ಕಿಚ್ಚ ಸುದೀಪ್ ಮುಂದಿನ ಚಿತ್ರಕ್ಕೆ ಆರ್.ಚಂದ್ರು ನಿರ್ದೇಶನ: ಕತೆ, ಚಿತ್ರಕತೆ ಬರೆದಿದ್ದು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್
ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಂದಿನ ಚಿತ್ರ ಯಾವುದು ಎಂಬ ಕುತೂಹಲಕ್ಕೆ ಸ್ವಲ್ಪ ಉತ್ತರ ಸಿಕ್ಕಿದ್ದು, ಇಲ್ಲಿದೆ ಮಾಹಿತಿ.
ಕಿಚ್ಚ ಸುದೀಪ್ 47ನೇ ಸಿನಿಮಾ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಸೆ.2 ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಈ ಶುಭ ಸಂದರ್ಭದಲ್ಲಿ ಸುದೀಪ್ ಅವರ 47ನೇ ಸಿನಿಮಾ ಘೋಷಣೆ ಆಗಲಿದೆ. ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಬೇರೆ ಯಾರೂ ಅಲ್ಲ, ಖ್ಯಾತ ನಿರ್ದೇಶಕ ಆರ್.ಚಂದ್ರು.
ಅದರ ಜೊತೆಗೆ ಇನ್ನೊಂದು ವಿಶೇಷ ಸುದ್ದಿ ಏನೆಂದರೆ ಈ ಚಿತ್ರಕ್ಕೆ ಕತೆ, ಚಿತ್ರಕತೆ ಬರೆದಿರುವುದು ಬಾಹುಬಲಿ, ಆರ್ಆರ್ಆರ್ ಮುಂತಾದ ಭರ್ಜರಿ ಯಶಸ್ಸನ್ನು ಪಡೆದ ಸಿನಿಮಾಗಳ ಕತೆ, ಚಿತ್ರಕತೆಗಾರ ವಿಜಯೇಂದ್ರ ಪ್ರಸಾದ್. ರಾಜಮೌಳಿ ತಂದೆಯಾಗಿರುವ ವಿಜಯೇಂದ್ರ ಪ್ರಸಾದ್ ಬರೆದಿರುವ ಬಹುತೇಕ ಕತೆಗಳು ಸಿನಿಮಾ ಆಗಿ ಭಾರಿ ಯಶಸ್ಸನ್ನು ಗಳಿಸಿವೆ. ಅದಕ್ಕೆ ಸಾಕ್ಷಿಯಾಗಿ ಸಲ್ಮಾನ್ ಖಾನ್ ನಟನೆಯ ಭಜರಂಗಿ ಭಾಯಿಜಾನ್ ಸಿನಿಮಾವನ್ನು ಗಮನಿಸಬಹುದು. ಅಂಥಾ ಯಶಸ್ವೀ ಬರಹಗಾರ ತಮ್ಮ ಕತೆ, ಚಿತ್ರಕತೆಯನ್ನು ಸುದೀಪ್ ಅವರಿಗೆ ನೀಡಿದ್ದಾರೆ. ಈ ಕತೆ, ಚಿತ್ರಕತೆ ಇಟ್ಟುಕೊಂಡು ಆರ್.ಚಂದ್ರು ಅದ್ದೂರಿಯಾಗಿ ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ.
ಕಿಚ್ಚ ಸುದೀಪ್ @50: ಹುಟ್ಟುಹಬ್ಬದ ಸುವರ್ಣ ಮಹೋತ್ಸವಕ್ಕೆ ಪತ್ನಿ ಪ್ರಿಯಾ ಬಿಗ್ ಸರ್ಪ್ರೈಸ್!
ನಿರ್ದೇಶಕ ಆರ್.ಚಂದ್ರು ಅವರಿಗೆ ಭಯಂಕರ ಶಕ್ತಿಗಳಿವೆ. ಒಂದು ಸಿನಿಮಾ ಮೇಕಿಂಗ್, ಇನ್ನೊಂದು ಸಿನಿಮಾ ಪ್ರಚಾರ ಈ ಎರಡೂ ವಿಚಾರಗಳಲ್ಲಿ ಪಂಟರ್ ಆಗಿರುವ ಆರ್.ಚಂದ್ರು ಕೈಯಲ್ಲಿ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಇದೆ. ಆ ಅದ್ಭುತವಾದ ಸ್ಕ್ರಿಪ್ಟ್ ಅನ್ನು ಆರ್.ಚಂದ್ರೂ ಅದ್ದೂರಿಯಾಗಿ, ಭರ್ಜರಿಯಾಗಿ ಸಿನಿಮಾ ರೂಪಕ್ಕೆ ತರಲಿದ್ದಾರೆ ಎಂಬುದನ್ನು ಮೂಲಗಳು ತಿಳಿಸಿವೆ. ಇಂದು ರಾತ್ರಿ 12 ಗಂಟೆಗೆ ಸಿನಿಮಾ ಘೋಷಣೆಯಾಗುವ ಸಾಧ್ಯತೆ ಇದೆ.
ಈ ಹೊಸ ಸಿನಿಮಾ ಅಭಿಮಾನಿಗಳಿಗೆ ದೊಡ್ಡ ಕೊಡುಗೆಯಾಗುವುದಲ್ಲಿ ಅಚ್ಚರಿಯೇ ಇಲ್ಲ. ಆರ್ ಸಿ ಸ್ಟುಡಿಯೋಸ್ ಸಂಸ್ಥೆಯು ಈ ಬಹುಕೋಟಿ ವೆಚ್ಚದ ಚಿತ್ರಕ್ಕೆ ಬಂಡವಾಳ ಹೂಡಲಿದೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಮುರಿದು ಗ್ಲೋಬಲ್ ಮೂವಿ ಕಾನ್ಸೆಪ್ಟ್ನಲ್ಲಿ ಈ ಸಿನಿಮಾ ಮೂಡಿಬರಲಿದೆ.
ರೌಡಿಬೇಬಿ ಲುಕ್ನಲ್ಲಿ ಕಿಚ್ಚನ ಪುತ್ರಿ:ಸಾನ್ವಿ ಮಾಸ್ಸ್ಟೈಲ್ಗೆ ನೆಟ್ಟಿಗರು ಫಿದಾ