ಡೇರ್ಡೆವಿಲ್ ಮುಸ್ತಫಾ, ಸುಮನ್, ಶ್ರೀಮಂತ, ಜೆರ್ಸಿ 10; ಇಂದು 4 ಕನ್ನಡ ಸಿನಿಮಾ ಬಿಡುಗಡ
ಇಂದು 4 ಸಿನಿಮಾ ಬಿಡುಗಡೆ. ಯಾವ ಸಿನಿಮಾ, ಎಲ್ಲಿ ರಿಲೀಸ್? ಸಂಪೂರ್ಣ ಮಾಹಿತಿ ಇಲ್ಲಿದೆ...
1. ತೇಜಸ್ವಿ ಕತೆ ಆಧರಿಸಿದ ಚಿತ್ರ ಡೇರ್ ಡೆವಿಲ್ ಮುಸ್ತಾಫಾ
ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ‘ಡೇರ್ ಡೆವಿಲ್ ಮುಸ್ತಾಫಾ’ ಕತೆಯನ್ನು ಆಧರಿಸಿದ ಸಿನಿಮಾ ಇದು. ತೇಜಸ್ವಿಯವರ ಅಭಿಮಾನಿಗಳೇ ಸೇರಿ ನಿರ್ಮಿಸಿರುವುದು ವಿಶೇಷ. ಈ ಚಿತ್ರವನ್ನು ಶಶಾಂಕ್ ಸೋಗಾಲ್ ನಿರ್ದೇಶಿಸಿದ್ದಾರೆ. ಈ ಸಿನಿಮಾ ನೋಡಿ ಇಷ್ಟಪಟ್ಟಿರುವ ಡಾಲಿ ಧನಂಜಯ ಈ ಸಿನಿಮಾವನ್ನು ಪ್ರೆಸೆಂಟ್ ಮಾಡಿ ಬಿಡುಗಡೆಗೊಳಿಸುತ್ತಿದ್ದಾರೆ. ಸಿನಿಮಾದ ಹಾಡು, ಟೀಸರ್, ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದವು. ತೇಜಸ್ವಿ ಅಭಿಮಾನಿಗಳು ಸಣ್ಣ ಕತೆಯನ್ನು ಹೇಗೆ ಸಿನಿಮಾ ಮಾಡಿರಬಹುದು ಎಂಬ ಕುತೂಹಲವನ್ನು ಹೊಂದಿದ್ದಾರೆ. ಸಿನಿಮಾದಲ್ಲಿ ಬಹುತೇಕ ಹೊಸಬರು ನಟಿಸಿದ್ದಾರೆ. ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ ಎಸ್ ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಚಿತ್ರದಲ್ಲಿ ನಟಿಸಿದ್ದಾರೆ.
2. ಜೆರ್ಸಿ 10 ಚಿತ್ರದ ಮೂಲಕ ಹೀರೋ ಆದ ಆದ್ಯಾ ತಿಮ್ಮಯ್ಯ
ರಾಜ್ಯಮಟ್ಟದ ಹಾಕಿ ಆಟಗಾರ ಆದ್ಯಾ ತಿಮ್ಮಯ್ಯ ಹಾಕಿ ಆಟ ಮತ್ತು ಸಿನಿಮಾ ಪ್ರೀತಿಯಿಂದ ರೂಪಿಸಿರುವ ಸಿನಿಮಾ ‘ಜೆರ್ಸಿ 10’. ಕೊಡಗು ಹಾಕಿ ಆಟಕ್ಕೆ ಖ್ಯಾತಿ ಹೊಂದಿರುವ ಜಿಲ್ಲೆ. ಆ ಊರಿನಿಂದ ಬಂದಿರುವ ಆದ್ಯಾ ತಿಮ್ಮಯ್ಯ ಹಾಕಿ ಹಿನ್ನೆಲೆಯ ಕಥಾಹಂದರವುಳ್ಳಿ ಸಿನಿಮಾವನ್ನು ತಾವೇ ನಟನೆ, ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಅವರು ಇನ್ಸ್ಪಿರೇಷನಲ್ ಥ್ರಿಲ್ಲರ್ ಎಂದು ಕರೆದಿದ್ದಾರೆ. ದತ್ತಣ್ಣ, ಥ್ರಿಲ್ಲರ್ ಮಂಜು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತರುಣನೊಬ್ಬನನ್ನು ಹಾಕಿ ಆಟಗಾರನನ್ನಾಗಿ ರೂಪಿಸುವಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಚಿತ್ರತಂಡ ತಿಳಿಸಿದೆ. ನಿರ್ದೇಶಕ ಆದ್ಯಾ ತಿಮ್ಮಯ್ಯ, ‘ಹಾಕಿ ಆಟವನ್ನಿಟ್ಟುಕೊಂಡು ಸ್ಫೂರ್ತಿದಾಯಕ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಆ ಆಸೆ ಈ ಸಿನಿಮಾ ಮೂಲಕ ನೆರವೇರಿದೆ. ಇಲ್ಲಿ ಹಾಕಿ ಜೊತೆ ಪ್ರೇಮಕತೆಯೂ ಇದೆ’ ಎನ್ನುತ್ತಾರೆ. ಆದ್ಯಾ ಅವರು ನಟಿಸಿರುವ ಮೊದಲ ಸಿನಿಮಾ ಇದು. ಈ ಚಿತ್ರವನ್ನು ರಷಿನ್ ಸುಬ್ಬಯ್ಯ ನಿರ್ಮಿಸಿದ್ದಾರೆ.
3. ಸೋನು ಸೂದ್, ಸುದೀಪ್ ನಟನೆಯ ಶ್ರೀಮಂತ
ಸೋನು ಸೂದ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ. ಸುದೀಪ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ ಎಂಬುದು ಚಿತ್ರದ ಮತ್ತೊಂದು ಹೈಲೈಟ್. ಹಾಸನ್ ರಮೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರೈತರ ಸುತ್ತ ಸಾಗುವ ಕತೆ ಇಲ್ಲಿದೆ.
4. ಸುಮನ್
ಧರ್ಮ ಕೀರ್ತಿರಾಜ್ ನಟನೆಯ ಸಿನಿಮಾ. ಈ ಪಕ್ಕಾ ಮಾಸ್ ಹಾಗೂ ಕಮರ್ಷಿಯಲ್ ಚಿತ್ರವನ್ನು ರವಿ ಸಾಗರ್ ನಿರ್ದೇಶಿಸಿದ್ದಾರೆ. ನಿಮಿಕಾ ರತ್ನಾಕರ್, ರಜನಿ ಭಾರದ್ವಾಜ್ ಚಿತ್ರದಲ್ಲಿ ನಟಿಸಿದ್ದಾರೆ.