ಓಂ ಸಾಯಿಪ್ರಕಾಶ್‌ ನಿರ್ದೇಶನದ 106ನೇ ಸಿನಿಮಾ ‘ಕಾಮನ್‌ ಮ್ಯಾನ್‌’ ಚಿತ್ರದಲ್ಲಿ ‘ಕೆರೆಬೇಟೆ’ ಸಿನಿಮಾ ಖ್ಯಾತಿಯ ಗೌರಿಶಂಕರ್‌ ನಾಯಕನಾಗಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟೈಟಲ್‌ ಹಾಗೂ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ.

ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್‌ ನಿರ್ದೇಶನದ 106ನೇ ಸಿನಿಮಾ ‘ಕಾಮನ್‌ ಮ್ಯಾನ್‌’ ಚಿತ್ರದಲ್ಲಿ ‘ಕೆರೆಬೇಟೆ’ ಸಿನಿಮಾ ಖ್ಯಾತಿಯ ಗೌರಿ ಶಂಕರ್‌ ನಾಯಕನಾಗಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟೈಟಲ್‌ ಹಾಗೂ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಎನ್‌. ನರಸಿಂಹಮೂರ್ತಿ ಚಿತ್ರದ ನಿರ್ಮಾಪಕರು. ಸೋನಾ ಲದ್ವಾ ಚಿತ್ರದ ನಾಯಕಿ.

ಓಂ ಸಾಯಿಪ್ರಕಾಶ್‌, ‘ಜೀವನದಲ್ಲಿ ಪ್ರತಿಯೊಬ್ಬರಿಗೂ ಏನಾದರೂ ಆಸೆ ಇರುತ್ತೆ. ಈ ಕಥೆಯಲ್ಲಿ ನಾಯಕ ಒಬ್ಬ ಲಾಯರ್. ಅನಿರೀಕ್ಷಿತವಾಗಿ ಅವನು ಮುಖ್ಯಮಂತ್ರಿ ಆಗುತ್ತಾನೆ. ನಂತರ ಅವನು ಏನೇನು ಮಾಡಬಹುದು ಎಂಬುದನ್ನು ಕುತೂಹಲಕರವಾಗಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಕಥೆ ಕೇಳಿದ ಕೂಡಲೇ ಇದು ಶೇಕಡ 100ರಷ್ಟು ಓಪನಿಂಗ್ ತೆಗೆದುಕೊಳ್ಳುತ್ತದೆ ಎನಿಸಿತು. ಇದು ಕಂಟೆಂಟ್ ಸಿನಿಮಾ, ಜಾತ್ರೆ ಸಿನಿಮಾ ಅಲ್ಲ’ ಎಂದರು.

ಶಿಸ್ತುಬದ್ದವಾಗಿ ಸಿನಿಮಾ ಮಾಡುತ್ತಾರೆ

ಗೌರಿ ಶಂಕರ್‌, ‘ಕೆರೆಬೇಟೆ ಚಿತ್ರದ ನಂತರ ಒಂದು ಒಳ್ಳೆಯ ಕತೆಗಾಗಿ ಕಾಯುತ್ತಿದ್ದೆ. ‘ಕಾಮನ್‌ ಮ್ಯಾನ್‌’ ಚಿತ್ರದ ಮೂಲಕ ಅಂಥ ಕಂಟೆಂಟ್‌ ಸಿನಿಮಾ ಸಿಕ್ಕಿದೆ. ಹಿರಿಯ ನಿರ್ದೇಶಕರಾದರೂ ನನ್ನಂಥ ಹೊಸ ಕಲಾವಿದನಿಗೆ ಸಾಕಷ್ಟು ಸಮಯ ಕೊಟ್ಟು ಕತೆ ಹೇಳಿದರು ಓಂ ಸಾಯಿಪ್ರಕಾಶ್‌. ತುಂಬಾ ಶಿಸ್ತುಬದ್ದವಾಗಿ ಸಿನಿಮಾ ಮಾಡುತ್ತಾರೆ. ನನಗೂ ಅಡ್ವೊಕೇಟ್‌ ಆಗಬೇಕೆಂಬ ಆಸೆ ಇತ್ತು. ಈ ಚಿತ್ರದಲ್ಲಿ ಲಾಯರ್‌ ಆಗಿ ನಟಿಸಿದ್ದೇನೆ’ ಎಂದರು.

ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಹೇಗಿರುತ್ತದೆ? ಈ ಎಳೆಯನ್ನು ಇಟ್ಟುಕೊಂಡು ಎನ್. ನರಸಿಂಹಮೂರ್ತಿ ಅವರು ಕಥೆ ಬರೆದು ‘ಸುರಭಿ ಫಿಲ್ಮ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಜೆ. ಜಿ. ಕೃಷ್ಣ ಮತ್ತು ದೀಪಕ್ ಕುಮಾರ್ ಕೆಲಸ ಮಾಡಿದ್ದಾರೆ. ಥ್ರಿಲ್ಲರ್ ಮಂಜು ಫೈಟ್‌ ಮಾಸ್ಟರ್‌ ಆಗಿದ್ದರೆ, ಸಂಗೀತ ನಿರ್ದೇಶನವನ್ನು ವಿನಯಚಂದ್ರ‌ ಮಾಡಿದ್ದಾರೆ. ಶೈಲೇಶ್ ಸಂಭಾಷಣೆ ಬರೆದಿದ್ದಾರೆ. ಇನ್ನು ಗಣೇಶರಾವ್‌ ಕೇಸರಕರ್‌, ಎಸ್ಕಾರ್ಟ್‌ ಶ್ರೀನಿವಾಸ್‌, ಪ್ರಕಾಶ್ ತೂಮಿನಾಡು ಚಿತ್ರದಲ್ಲಿ ನಟಿಸಿದ್ದಾರೆ.