೨೦೧೯ರ 'ತ್ರಯಂಬಕ' ಚಿತ್ರಕ್ಕೆ ಅನುಪಮಾ ಗೌಡ ಅವರಿಗೆ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ ಲಭಿಸಿದೆ. ಒಳ್ಳೆಯ ಅವಕಾಶಗಳ ಕೊರತೆಯಿಂದ ಬೇಸತ್ತ ಅನುಪಮಾ, ಸ್ವತಃ ಚಿತ್ರ ನಿರ್ಮಿಸಿ ನಟಿಸುವ ಯೋಜನೆ ಹೊಂದಿದ್ದಾರೆ. ಪ್ರಶಸ್ತಿಯಿಂದ ಸಂತಸಗೊಂಡ ಅವರು, ಉತ್ತಮ ಅವಕಾಶಗಳು ಸಿಗದಿರುವುದು ತಮಗೂ ಪ್ರಶ್ನಾರ್ಥಕವಾಗಿದೆ ಎಂದಿದ್ದಾರೆ.

ನಿನ್ನೆ, ಅಂದರೆ 22 ಜನವರಿ 2025ರಂದು 2019ರ ಕರ್ನಾಟಕ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿದೆ. ಈ ಪ್ರಶಸ್ತಿ ಪಟ್ಟಿಯಲ್ಲಿ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಕನ್ನಡದ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ (Anupama Gowda) ಪಡೆದುಕೊಂಡಿದ್ದಾರೆ. 'ತ್ರಯಂಬಕ' ಸಿನಿಮಾಗೆ ಅನುಪಮಾ ಗೌಡ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ತಮ್ಮ ಅಭಿಮಾನಿಗಳ ಮುಖದಲ್ಲಿ ಹೊಸ ಸಂತೋಷ-ಸಂಭ್ರಮ ಮೂಡಿಸಿದ್ದಾರೆ. 

ಹೌದು, ನಟಿ ಅನುಪಮಾಗೆ ಶ್ರೇಷ್ಠ ನಟಿ ಪ್ರಶಸ್ತಿ ಯಾವತ್ತೋ ಸಿಗಬೇಕಿತ್ತು ಎಂಬ ಮಾತು ಆಗಾಗ ಕೇಳಿ ಬರುತ್ತಿತ್ತು. ತ್ರಯಂಬಕ ಸಿನಿಮಾಗೂ ಮೊದಲೇ ನಟಿಸಿದ್ದ ಹಲವು ಸಿನಿಮಾಗಳಲ್ಲಿ ಅನುಪಮಾ ನಟನೆ ನೋಡಿದವರು 'ಒಳ್ಳೆಯ ನಟಿ, ಇನ್ನೂ ಬಹಳಷ್ಟು ಒಳ್ಳೆಯ ಅವಕಾಶ ಸಿಗಬೇಕಿತ್ತು' ಎಂದು ಹೇಳುತ್ತಿದ್ದುದು ಗುಟ್ಟೇನೂ ಅಲ್ಲ. ಆದರೆ, 2019ರಲ್ಲಿ ರಿಲೀಸ್ ಆಗಿರುವ 'ತ್ರಯಂಬಕ' ಚಿತ್ರಕ್ಕೆ ಈಗ ಪ್ರಶಸ್ತಿ ಘೋಷಣೆ ಆಗಿದ್ದೂ ಕೂಡ ಅವರು ಸಿನಿಮಾದಲ್ಲಿ ಚಾನ್ಸ್‌ನಿಂದ ವಂಚಿತರಾಗಲು ಕಾರಣ ಆಗಿರಬಹುದೇ?

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ, ದರ್ಶನ್‌ ಸಿನಿಮಾಗೂ ಅವಾರ್ಡ್!

ಅದು ಹೌದು, ಎನ್ನಬಹುದು. ಆದರೆ, ಪ್ರಶಸ್ತಿ ಬಂದಿರುವುದು ಈಗ ಎಂಬುದು ನಿಜವಾದರೂ ಅಂದು ಸಿನಿಮಾ ಬಿಡುಗಡೆ ಆದಾಗ, ಅನುಪಮಾ ನಟನೆಗೆ ಕನ್ನಡ ಸಿನಿಪ್ರೇಕ್ಷಕರ ಕಡೆಯಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು. ಹಾಗಿದ್ದರೂ ಅವರಿಗೇಕೆ ಮುಂದೆ ಒಳ್ಳೆಯ ಅವಕಾಶ ಸಿಗಲಿಲ್ಲ? ಸಿನಿಮಾ ಉದ್ಯಮದವರೂ ಕೂಡ ಈ ಸಿನಿಮಾವನ್ನು ವೀಕ್ಷಿಸಿರುತ್ತಾರೆ. ಆದರೂ ಕೂಡ ನಟಿ ಅನುಪಮಾಗೆ 2019 ಬಳಿಕ ಕೂಡ ಒಂದೊಳ್ಳೆಯ ಸಿನಿಮಾ ಅವಕಾಶ ಸಿಗಲೇ ಇಲ್ಲ. ಅದನ್ನು ದುರಾದೃಷ್ಟ ಎನ್ನಬೇಕಷ್ಟೇ!

ಸದ್ಯ ನಟಿ ಅನುಪಮಾಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಈ ಬಗ್ಗೆ 'ಏಷ್ಯಾನೆಟ್ ಸುವರ್ಣ ಡಿಜಿಟಲ್' ಅವರನ್ನು ಮಾತನಾಡಿಸಿದಾಗ ಖುಷಿಯಿಂದಲೇ ತಮಗಾದ ಖುಷಿಯನ್ನು ಹಂಚಿಕೊಂಡರು ಅನುಪಮಾ. ಜೊತೆಗೆ, 'ನಿಮಗ್ಯಾಕೆ ಸಿನಿಮಾರಂಗದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿಲ್ಲ?' ಎಂಬ ಪ್ರಶ್ನೆಯನ್ನು ಅನಿವಾರ್ಯವಾಗಿ ಕೇಳಿದಾಗ ಅವರು ಕೊಟ್ಟ ಉತ್ತರ ಮಾರ್ಮಿಕವಾಗಿತ್ತು. ಹಾಗಿದ್ದರೆ ನಟಿ ಅನುಪಮಾ ಹೇಳಿದ್ದೇನು?

'ಛಾವಾ'ನಲ್ಲಿ ರಾಣಿಜೇನು ರಶ್ಮಿಕಾ; ಈ ಪಾತ್ರ ಸಿಕ್ಕಿದ್ದಕ್ಕೆ ಹೀಗೆ ಹೇಳಿದ್ರು ನ್ಯಾಷನಲ್ ಕ್ರಶ್!

'ನನಗೂ ಅದು ಪ್ರಶ್ನೆಯಾಗಿಯೇ ಇದೆ. ನನಗೆ ಸಿಕ್ಕ ಸಿನಿಮಾ ಅವಕಾಶವನ್ನು ನಾನು ಚೆನ್ನಾಗಿ ಬಳಸಿಕೊಂಡಿದ್ದೇನೆ. ನನ್ನ ಸಿನಿಮಾ ನಿರ್ದೇಶಕರ ನಿರೀಕ್ಷೆಗೆ ಕಡಿಮೆ ಎಳ್ಳಷ್ಟೂ ಆಗದಂತೆ ಅಭಿನಯಿಸಿದ್ದೇನೆ. ಆ ಬಗ್ಗೆ ಆಯಾ ಸಿನಿಮಾದ ನಿರ್ದೇಶಕರುಗಳಿಗೂ ಉತ್ತಮ ಅಭಿಪ್ರಾಯವಿದೆ. ಆದರೆ, ನನ್ನ ಹಾಗೂ ಅಭಿಮಾನಿಗಳ ನಿರೀಕ್ಷೆಗೆ ಸರಿಯಾಗಿ ನನಗೆ ಸಿನಿಮಾ ನಟಿಯಾಗಿ ಇನ್ನೂ ಹೆಚ್ಚು ಬೆಳೆಯಲು ಅವಕಾಶಗಳು ಸಿಗುತ್ತಿಲ್ಲ. ಆ ಬಗ್ಗೆ ಬೇಸರ ನನಗೂ ಇದೆ, ಆದರೆ ಏನು ಮಾಡೋದು? 

ಅದಕ್ಕೇ ನಾನೇ ಸದ್ಯ ಒಂದು ದಾರಿ ಕಂಡುಕೊಂಡಿದ್ದೇನೆ. ನಾನೇ ಒಂದು ಸಿನಿಮಾವನ್ನು ಆದಷ್ಟು ಬೇಗ ನಿರ್ಮಾಣ ಮಾಡಲು ಪ್ಲಾನ್ ಮಾಡುತ್ತಿದ್ದೇನೆ. ಅದರಲ್ಲಿ ನಾನೇ ನಟನೆ ಮಾಡುತ್ತೇನೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆ ಮೂಲಕ ನನಗೆ ನಾವೇ ಅವಕಾಶ ಸೃಷ್ಟಿಸಿಕೊಳ್ಳುವ ಯೋಜನೆ ರೂಪಿಸಿಕೊಂಡಿದ್ದೇನೆ' ಎಂದಿದ್ದಾರೆ ನಟಿ ಅನುಪಮಾ ಗೌಡ. 'ಆಲ್‌ ದಿ ಬೆಸ್ಟ್ ಅನುಪಮಾ' ಎನ್ನಲೇಬೇಕು ಅಲ್ಲವೇ?

ಕುಂಯ್‌ಕಾ‌ ಕುಂಯ್‌ಕಾ..,ಯಾರಿಗೆಲ್ಲಾ ನೆನಪಿದೆ; ಇದು ಕಿರಿಕ್ ಕೀರ್ತಿ ಹೊಸ ಕಿರಿಕ್ಕಾ?