Kempambudhi: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಆಡಳಿತ ವೈಭವ ಮತ್ತು ಜನಪರ ಚಿಂತನೆಗಳನ್ನು ತೆರೆಗೆ ತರುವ ಮಹತ್ವಾಕಾಂಕ್ಷೆಯ ಐತಿಹಾಸಿಕ ಸಿನಿಮಾ ‘ಕೆಂಪಾಂಬುಧಿ’ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಆಡಳಿತ ವೈಭವ ಮತ್ತು ಜನಪರ ಚಿಂತನೆಗಳನ್ನು ತೆರೆಗೆ ತರುವ ಮಹತ್ವಾಕಾಂಕ್ಷೆಯ ಐತಿಹಾಸಿಕ ಸಿನಿಮಾ ‘ಕೆಂಪಾಂಬುಧಿ’ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ನಟ ನೆನಪಿರಲಿ ಪ್ರೇಮ್ ಅವರು ನಾಡಪ್ರಭು ಕೆಂಪೇಗೌಡರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್‌ ಈಗಾಗಲೇ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಪ್ರಸ್ತುತಪಡಿಸಿರುವ ಈ ಚಿತ್ರಕ್ಕೆ ಹೊಂಬಾಳೆ ಮ್ಯೂಸಿಕ್ ಸಹಯೋಗ ನೀಡಿದೆ. ಶತಮಾನಗಳ ಹಿಂದೆ ಬೆಂಗಳೂರಿನ ಭವಿಷ್ಯವನ್ನು ಊಹಿಸಿ ನಗರ ನಿರ್ಮಾಣ ಮಾಡಿದ ಕೆಂಪೇಗೌಡರ ದೂರದೃಷ್ಟಿ, ಪರಿಸರ ಪ್ರೇಮ ಮತ್ತು ಜನಪರ ಆಡಳಿತ ಇಂದಿಗೂ ಮಾದರಿಯಾಗಿದೆ. ಇದೇ ಐತಿಹಾಸಿಕ ಹಿನ್ನೆಲೆಯನ್ನು ಆಧರಿಸಿ ಮೂಡಿಬಂದಿರುವ ‘ಕೆಂಪಾಂಬುಧಿ’ ಕೇವಲ ಒಂದು ಸಿನಿಮಾ ಮಾತ್ರವಲ್ಲ, ಬೆಂಗಳೂರಿನ ಬೇರುಗಳು, ಸಂಸ್ಕೃತಿ ಮತ್ತು ಪರಂಪರೆಯನ್ನು ನೆನಪಿಸುವ ಒಂದು ದೃಶ್ಯಯಾನವಾಗಿದೆ.

ಲೇಖಕ ಜಾಣಗೆರೆ ವೆಂಕಟರಾಮಯ್ಯ ಅವರ ಜನಪ್ರಿಯ ಕಾದಂಬರಿಯನ್ನು ಆಧರಿಸಿರುವ ಈ ಚಿತ್ರದಲ್ಲಿ ಇತಿಹಾಸ, ಜನಪದ ಕಥೆಗಳು, ದಂತಕಥೆಗಳು ಮತ್ತು ಬೆಂಗಳೂರಿನ ಸಾಂಸ್ಕೃತಿಕ ನೆನಪುಗಳನ್ನು ಅದ್ಭುತವಾಗಿ ಸಂಯೋಜಿಸಲಾಗಿದೆ. ‘ಕೆಂಪಾಂಬುಧಿ’ಯ ವಿಶೇಷತೆ ಎಂದರೆ ಇದು ಕೇವಲ ಹಿಂದಿನ ಕಾಲದ ಕಥೆಯನ್ನು ಹೇಳುವುದಿಲ್ಲ. ಬದಲಾಗಿ ಹಳೆಯ ಬೆಂಗಳೂರಿನ ಹಸಿರು ವೈಭವ ಮತ್ತು ಇಂದಿನ ವೇಗವಾಗಿ ಬೆಳೆಯುತ್ತಿರುವ ಮಹಾನಗರದ ನಡುವಿನ ಸಂಬಂಧವನ್ನು ತೆರೆದಿಡುತ್ತದೆ.

ಚಿತ್ರಕ್ಕೆ ಬೆಂಬಲ

ಒಮ್ಮೆ ‘ಗಾರ್ಡನ್ ಸಿಟಿ’ ಎಂದು ಹೆಸರಾಗಿದ್ದ ಬೆಂಗಳೂರಿನ ಪರಿಸರ ಪರಂಪರೆ, ನಗರ ನಿರ್ಮಾಣದ ಮೂಲ ಮೌಲ್ಯಗಳು ಮತ್ತು ಸಂರಕ್ಷಣೆಯ ಅಗತ್ಯತೆಯನ್ನು ಸಿನಿಮಾ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಬೆಂಗಳೂರು ನಗರದ ಇತಿಹಾಸ ಮತ್ತು ಹಸಿರು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಈ ಚಿತ್ರಕ್ಕೆ ಬೆಂಬಲ ನೀಡಿದೆ.

ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಮೇಘನಾ ಗಾಂವ್ಕರ್, ರಾಜೇಶ್ ನಟರಂಗ, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ನಾಗಶ್ರೀ ಬೇಗಾರ್, ರಾಜೇಂದ್ರ ಕಾರಂತ್, ರಮೇಶ್ ಹಂಡಿತ್, ಬಿ.ಎಲ್. ರವಿಕುಮಾರ್, ನಟರಾಜ್ ರಾವ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಕೆಂಪಾಂಬುಧಿ’ ಮೂಲಕ ನಾಡಪ್ರಭು ಕೆಂಪೇಗೌಡರ ಕನಸು, ಬೆಂಗಳೂರಿನ ವೈಭವ ಮತ್ತು ನಮ್ಮ ಪರಂಪರೆಯ ಕಥೆ ಮತ್ತೊಮ್ಮೆ ಜೀವಂತವಾಗಲಿದೆ ಎಂಬ ನಿರೀಕ್ಷೆ ಮೂಡಿದೆ.