ಮಾ.13ರಂದು ತೆರೆ ಕಂಡಿದ್ದ ಸಿನಿಮಾಗಳಿಗೆ ಮರು ಪ್ರದರ್ಶನದ ಆಫರ್!
ಕನ್ನಡ ಪ್ರಭ ಸಿನಿ ವಾರ್ತೆ: ಕೊರೋನಾ ಹೊಡೆತಕ್ಕೆ ಸಿಲುಕಿ ತತ್ತರಿಸಿದ್ದ ಕನ್ನಡದ ಕೆಲವು ನಿರ್ಮಾಪಕರು ನಿಟ್ಟುಸಿರು ಬಿಟ್ಟಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವರ ನೆರವಿಗೆ ಬಂದಿದೆ. ಮಾಚ್ರ್ 13 ರಂದು ತೆರೆಕಂಡಿದ್ದ ಕನ್ನಡ ಚಿತ್ರಗಳಿಗೆ ಮರು ಪ್ರದರ್ಶನದ ಆಫರ್ ಸಿಕ್ಕಿದೆ.
ಕೊರೋನಾ ವೈರಸ್ ಭೀತಿಯಿಂದ ಚಿತ್ರಮಂದಿರ ಹಾಗೂ ಮಾಲ್ಗಳ ಮೇಲೆ ಹಾಕಿರುವ ನಿರ್ಬಂಧ ತೆರವಾದರೆ ಮಾ.13 ರಂದು ತೆರೆ ಕಂಡ ಸಿನಿಮಾಗಳೇ ಮತ್ತೆ ಬಿಡುಗಡೆ ಆಗುತ್ತಿವೆ. ಇದು ಆತಂಕದಲ್ಲಿದ್ದ ನಿರ್ಮಾಪಕರಿಗೆ ವರದಾನವಾಗಿದೆ. ಅಷ್ಟೇ ಅಲ್ಲದೆ ಮಾ.13 ಕ್ಕೂ ಮೊದಲು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಚಿತ್ರಗಳಿಗೂ ಈಗ ಅವಕಾಶ ಸಿಗುತ್ತಿದೆ.
ಮಾ.13 ಕ್ಕೆ ಚಂದನವನದಲ್ಲಿ ಚಿರು ಸರ್ಜಾ ಆಭಿನಯದ ‘ಶಿವಾರ್ಜುನ’ ಶುಭ ಪೂಂಜ ಹಾಗೂ ರಕ್ಷಾ… ಅಭಿನಯದ ‘ನರಗುಂದ ಬಂಡಾಯ’ ಸೇರಿದಂತೆ ಐದು ಚಿತ್ರಗಳು ತೆರೆಕಂಡಿದ್ದವು. ಈ ಪೈಕಿ ‘ಶಿವಾರ್ಜುನ’ ಚಿತ್ರ ಬೆಂಗಳೂರಿನ ಕೆ.ಜಿ. ರಸ್ತೆಯ ಸಂತೋಷ್ ಸೇರಿದಂತೆ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ
ಆಗಿತ್ತು. ಉಳಿದ ಚಿತ್ರಗಳು ಹೆಚ್ಚು ಕಡಿಮೆ ತಲಾ 50 ರಿಂದ 70 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದವು. ಆದರೆ ಈ ಚಿತ್ರಗಳು ತೆರೆಕಂಡ ಮರು ದಿನವೇ ಕೊರೋನಾ ಹೊಡೆತ ಕೊಟ್ಟಿತು. ಮಾ.14 ರಿಂದಲೇ ಕೊರೋನಾ ವೈರಸ್ ಹರಡುವ ಭೀತಿಯಿಂದ ಚಿತ್ರಮಂದಿರ ಹಾಗೂ ಮಾಲ್ಗಳು ಬಂದ್ ಆದವು. ಸರ್ಕಾರದ ಈ ನಿರ್ಧಾರದಿಂದ ಶುಕ್ರವಾರ ತೆರೆಕಂಡ ಚಿತ್ರಗಳ ಜತೆಗೆ ಅದಕ್ಕೂ ಮುನ್ನ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಚಿತ್ರಗಳಿಗೂ ಬಿಸಿ ತಟ್ಟಿತು. ಪ್ರದರ್ಶನಗಳು ಬಂದ್ ಆದವು. ಇದರಿಂದ ಕಂಗಾಲಾಗಿದ್ದ ನಿರ್ಮಾಪಕರಿಗೆ ಈಗ ಒಂದಷ್ಟುರಿಲೀಸ್ ಸಿಕ್ಕಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ರೂಪಿಸಿರುವ ಸೂತ್ರದ ಪ್ರಕಾರ ಮಾ.31ರ ನಂತರ ಆಯಾ ಚಿತ್ರಮಂದಿರಗಳಲ್ಲಿ ಈ ಮುಂಚೆ ರಿಲೀಸ್ ಆಗಿದ್ದ ಸಿನಿಮಾಗಳೇ ಪ್ರದರ್ಶನ ಕಾಣಲಿವೆ. ಈ ಸಂಬಂಧ ನಿರ್ಮಾಪಕರು ಮಾಡಿಕೊಂಡ ಮನವಿಗೆ ವಾಣಿಜ್ಯ ಮಂಡಳಿ ಸ್ಪಂದಿಸಿದೆ. ಪ್ರದರ್ಶಕರು, ಯುಎಫ್ ಓ ಮತ್ತು ಕ್ಯೂಬ್ ಜತೆಗೂ ಮಾತುಕತೆ ನಡೆಸಿದೆ. ಇದರ ಪರಿಣಾಮ ಆತಂಕದಲ್ಲಿದ್ದ ನಿರ್ಮಾಪಕರ ಮುಖದಲ್ಲಿ ಒಂದಷ್ಟುನಿರಾಳತೆ ಕಾಣುತ್ತಿದೆ.
ಶಿವಾಜಿ ಸುರತ್ಕಲ್ ಭರ್ಜರಿ ಎಂಟ್ರಿ
ಮಾ.13 ರಂದು ತೆರೆ ಕಂಡಿದ್ದ ಚಿತ್ರಗಳ ಜತೆಗೆ ‘ಪಾಪ್ ಕಾರ್ನ್ ಮಂಕಿ ಟೈಗರ್’, ‘ದ್ರೋಣ’, ‘ಶಿವಾಜಿ ಸುರತ್ಕಲ್’ ಹಾಗೂ ‘ಲವ್ ಮಾಕ್ಟೆಲ್ ’ ಸಿನಿಮಾಗಳಿಗೂ ಮುಂದುವರಿಕೆಯ ಭಾಗ್ಯ ಸಿಗುತ್ತಿದೆ. ಈಗ ಶಿವಾಜಿ ಸುರತ್ಕಲ್ ಚಿತ್ರ ತಂಡ ಇದನ್ನೇ ಎನ್ಕ್ಯಾಶ್ ಮಾಡಿಕೊಳ್ಳಲು ಮುಂದಾಗಿದೆ. ರಾಜ್ಯದಲ್ಲಿ ಚಿತ್ರದ ಬಿಡುಗಡೆಗೆ ಬೇಡಿಕೆ ಬಂದಿದ್ದ ಕಡೆಗಳಲ್ಲಿ ಗ್ರಾಂಡ್ ಎಂಟ್ರಿ ಪಡೆಯಲು ಮುಂದಾಗಿದೆ. ಮತ್ತಷ್ಟುಪ್ರಚಾರದೊಂದಿಗೆ ಜಿಲ್ಲಾ ಕೇಂದ್ರದ ಆಚೆ ತಾಲೂಕು ಮಟ್ಟದ ಚಿತ್ರಮಂದಿರಗಳಿಗೂ ತೆಗೆದುಕೊಂಡು ಹೋಗಲು ನಿರ್ಧರಿಸಿದೆ. ‘ನಮಗೆ ಜನರನ್ನು ತಲುಪಲು ಒಳ್ಳೆಯ ಅವಕಾಶವೇ ಸಿಕ್ಕಿತ್ತು. ಆದರೆ ಚಿತ್ರದ ಕುರಿತ ಮೆಚ್ಚುಗೆ ಮಾತುಗಳು ಜನರಿಂದ ಜನರಿಗೆ ತಲುಪುವ ಹೊತ್ತಿಗೆ ಮತ್ತೆ ಸ್ಟಾರ್ ಸಿನಿಮಾಗಳು ಬಂದವು. ಹಾಗಾಗಿ ಜನರು ಒಂದಷ್ಟುಗೊಂದಲಕ್ಕೆ ಸಿಲುಕಿದರು. ಮೇಲಾಗಿ ಕೆಲವು ಸಿನಿಮಾಗಳಿಗೆ ಚಿತ್ರಮಂದಿರಗಳನ್ನು ಬಿಟ್ಟು ಕೊಡಬೇಕಾಯಿತು. ಈಗ ನಾವು ಜನರನ್ನು ತಲುಪಲು ಒಳ್ಳೆಯ ಅವಕಾಶ ಸಿಗುತ್ತಿದೆ. ಸೂಕ್ತ ಪ್ರಚಾರದೊಂದಿಗೆ ಗ್ರಾಂಡ್ ಎಂಟ್ರಿ ಪಡೆಯಲಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.