ಹಳಿ ತಪ್ಪಿದ್ದು ರೈಲಲ್ಲ, ಸರ್ಕಾರ, ಮೂರ್ಖ ಸರ್ಕಾರ, ನಾಲಾಯಕ್ಕು ಮಂತ್ರಿಗಳು ಎಂದು ಕೇಂದ್ರ ವಿರುದ್ಧ ನಟ ಕಿಶೋರ್ ಕಿಡಿಕಾರಿದ್ದಾರೆ. 

ಜೂನ್ 2ರಂದು ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಮೂರು ರೈಲುಗಳ ನಡುವಿನ ಭೀಕರ ಅಪಘಾತದಲ್ಲಿ 280ಕ್ಕೂ ಮಂದಿ ಸಾಪನ್ನಪ್ಪಿದ್ದು 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ಮತ್ತು ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಒಡಿಶಾದ ಬಾಲಸೋರ್‌ನಲ್ಲಿ ಭೀಕರ ಅಪಘಾತಕ್ಕೀಡಾಗಿತ್ತು. ಈ ಘಟನೆ ಬಗ್ಗೆ ಕನ್ನಡ ನಟ ಕಿಶೋರ್ ಪ್ರತಿಕ್ರಿಯೆ ನೀಡಿದ್ದು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಹಳಿ ತಪ್ಪಿದ್ದು ರೈಲು ಬೋಗಿಗಳಲ್ಲ ಸರ್ಕಾರ ಎಂದು ಗುಡುಗಿದ್ದಾರೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಕಿಶೋರ್ ಶೇರ್ ಮಾಡಿರುವ ದೀರ್ಘವಾದ ಪೋಸ್ಟ್ ಇಲ್ಲಿದೆ. 

ಯಾರ ಮೇಲೆ ಕಠಿಣ ಕ್ರಮ? ಯಾರು ಕಾರಣ ? ಇಷ್ಟು ಭೀಕರ ಸಾವು ನೋವು ತಡೆಗಟ್ಟಬಹುದಿತ್ತೇ?
ಇಂದಿಗೂ ಖಾಲಿಯಿರುವ 3 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರನ್ನು 1500ಕ್ಕೂ ಹೆಚ್ಚು ಸುರಕ್ಷತೆಗೆ ಬೇಕಾದ ಖಾಲಿಯಾಗೇ ಉಳಿದಿರುವ ಹುದ್ದೆಗಳನ್ನು ಸರ್ಕಾರ ತುಂಬಿ ಹಳಿ ನಿರ್ವಹಣೆ ಸಮರ್ಪಕವಾಗಿಸಬಹುದಿತ್ತೇ ? 
ಕೋಟ್ಯಂತರ ರೂಪಾಯಿ ವ್ಯಯಿಸಿ ತಿಂಗಳಿಗೊಂದು ರೈಲಿಗೆ ಹಸಿರು ನಿಶಾನೆ ತೋರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಬದಲು‘ಕವಚ’ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ಕೊಟ್ಟು ಎಲ್ಲೆಡೆ ಅಳವಡಿಸಬಹುದಿತ್ತೇ ? 
ಹಾಗೆ ನೋಡಿದರೆ ಕಳೆದ 6-7 ವರ್ಷಗಳಲ್ಲಿ 1000 ಕ್ಕೂ ಹೆಚ್ಚು ರೈಲುಗಳು ಹಳಿತಪ್ಪಿ ಅಪಘಾತಕ್ಕೀಡಾಗಿದ್ದರೂ, ಸುರಕ್ಷತೆಗಿಂತ ದೇಶದ ಸ್ವತ್ತನ್ನು ಮಾರಿ ದುಡ್ಡು ಮಾಡುವುದರಲ್ಲೇ ನಿರತವಾದ ಸರ್ಕಾರವೇ ಈ ದುರಂತಕ್ಕೆ ಕಾರಣವಲ್ಲವೇ?' ಎಂದು ಪ್ರಶ್ನೆ ಮಾಡಿದ್ದಾರೆ.

ಒಡಿಶಾ ರೈಲು ದುರಂತ, ಮೃತ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರಿ ಕೆಲಸದ ಭರವಸೆ ನೀಡಿದ ಮಮತಾ ಬ್ಯಾನರ್ಜಿ!

ಅಪರಾಧಿ ಸರ್ಕಾರವೇ ಅಪರಾಧದ ತನಿಖೆ ಮಾಡಿ ಅಪರಾಧಿ ಯಾರೆಂದು ಕಂಡು ಹಿಡಿಯುತ್ತದಂತೆ. ಎಂಥ ವಿಪರ್ಯಾಸ! ಇಲ್ಲಿ ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ. ನಮ್ಮ ಸರ್ಕಾರ.
ಮೂರ್ಖ ಸರ್ಕಾರದ, ನಾಲಾಯಕ್ಕು ಮಂತ್ರಿಗಳ, ಪ್ರಜೆಗಳೆಲ್ಲ ಬರೀ ಮತಗಳಂತೆ ಕಾಣುವ ಪ್ರಚಾರಿ ಪ್ರಧಾನಿಯ ಸಂಕುಚಿತ ದೃಷ್ಟಿಯನ್ನು ಮುಚ್ಚಿ ಹಾಕಲು ಹೋಗಿ, ಆಡಳಿತ ಪಕ್ಷ ಮತ್ತದರ ಬೂಟು ನೆಕ್ಕುವ ಮಾಧ್ಯಮಗಳು ತಪ್ಪನ್ನೂ ಸರಿಯೆಂದು ಸಾಧಿಸಹೊರಟರೆ ಕಳೆದು ಕೊಂಡ ಪ್ರಾಣಗಳಿಗೆ ನೊಂದು ಜರ್ಜರಿತವಾದ ಕುಟುಂಬಗಳ ಕಣ್ಣೀರಿಗೆ ಅರ್ಥವಿಲ್ಲದೇ ಹೋದೀತು' ಎಂದಿದ್ದಾರೆ. 

ಒಡಿಶಾ ರೈಲು ದುರಂತ, ಆ್ಯಂಬುಲೆನ್ಸ್‌ನಲ್ಲಿ 230 ಕಿ.ಮೀ ತೆರಳಿ ಶವಗಾರದಲ್ಲಿ ಬಿಸಾಕಿದ್ದ ಮಗನ ಉಳಿಸಿದ ತಂದೆ!

ಮಡಿದ ನೂರಾರು ಅಮಾಯಕರ ಜೀವಗಳಿಗೆ ಅಶ್ರುತರ್ಪಣ. ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಲಿ. ಚುನಾವಣೆಯಾಚೆಗಿನ ಕರ್ತವ್ಯವನ್ನು ಇನ್ನಾದರೂ ನಿಭಾಯಿಸಲಿ' ಎಂದು ಮನವಿ ಮಾಡಿದ್ದಾರೆ.