಿತ ಭಜನೆಯನ್ನು ಮಾಡಿತ್ತು. ಈ ವೇಳೆ ಖುದ್ದು ರಿಷಬ್ ಶೆಟ್ಟಿ ತಾಳ ಹಿಡಿದು ಕುಣಿತ ಭಜನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಪುತ್ರ ರನ್ವಿತ್ ಶೆಟ್ಟಿಯಿಂದ ಯಕ್ಷಗಾನ ವೇಷ
ರಿಷಬ್ ಶೆಟ್ಟಿಯ ಪೂಜೆ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಪ್ರಮುಖವಾಗಿತ್ತು. ಈ ಬಾರಿಯ ಯಕ್ಷಗಾನದಲ್ಲಿ ರಿಷಬ್ ಶೆಟ್ಟಿ ಪುತ್ರ ರನ್ವಿತ್ ಶೆಟ್ಟಿ ರಂಗಪ್ರವೇಶ ಮಾಡಿದ್ದರು. ಯಕ್ಷಗಾನದಲ್ಲಿ ಸಣ್ಣ ಪಾತ್ರಕ್ಕಾಗಿ ವೇಷ ಹಾಕಿದ್ದ ರಿಷಬ್ ಶೆಟ್ಟಿ ಪುತ್ರ ಎಲ್ಲರ ಗಮನಸೆಳೆದಿದ್ದರು. ಪೋಷಕರಾದ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಇಬ್ಬರು ಗಮನ ರಂಗಪ್ರವೇಶದಿಂದ ಪುಳಕಿತರಾಗಿದ್ದರು.
ಸಂಭ್ರಮ ಹಂಚಿಕೊಂಡ ರಿಷಬ್ ಶೆಟ್ಟಿ
ಮನೆಯಲ್ಲಿ ನಡೆದ ಪೂಜೆ ಸೇರಿದಂತೆ ಇತರ ಕಾರ್ಯಕ್ರಮಗಳ ಕುರಿತ ವಿಡಿಯೋ ಹಂಚಿಕೊಂಡ ರಿಷಬ್ ಶೆಟ್ಟಿ, ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ ನಮ್ಮ ಮನೆಯಲ್ಲಿ ನೆಡೆದಾಗ ಮನ ತುಂಬಿದ ಕ್ಷಣಗಳು ಎಂದಿದ್ದಾರೆ. ಇದೇ ವೇಳೆ ನಮ್ಮ ಧರ್ಮ, ಪರಂಪರೆಯ ಮೂಲವನ್ನು ನಾವು ಹೇಳಬೇಕಿಲ್ಲ, ನಮ್ಮ ಮೂಲ ಹೇಳುತ್ತದೆ ಎಂದಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ಪ್ರಶಾಂತ್ ವರ್ಮಾ ನಿರ್ದೇಶನದ ಜೈ ಹುಮಾನ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಪುರಾಣ ಕತೆಯನ್ನೊಳಗೊಂಡ ಈ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಕಾಂತಾರ ಚಾಪ್ಟರ್ 1 ಸಿನಿಮಾ ಬಳಿಕ ರಿಷಬ್ ಶೆಟ್ಟಿಯ ಬಹುನಿರೀಕ್ಷಿತ ಸಿನಿಮಾ ಇದಾಗಿದೆ. ಈ ಸಿನಿಮಾದ ಕೆಲ ಪೋಸ್ಟರ್ ಬಿಡುಗಡೆಯಾಗಿದೆ. ಸತತ ಶೂಟಿಂಗ್ನಲ್ಲಿ ಬ್ಯೂಸಿಯಾಗಿರುವ ರಿಷಬ್ ಶೆಟ್ಟಿ, ತಮ್ಮ ಬ್ಯೂಸಿ ನಡುವೆ ದೈವಾರಾಧನೆ, ದೇವರ ಪೂಜೆಗಳಿಗೆ ಸಮಯ ಮೀಸಲಿಟ್ಟಿದ್ದಾರೆ.


