68th National Film Awards: ಕನ್ನಡಕ್ಕೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಗರಿ
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಕನ್ನಡಕ್ಕೆ ವಿವಿಧ ವಿಭಾಗಗಳಲ್ಲಿ ಒಟ್ಟಾರೆ 4 ಪ್ರಶಸ್ತಿ ಸಂದಿದೆ. ‘ಡೊಳ್ಳು’ ಶ್ರೇಷ್ಠ ಕನ್ನಡ ಚಿತ್ರ, ‘ವೆಂಕಟೇಶ ಕುಮಾರ್’ ಶ್ರೇಷ್ಠ ಕಲೆ ಸಂಸ್ಕೃತಿ ಚಿತ್ರ, ‘ತಲೆದಂಡ’ ಶ್ರೇಷ್ಠ ಪರಿಸರ ಚಿತ್ರ ಹಾಗೂ ‘ಜೀಟಿಗೆ’- ಶ್ರೇಷ್ಠ ತುಳು ಚಿತ್ರ ಪ್ರಶಸ್ತಿಗೆ ಭಾಜನವಾಗಿವೆ.
ನವದೆಹಲಿ/ಬೆಂಗಳೂರು (ಜು.23): 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಕನ್ನಡಕ್ಕೆ ವಿವಿಧ ವಿಭಾಗಗಳಲ್ಲಿ ಒಟ್ಟಾರೆ 4 ಪ್ರಶಸ್ತಿ ಸಂದಿದೆ. ‘ಡೊಳ್ಳು’ ಶ್ರೇಷ್ಠ ಕನ್ನಡ ಚಿತ್ರ, ‘ವೆಂಕಟೇಶ ಕುಮಾರ್’ ಶ್ರೇಷ್ಠ ಕಲೆ ಸಂಸ್ಕೃತಿ ಚಿತ್ರ, ‘ತಲೆದಂಡ’ ಶ್ರೇಷ್ಠ ಪರಿಸರ ಚಿತ್ರ ಹಾಗೂ ‘ಜೀಟಿಗೆ’- ಶ್ರೇಷ್ಠ ತುಳು ಚಿತ್ರ ಪ್ರಶಸ್ತಿಗೆ ಭಾಜನವಾಗಿವೆ. ‘ಡೊಳ್ಳು’ ಚಿತ್ರಕ್ಕೆ ಅತ್ಯುತ್ತಮ ಆಡಿಯೋಗ್ರಫಿ ಪ್ರಶಸ್ತಿಯು ಜೋಬಿನ್ ಜಯನ್ ಅವರಿಗೆ ಸಿಕ್ಕಿದೆ.
ಡೊಳ್ಳಿಗೆ 2 ಪ್ರಶಸ್ತಿ: ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದು, ರಜತ ಕಮಲ ಮತ್ತು 1 ಲಕ್ಷ ರು.ನಗದು ಪುರಸ್ಕಾರಕ್ಕೆ ಪಾತ್ರವಾಗಿದೆ. ಇದೇ ಚಿತ್ರ ‘ಅತ್ಯುತ್ತಮ ಧ್ವನಿ ಸಂಕಲನ’ಕ್ಕಾಗಿನ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರವಾಗಿದೆ. ಧ್ವನಿ ಸಂಕಲನಕಾರ ಜೋಬಿನ್ ಜಯನ್ ಈ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅವರು ರಜತ ಕಮಲ ಮತ್ತು 50 ಸಾವಿರ ರು. ನಗದು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದು ಕರ್ನಾಟಕದ ಬಹು ದೊಡ್ಡ ಜಾನಪದ ಪರಂಪರೆಯಾದ ಡೊಳ್ಳು ಕುಣಿತದ ಮಹತ್ವವನ್ನು ಸಾರುವ ಸಿನಿಮಾ.
ಸಾಹಿತ್ಯದ ವಿದ್ಯಾರ್ಥಿಯಾಗಿರುವುದರಿಂದ ಪಾತ್ರ ಆಯ್ಕೆ ಮಾಡಿಕೊಳ್ಳುವುದು ಸುಲಭ: ಕಿಶೋರ್
ಕಾಸರವಳ್ಳಿ ಚಿತ್ರಕ್ಕೆ ಗೌರವ: ಇನ್ನು ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಸಿನಿಮಾ ರಾಷ್ಟ್ರೀಯ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ ಡಾ.ವೆಂಕಟೇಶ್ ಕುಮಾರ್’ ಚಿತ್ರ ರಜತ ಕಮಲ ಮತ್ತು 50 ಸಾವಿರ ರು. ನಗದು ಬಹುಮಾನಕ್ಕೆ ಪಾತ್ರವಾಗಿದೆ. ಗ್ವಾಲಿಯರ್ ಘರಾಣೆಯ ಸುಪ್ರಸಿದ್ಧ ಹಿಂದುಸ್ತಾನಿ ಶೈಲಿಯ ಗಾಯಕ ಪಂ. ಎಂ. ವೆಂಕಟೇಶ್ ಕುಮಾರ್ ಅವರ ಜೀವನ ಪುಟಗಳನ್ನು ದಾಖಲಿಸಿರುವ 44 ನಿಮಿಷಗಳ ಸಾಕ್ಷ್ಯ ಚಿತ್ರವಿದು.
ತಲೆಡಂಡಕ್ಕೆ ಪರಿಸರ ಚಿತ್ರ ಪ್ರಶಸ್ತಿ: ಅತ್ಯುತ್ತಮ ಪರಿಸರ ಸಂರಕ್ಷಣೆ ಕುರಿತ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಕನ್ನಡದ ‘ತಲೆದಂಡ’ದ ಪಾಲಾಗಿದೆ. ಚಿತ್ರದ ನಿರ್ದೇಶಕ ಪ್ರವೀಣ್ ಕೃಪಾಕರ್ ರಜತ ಕಮಲ ಮತ್ತು 1.5 ಲಕ್ಷ ನಗದು ಬಹುಮಾನಕ್ಕೆ ಪಾತ್ರರಾಗಿದ್ದಾರೆ. ಇದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಅಭಿನಯದ ಕೊನೆಯ ಸಿನಿಮಾವಾಗಿದೆ. ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಕತೆಯನ್ನು ಒಳಗೊಂಡಿರುವ ಚಿತ್ರ ಇದಾಗಿದೆ. ಮರ, ಗಿಡಿಗಳ ಜತೆಗೆ ಭೂಮಿ ತಾಯಿಯನ್ನು ರಕ್ಷಿಸುವ ಸಂದೇಶವನ್ನು ಈ ಚಿತ್ರ ಹೇಳುತ್ತದೆ.
ಶತದಿನೋತ್ಸವದ ಸಂಭ್ರಮದಲ್ಲಿ 'ಕೆಜಿಎಫ್-2'; ವಿಡಿಯೋ ಹಂಚಿಕೊಂಡು ಧನ್ಯವಾದ ತಿಳಿಸಿದ ಹೊಂಬಾಳೆ ಫಿಲ್ಮ್ಸ್
ತುಳು: ಕೊರೋನಾ ಕಾಲಘಟ್ಟದಲ್ಲಿ ಭೂತದ ಕೋಲ ಕಟ್ಟುವವನ ಸಂಕಷ್ಟಗಳ ಕತೆಯುಳ್ಳ ‘ಜೀಟಿಗೆ’ ಚಿತ್ರವು ತುಳು ಭಾಷೆಯ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ. ನಿರ್ದೇಶಕ ಸಂತೋಷ್ ಮಾಡ ರಜತ ಕಮಲ ಮತ್ತು 1 ಲಕ್ಷ ನಗದು ಬಹುಮಾನಕ್ಕೆ ಪಾತ್ರರಾಗಿದ್ದಾರೆ. ಜೀಟಿಗೆ ಅಂದರೆ ದೀವಟಿಗೆ ಎಂದು ಅರ್ಥ. ಚಿತ್ರದ ಚಿತ್ರಕತೆ ಮತ್ತು ಸಂಭಾಷಣೆ- ಶಶಿರಾಜ್ ಕಾವೂರು ಅವರದ್ದಾಗಿದೆ.
* ಶ್ರೇಷ್ಠ ಕನ್ನಡ ಚಿತ್ರ: ಡೊಳ್ಳು (ಸಾಗರ್ ಪುರಾಣಿಕ್ ನಿರ್ದೇಶನ)
* ಅತ್ಯುತ್ತಮ ಧ್ವನಿ ಸಂಕಲನ: ಡೊಳ್ಳು (ಜೊಬಿನ್ ಜಯನ್)
* ಶ್ರೇಷ್ಠ ಕಲೆ-ಸಂಸ್ಕೃತಿ ಚಿತ್ರ: ನಾದದ ನವನೀತ ಡಾ
* ವೆಂಕಟೇಶ್ ಕುಮಾರ್ (ಗಿರೀಶ್ ಕಾಸರವಳ್ಳಿ ನಿರ್ದೇಶನ)
* ಶ್ರೇಷ್ಠ ಪರಿಸರ ಸಂರಕ್ಷಣೆ ಚಿತ್ರ: ತಲೆಡಂಡ (ಪ್ರವೀಣ್ ಕೃಪಾಕರ್ ನಿರ್ದೇಶನ)