ಸಿನಿಮಾರಂಗಕ್ಕೆ ಯಶೋಮಾರ್ಗ; ಚಿತ್ರರಂಗದ ಒಳಿತಿಗೆ ಯಶ್ ಕೊಟ್ಟ ಸಲಹೆಗಳು!
ಕನ್ನಡ ಚಿತ್ರರಂಗಕ್ಕೆ ಏನೇನು ಆಗಬೇಕು ಅನ್ನುವುದನ್ನು ಯೋಚಿಸಿದಾಗ ಕೆಲವು ಮುಖ್ಯವಾದ ಸಂಗತಿಗಳು ಹೊಳೆಯುತ್ತವೆ. ಸಿನಿಮಾ ಅನ್ನುವುದು ಕಲಿಕೆಯೂ ಆಗಬೇಕು. ಈಗ ಚಿತ್ರರಂಗ ಹೇಗಿದೆ ಅಂದರೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದವನು, ಒಂದು ಕತೆ ತಗೊಂಡು ಬಂದು ನಿರ್ಮಾಪಕರಿಗೆ ಆ ಕತೆ ಹೇಳುತ್ತಾನೆ. ಆ ಕತೆಯನ್ನು ನಂಬಿ ನಿರ್ಮಾಪಕರು ಸಿನಿಮಾ ಮಾಡುತ್ತಾರೆ. ಅದೇ ಕತೆಯನ್ನು ಕಲಾವಿದರೂ ನಂಬಿ ನಟಿಸುತ್ತಾರೆ.
ಇದನ್ನು ಇನ್ನೂ ಸುಂದರಗೊಳಿಸುವುದು ಹೇಗೆ? ಒಂದು ವಿಶ್ವವಿದ್ಯಾಲಯ ಕಟ್ಟಿ, ಇವನ್ನೆಲ್ಲ ಚೆನ್ನಾಗಿ ಕಲಿಸಿಕೊಟ್ಟರೆ ಚಿತ್ರರಂಗ ಯಾವ ಎತ್ತರಕ್ಕೆ ಹೋಗಬಹುದು ಎಂದೆಲ್ಲ ನಾನು ಆಲೋಚಿಸುತ್ತಿದ್ದೇನೆ. ನಮ್ಮಲ್ಲಿ ಎಸ್ಜೆಪಿ ಇನ್ಸ್ಟಿಟ್ಯೂಟ್ ಅಂತ ಇದೆ. ಅಲ್ಲಿಂದ ಅತ್ಯುತ್ತಮವಾದ ಕೆಮರಾಮನ್ಗಳು ಬಂದಿದ್ದಾರೆ. ಲೆಕ್ಕ ಹಾಕಿದರೆ ಏಳೆಂಟು ಮಂದಿ ಬಹಳ ಒಳ್ಳೆಯ ಛಾಯಾಗ್ರಾಹಕರು ಸಿಗುತ್ತಾರೆ. ಅದೇ ಥರ ಕಥಾ ವಿಭಾಗದಲ್ಲೂ, ನಿರ್ದೇಶನ ವಿಭಾಗದಲ್ಲೂ, ಎಡಿಟಿಂಗ್ ಮತ್ತಿತರ ವಿಭಾಗಗಳಲ್ಲೂ ಕಲಿತು ಬಂದ ತಂತ್ರಜ್ಞರು ಸಿಗುವಂತಾದರೆ ಚಿತ್ರರಂಗಕ್ಕೆ ಬಹಳ ಅನುಕೂಲವಾಗುತ್ತದೆ. ಒಬ್ಬ ನಿರ್ಮಾಪಕನಿಗೆ ಪ್ರತಿಭಾವಂತರು ಎಲ್ಲಿದ್ದಾರೆ, ಎಲ್ಲಿಂದ ಅವರನ್ನು ಹುಡುಕಿ ಹಾಕಿಕೊಳ್ಳಬೇಕು ಅನ್ನುವುದು ಗೊತ್ತಾಗುತ್ತದೆ. ಅದಕ್ಕಾಗಿಯೇ ನಮ್ಮಲ್ಲಿ ಚಿತ್ರರಂಗಕ್ಕೆ ಇಂಥದ್ದನ್ನೆಲ್ಲ ಕಲಿಸುವ ಒಂದು ಡೆಡಿಕೇಟೆಡ್ ಸಂಸ್ಥೆ ಬೇಕು.
ಹೀಗೆ ಚಿತ್ರರಂಗ ತನ್ನನ್ನು ತಾನು ಅಭಿವೃದ್ಧಿಪಡಿಸಿಕೊಳ್ಳುತ್ತಾ ಹೋಗಬೇಕು. ದಿನದಿಂದ ದಿನಕ್ಕೆ ಹೊಸದಾಗುತ್ತಾ ಹೋಗಬೇಕು. ಹೊಸಬರು ಬರುತ್ತಿರಬೇಕು. ಅವರಿಗೆ ಸರಿಯಾದ ಶಿಕ್ಷಣ ಸಿಕ್ಕು, ಚಿತ್ರರಂಗದಲ್ಲಿ ಅವರ ಕಾಂಟ್ರಿಬ್ಯೂಷನ್ ಸ್ಪಷ್ಟವಾಗಿ ಗೊತ್ತಾಗುತ್ತಾ ಹೋಗಬೇಕು.
ಪುತ್ರನ ನಾಮಕರಣಕ್ಕೆ ಯಶ್ ಮಾಡಿಸಿದ್ದ ಮಂಟಪದ ಅಲಂಕಾರ ಹೇಗಿತ್ತು..!
ಚಿತ್ರೋದ್ಯಮದಲ್ಲಿ ಎಷ್ಟೆಲ್ಲ ಕೆಲಸಗಳಿವೆ, ಎಷ್ಟೊಂದು ವಿಭಾಗಗಳಿವೆ, ಎಷ್ಟೊಂದು ಉದ್ಯೋಗ ಸೃಷ್ಟಿಸುವ ಶಕ್ತಿಯಿದೆ ಎನ್ನುವುದನ್ನು ಲೆಕ್ಕಹಾಕಿದರೆ ಇದು ಕೂಡ ಬೇರೆ ಉದ್ಯಮಗಳ ಥರವೇ ಸಾಕಷ್ಟುಉದ್ಯೋಗಾವಕಾಶ ಸೃಷ್ಟಿಸುವ ವಲಯ ಅನ್ನುವುದು ಗೊತ್ತಾಗುತ್ತದೆ. ಒಬ್ಬ ಇಂಜಿನಿಯರ್ ಓದಿದವನಿಗೆ ಆ ಕ್ಷೇತ್ರದಲ್ಲಿ ಮಾತ್ರ ಕೆಲಸ ಸಿಗುತ್ತದೆ. ಆದರೆ ಚಿತ್ರನಿರ್ಮಾಣದ ಕೋರ್ಸ್ ಕಲಿತವನು ಇಲ್ಲಿರುವ ಯಾವ ವಿಭಾಗದಲ್ಲಿ ಬೇಕಿದ್ದರೂ ಕೆಲಸ ಪಡೆದುಕೊಳ್ಳಬಹುದು. ಹೀಗಾಗಿ ಚಿತ್ರರಂಗಕ್ಕಿರುವ ಆಯಾಮ ದೊಡ್ಡದು. ಇದನ್ನು ಅರ್ಥಮಾಡಿಕೊಂಡರೆ ಪ್ರತಿಭಾವಂತರು ಚಿತ್ರರಂಗಕ್ಕೆ ಬರುವ ಅವಕಾಶವೂ ಹೆಚ್ಚುತ್ತದೆ. ಚಿತ್ರರಂಗಕ್ಕೂ ಅನುಕೂಲ ಆಗುತ್ತದೆ.
"
ಚಿತ್ರೋದ್ಯಮದ ಗಣ್ಯರೆಲ್ಲ ಮುಖ್ಯಮಂತ್ರಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಯಶ್ ಆಡಿರುವ ಮಾತುಗಳಿವು. ಚಿತ್ರರಂಗದ ಕುರಿತು ಸ್ಪಷ್ಟಕಲ್ಪನೆ ಇಟ್ಟುಕೊಂಡಿರುವ ಅವರು ಕನ್ನಡ ಚಿತ್ರೋದ್ಯಮದ ನಾಳೆಗಳ ಬಗ್ಗೆ ಯೋಚಿಸುತ್ತಿದ್ದಾರೆ ಅನ್ನುವುದಕ್ಕೆ ಈ ಮಾತುಗಳೇ ಸಾಕ್ಷಿ.