Asianet Suvarna News Asianet Suvarna News

I Love You ಚಿನ್ನ: ಜಗ್ಗೇಶ್ ಬಿಚ್ಚಿಟ್ಟ ಪುನೀತ್ ನೆನಪು

ನನ್ನ ಗ್ರಾಮದ ಭೈರವನ ನೋಡಲು ಬಂದು ನನ್ನ ಗ್ರಾಮೀಣ ಹಿನ್ನೆಲೆ ಬದುಕಿನ ಅನುಭವ ಕೇಳಿ ಮರುಗಿದ್ದು ಹೇಗೆ ಮರೆಯಲಿ, ನನ್ನ ಜೊತೆ ಮಂತ್ರಾಲಯಕ್ಕೆ ಬಂದು ಸಾಮಾನ್ಯನಂತೆ ರಸ್ತೆ ಬದಿಯ ಚಹಾದ ಅಂಗಡಿ ಮುಂದಿನ ಆನಂದಮಯ ಕ್ಷಣದ ದಿನ ಹೇಗೆ ಮರೆಯಲಿ. 

Kannada Actor Jaggesh unleashed Puneeth Rajkumar memory
Author
Bangalore, First Published Oct 31, 2021, 2:40 PM IST

ಸ್ಯಾಂಡಲ್‌ವುಡ್‌ನ (Sandalwood) ಪವರ್‌ಸ್ಟಾರ್ ನಟ ಪುನೀತ್ ರಾಜ್‌ ಕುಮಾರ್ (Puneeth Rajkumar) ಅವರ ಅಕಾಲಿಕ ನಿಧನ ಎಲ್ಲರನ್ನೂ ಆಘಾತಕ್ಕೆ ದೂಡಿದೆ. ನಂಬಲಾಗದ ಸತ್ಯವನ್ನು ಅರಗಿಸಿಕೊಳ್ಳಲು ಚಿತ್ರರಂಗದವರು, ಅಭಿಮಾನಿಗಳು ಕಷ್ಟಪಡುತ್ತಿದ್ದಾರೆ. ಎರಡು ದಿನ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್‌ ರಾಜ್‌ಕುಮಾರ್‌ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಾರತೀಯ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಅನೇಕ ಅಭಿಮಾನಿಗಳು ಪಾರ್ಥಿವ ಶರೀರದ ದರ್ಶನ ಪಡೆದರು. ಇಂದು ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿ ತಾಯಿ ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ನಡೆಸಲಾಯಿತು.

"

ಪುನೀತ್‌ಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಜಗ್ಗೇಶ್‌ ಆಗ್ರಹ

ಕನ್ನಡದ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಹಠಾತ್ ನಿಧನಕ್ಕೆ ನವರಸ ನಾಯಕ ಜಗ್ಗೇಶ್ (Jaggesh) ಭಾವುಕರಾಗಿ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ  ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. '30ವರ್ಷದ ಒಡನಾಟ ಹೇಗೆ ಮರೆಯಲಿ ಬಂಧುವೆ, ಅಪ್ಪ ನನ್ನನ್ನು ನಿನಗೆ ಪರಿಚಯಿಸಿದಾಗ ನಿನ್ನ ಆಶ್ಚರ್ಯದ ಮುದ್ದು ಮುಖ ಹೇಗೆ ಮರೆಯಲಿ, ನನ್ನ ಚಿತ್ರಗಳ ನೋಡಿ ಸಂಭ್ರಮಿಸಿ ನನಗೆ ಕರೆಮಾಡಿ ಹರಸುತ್ತಿದ್ದ ನಿನ್ನ ಗುಣ ಹೇಗೆ ಮರೆಯಲಿ, ನನ್ನ ಗ್ರಾಮದ ಭೈರವನ ನೋಡಲು ಬಂದು ನನ್ನ ಗ್ರಾಮೀಣ ಹಿನ್ನೆಲೆ ಬದುಕಿನ ಅನುಭವ ಕೇಳಿ ಮರುಗಿದ್ದು ಹೇಗೆ ಮರೆಯಲಿ, ನನ್ನ ಜೊತೆ ಮಂತ್ರಾಲಯಕ್ಕೆ ಬಂದು ಸಾಮಾನ್ಯನಂತೆ ರಸ್ತೆ ಬದಿಯ ಚಹಾದ ಅಂಗಡಿ ಮುಂದಿನ ಆನಂದಮಯ ಕ್ಷಣದ ದಿನ ಹೇಗೆ ಮರೆಯಲಿ. 

ಪುನೀತ್‌ ರಾಜ್‌ಕುಮಾರ್‌ಗೆ ಭಾವುಕ ಪತ್ರ ಬರೆದ ಕಿಚ್ಚ ಸುದೀಪ್!

ಆನಂದರಾಮ ನನಗಾಗಿ ನಿರ್ದೇಶನ ಮಾಡುವ ಚಿತ್ರದ ಕಥೆ ಕೇಳಿ ನೀನು ನಗುತ್ತಿದ್ದ ಆ ನಗು ಮುಖ ಹೇಗೆ ಮರೆಯಲಿ, ಮಗ ಗುರುರಾಜನ ಚಿತ್ರಕ್ಕೆ ಶುಭ ಹಾರೈಸಿ ಮಗನಿಗೆ ಭುಜ ತಟ್ಟಿದ ದಿನ ಹೇಗೆ ಮರೆಯಲಿ, ನಿನ್ನ ತಂದೆಯ ದ್ವನಿ ಅನುಕರಣೆ ಮಾಡಿದಾಗ ನೀ ಮಗುವಂತೆ ನಗುತ್ತಿದ್ದ ಆ ಮುದ್ದು ಮುಖ ಹೇಗೆ ಮರೆಯಲಿ, ಕೇವಲ ವಾರದ ಹಿಂದೆ ಅಣ್ಣ ಮಲ್ಲೇಶ್ವರಕ್ಕೆ ಬಂದಿರುವೆ ಬನ್ನಿ ಎಂದು ಕರೆದು ನನ್ನ ನಿನ್ನ ಬದುಕಿನ ಕಡೆಯ ಭೇಟಿ ಹೇಗೆ ಮರೆಯಲಿ. ಪ್ರೀತಿಯ ಆತ್ಮವೆ ಹೋಗಿ ಬಾ ಎಂದು ಹೇಳಲು ನನಗೆ ಮನಸ್ಸು ಒಪ್ಪುತ್ತಿಲ್ಲ, ನನ್ನ ಕಡೆ ಉಸಿರಿನವರೆಗು ನಿನ್ನ ನೆನಪು ಒಡನಾಟ ನನ್ನಮನದಲ್ಲಿ ಉಳಿಸಿಕೊಳ್ಳುವೆ. ನಿನ್ನ ಆತ್ಮ ಎಲ್ಲೆ ಇರಲಿ ಶಾಂತಿಯಿಂದ ಉಳಿಯಲಿ I love you ಚಿನ್ನ' ಎಂದು ಜಗ್ಗೇಶ್ ಭಾವನಾತ್ಮಕವಾಗಿ ನೋವನ್ನು ವ್ಯಕ್ತಪಡಿಸಿದ್ದಾರೆ.
 


ಇನ್ನು ನಟ ಜಗ್ಗೇಶ್, ಪುನೀತ್ ರಾಜ್‌ ಕುಮಾರ್ ನಿಧನದ ಸುದ್ದಿ ತಿಳಿದಾಗಿನಿಂದಲೂ ಸಾಮಾಜಿಕ ಜಾಲತಾಣ (Social Media) ಖಾತೆಯಲ್ಲಿ ಅವರ ಒಡನಾಟವನ್ನು ನೆನೆದು ಹಲವಾರು ಪೋಸ್ಟ್‌ಗಳನ್ನು ಮಾಡಿದ್ದಾರೆ.

ಎಂಥ ದುರ್ವಿಧಿ
ವಾರದ ಹಿಂದೆ ಮಲ್ಲೇಶ್ವರಕ್ಕೆ ಬಂದಿರುವೆ ಬಾಅಣ್ಣ ಎಂದು ಕರೆದು1ಘಂಟೆ ಸಮಯಕಳೆದ ಆತ್ಮೀಯ ತಮ್ಮ ಪುನೀತ ಇಂದಿಲ್ಲಾ ಎಂದರೆ ಎಂಥ ದುರ್ವಿಧಿ! ಕೋಟ್ಯಾಂತರ ಅಭಿಮಾನಿಗಳು ಅವರ ಮನೆಯವರಿಗೆ ಈನೋವು ಬರಿಸುವ ಶಕ್ತಿ ಆದೇವರೆ ನೀಡಬೇಕು!ಕನ್ನಡ ಚಿತ್ರರಂಗದ ಅನರ್ಘ್ಯರತ್ನ ಹೇಳದೆ ಕೇಳದೆ ನಿರ್ಗಮಿಸಿ ಅಪ್ಪಅಮ್ಮನ ಮಡಿಲು ಸೇರಿತು! ನಿಮ್ಮಆತ್ಮಕ್ಕೆ ಚಿರಶಾಂತಿ.


ಮರೆಯಲಾಗದ ದಿನ
ಸಂತೋಷ್ ಜೀ ರವರು ಪುನೀತ್ ಬೇಟಿ ಮಾಡಬೇಕೆಂದು ತಿಳಿಸಿದಾಗ ಪುನೀತ್ ಗೆ ಕರೆಮಾಡಿ ವಿಷಯ ತಿಳಿಸಿದೆ ಮಗುವಂತೆ ಕಾದು ಕುಳಿತು ಜೀ ರವರ ಜೊತೆ ಸಮಯ ಕಳೆದು ಮನಬಿಚ್ಚಿ ಮಾತಾಡಿದ ಕ್ಷಣ. ನಿನ್ನ ಮಗುವಿನಂತಹ ನಗು ನನ್ನ ಹೃದಯದಲ್ಲಿ ಅಚ್ಚಾಗಿದೆ.


ಎಂಥ ಸಾವು ಇದು
ನನ್ನ ಪುಟ್ಟಗ್ರಾಮಕ್ಕೆ ನೀ ಬಂದು ಸಂಭ್ರಮಿಸಿದ ದಿನ ಹೇಗೆ ಮರೆಯಲಿ! ಮಾತು ಬರದ ನನ್ನ ತಮ್ಮನ ಕಂಡು ನೀ ಮರಗಿದ್ದು ನೆನೆದು ನನ್ನಹೃದಯ ಚಿದ್ರವಾಗಿದೆ! ನೀಇಲ್ಲಾ ಎಂದರೆ ನಂಬಲಾಗುತ್ತಿಲ್ಲಾ! ಕರೆ ಮಾಡಿದರೆ ಅಣ್ಣ ಎಂದು ಕರೆ ಸ್ವೀಕರಿಸುವೆ ಎನ್ನುವಂತೆ ಭಾವ! ನೀ ಇಲ್ಲಾ ಎಂದರೆ ಮನ ನಂಬುತ್ತಿಲ್ಲಾ! ಎಂಥ ಸಾವು ಇದು! ಬದುಕಲ್ಲಿ ನಾ ಪೂಜೆ ಮಾಡದ ದಿನ ಇಂದು.


ಮರಣೋತ್ತರ ಪ್ರಶಸ್ತಿ ನೀಡಿ
ಕನ್ನಡ ನಾಡು ನುಡಿಗಾಗಿ ಸಾಧಕರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿ. ನಮ್ಮ ಪುನೀತನಿಗೆ ಮರಣೋತ್ತರ ಪ್ರಶಸ್ತಿ ನೀಡಿ ಮಾನ್ಯ ಮುಖ್ಯಮಂತ್ರಿಗಳೆ, ಕನ್ನಡಿಗರ ಪ್ರೀತಿಗೆದ್ದ ರಾಜಣ್ಣನ ಮಗನ ಆತ್ಮಕ್ಕೆ ಗೌರವಿಸಿದಂತೆ ಆಗುವುದು ಎಂದು ನನ್ನ ವಿನಂತಿ


ಬದುಕು ನಶ್ವರ
ಕನ್ನಡದ ಎಲ್ಲಾ ನನ್ನ ಸಹೋದರ ಕಲಾವಿದ ಬಂಧುಗಳು ಹಾಗು ಅವರ ಅಭಿಮಾನಿಗಳಲ್ಲಿ ವಿನಂತಿ. ನಿಮ್ಮಪಾದಗಳಿಗೆ ನಮಸ್ಕರಿಸಿ ಬೇಡುವೆ pls ದಯಮಾಡಿ ದ್ವೇಷ ಮಾಡದೆ ಪರಸ್ಪರ ಅಣ್ಣ ತಮ್ಮರಂತೆ ಬಾಳಿ Folded hands ಬದುಕು ನಶ್ವರ! ಸತ್ತಮೇಲೆ ನಾವ್ಯಾರೋ? ನೀವ್ಯಾರೋ? ದೇವರು ಕರೆದರೆ ನಾವೆಲ್ಲಾ ದೇವರ ಮಕ್ಕಳು! ಬದುಕಿದ್ದಾಗ ಒಡಹುಟ್ಟಿದವರಂತೆ ಬಾಳುವ! ಪ್ರೀತಿ ಶಾಶ್ವತ!ದ್ವೇಷ ಕ್ಷಣಿಕ!


ಪುನೀತ್ ಪ್ರತಿಬಿಂಬ ಶಿವಣ್ಣ
ನನ್ನ ಪ್ರೀತಿಯ ಸಹೋದರ ಪುನೀತ ರಾಯರ ಮಡಿಲು ಸೇರಿದ Loudly crying face ರಾಜಣ್ಣನ ಮನೆಗೆ ಈಗ ಆಧಾರಸ್ತಂಭ. ಶಿವರಾಜಕುಮಾರ.  ಕನ್ನಡದ ಮನಗಳೆ ಇನ್ನು ಮುಂದೆ ಪುನೀತ್ ರಾಜಣ್ಣನ ಪ್ರತಿಬಿಂಬ ಶಿವರಾಜಕುಮಾರ ಮಾತ್ರ.. ನಿಮ್ಮೆಲ್ಲರ ಪ್ರೀತಿ ಶಿವಣ್ಣನಿಗೆ ಧಾರೆ ಎರೆದು ಅವನಿಗೆ ಕನ್ನಡದ ಶಕ್ತಿತುಂಬಿ Folded handsFolded handsFolded hands ಹರಿಃ ಓಂ

Follow Us:
Download App:
  • android
  • ios