ಡಾ. ರಾಜ್‌ಕುಮಾರ್‌ರದ್ದು ಮೇರು ವ್ಯಕ್ತಿತ್ವ. ಅವರ ಬಗ್ಗೆ ಎಷ್ಟು ಹೇಳಿದರೂ ಮುಗಿಯದ ಕಥೆ ಅದು. ಡಾ. ಬಗ್ಗೆ ತಿಳಿದುಕೊಳ್ಳಬೇಕಾದ ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ ನೋಡಿ. 

1. ಅಭಿನಯ ಅಂದರೆ ರಾಜ್ ಅಂತ ಎಲ್ಲರೂ ಒಪ್ಪುತ್ತಾರೆ. ಆದರೆ, ರಾಜ್ ಅತ್ಯುತ್ತಮ ಪಾತ್ರಗಳಿಗೆ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಬರಲೇ ಇಲ್ಲ. ಅವರ ಚಿತ್ರಗಳು ರಾಷ್ಟ್ರಪ್ರಶಸ್ತಿ ಗಳಿಸಿದವು ನಿಜ. ಆದರೆ ರಾಷ್ಟ್ರಪ್ರಶಸ್ತಿ ಅವರ ಅಭಿನಯಕ್ಕೆ ಬರಲೇ ಇಲ್ಲ. ಜನರೇ ಅವರನ್ನು ನಟ ಸಾರ್ವಭೌಮ ಎಂದು ಕರೆದು ಕೊಂಡಾಡುತ್ತಾರೆ.

Add Asianetnews Kannada as a Preferred SourcegooglePreferred

2. ರಾಜ್‌ಕುಮಾರ್ ಎಂದೂ ತಮ್ಮ ಸಿನಿಮಾವನ್ನು ತಾವು ನೋಡುತ್ತಿರಲಿಲ್ಲ. ಆದರೆ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತಿದ್ದರು. ಅವರು ದೆಹಲಿ ಚಿತ್ರೋತ್ಸವದಲ್ಲಿ ನೋಡಿದ ಇರಾನಿ ಸಿನಿಮಾ ವೊಂದನ್ನು ಮೆಚ್ಚಿಕೊಂಡು ಅದನ್ನು ಆಧಾರವಾಗಿಟ್ಟುಕೊಂಡು ಕನ್ನಡದಲ್ಲಿ ಸಿನಿಮಾ ಮಾಡುವಂತೆ ಹೇಳಿದ್ದರು. ಹಾಗೆ ಹುಟ್ಟಿಕೊಂಡ ಚಿತ್ರವೇ ವಸಂತಗೀತ.

3. ಅತ್ಯುತ್ತಮ ನಟರೊಬ್ಬರು ಅಭಿನಯಕ್ಕೆ ಪಡೆಯದೇ ಇದ್ದ ರಾಷ್ಟ್ರಪ್ರಶಸ್ತಿಯನ್ನು ಹಿನ್ನೆಲೆಗಾಯಕರಾಗಿ ಪಡೆದರು. ಇದು ಚರಿತ್ರೆಯಲ್ಲೇ ಮೊದಲು ಮತ್ತು ಕೊನೆ. ರಾಜ್‌ಕುಮಾರ್ ಹಾಡಿದ ‘ನಾದಮಯಾ...’ ಹಾಡಿಗೆ ಅತ್ಯುತ್ತಮ ಗಾಯಕ ರಾಷ್ಟ್ರಪ್ರಶಸ್ತಿ ಬಂತು.

4. ರಾಜ್ ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಟಿಸಿದ್ದ ನಾಟಕ ಭಕ್ತ ಅಂಬರೀಷ. ಅದನ್ನು ಸಿನಿಮಾ ಮಾಡಬೇಕೆಂಬ ಆಸೆ ಅವರಿಗೆ ಮೊದಲಿನಿಂದಲೇ ಇತ್ತು. ಅದು ಕೊನೆಯ ತನಕವೂ ಈಡೇರಲೇ ಇಲ್ಲ. ಮುಹೂರ್ತ ನಡೆದರೂ ಆ ಚಿತ್ರ ಸೆಟ್ಟೇರಲೇ ಇಲ್ಲ.

5. ಕಸ್ತೂರಿ ನಿವಾಸ ಚಿತ್ರದ ಕತೆಯನ್ನು ಜಿ. ಬಾಲಸುಬ್ರಹ್ಮಣ್ಯಂ ಬರೆದದ್ದು ಶಿವಾಜಿ ಗಣೇಶನ್ ಮನಸ್ಸಲ್ಲಿ ಇಟ್ಟುಕೊಂಡು. ಶಿವಾಜಿ ಆ ಸಿನಿಮಾ ಒಪ್ಪಲಿಲ್ಲ. ಅದನ್ನು ದೊರೆ ಭಗವಾನ್ 38,000 ರುಪಾಯಿ ಕೊಟ್ಟು ಕೊಂಡುಕೊಂಡರು. ಸಿನಿಮಾ ಗೆದ್ದಿತು. ನಂತರ ಅದನ್ನೇ ಎರಡು ಲಕ್ಷ ರುಪಾಯಿಗೆ ಶಿವಾಜಿ ಗಣೇಶನ್ ಖರೀದಿಸಿ ಸಿನಿಮಾ ಮಾಡಿದರು.