"ವೇವ್ಸ್ 2025" ಶೃಂಗಸಭೆಯಲ್ಲಿ ಕನ್ನಡ ಚಿತ್ರರಂಗದ ಪ್ರತಿನಿಧಿಗಳ ಅನುಪಸ್ಥಿತಿಯನ್ನು ವೀರಕಪುತ್ರ ಶ್ರೀನಿವಾಸ್‌ ಪ್ರಶ್ನಿಸಿದ್ದಾರೆ. ಭಾರತವನ್ನು ಮನರಂಜನಾ ಕೇಂದ್ರವಾಗಿಸುವ ಈ ಮಹತ್ವದ ಸಭೆಯಲ್ಲಿ ದಕ್ಷಿಣ ಭಾರತದ ಇತರ ಚಿತ್ರರಂಗಗಳಿದ್ದರೂ ಕನ್ನಡದವರಿರಲಿಲ್ಲ. ಕನ್ನಡ ಚಿತ್ರರಂಗದ ಈ ನಿರ್ಲಕ್ಷ್ಯ ಚಿಂತಾಜನಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಚಿತ್ರರಂಗದ ಪ್ರಭಾವ ಕುಂದುತ್ತಿರುವುದಕ್ಕೆ ಇದೊಂದು ನಿದರ್ಶನ ಎಂದಿದ್ದಾರೆ.

ಭಾರತ ಸರ್ಕಾರವು ವೇವ್ಸ್ 2025 ಎಂಬ ನಾಲ್ಕು ದಿನಗಳ ಶೃಂಗಸಭೆಯನ್ನು ಆಯೋಜಿಸಿತ್ತು. ಇಲ್ಲಿ ಕನ್ನಡಿಗರು ಇರಲೇ ಇಲ್ಲ. ಇದನ್ನು ವೀರಕಪುತ್ರ ಶ್ರೀನಿವಾಸ್‌ ಅವರು ಪ್ರಶ್ನೆ ಮಾಡಿದ್ದು, ಸೋಶಿಯಲ್ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.


ಕನ್ನಡ ಚಿತ್ರರಂಗದ ಬೆನ್ನುಮೂಳೆ ಇಷ್ಟು ವೀಕ್ ಆಗಬಾರದಿತ್ತು.
"ಕನೆಕ್ಟಿಂಗ್ ಕ್ರಿಯೇಟರ್ಸ್, ಕನೆಕ್ಟಿಂಗ್ ಕಂಟ್ರಿಸ್" ಎಂಬ ಟ್ಯಾಗ್‌ಲೈನ್‌ನೊಂದಿಗೆ ಭಾರತವನ್ನು ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ಆವಿಷ್ಕಾರಗಳಿಗಾಗಿ ಜಾಗತಿಕ ಕೇಂದ್ರವನ್ನಾಗಿಸಲು ವೇವ್ಸ್ 2025 ಎಂಬ ನಾಲ್ಕು ದಿನಗಳ ಶೃಂಗಸಭೆ ಭಾರತ ಸರ್ಕಾರದಿಂದ ನಡೆದಿದೆ. ಇದ್ಯಾವುದೋ ಪ್ರಶಸ್ತಿ ಪ್ರದಾನ ಸಮಾರಂಭವೋ, ಔತಣಕೂಟವೋ ಆಗಿರಲಿಲ್ಲ. ಭಾರತವನ್ನು ಮನರಂಜನೆಯ ಜಾಗತಿಕ ಕೇಂದ್ರವನ್ನಾಗಿಸುವ ಹಿನ್ನಲೆಯಲ್ಲಿ ರೂಪಗೊಂಡ ಅತ್ಯಂತ ಮಹತ್ವದ ಸಭೆಯಾಗಿತ್ತು. ಆ ಸಭೆಯಲ್ಲಿ ಹಿಂದಿ, ತೆಲುಗು, ತಮಿಳು, ಮಲೆಯಾಳಂನವರೆಲ್ಲರೂ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. 
ಮೋಹನ್ ಲಾಲ್ ಅವರಂತೂ ಅವರ ಸಿನಿಮಾ ಇಂಡಸ್ಟ್ರಿ ಬಗ್ಗೆ ಅತ್ಯಂತ ಮೌಲ್ಯಯುತವಾದ ಮಾತುಗಳನ್ನು ಆಡಿದರು. ಆದರೆ ಕನ್ನಡದಿಂದ ಒಬ್ಬೇ ಒಬ್ಬರೂ ಅಲ್ಲಿ ಕಾಣಿಸಿಕೊಂಡಿಲ್ಲ. ರಾಕ್ ಲೈನ್ ವೆಂಕಟೇಶ್, ನಾಗಾಭರಣ ಅವರು ಇದ್ರಂತೆ ಅನ್ನೋದು ನಮಗಿಲ್ಲಿ ಮುಖ್ಯವಾಗಬಾರದು. ಚಿರಂಜೀವಿ, ರಜನಿಕಾಂತ್, ಮೋಹನ್ ಲಾಲ್, ಅಕ್ಷಯಕುಮಾರ್, ಮಿಥುನ್ ಚಕ್ರವರ್ತಿ, ಹೇಮಮಾಲಿನ ತರಹದವರು ಆ ಸಭೆಯಲ್ಲಿ ಭಾಗವಹಿಸುತ್ತಿರುವಾಗ ಕನ್ನಡದಿಂದ ಯಾರು ಹೋಗಬೇಕಿತ್ತು? ಅನ್ನೋದನ್ನು ನಿಮ್ಮ ಅಂದಾಜಿಗೇ ಬಿಡುವೆ.
ಕನ್ನಡ ಚಿತ್ರರಂಗದಲ್ಲಿ ಈ ಮಟ್ಟದ ಶೂನ್ಯ ಸೃಷ್ಟಿಸಿಬಿಟ್ಟರಲ್ಲ ಈ ಹೊಸ ಪೀಳಿಗೆಯವರು! ನನಗಿಲ್ಲಿ ಇನ್ನೂ ಒಂದು ಅನುಮಾನ ಕಾಡುತ್ತಿದೆ. ಶಿವರಾಜ್ ಕುಮಾರ್, ರವಿಚಂದ್ರನ್, ಅನಂತ್ ನಾಗ್ ಸುದೀಪ್, ಯಶ್ ಹೀಗೆ ಯಾರಾದರೊಬ್ಬರು ಹೋಗಬಹುದಿತ್ತು. ಆದ್ರೆ ಇವರು ಯಾರೂ ಹೋಗಲಿಲ್ಲ! ಅದರರ್ಥ ಅವರೇ ಕರೆಯಲಿಲ್ಲವಾ ಅಥವಾ ಕರೆದರೂ ಇವರು ಹೋಗಲಿಲ್ಲವಾ? ಎರಡೂ ತಪ್ಪೇ! ಎರಡೂ ಸಹ ಖಂಡನೆಗೆ ಅರ್ಹವಾದ ವಿಷಯಗಳು. ರಾಜ್, ವಿಷ್ಣು, ಅಂಬಿಯವರು ಇದ್ದಿದ್ರೆ ಇಂತಹ ಸ್ಥಿತಿ ಇರ್ತಿತ್ತಾ? ಅತ್ಯಂತ ಘನತೆಯನ್ನು ಹೊಂದಿದ್ದ ಕನ್ನಡ ಚಿತ್ರರಂಗವೀಗ ಪರಭಾಷೆಯವರಿಗೆ ಪೋಷಕ ನಟರನ್ನು ಒದಗಿಸುವ ಚಿತ್ರರಂಗವಾಗಿಬಿಟ್ಟಿದೆ. ನಮ್ಮಲ್ಲಿನ ಸ್ಟಾರುಗಳು ಅಲ್ಲೀಗ ಪೋಷಕ ನಟರು. ಹಾ.. ಅದೇ ಮಹಾಸಾಧನೆ ಎಂಬಂತೆ ನಾವೂ ಪ್ರಚಾರ ಕೊಡ್ತಿದ್ದೀವಿ.


ಪರಭಾಷಿಕರು ನಮ್ಮ ಮಾರುಕಟ್ಟೆಯನ್ನು ಕಬ್ಜಾ ಮಾಡಲು ಅನುಸರಿಸುತ್ತಿರುವ ತಂತ್ರ ಅನ್ನೋದನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಯಾಕಿಷ್ಟು ತಡಮಾಡಿಬಿಟ್ಟೆವು ಅನ್ನೋದು ಅರ್ಥವಾಗುತ್ತಿಲ್ಲ! ನಿನ್ನೆ ತೆಲುಗಿನ ನಾನಿಯ ಹಿಟ್ 3 ಸಿನಿಮಾ, ಆಂಧ್ರ, ತೆಲಂಗಾಣ ಬಿಟ್ಟರೆ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕಲೆಕ್ಸನ್ ಮಾಡಿರೋದು ಮತ್ತು ಸೂರ್ಯನ ರೆಟ್ರೋ ಸಿನಿಮಾ ತಮಿಳುನಾಡು ಬಿಟ್ಟರೆ ಕರ್ನಾಟಕದಲ್ಲಿಯೇ ಹೆಚ್ಚು ಸಂಪಾದಿಸಿರೋದು! ಅಂದ್ರೆ ನಮ್ಮ ಕರುನಾಡು ಅವರುಗಳಿಗೆ ಎಷ್ಟೊಳ್ಳೆ ಮಾರುಕಟ್ಟೆಯಾಗಿದೆ ಅನ್ನೋದನ್ನು ನೀವೇ ಅರ್ಥಮಾಡಿಕೊಳ್ಳಿ. ಕನ್ನಡ ಚಿತ್ರರಂಗದ ಬೆನ್ನುಮೂಳೆ ಇಷ್ಟು ವೀಕ್ ಆಗಬಾರದಿತ್ತು.

ಅಂದು ಇದೇ ಥರ ಆಗಿತ್ತು!
2019ರಲ್ಲಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿ ಅವರ 150ನೇ ವರ್ಷದ ಜನ್ಮಾಚರಣೆ ಸಮಯದಲ್ಲಿ ಬಾಲಿವುಡ್‌ ಕಲಾವಿದರನ್ನು ಆಹ್ವಾನಿಸಿದ್ದರು. ಆಗ ರಣಬೀರ್‌ ಕಪೂರ್‌, ಶಾರುಖ್‌ ಖಾನ್‌ ಸೇರಿ ಹಲವರು ಭಾಗವಹಿಸಿದ್ದರು. ಆದರೆ ಅಲ್ಲಿ ದಕ್ಷಿಣ ಭಾರತದವರಿಗೆ ಆಹ್ವಾನವೂ ಇರಲಿಲ್ಲ. ಇದನ್ನು ನಟ ಚಿರಂಜೀವಿ ಸೊಸೆ, ರಾಮ್‌ ಚರಣ್‌ ತೇಜ ಪತ್ನಿ ಉಪಾಸನಾ ಅವರು ವಿರೋಧಿಸಿ, ಪ್ರಶ್ನೆ ಮಾಡಿದ್ದರು. ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಅಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದವರಾರೂ ಕಾಣಿಸಿರಲಿಲ್ಲ, ಈ ಬಾರಿ ಕನ್ನಡದವರು ಮಾತ್ರ ಇಲ್ಲ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ.

ಇನ್ನೊಂದು ಕಡೆ ಸಾವಿರ ಕೋಟಿ ರೂಪಾಯಿ ಬಾಚಿದ ಟಾಪ್‌ 10 ಸಿನಿಮಾಗಳ ಪೈಕಿ ಕೇವಲ ಮೂರು ಸಿನಿಮಾಗಳು ಬಾಲಿವುಡ್‌ನವು ಎನ್ನೋದು ಬಿಟ್ಟರೆ ಉಳಿದವೆಲ್ಲವೂ ದಕ್ಷಿಣ ಭಾರತದ್ದು ಎನ್ನೋದನ್ನು ನೆನಪಿಡಬೇಕು. ಕಾಂತಾರ, ಕೆಜಿಎಫ್‌ ಸಿನಿಮಾಗಳ ಯಶಸ್ಸು ಮರೆತು ಹೋಯ್ತೇ?