Mother Promise: ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಡಾಲಿ ಧನಂಜಯ ನಿರ್ಮಿಸಿ, ಪ್ರಮುಖ ಪಾತ್ರದಲ್ಲೂ ಅಭಿನಯಿಸಿರುವ 'ಮದರ್ ಪ್ರಾಮಿಸ್' ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಡಾಲಿ ಧನಂಜಯ ನಿರ್ಮಿಸಿ, ಪ್ರಮುಖ ಪಾತ್ರದಲ್ಲೂ ಅಭಿನಯಿಸಿರುವ 'ಮದರ್ ಪ್ರಾಮಿಸ್' ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಹಾಸ್ಯ ಹಾಗೂ ಕೌಟುಂಬಿಕ ಭಾವನೆಗಳನ್ನು ಒಳಗೊಂಡಿರುವ ಈ ಚಿತ್ರವನ್ನು ಕುಟುಂಬ ಸಮೇತ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ವೀಕ್ಷಿಸುತ್ತಿದ್ದಾರೆ. ಆದರೆ ಇದೇ ವೇಳೆ ಕೆಲವರು ಸಿನಿಮಾಕ್ಕೆ ಉದ್ದೇಶಪೂರ್ವಕವಾಗಿ ಹಾನಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಚಿತ್ರತಂಡ ಆರೋಪಿಸಿದೆ.

ಈ ಬೆಳವಣಿಗೆಗಳ ನಡುವೆಯೇ ನಟ ಶಿವರಾಜ್‌ಕುಮಾರ್ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಇತ್ತೀಚೆಗೆ 'ಮದರ್ ಪ್ರಾಮಿಸ್' ವೀಕ್ಷಿಸಿದ ಶಿವಣ್ಣ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಮದರ್ ಪ್ರಾಮಿಸ್' ತುಂಬಾ ಒಳ್ಳೆಯ ಚಿತ್ರ. ತುಂಬಾ ಜನರ ಮೆಚ್ಚುಗೆ ಪಡೆದ ಚಿತ್ರ. ಎಷ್ಟೇ ಒಳ್ಳೆಯ ಚಿತ್ರಗಳು ಬಂದರೂ ಪ್ರೇಕ್ಷಕರು ಥಿಯೇಟರ್‌ಗೆ ಬಂದು ಬೆಂಬಲಿಸಿದರೆ ಮಾತ್ರ ಚಿತ್ರಗಳು ಉಳಿಯುವುದಕ್ಕೆ ಸಾಧ್ಯ. ಧನಂಜಯ ಅವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತ ಬಂದಿದ್ದಾರೆ. ಡಾಲಿ ಪಿಚ್ಚರ್ಸ್‌ನಿಂದ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರಬೇಕು ಎಂಬುದು ನನ್ನ ಆಶಯ' ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

ಧನಂಜಯ್ ಮತ್ತು ಶಿವರಾಜ್‌ಕುಮಾರ್ ನಡುವಿನ ಆತ್ಮೀಯತೆ ಚಿತ್ರರಂಗದಲ್ಲಿ ಎಲ್ಲರಿಗೂ ಪರಿಚಿತ. ಹಿರಿಯ ಸಹೋದರನಂತೆ ಶಿವಣ್ಣನನ್ನು ಗೌರವಿಸುವ ಧನಂಜಯ್ ಅವರ ಪ್ರತಿಯೊಂದು ಹೊಸ ಪ್ರಯತ್ನಕ್ಕೂ ಶಿವಣ್ಣ ಬೆಂಬಲವಾಗಿ ನಿಂತಿದ್ದಾರೆ. ಈಗ 'ಮದರ್ ಪ್ರಾಮಿಸ್' ವಿವಾದಗಳ ನಡುವೆಯೂ ಚಿತ್ರವನ್ನು ವೀಕ್ಷಿಸಿ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಚಿತ್ರತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸ ನೀಡಿದೆ.

ಕೊನೆಯ ಸಿನಿಮಾ ಆಗಬಹುದು

ಗಮನಾರ್ಹವಾಗಿ, ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ಧನಂಜಯ ಭಾವುಕರಾಗಿ ಮಾತನಾಡಿ, 'ಮದರ್ ಪ್ರಾಮಿಸ್' ನಿರ್ಮಾಪಕರಾಗಿ ನನ್ನ ಕೊನೆಯ ಸಿನಿಮಾ ಆಗಬಹುದು' ಎಂದು ಹೇಳಿದ್ದರು. ಉತ್ತಮ ಸಿನಿಮಾವನ್ನು ಉದ್ದೇಶಪೂರ್ವಕವಾಗಿ ಹಿನ್ನಡೆಗೊಳಿಸುವ ಪ್ರಯತ್ನಗಳು ಬೇಸರ ತಂದಿದ್ದು, ಇದೇ ಕಾರಣದಿಂದ ನಿರ್ಮಾಣ ಕ್ಷೇತ್ರದಿಂದ ದೂರ ಸರಿಯುವ ಯೋಚನೆ ಇದೆ ಎಂದು ಅವರು ಹೇಳಿಕೊಂಡಿದ್ದರು.

ಆದರೆ ಶಿವರಾಜ್‌ಕುಮಾರ್ ಅವರ ಪ್ರತಿಕ್ರಿಯೆ ಧನಂಜಯ್‌ಗೆ ಪರೋಕ್ಷವಾಗಿ ಹೊಸ ಉತ್ಸಾಹ ತುಂಬಿದಂತಾಗಿದೆ. "ಡಾಲಿ ಪಿಕ್ಚರ್ಸ್‌ನಿಂದ ಇಂತಹ ಪ್ರಯತ್ನಗಳು ಮುಂದುವರಿಯಬೇಕು" ಎಂಬ ಶಿವಣ್ಣನ ಮಾತು, ಧನಂಜಯ್ ನಿರ್ಮಾಣ ಕ್ಷೇತ್ರವನ್ನು ಬಿಡಬಾರದು ಎಂಬ ಸಂದೇಶವನ್ನೇ ನೀಡಿದಂತಾಗಿದೆ. ಇನ್ನು 'ಮದರ್ ಪ್ರಾಮಿಸ್' ಚಿತ್ರಕ್ಕೆ ಮೈಸೂರು ಪೂರ್ಣ ನಿರ್ದೇಶನ ಮಾಡಿದ್ದು, ಡಾಲಿ ಧನಂಜಯ, ನಾಗಭೂಷಣ್, ವಿನಯಾ ಪ್ರಸಾದ್, ಗೀತಾ, ಚಿ. ಗುರುದತ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.