ಅವರವರ ವೃತ್ತಿಗೆ ಸಂಬಂಧಿಸಿ ಹೆಚ್ಚಿನ ಅಧ್ಯಯನ ಮಾಡಲು ಒಳ್ಳೆ ಟೈಮು:ಹೇಮಂತ್ ರಾವ್
ಸಿನಿಮಾ ಕೆಲಸ ಅಂತೆಲ್ಲ ಬ್ಯುಸಿಯಾಗಿರುತ್ತಿದ್ದ ಸಿನಿಮಾ ಮಂದಿ ಈಗ ಹೇಗೆಲ್ಲ ದಿನ ಕಳೆಯುತ್ತಿರಬಹುದು, ಏಕಾಂತವನ್ನು ಹೇಗೆ ನಿಭಾಯಿಸುತ್ತಿರಬಹುದು ಎನ್ನುವ ಕುತೂಹಲದೊಂದಿಗೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಖ್ಯಾತಿಯ ನಿರ್ದೆಶಕ ಹೇಮಂತ್ ಕುಮಾರ್ ಜತೆಗೆ ಮಾತಿಗಿಳಿದಾಗ ಅವರು ತೆರೆದಿಟ್ಟ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
1. ವೈಯಕ್ತಿಕವಾಗಿ ನನಗೆ ಲಾಕ್ ಡೌನ್ ಹೊಸದಲ್ಲ. ಯಾಕಂದ್ರೆ, ಮೊದಲಿನಿಂದಲೂ ನಾನು ಮನೆಯಲ್ಲೇ ಇದ್ದಿದ್ದು ಜಾಸ್ತಿ. ಆಫೀಸ್ ಮನೆ ಹತ್ತಿರವೇ ಇದೆ. ದಿನದ ಹೆಚ್ಚಿನ ಸಮಯ ಆಫೀಸು, ಬಿಟ್ಟರೆ ಮನೆಯಲ್ಲೇ ಇರುತ್ತಿದ್ದೆ. ಫಾರ್ ಎ ಚೇಂಜ್ ಈಗ ಆಫೀಸ್ ಗಿಂತ ಹೆಚ್ಚಾಗಿ ಮನೆಯಲ್ಲಿರುವಂತಾಗಿದೆ.
2. ಕೆಲಸ ಈಗಲೂ ನಿಂತಿಲ್ಲ. ಸಾಮಾನ್ಯವಾಗಿ ಸಿನಿಮಾ ಬರವಣಿಗೆಯಲ್ಲಿ ಇದ್ದವರಿಗೆ ಇದು ಇನ್ನಷ್ಟು ಒಳ್ಳೆಯ ಸಂದರ್ಭ. ನಾನೀಗ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದೇನೆ. ಅದರ ಜತೆಗೆ, ಓದು, ಸಿನಿಮಾ ನೋಡುವ ಕೆಲಸ ಒಟ್ಟೊಟ್ಟಿಗೆ ನಡೆಯುತ್ತಿವೆ.
ಸಾಮಾಜಿಕ ಅಂತರ ಅಸ್ಪೃಶ್ಯತೆಯಾಗಿ ಕಾಣುತ್ತಿದೆ;ನಾಗತಿಹಳ್ಳಿ ಮೇಷ್ಟ್ರು ಹೇಳಿದ 14 ಅಂಶಗಳು!
3. ಲಾಕ್ ಡಾನ್ ಕಾರಣಕ್ಕೆ ಕೆಲವೊಂದು ಮಿಸ್ ಆಗಿದೆ. ಸ್ನೇಹಿತರನ್ನು ಭೇಟಿ ಮಾಡದೆ ಹಲವು ದಿನಗಳಾಗಿವೆ. ಫೋನ್ ಸಂಪರ್ಕದಲ್ಲೇ ಮಾತುಕತೆ ನಡೆಯುತ್ತಿದೆ. ಇನ್ನು ನಾನು ತಿಂಡಿ ಪೋತ, ಮನೆಯಾಚೆ ರಸ್ತೆಗಿಳಿದರೆ ಬೇಕರಿ ಅಥವಾ ಹೋಟೆಲ್ ಗಳಿಗೆ ಹೋಗಿ ನನ್ನಿಷ್ಟದ ತಿಂಡಿ ಪದಾರ್ಥ ತಿನ್ನುವುದು ಕೂಡ ಮಿಸ್ ಆಗಿದೆ.
4. ಸಿನಿಮಾ ಕೆಲಸದ ಜತೆಗೆ ನಾನೀಗ ಪುಸ್ತಕ ಓದುವುದಕ್ಕೂ ಆದ್ಯತೆ ಕೊಟ್ಟಿದ್ದೇನೆ. ಸದ್ಯಕ್ಕೆ ಒಂದು ಸಣ್ಣ ಕತೆಗಳ ಪುಸ್ತಕ ಅದರ ಜತೆಗೆ ರಾಕೇಶ್ ಮಾರಿಯಾ ಎನ್ನುವ ಒಬ್ಬ ಪೊಲೀಸ್ ಆಫೀಸರ್ ಆಟೋ ಬಯಾಗ್ರಫಿ ಓದುತ್ತಿದ್ದೇನೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಕ್ಕೆ ಪೂರಕವಾದ ಓದು. ಇದೇ ರೀತಿ ಪ್ರತಿಯೊಬ್ಬರು ತಮ್ಮ ವೃತ್ತಿಗಳಿಗೆ ಪೂರಕವಾಗಿಯೇ ಒಂದಷ್ಟು, ಅಭ್ಯಾಸ ಮುಂದುವರೆಸಬಹುದು.