ಯುಗಾದಿ ಹಬ್ಬದಂದು ನಟ ರಿಷಬ್ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಯಡಿ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. 'ಅಧ್ಯಾಯ ಎರಡು ಇಲ್ಲಿಂದ ಶುರು' ಎಂಬ ಪೋಸ್ಟರ್ ಹಂಚಿಕೊಂಡಿದ್ದು, ಇದು 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ'ಯ ಮುಂದುವರಿದ ಭಾಗವೇ ಅಥವಾ 'ಕಾಂತಾರ' ಸರಣಿಯ ಹೊಸ ಚಿತ್ರವೇ ಎಂಬ ಕುತೂಹಲ ಮೂಡಿಸಿದೆ.
ಬೆಂಗಳೂರು (ಮಾ.19): ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಯುಗಾದಿ ಸಂಭ್ರಮಕ್ಕೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಕಳೆದ ವರ್ಷ ಕಾಂತಾರ-2 ಸಿನಿಮಾ ರಿಲೀಸ್ ಆದ ಬಳಿಕ ಅದಾಗಲೇ ಒಪ್ಪಿಕೊಂಡಿದ್ದ ಕೆಲವೊಂದು ಸಿನಿಮಾಗಳ ನಟನೆಯಲ್ಲಿ ಬ್ಯುಸಿಯಾಗಿದ್ದ ರಿಷಬ್ ಶೆಟ್ಟಿ ಹೊಸ ವರ್ಷಕ್ಕೆ ಹೊಸ ಸಿನಿಮಾದ ಘೋಷಣೆಯೊಂದಿಗೆ ಬಂದಿದ್ದಾರೆ. ತಮ್ಮ ಪ್ರೊಡಕ್ಷನ್ ಹೌಸ್ ರಿಷಬ್ ಶೆಟ್ಟಿ ಫಿಲ್ಮ್ಸ್ ಅಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ. ವೈಟ್ ಬೋರ್ಡ್ನಲ್ಲಿ ಓಂ ಎನ್ನುವ ಸಂಕೇತದೊಂದಿಗೆ 'ಅಧ್ಯಾಯ ಎರಡು ಇಲ್ಲಿಂದ ಶುರು' ಎಂದು ರಿಷಬ್ ಬರೆದು ಪೋಸ್ಟ್ ಮಾಡಿದ್ದಾರೆ. ಅದರೊಂದಿಗೆ ಯುಗಾದಿ ಶುಭಾಶಯಗಳನ್ನೂ ನಾಡಿನ ಸಮಸ್ತ ಜನತೆಗೆ ತಿಳಿಸಿದ್ದಾರೆ.
ಎಂದಿನಂತೆ ಈ ಸಿನಿಮಾದಲ್ಲಿ ಅವರ ಪತ್ನಿ ಪ್ರಗತಿ ಶೆಟ್ಟಿ ಭಾಗವಾಗಿದ್ದು, ಸು ಫ್ರಂ ಸೋ ಸಿನಿಮಾದ ರವಿಯಣ್ಣ ಪಾತ್ರದ ಮೂಲಕವೇ ಫೇಮಸ್ ಆಗಿರುವ ಬರಹಗಾರ ಹಾಗೂ ನಟ ಶಾನೀಲ್ ಗೌತಮ್ ಕೂಡ ಇದರಲ್ಲಿದ್ದಾರೆ. ಛಾಯಾಗ್ರಾಹಕರಾಗಿ ಅರವಿಂದ್ ಕಶ್ಯಪ್ ಇರಲಿದ್ದು, ನಟ, ನಿರ್ದೇಶಕ ಹಾಗೂ ಬರಹಗಾರ, ರಿಷಬ್ ಶೆಟ್ಟಿ ಜೊತೆ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನಿರುದ್ ಮಹೇಶ್ ಕೂಡ ಜೊತೆಯಾಗಿದ್ದಾರೆ.
ಹಾಗಿದ್ದರೆ ಯಾವ ಸಿನಿಮಾದ ಪಾರ್ಟ್-2?
ಇದೆಲ್ಲದರ ನಡುವೆ ರಿಷಬ್ ಶೆಟ್ಟಿ ಯಾವ ಸಿನಿಮಾದ 2ನೇ ಅಧ್ಯಾಯ ಮಾಡಲು ಹೊರಟಿದ್ದಾರೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ರಿಷಬ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣದಲ್ಲಿ, ಅವರೇ ನಿರ್ದೇಶನ ಮಾಡಿದ ಕೊನೆಯ ಸಿನಿಮಾ ಎಂದರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು. ಅದರದ್ದೇ 2ನೇ ಭಾಗ ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಕೆಲವರು ಕಾಂತಾರ, ಕಾಂತಾರ ಚಾಪ್ಟರ್-1 ಹಾಗೂ ಈಗ ಕಾಂತಾರ ಚಾಪ್ಟರ್-2 ಸಿನಿಮಾ ಇರಬಹುದು ಎಂದು ಊಹೆ ಮಾಡಿದ್ದಾರೆ.


