ಡಾ. ರಾಜ್ ಇಷ್ಟವಾಗಲು ಇದೇ ಕಾರಣ!
ಅನೇಕರ ಗೆಳೆಯ, ಹಲವರಿಗೆ ಗುರು, ಅಭಿಮಾನಿಗಳಿಗೆ ದೇವರು, ಹೆಣ್ಮಕ್ಕಳಿಗೆ ಪುರುಷೋತ್ತಮ, ಪ್ರೇಮಿಗಳಿಗೆ ರಸಿಕರ ರಾಜ, ಕಲಾವಿದರಿಗೆ ನಟಸಾರ್ವಭೌಮ, ಹಿರಿಯರಿಗೆ ಸಜ್ಜನಿಕೆಗೆ ಮತ್ತೊಂದು ಹೆಸರು, ರೈತರಿಗೆ ಬಂಗಾರದ ಮನುಷ್ಯ, ನೆರವು ಪಡೆದವರಿಗೆ ದೇವತಾಮನುಷ್ಯ... ರಾಜ್ಕುಮಾರ್ ಎಲ್ಲರ ಮನಸ್ಸಿನಲ್ಲಿ ನೆಲೆಸಿದ ರೀತಿ ಅದು.
ಸಹಪಂಕ್ತಿ ಭೋಜನ ಜಾರಿಗೆ ತಂದರು
ಸಿನಿಮಾ ಶೂಟಿಂಗ್ ಸೆಟ್ಗಳಲ್ಲಿ ಸಹಪಂಕ್ತಿ ಭೋಜನ ವ್ಯವಸ್ಥೆಯನ್ನು ಮೊದಲು ರೂಢಿಗೆ ತಂದವರೇ ರಾಜಕುಮಾರ್. ಅಲ್ಲಿ ತನಕ ಸ್ಟಾರ್ ನಟರು, ಸಹಕಲಾವಿದರು ಪ್ರತ್ಯೇಕವಾಗಿ ಊಟ ಮಾಡುವ ವ್ಯವಸ್ಥೆ ಇತ್ತು. ರಾಜಕುಮಾರ್ ಅವರ ಪ್ರವೇಶದಿಂದಾಗಿ ಅದು ದೂರವಾಗಿ ಸಹಪಂಕ್ತಿ ಭೋಜನ ರೂಢಿಗೆ ಬಂತು. ಆ ಕಾರಣಕ್ಕಾಗಿಯೇ ರಾಜಕುಮಾರ್ ಎನ್ನುವ ಸ್ಟಾರ್ ಸೆಟ್ಬಾಯ್ಸ್ ನಿಂದ ಹಿಡಿದು ಸಹ ಕಲಾವಿದರಿಗೂ ಅಚ್ಚುಮೆಚ್ಚು ಆಗಿದ್ದು ಇತಿಹಾಸ.
ಮುಂಗಡ ಹಣ ಬೇಡ ಅಂದಿದ್ದರು
ರಾಜಕುಮಾರ್ ಅವರು ಸ್ಟಾರ್ ಆದ ನಂತರ ಹೊಸ ಸಿನಿಮಾಗೆ ಮುಂಚಿತವಾಗಿಯೇ ಅಡ್ವಾನ್ಸ್ ಪಡೆಯುವುದನ್ನು ನಿಲ್ಲಿಸಿದ್ದರು. ಬದಲಿಗೆ ಕಾಲ್ಶೀಟ್ ಕೊಟ್ಟ ಹೊಸ ಸಿನಿಮಾದ ಶೂಟಿಂಗ್ ಡೇಟ್ ಫಿಕ್ಸ್ ಆದ ನಂತರವೇ ಅಡ್ವಾನ್ಸ್ ಪಡೆಯುವ ಪದ್ಧತಿ ರೂಢಿಗೆ ಬಂತು. ಅದಕ್ಕೆ ಕಾರಣ, ಮುಂಚಿತವಾಗಿಯೇ ಅಡ್ವಾನ್ಸ್ ಪಡೆದು, ನಿಗದಿತ ಸಮಯಕ್ಕೆ ಶೂಟಿಂಗ್ ಮುಗಿಸಿಕೊಡದಿದ್ದರೆ ಕಷ್ಟ ಎನ್ನುವುದಕ್ಕಾಗಿಯೇ ಅವರು ಅಂತಹದೊಂದು ನಿಯಮವನ್ನು ಜಾರಿಗೆ ತಂದು ಪಾಲಿಸಿದರು.
ಸೋತವರ ಬೆನ್ನಿಗೆ ನಿಲ್ಲುತ್ತಿದ್ದರು
ಸ್ಟಾರ್ ನಟರು ತಾವು ಅಭಿನಯಸಿದ ಚಿತ್ರಗಳು ಸೋತಾಗ ನಿರ್ಮಾಪಕರಿಗೆ ನೆರವಾಗುವ ಪ್ರಸಂಗಳು ಈಗ ಸಾಕಷ್ಟು ಸುದ್ದಿ ಆಗುತ್ತಿವೆ. ಆದರೆ ಅವತ್ತಿನ ದಿನಗಳಲ್ಲೇ ರಾಜ್ ಕುಮಾರ್, ಅದೆಷ್ಟೋ ನಿರ್ಮಾಪಕರಿಗೆ ನೆರವು ನೀಡಿದ ಅಂಶ ಕೆಲವರಿಗೆ ಮಾತ್ರ ಗೊತ್ತಿದೆ. ‘ರಾಜಕುಮಾರ್ ಚಿತ್ರಗಳಿಂದ ತಮಗೆ ಲಾಭ ಆಗಲಿಲ್ಲ’ ಅಂತ ಯಾರಾದರೂ ನಿರ್ಮಾಪಕರು ಗೊಣಗಿದ ಸುದ್ದಿ ತಮ್ಮ ಕಿವಿಗೆ ಬೀಳುತ್ತಿದ್ದಂತೆ, ಅವರೇ ನಿರ್ಮಾಪಕರ ಜತೆಗೆ ಮಾತನಾಡಿ, ‘ನಿಮಗೆ ಫ್ರೀ ಡೇಟ್ಸ್ ಕೊಡುತ್ತೇನೆ, ಮತ್ತೊಂದು ಸಿನಿಮಾ ಮಾಡಿ’ ಎಂದು ಸಹಾಯ ಹಸ್ತ ನೀಡುತ್ತಿದ್ದರು. ಹಾಗೆ 11 ಮಂದಿ ನಿರ್ಮಾಪಕರು ರಾಜ್ ಕುಮಾರ್ ಅವರಿಂದ ಫ್ರೀ ಕಾಲ್ಶೀಟ್ ಪಡೆದಿದ್ದು ಅವರ ಕುರಿತ ಪುಸ್ತಕಗಳಲ್ಲಿ ದಾಖಲಾಗಿದೆ.
ಡಾ. ರಾಜ್ ಬಗ್ಗೆ ಗೊತ್ತಿರದ 5 ಸಂಗತಿಗಳು
ಮಾತು ತಪ್ಪುತ್ತಿರಲಿಲ್ಲ
ಪ್ರೊಡಕ್ಷನ್ ಮ್ಯಾನೇಜರ್ಗಳ ಮೇಲೆ ಆಗ ಸ್ಟಾರ್ ನಟರಿಗೆ ಅತೀವ ವಿಶ್ವಾಸವಿತ್ತು. ಶಿವಾಜಿರಾವ್ ಹೆಸರಿನ ಓರ್ವ ಪ್ರೊಡಕ್ಷನ್ ಮ್ಯಾನೇಜರ್ ರಾಜ್ಕುಮಾರ್ ಅವರಿಗೆ ತುಂಬಾ ಬೇಕಾಗಿದ್ದರು. ‘ರಾಜ್ಕುಮಾರ್ ಚಿತ್ರಗಳಿಂದ ತಮಗೆ ಲಾಭ ಆಗಲಿಲ್ಲ’ ಅಂತ 11 ಮಂದಿ ನಿರ್ಮಾಪಕರು ಹೇಳಿದ್ದ ವಿಚಾರವನ್ನು ರಾಜ್ ಕುಮಾರ್ ಅವರಿಗೆ ತಿಳಿಸಿದ್ದೇ ಆತ.
ಅದಕ್ಕೆ ಪ್ರತಿಯಾಗಿ ಆತನಿಗಾಗಿಯೇ ಒಂದು ಸಿನಿಮಾದಲ್ಲಿ ಅಭಿನಯಿಸಲು ಕಾಲ್ಶೀಟ್ ನೀಡಿದ್ದರು. ಆತ ಸಿನಿಮಾ ನಿರ್ಮಾಣಕ್ಕೆ ಮಾಡಲು ಸಾಧ್ಯವಾಗದೆ ಹೋದಾಗ, ಅವರಿಗೆ ನೀಡಿದ್ದ ಕಾಲ್ಶೀಟ್ ಅನ್ನು ಕೆಸಿಎನ್ ಚಂದ್ರಶೇಖರ್ ಪಡೆದುಕೊಂಡು ರಾಜಕುಮಾರ್ ಅಭಿನಯದಲ್ಲಿ ‘ದಾರಿ ತಪ್ಪಿದ ಮಗ’ ಚಿತ್ರ ಮಾಡಿದ್ದರು. ಅದು ಸೂಪರ್ ಹಿಟ್ ಚಿತ್ರವಾಗಿಯೂ ದಾಖಲಾಯಿತು.