Puneeth Rajkumar: ಅಪ್ಪು ಡ್ರೀಮ್ ಪಾಜೆಕ್ಟ್ ಟೈಟಲ್ ಟೀಸರ್ ಬಿಡುಗಡೆ ದಿನಾಂಕ ಘೋಷಿಸಿದ ಅಶ್ವಿನಿ
ಸ್ಯಾಂಡಲ್ವುಡ್ನ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಡ್ರೀಮ್ ಪಾಜೆಕ್ಟ್ 'ಗಂಧದ ಗುಡಿ' ಕನಸನ್ನು ನನಸು ಮಾಡುವ ಕ್ಷಣವನ್ನು ಪುನೀತ್ ಅವರ ಪತ್ನಿ ಅಶ್ವಿನಿ ಅವರು ಘೋಷಿಸಿದ್ದಾರೆ.
ಸ್ಯಾಂಡಲ್ವುಡ್ನ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಡ್ರೀಮ್ ಪಾಜೆಕ್ಟ್ 'ಗಂಧದ ಗುಡಿ' (Gandhada Gudi) ಕನಸನ್ನು ನನಸು ಮಾಡುವ ಕ್ಷಣವನ್ನು ಪುನೀತ್ ಅವರ ಪತ್ನಿ ಅಶ್ವಿನಿ (Ashwini Puneeth Rajkumar) ಅವರು ಘೋಷಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪೋಸ್ಟರ್ವೊಂದನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು 'ವೈಲ್ಡ್ ಕರ್ನಾಟಕ' ಡಾಕ್ಯುಮೆಂಟರಿ (Wild Karnataka Documentary) ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್ ಕರುನಾಡ (Karnataka) ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು.
ರಾಜ್ಯದ ನಾನಾ ಕಡೆಗಳಲ್ಲಿ ಭೇಟಿ ನೀಡಿ ಶೂಟ್ ಮಾಡಲಾಗಿತ್ತು. ಇದಕ್ಕೆ 'ಗಂಧದಗುಡಿ' ಎಂದು ಹೆಸರಿಡಲಾಗಿದೆ. ಪುನೀತ್ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಟೀಸರ್ ನವೆಂಬರ್ 1ರಂದು ರಿಲೀಸ್ ಆಗಬೇಕಿತ್ತು. ನವೆಂಬರ್ 1 ಕನ್ನಡ ರಾಜ್ಯೋತ್ಸವ (Kannada Rajyotsava). ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್ ಮಾಡಬೇಕು ಎಂದು ಪುನೀತ್ ಕನಸು ಕಂಡಿದ್ದರು. ಆದರೆ, ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು. ಅಕ್ಟೋಬರ್ 29ರಂದು ಪುನೀತ್ ನಿಧನ ಹೊಂದಿದ್ದರು. ಹೀಗಾಗಿ ಆ ಟೀಸರ್ ರಿಲೀಸ್ ಆಗಿಲ್ಲ. ಈಗ ಅದನ್ನು ಡಿಸೆಂಬರ್ 6ಕ್ಕೆ ರಿಲೀಸ್ ಮಾಡಲಾಗುತ್ತಿದೆ.
Puneeth Rajkumar: ಅಪ್ಪು-ಅಶ್ವಿನಿ 22ನೇ ವಿವಾಹ ವಾರ್ಷಿಕೋತ್ಸವ! ಆದರೆ...
'ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ' ಎಂದು ಅಶ್ವಿನಿ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಬರೆದುಕೊಂಡು, ಪೋಸ್ಟರ್ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟರ್ನಲ್ಲಿ ದಟ್ಟ ಕಾಡಿನ ಮಧ್ಯೆ ಪುನೀತ್ ಬೆನ್ನ ಹಿಂದೆ ಬ್ಯಾಗ್ ಹಾಕಿಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ರಾಘವೇಂದ್ರ ರಾಜ್ಕುಮಾರ್, ಯುವ ರಾಜ್ಕುಮಾರ್, ವಿನಯ್ ರಾಜ್ಕುಮಾರ್, ಧಿರೇನ್ ರಾಜ್ಕುಮಾರ್, ಹಾಗೂ ದಾನೀಶ್ ಸೇಠ್ ಸೇರಿದಂತೆ ಸ್ಯಾಂಡಲ್ವುಡ್ನ ಸೆಲೆಬ್ರಿಟಿಗಳೂ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇದೇ ಪೋಸ್ಟರ್ನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ಪೋಸ್ಟ್ಗೆ ನೆಟ್ಟಿಗರು, 'ನಗು ಮೊಗದ ರಾಜಕುಮಾರನ ಕೊನೆಯ ಕನಸಿನ ಪ್ರಾಜೆಕ್ಟ್ ನೋಡದೆ ಇರೋಕೆ ಆಗುತ್ತಾ ಮಿಸ್ ಯೂ ಅಪ್ಪು ಸರ್'. 'ನನ್ನ ದೇವರ ಕನಸಿನ ಪಯಣ ನೋಡಲು ಬಹಳ ಕಾತುರ'. ಹಾಗೂ 'ಕಾತುರದಿಂದ ಕಾಯುತ್ತಿದ್ದೇವೆ, ಈ ಸಾಕ್ಷ್ಯಚಿತ್ರ ನೀಡುವ ರೋಮಾಂಚಕ ಅನುಭವದಲ್ಲಿ ಮಿಂದೇಳಲು, ಹೊಸತನದ ಅನ್ವೇಷಣೆಗೆ ಒತ್ತು ಕೊಟ್ಟ ಪಿಆರ್ಕೆ ಪ್ರೊಡಕ್ಷನ್ಸ್ ಹೀಗೆಯೆ ಯಶಸ್ಸಿನ ದಾರಿಯಲ್ಲಿ ಮುನ್ನಡೆಯಲಿ ತಮಗೆ ಶುಭವಾಗಲಿ' ಅಂತೆಲ್ಲಾ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನಾಗರಹೊಳೆ, ಕಾಳಿನದಿ, ಹೊಸಪೇಟೆ ಸೇರಿದಂತೆ ಕರ್ನಾಟಕದ ಹಲವು ಜಾಗಗಳಲ್ಲಿ ಸುತ್ತಿ 'ಗಂಧದ ಗುಡಿ' ಚಿತ್ರೀಕರಣ ನಡೆಸಲಾಗಿದೆ.
Puneeth Rajkumar: ರಾಜ್ಯದ ಜನತೆಗೆ ಧನ್ಯವಾದ ಸಲ್ಲಿಸಿದ ಅಪ್ಪು ಪತ್ನಿ ಅಶ್ವಿನಿ
ಅಪ್ಪು ಕನಸನ್ನು ನನಸು ಮಾಡುವ ಕುರಿತು ಕೆಲ ದಿನಗಳ ಹಿಂದಷ್ಟೇ ಟ್ವೀಟ್ (Tweet) ಮಾಡಿದ್ದ ಅಶ್ವಿನಿ, 'ಅಪ್ಪು ಅವರ ಕನಸೊಂದು ನವೆಂಬರ್ 1ರಂದು ಬೆಳಕು ಕಾಣಬೇಕಿತ್ತು. ಆದರೆ ಆ ಕನಸಿಗಿದು ಅಲ್ಪ ವಿರಾಮವಷ್ಟೆ. ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ' ಎಂದು ಬರೆದುಕೊಂಡಿದ್ದರು. ಇನ್ನು ಪುನೀತ್ ಸಾಯುವ ಮೊದಲು, 'ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ' ಎಂದು ಪೋಸ್ಟ್ ಮಾಡಿದ್ದರು.