- Home
- News
- Politics
- UT Khader: ಪ್ರವಾಸೋದ್ಯಮ ರಾಯಭಾರಿಯಾಗಿ ರಿಷಬ್ ಶೆಟ್ಟಿ ನೇಮಕಕ್ಕೆ ಕರಾವಳಿ ಕಾಂಗ್ರೆಸ್ಸಿಗರ ವಿರೋಧ; ಸಚಿವ ಖಾದರ್ ಖಡಕ್ ತಿರುಗೇಟು!
UT Khader: ಪ್ರವಾಸೋದ್ಯಮ ರಾಯಭಾರಿಯಾಗಿ ರಿಷಬ್ ಶೆಟ್ಟಿ ನೇಮಕಕ್ಕೆ ಕರಾವಳಿ ಕಾಂಗ್ರೆಸ್ಸಿಗರ ವಿರೋಧ; ಸಚಿವ ಖಾದರ್ ಖಡಕ್ ತಿರುಗೇಟು!
ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರನ್ನು ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಿಸುವ ಸರ್ಕಾರದ ತೀರ್ಮಾನಕ್ಕೆ ಕರಾವಳಿ ಕಾಂಗ್ರೆಸ್ನಲ್ಲಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ. ಖಾದರ್, ಬಿಡದಿ ಟೌನ್ಶಿಪ್ ವಿವಾದ ಮತ್ತು ಮುಸ್ಲಿಂ ಸಚಿವ ಸ್ಥಾನದ ಬೇಡಿಕೆ ಕುರಿತು ಏನು ಹೇಳಿದ್ರು?

ಪ್ರವಾಸೋದ್ಯಮ ರಾಯಭಾರಿ ನೇಮಕ, ರಿಷಬ್ ಶೆಟ್ಟಿ ಆಯ್ಕೆಗೆ ಕರಾವಳಿ ಕಾಂಗ್ರೆಸ್ ವಿರೋಧ!
ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮದ ರಾಯಭಾರಿಯಾಗಿ ಕಾಂತಾರಾ ಖ್ಯಾತಿಯ ನಟ, ರಿಷಬ್ ಶೆಟ್ಟಿ(Rishab shetty) ಅವರನ್ನು ನೇಮಕ ಮಾಡುವ ಸರ್ಕಾರದ ತೀರ್ಮಾನದ ಕುರಿತು ಇದೀಗ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ.
ರಿಷಬ್ ರಾಯಭಾರಿಯಾಗಿ ಆಯ್ಕೆ ಮಾಡಿರುವ ವಿಚಾರವಾಗಿ ಕರಾವಳಿ ಕಾಂಗ್ರೆಸ್ಸಿಗರು ಸಾಮಾಜಿ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ ಈ ವಿಚಾರವಾಗಿ ಆರೋಗ್ಯ ಸಚಿವ ಯುಟಿ ಖಾದರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬರೆಯೋರಿಗೆಲ್ಲ ಉತ್ತರ ಕೊಡೋಕೆ ಆಗುತ್ತಾ? ಕರಾವಳಿ ಪ್ರವಾಸೋದ್ಯಮ ರಾಯಭಾರಿ ಯಾರು ಆಗಬೇಕು ಅನ್ನೋದು ಸಿಎಂ ನೋಡಿಕೊಳ್ಳುತ್ತಾರೆ. ಬೆಂಗಳೂರಿನ ಹೊರಗೆ ಸಂಪುಟ ಸಭೆ ನಡೆದ್ರೆ ಅದು ಮಂಗಳೂರಿನಲ್ಲಿ ಆಗ್ತದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲದಕ್ಕೂ ವಿರೋಧ ಆಗ್ತದೆ ಅದಕ್ಕೆ ಉತ್ತರ ಕೊಡೋಕೆ ಆಗೋಲ್ಲ ಎಂದರು.
ಕರಾವಳಿ ಪ್ರವಾಸೋದ್ಯಮ ನೇಮಕ ರಾಯಭಾರಿ ಸಿಎಂ ತೀರ್ಮಾನ
ಕರಾವಳಿ ಪ್ರವಾಸೋದ್ಯಮ ರಾಯಭಾರಿ(Coastal Tourism Ambassador) ಯಾರು ಆಗಬೇಕು ಅನ್ನೋದು ಸಿಎಂ ನೋಡಿಕೊಳ್ಳುತ್ತಾರೆ. ಬೆಂಗಳೂರಿನ ಹೊರಗೆ ಸಂಪುಟ ಸಭೆ ನಡೆದ್ರೆ ಅದು ಮಂಗಳೂರಿನಲ್ಲಿ ಆಗ್ತದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲದಕ್ಕೂ ವಿರೋಧ ಆಗ್ತದೆ ಅದಕ್ಕೆ ಉತ್ತರ ಕೊಡೋಕೆ ಆಗೋಲ್ಲ ಎಂದರು.
ಬಿಡದಿ ಟೌನ್ಶಿಪ್ ನೋಟಿಫಿಕೇಷನ್ ಮೊದಲು ಕೊಟ್ಟವರು ಯಾರು?
ಇನ್ನು ಬಿಡದಿ ಟೌನ್ಶಿಪ್(Bidadi township) ವಿಚಾರದಲ್ಲಿ ಸಿಎಂ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಡುವಿನ ವಾಕ್ಸರ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅದೆಲ್ಲ ಮಾರ್ಗ ಮಧ್ಯೆ ಚರ್ಚೆ ಮಾಡೋಕೆ ಆಗುತ್ತಾ? ರಾಜ್ಯದ ಜನರ ಬಗ್ಗೆ ಚರ್ಚೆ ಮಾಡೋಕೆ ಅಂತಾನೆ ವಿಧಾನಸೌಧ ಇದೆ. ಅಲ್ಲಿ ಚರ್ಚೆ ಆಗಬೇಕು. ಮೊದಲು ಈ ಬಿಡದಿ ಟೌನ್ಶಿಪ್ ನೋಟಿಫಿಕೇಶನ್ ಮಾಡಿದ್ದು ಯಾರು ಅನ್ನೋದು ಜನರಿಗೆ ತಿಳಿಸಲಿ. ಅದು ಮಾಡಿದ್ದೇ ಇವರು(ಕುಮಾರಸ್ವಾಮಿ), ಆ ಸತ್ಯ ಜನರಿಗೆ ಗೊತ್ತಾಗಲಿ ಎಂದರು.
ಕಾಂಗ್ರೆಸ್ ಪಕ್ಷ ಯಾವತ್ತೂ ರೈತರ ಪರ
ಕಾಂಗ್ರೆಸ್ ಪಕ್ಷ ಯಾವತ್ತೂ ರೈತರ ಪರವಾಗಿದೆ. ಈ ದೇಶದ ರೈತರು ವಿಶ್ವಕ್ಕೆ ಮಾದರಿ. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದ್ದು ನೆಹರೂ ಅವರ 'ಹಸಿರು ಕ್ರಾಂತಿ' ಯೋಜನೆ. ಈ ದೇಶದ ರೈತರೊಂದಿಗೆ ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಇದೆ, ಮುಂದೆಯೂ ರೈತರ ಬಗ್ಗೆಯೇ ಆಲೋಚನೆ ಮಾಡುತ್ತೆ. ರೈತರಿಗೆ ತೊಂದರೆ ಆಗುವ ಯಾವ ಯೋಜನೆಯೂ ಸರ್ಕಾರ ಮಾಡಲ್ಲ ಅಂತಾ ಸಿಎಂ ಕೂಡ ಹೇಳಿದ್ದಾರೆ. ಬಿಡದಿ ಟೌನ್ಶಿಪ್ ರೈತರಿಗೆ, ಅವರ ಕುಟುಂಬಕ್ಕೆ ಈ ಯೋಜನೆ ಸಹಾಯವಾಗಲಿದೆ. ಆದರೆ ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ಬಿಟ್ಟು ಹೊರಗೆ ಬನ್ನಿ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಎಲ್ಲವನ್ನೂ ಕೊಟ್ಟಿದೆ
ಇನ್ನು ಮುಸ್ಲಿಮರಿಗೆ ಸಚಿವ ಸ್ಥಾನ ನೀಡಲು ಮಂಗಳೂರಿನಲ್ಲಿ ಮುಸ್ಲಿಂ ನಾಯಕರ ಸುದ್ಧಿಗೋಷ್ಠಿ ನಡೆಸಿದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಸಮಾನ ಮನಸ್ಕ ಮುಸ್ಲಿಂ ಮುಖಂಡರ ವಿರುದ್ಧವೇ ಸಚಿವರು ಗರಂ ಆದರು. ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ಗಾಗಿ ಕೆಲಸ ಮಾಡಿದವರು ಪಕ್ಷದ ಬಗ್ಗೆ ಮಾತನಾಡೋದು ಬೇಡ. ಪಕ್ಷಕ್ಕೆ ವೋಟು ಹಾಕಿದವರು, ಪಕ್ಷಕ್ಕೆ ದುಡಿಯುವವರು ಮಾತ್ರ ಪಕ್ಷದ ಬಗ್ಗೆ ಮಾತನಾಡಲಿ. ಬೇರೆ ಬೇರೆ ಹೆಸರು ಇಟ್ಕೊಂಡು, ಸಮಾನ ಮನಸ್ಕರು ಅಂತಾ ಹೇಳಿಕೊಂಡು ಬರೋದು ಬೇಡ. ಕಾಂಗ್ರೆಸ್ಗೆ ಇವರು ಬುದ್ಧಿವಾದ ಹೇಳುವ ಅವಶ್ಯಕತೆ ಇಲ್ಲ. ಇವರ ಬುದ್ಧಿವಾದ ಪಕ್ಷ ತಗೊಳ್ಳಲ್ಲ. ಪಕ್ಷವನ್ನು ವಿರೋಧಿಸುವವರೆ ಇವತ್ತು ಕೂತು ಪಕ್ಷಕ್ಕೆ ನಿರ್ದೇಶನ ಕೋಡೋ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಅಪಾರ ಕೊಡುಗೆ ನೀಡಿದೆ. ಕೇವಲ ಸಚಿವ ಸ್ಥಾನ ಮಾತ್ರವಲ್ಲದೇ ಎಲ್ಲವನ್ನೂ ಅಲ್ಪಸಂಖ್ಯಾತರಿಗೆ ಕೊಟ್ಟಿದೆ. ಜಮೀರ್ ಅಹ್ಮದ್, ನಾವು ಹಾಗೂ ಎಲ್ಲ ಮುಸ್ಲಿಮರು ಒಟ್ಟಿಗೆ ಇದ್ದರೆ ಪಕ್ಷದ ಅಧ್ಯಕ್ಷರು, ಸಿಎಂ ಎಲ್ಲರೂ ಸೇರಿ ಅಲ್ಪಸಂಖ್ಯಾತರಿಗೆ ಅವಕಾಶ ಕೊಡ್ತಾರೆ. ಆದರೆ ರಾಜಕೀಯವಾಗಿ ಇದನ್ನು ಇನ್ನಷ್ಟು ಬಿಗಡಾಯಿಸಲು ಯತ್ನಿಸುವವರು, ಮತ ಹಾಕದವರ ಮಾತು ಕಾಂಗ್ರೆಸ್ ಪಕ್ಷ ಗಣನೆಗೆ ತೆಗೆದುಕೊಳ್ಳಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

