ರಾಷ್ಟ್ರಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ ಇಂದು ರಿಲೀಸ್
ಪವನ್ ಒಡೆಯರ್ ನಿರ್ಮಾಣದ, ಸಾಗರ್ ಪುರಾಣಿಕ್ ನಿರ್ಮಾಣದ ಸಿನಿಮಾ ರಿಲೀಸ್.
ರಾಷ್ಟ್ರಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಸಾಗರ್ ಪುರಾಣಿಕ್ ನಿರ್ದೇಶನದ, ಪವನ್ ಒಡೆಯರ್ ನಿರ್ಮಾಣದ ಈ ಸಿನಿಮಾದ ಶಾಶ್ವತ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಸಿನಿಮಾ ಪ್ರೇಮಿಗಳ ಮೆಚ್ಚುಗೆ ಪಡೆದಿದೆ. ವಿಶೇಷ ಎಂದರೆ ಈ ಹಾಡನ್ನು ಪುನೀತ್ ರಾಜ್ಕುಮಾರ್ ಬಿಡುಗಡೆ ಮಾಡುವ ಆಶ್ವಾಸನೆ ನೀಡಿದ್ದರು. ಈಗ ಅವರಿಲ್ಲದ ಹೊತ್ತಲ್ಲಿ ಪವನ್ ಒಡೆಯರ್ ಅವರು ಪುನೀತ್ ಅಭಿಮಾನಿಗಳಿಂದ ಹಾಡು ಬಿಡುಗಡೆಗೊಳಿಸಿದ್ದಾರೆ.
ಸಿನಿಮಾ ಬಿಡುಗಡೆ ಸಂದರ್ಭದ ಸುದ್ದಿಗೋಷ್ಠಿಯಲ್ಲಿ ಪವನ್ ಒಡೆಯರ್, ‘ಸಹ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದವನು ನಾನು. ಈಗ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದೇನೆ. ಅದಕ್ಕೆ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಸಂಸ್ಥೆಯೇ ಸ್ಫೂರ್ತಿ. ನಮ್ಮ ನಿರ್ಮಾಣದ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರ ಆಶೀರ್ವಾದ ಇರಲಿ. ಉತ್ತರ ಕರ್ನಾಟಕದ ಕಡೆ ಚಿತ್ರಕ್ಕೆ ಹೆಚ್ಚು ಬೇಡಿಕೆ ಬರುತ್ತಿದೆ’ ಎಂದು ಹೇಳಿದರು.
ಡೊಳ್ಳು ಸಿನಿಮಾ ನೋಡಿ ಸಿದ್ದು ಸರ್ ಒಂದು ಕ್ಷಣ ಎಮೋಶನಲ್ ಆದ್ರು: ಪವನ್ ಒಡೆಯರ್
ನಿರ್ದೇಶಕ ಸಾಗರ್ ಪುರಾಣಿಕ್, ‘ದೊಡ್ಡ ದೊಡ್ಡ ನಿರ್ದೇಶಕರು, ಗಣ್ಯರು ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಆ ಖುಷಿಯಲ್ಲೇ ಪ್ರೇಕ್ಷಕರ ಪ್ರತಿಕ್ರಿಯೆ ಎದುರು ನೋಡುತ್ತಿದ್ದೇನೆ’ ಎಂದು ತಿಳಿಸಿದರು. ಚಿತ್ರಕ್ಕೆ ಸಂಭಾಷಣೆ, ಚಿತ್ರಕತೆ ಬರೆದ ಡಿ.ಎಸ್. ಶ್ರೀನಿಧಿ, ‘ಪ್ರಶಸ್ತಿ ಪಡೆದ ಚಿತ್ರಗಳು ಪ್ರೇಕ್ಷಕರಿಗೆ ತಲುಪುವುದಿಲ್ಲ ಎಂಬ ಮಾತು ಈ ಸಿನಿಮಾ ಸುಳ್ಳು ಮಾಡಿದೆ. ಬಿಡುಗಡೆ ಮತ್ತು ಪ್ರಚಾರ ನೋಡಿದರೆ ಕಲಾತ್ಮಕ ಸಿನಿಮಾಗಳಿದೆ ಡೊಳ್ಳು ಮಾದರಿಯಾಗಿ ಕೆಲಸ ಮಾಡಿದೆ’ ಎಂದರು.
ಪ್ರಮುಖ ಪಾತ್ರಧಾರಿ ಕಾರ್ತಿಕ್ ಮಹೇಶ್, ‘ಸಣ್ಣ ಅವಕಾಶ ಕಾಗಿ ಕಾಯುತ್ತಿದ್ದ ಹೊತ್ತಲ್ಲಿ ಗೆಳೆಯ ಸಾಗರ್ ದೊಡ್ಡ ಜವಾಬ್ದಾರಿ ಕೊಟ್ಟರು. ಡೊಳ್ಳು ಕಲಿತು ಈ ಸಿನಿಮಾದಲ್ಲಿ ನಟಿಸಿದ್ದೇನೆ. ಹೊಸಬರಿಗೆ ಅವಕಾಶ ನೀಡಿದ ಪವನ್ ಒಡೆಯರ್ ಅವರಿಗೆ ಧನ್ಯವಾದ’ ಎಂದರು. ನಿರ್ಮಾಪಕಿ ಅಪೇಕ್ಷಾ ಪುರೋಹಿತ್, ಪುನೀತ್ರನ್ನು ನೆನೆಸಿಕೊಂಡು ನಮನ ಸಲ್ಲಿಸಿದರು.
ಚಿತ್ರದ ನಾಯಕಿ ನಿಧಿ ಹೆಗ್ಡೆ, ಸಂಗೀತ ನಿರ್ದೇಶಕ ಅನಂತ್ ಕಾಮತ್, ಹಿರಿಯ ನಟ ಚಂದ್ರ ಮಯೂರ್, ಶರಣ್ಯ ಸುರೇಶ್, ವರುಣ್ ಶ್ರೀನಿವಾಸ್ ಇದ್ದರು.ಡೊಳ್ಳು ಕುಣಿತದ ಸುತ್ತ ಸಾಗುವ ಸಿನಿಮಾ ‘ಡೊಳ್ಳು’. ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಚಿತ್ರದ ಜೋಡಿ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ ಸುರೇಶ್ ಚಿತ್ರದ ಮುಖ್ಯ ಪಾತ್ರಧಾರಿಗಳು. ಅನಂತ್ ಕಾಮತ್ ಸಂಗೀತ, ಅಭಿಲಾಷ್ ಕಲಾಥಿ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.
ಡೊಳ್ಳು’ ಸಿನಿಮಾದ ಮೊದಲ ಹಾಡು:
ನಟ ರಾಕ್ಷಸ ಡಾಲಿ ಧನಂಜಯ್ ತಮ್ಮ ಅಮೃತ ಹಸ್ತದಿಂದ ಮಯಾನಗರಿ ಎಂಬ ಹಾಡು ಬಿಡುಗಡೆ ಮಾಡಿ, ತಾವು ಬೆಂಗಳೂರಿಗೆ ಬಂದ ದಿನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹಳ್ಳಿಯಿಂದ ಕೆಲಸ ಅರಸಿ ಬೆಂಗಳೂರಿಗೆ ಬರುವ ನಾಯಕನ ಕಣ್ಣಲ್ಲಿ ಮಯಾನಗರಿ ಸೊಬಗನ್ನು ತೆರೆದಿಡುವ ಈ ಹಾಡಿಗೆ ಪ್ರದ್ಯುಮ್ನ ನರಹಳ್ಳಿ ಪ್ರಾಸಬದ್ಧ ಪದಪುಂಜಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದು, ಆನಂತ್ ಕಾಮನ್ ಸಂಗೀತದ ಇಂಪು ತುಂಬಿರುವ ಹಾಡಿಗೆ ನಿರ್ದೇಶಕ ಸಾಗರ್ ಪುರಾಣಿಕ್ ಧ್ವನಿಯಾಗಿದ್ದಾರೆ. ಈ ಮೂಲಕ ಸಾಗರ್ ಗಾಯಕರಾಗಿಯೂ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ.