Divya Suresh: ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಿಗ್ ಬಾಸ್ ಸ್ಪರ್ಧಿ ವಿರುದ್ದ ದಾಖಲಾಗುತ್ತಾ ಎಫ್ಐಆರ್?
ಬಿಗ್ಬಾಸ್ ರಿಯಾಲಿಟಿ ಶೋ ಸ್ಪರ್ಧಿ ದಿವ್ಯಾ ಸುರೇಶ್ ಅವರು ನಗರದಲ್ಲಿ ರಾತ್ರಿ 10ಕ್ಕೆ ಕರ್ಫ್ಯೂ ಜಾರಿಯಾದ ನಂತರವೂ ಎಂ.ಜಿ.ರಸ್ತೆಯ ಚರ್ಚ್ಸ್ಟ್ರೀಟ್ನಲ್ಲಿ ಓಡಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸ್ ಸಿಬ್ಬಂದಿಯೊಂದಿಗೇ ವಾಗ್ವಾದ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ದಿವ್ಯಾ ಸುರೇಶ್ ವಿರುದ್ದ ಎಫ್ಐಆರ್ ದಾಖಲಾಗಬಹುದು.
ಬೆಂಗಳೂರು (ಡಿ.29): ಕನ್ನಡದ ಬಿಗ್ಬಾಸ್ (Bigg Boss) ರಿಯಾಲಿಟಿ ಶೋ ಸ್ಪರ್ಧಿ ದಿವ್ಯಾ ಸುರೇಶ್ (Divya Suresh) ಅವರು ನಗರದಲ್ಲಿ ರಾತ್ರಿ 10ಕ್ಕೆ ಕರ್ಫ್ಯೂ (Night Curfew) ಜಾರಿಯಾದ ನಂತರವೂ ಎಂ.ಜಿ.ರಸ್ತೆಯ ಚರ್ಚ್ಸ್ಟ್ರೀಟ್ನಲ್ಲಿ ಓಡಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸ್ ಸಿಬ್ಬಂದಿಯೊಂದಿಗೇ ವಾಗ್ವಾದ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ದಿವ್ಯಾ ಸುರೇಶ್ ವಿರುದ್ದ ಎಫ್ಐಆರ್ (FIR) ದಾಖಲಾಗಬಹುದು. ರಾಜ್ಯದಲ್ಲಿ ಓಮಿಕ್ರಾನ್ (Omicron) ಪ್ರಕರಣ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರ ಮಂಗಳವಾರದಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಿದೆ.
ಈ ಹಿನ್ನಲೆಯಲ್ಲಿ ಪಬ್ ಕೋಸ್ಲ್ ಮಾಡುವಂತೆ ಕಬ್ಬನ್ ಪಾರ್ಕ್ ಪೊಲೀಸರು ಹೇಳಿದ್ದರು. ಈ ವೇಳೆ ಪಬ್ ಒಳಗೆ ಸ್ನೇಹಿತರ ಜತೆ ಒಳಗೆ ಇದ್ದ ದಿವ್ಯಾ ಸುರೇಶ್, ಪೊಲೀಸರ ಜತೆ ಪಬ್ ಒಳಗೆ ಮಾತಿನ ಚಕಮಕಿ ನಡೆಸಿರುವ ಮಾಹಿತಿ ತಿಳಿದುಬಂದಿದೆ. ಬಳಿಕ ಹೊರಗೆ ಬಂದು ಮಾಧ್ಯಮಗಳ ಕ್ಯಾಮರಾ ಕಿತ್ತುಕೊಳ್ಳಲು ದಿವ್ಯಾ ಪ್ರಯತ್ನಿಸಿದ್ದಾರೆ. ಈ ವೇಳೆ ದಿವ್ಯಾ ಸುರೇಶ್ ಜತೆ ಇದ್ದ ಇಬ್ಬರು ಸ್ನೇಹಿತರು ಮಾಧ್ಯಮದವರಿಗೆ ಧಮ್ಕಿ ಹಾಕಿದ್ದಾರೆ. ಘಟನೆ ಬಗ್ಗೆ ಕರ್ತವ್ಯನಿರತ ಸಬ್ ಇನ್ಸ್ಪೆಕ್ಟರ್ ಠಾಣೆಗೆ ಮಾಹಿತಿ ನೀಡಿದ್ದು, ಎನ್ಡಿಎಂಎ, 144 ಸೆಕ್ಷನ್ ಉಲಂಘನೆ ಅಡಿಯಲ್ಲಿ ಎಫ್ಐಆರ್ ದಾಖಲಾಗುತ್ತಾ ಕಾದು ನೋಡಬೇಕಿದೆ.
ಫಿನಾಲೆ ತಲುಪದ ಅನ್ಲಕ್ಕಿ ಸ್ಪರ್ಧಿ: ಬಿಬಿ ಮನೆಯಿಂದ ದಿವ್ಯಾ ಸುರೇಶ್ ಔಟ್!
ಏನಿದು ಘಟನೆ: ರಾತ್ರಿ 10ಕ್ಕೆ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆಯ ಪಬ್ಗಳಿಂದ ಗ್ರಾಹಕರು ಹೊರ ಬರುತ್ತಿದ್ದರು. ಈ ವೇಳೆ ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳು ಕ್ಯಾಮರಾದಲ್ಲಿ ಗ್ರಾಹಕರು ಹೊರ ಬರುವ ದೃಶ್ಯಾವಳಿ ಶೂಟ್ ಮಾಡುತ್ತಿದ್ದರು. ಈ ವೇಳೆ ಪಬ್ನಿಂದ ಹೊರ ಬಂದ ದಿವ್ಯಾ ಸುರೇಶ್, ಗ್ರಾಹಕರ ದೃಶ್ಯಾವಳಿ ಸೆರೆ ಹಿಡಿಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ಜತೆ ಕಿರಿಕ್ ತೆಗೆದು ರಂಪಾಟ ಮಾಡಿದರು. ಹಾಗೂ ಕರ್ಫ್ಯೂ ಇದೆ ಮನೆಗೆ ಹೋಗಿ ಎಂದಿದ್ದಕ್ಕೆ ಪೊಲೀಸರಿಗೇ ದಿವ್ಯಾ ಆವಾಜ್ ಹಾಕಿದ್ದಾರೆ. ಮದ್ಯದ ಅಮಲಿನಲ್ಲಿದ್ದ ದಿವ್ಯಾ ಸುರೇಶ್ ಅವರನ್ನು ಇಬ್ಬರು ಯುವಕರು ಸಮಾಧಾನಪಡಿಸಿ ಬಳಿಕ ಆಟೋ ರಿಕ್ಷಾದಲ್ಲಿ ಕರೆದೊಯ್ದರು.
ಬಿಗ್ಬಾಸ್ ಸೀಸನ್ 8ರ ರಿಯಾಲಿಟಿ ಶೋ ವಿನ್ನರ್ ಮಂಜು ಪಾವಗಡ ಅವರ ಜೊತೆಗಿನ ಒಡನಾಟ, ಜಗಳ, ಮುನಿಸು, ತಮಾಷೆ ಸನ್ನಿವೇಶಗಳ ಮೂಲಕ ದಿವ್ಯಾ ಸುರೇಶ್ ಗಮನ ಸೆಳೆದಿದ್ದರು. ಮನೆಯ ಟಾಸ್ಕ್ಗಳಲ್ಲೂ ಕ್ರಿಯಾಶೀಲರಾಗಿದ್ದ ಅವರು, ಕೊನೆಯ ವಾರಗಳಲ್ಲಿ ತೋರಿದ ಕಳಪೆ ಪ್ರದರ್ಶನದಿಂದಾಗಿ ಟಾಪ್ 5ಗೆ ಬರುವಲ್ಲಿ ವಿಫಲರಾಗಿದ್ದರು.
ಬಾರ್ ಮಾಲೀಕರ ವಿರುದ್ಧ ಕೇಸ್: ನಗರದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳು ರಾತ್ರಿ 10ರೊಳಗೆ ಬಾಗಿಲು ಹಾಕಬೇಕು. ಆದರೆ, ಬಳಿಕವೂ ಬಾಗಿಲು ತೆರೆದಿದ್ದರೆ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅನಗತ್ಯವಾಗಿ ರಾತ್ರಿ ಓಡಾಡುವವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುವುದು. ವಿನಾಕಾರಣ ಓಡಾಡುವುದು ಕಂಡು ಬಂದರೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.
ದಿವ್ಯಾ ಸುರೇಶ್ರನ್ನು ಕಳಪೆ ಪಟ್ಟಿಗೆ ಸೇರಿಸಿದ ಮಂಜು.. ಅರವಿಂದ್ ಬಚಾವ್!
ಈ ಬಾರಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ. ಹೀಗಾಗಿ ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿದಂತೆ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಸಂಪೂರ್ಣ ಬಂದ್ ಮಾಡಲಾಗುವುದು. ಅನುಮತಿ ಇಲ್ಲದೆ ಅನಗತ್ಯವಾಗಿ ಓಡಾಟಕ್ಕೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ರಸ್ತೆಯಲ್ಲಿ ನಿಂತು ಸಂಭ್ರಮಾಚರಣೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.