ಡಿವೋರ್ಸ್ಗೂ ಮುನ್ನ ಹೀಗೊಮ್ಮೆ ಯೋಚಿಸಿ, ಮಗು ಬಡವಾಗದಿರಲಿ
ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ. ವಿಚ್ಛೇದಿತ ದಂಪತಿಗಳ ಮಕ್ಕಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.ಅಪ್ಪ-ಅಮ್ಮ ಬೇರ್ಪಟ್ಟ ಬಳಿಕ ಅವರು ಎದುರಿಸೋ ಮಾನಸಿಕ ಸಂಕಟಗಳು ಒಂದೆರಡಲ್ಲ.ಹೀಗಾಗಿ ವಿಚ್ಛೇದನೆ ನಿರ್ಧಾರ ಕೈಗೊಳ್ಳೋ ಮುನ್ನ ಪ್ರತಿ ಜೋಡಿಯೂ ಒಮ್ಮೆ ಮಗುವಿನ ಆಯಾಮದಲ್ಲಿ ಭವಿಷ್ಯವನ್ನು ವಿಶ್ಲೇಷಿಸಿ ನೋಡೋದು ಒಳ್ಳೆಯದು.
ಇತ್ತೀಚಿನ ದಿನಗಳಲ್ಲಿ ವಿಚ್ಛೇದನೆ ಅನ್ನೋದು ಮದುವೆಯಷ್ಟೇ ಕಾಮನ್ ಆಗಿಬಿಟ್ಟಿದೆ. ಸ್ವಲ್ಪ ವರ್ಷಗಳ ಹಿಂದೆ ವಿಚ್ಛೇದನೆ ಅನ್ನೋದು ಅಪರೂಪದ,ಅತ್ಯಂತ ಚರ್ಚೆಗೆ ಗ್ರಾಸವಾಗುತ್ತಿದ್ದವಿಷಯ.ಆದ್ರೆ ಇಂದು ನಮ್ಮ ಸಂಬಂಧಿಗಳು,ಸ್ನೇಹಿತರ ಬಳಗದಲ್ಲೇ ವಿಚ್ಛೇದನೆ ಪಡೆದ ಅದೆಷ್ಟು ಮಂದಿ ಕಾಣಸಿಗುತ್ತಾರೆ.ಹಿಂದೆಲ್ಲ ಪರಸ್ಪರ ಹೊಂದಾಣಿಕೆ ಕಷ್ಟವೆಂಬುದು ಅರಿವಿಗೆ ಬಂದ ಮೇಲೂ ಕೆಲವು ವರ್ಷ ಜೊತೆಗಿದ್ದು,ಗಂಭೀರ ಕಾರಣಕ್ಕೆ ಇನ್ನು ಹೊಂದಾಣಿಕೆ ಸಾಧ್ಯವೇ ಇಲ್ಲ ಎಂಬುದು ಖಚಿತವಾದ ಮೇಲೆ ಜೋಡಿಗಳು ಕೋರ್ಟ್ ಮೆಟ್ಟಿಲೇರಿ ವಿಚ್ಛೇದನೆ ಪಡೆಯುತ್ತಿದ್ದರು.ಆದ್ರೆ ಈಗ ಮದುವೆಯಾಗಿ ಕೆಲವೇ ದಿನಕ್ಕೆ ವಿಚ್ಚೇದನೆ ಬಯಸೋರ ಸಂಖ್ಯೆ ಸಾಕಷ್ಟಿದೆ. ಕೆಲವು ಪರಿಸ್ಥಿತಿಯಲ್ಲಿವಿಚ್ಛೇದನೆ ಪಡೆಯೋದು ಅನಿವಾರ್ಯ.ಆದ್ರೆ ಮಕ್ಕಳಾದ ಮೇಲೆ ವಿಚ್ಛೇದನೆ ಬಯಸೋ ದಂಪತಿಗಳು ಇಂಥ ಸೀರಿಯಸ್ ನಿರ್ಧಾರ ತೆಗೆದುಕೊಳ್ಳೋ ಮುನ್ನ ಸಾಕಷ್ಟು ಆಯಾಮದಲ್ಲಿ ಯೋಚಿಸೋದು ಅಗತ್ಯ. ಏಕೆಂದ್ರೆ ಇಲ್ಲಿ ವಿಚ್ಛೇದನೆ ಪರಿಣಾಮ ಬೀರೋದು ಕೇವಲ ಇಬ್ಬರ ಬದುಕಿನ ಮೇಲಲ್ಲ,ಬದಲಿಗೆ ಇನ್ನೂ ಬಾಳಿ ಬದುಕಬೇಕಾದ ಇನ್ನೊಂದು ಜೀವ ಅಥವಾ ಜೀವಗಳ ಜೀವನದ ಮೇಲು ಕೂಡ. ಹಾಗಾಗಿ ವಿಚ್ಛೇದನೆ ತೀರ್ಮಾನಕ್ಕೆ ಬರೋ ಮುನ್ನ ಒಮ್ಮೆ ಹೀಗೂ ಯೋಚಿಸಿ.
ಧರ್ಮ ಶಾಸ್ತ್ರವೇ ಹೇಳುತ್ತದೆ ಪತಿಯಾದವನು ಹೀಗಿರಬೇಕೆಂದು
ಮಗುವಿನ ಭವಿಷ್ಯದ ಮೇಲಾಗೋ ಪರಿಣಾಮ
ಮಗುವಿನ ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಅಮ್ಮ ಮತ್ತು ಅಪ್ಪ ಇಬ್ಬರ ಸಾಂಗತ್ಯ,ಪ್ರೀತಿ ಹಾಗೂ ಕಾಳಜಿ ಅಗತ್ಯ.ಅಹಂ,ಸಿಟ್ಟು,ಅಹಂಕಾರ,ದ್ವೇಷದ ಕಾರಣಕ್ಕೆ ಪತಿ ಹಾಗೂ ಪತ್ನಿ ಸುಲಭವಾಗಿ ದೂರವಾಗೋ ನಿರ್ಧಾರ ಕೈಗೊಳ್ಳಬಹುದು.ಆದ್ರೆ ಅವರ ಆ ನಿರ್ಧಾರ ಮಗುವಿನ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು.
ಮಗುವಿನ ಮಾನಸಿಕ ಸ್ಥಿತಿ ಏನಾಗಬಹುದು?
ಇಬ್ಬರ ಈ ನಿರ್ಧಾರದಿಂದ ಆ ಪುಟ್ಟ ಹೃದಯಕ್ಕೆ ಅದೆಷ್ಟು ಘಾಸಿಯಾಗಬಹುದು.ನಿಮ್ಮ ನಿರ್ಧಾರ ಮಗುವಿನ ಮನಸ್ಸಿನ ಮೇಲೆ ವಾಸಿಯಾಗದಂತಹ ಆಘಾತವನ್ನುಂಟು ಮಾಡಿ ಅದರ ಭವಿಷ್ಯಕ್ಕೆ ಭಾರೀ ಪೆಟ್ಟು ನೀಡೋ ಸಾಧ್ಯತೆಯಿದೆ.ವಿಚ್ಛೇದನೆ ಬಳಿಕ ಅಮ್ಮನ ಬಳಿ ಬೆಳೆಯೋ ಮಗು ಅಪ್ಪನ ಬಗ್ಗೆ ದ್ವೇಷದ ಭಾವನೆ ಬೆಳೆಸಿಕೊಳ್ಳಬಹುದು.ಇಲ್ಲವೆ ಅಪ್ಪನನ್ನುತುಂಬಾ ಮಿಸ್ ಮಾಡಿಕೊಂಡು,ಮಾನಸಿಕ ಯಾತನೆ ಅನುಭವಿಸಬಹುದು.ಈ ನೋವು ಆ ಮಗುವಿನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯೋ ಜೊತೆ ಭವಿಷ್ಯದಲ್ಲಿ ಮಗು ಕೈಗೊಳ್ಳೋ ಎಲ್ಲ ನಿರ್ಧಾರಗಳ ಜೊತೆಗೆ ವಿಷಯಗಳ ಗ್ರಹಿಕೆ ಮೇಲೂ ಪರಿಣಾಮ ಬೀರಬಲ್ಲದು.ಅಷ್ಟೇ ಅಲ್ಲ,ಮಗುವಿನಲ್ಲಿ ಗೊಂದಲದ ಮನಸ್ಥಿತಿ ಬೆಳೆಯೋ ಎಲ್ಲ ಸಾಧ್ಯತೆಗಳೂ ಇವೆ.
ರಾಶಿಯ ಅನುಸಾರ ಪ್ರೀತಿಸಿದ ಹುಡುಗಿಯ ಗುಣ ಸ್ವಭಾವನ್ನು ಹೀಗೆ ತಿಳಿಯಬಹುದು
ಹೊಂದಾಣಿಕೆ ಏಕೆ ಸಾಧ್ಯವಿಲ್ಲ?
ಒಂದೇ ಮನೆಯಲ್ಲಿರೋವಾಗ ಅಪ್ಪ,ಅಮ್ಮ,ಅಕ್ಕ-ತಂಗಿಯರು,ಅಣ್ಣ-ತಮ್ಮಂದಿರ ನಡುವೆಯೋ ಸಣ್ಣಪುಟ್ಟ ಜಗಳ ನಡೆಯೋದು ಕಾಮನ್. ಅಕ್ಕನೊಂದಿಗೋ,ಅಣ್ಣನೊಂದಿಗೋ ಜಗಳವಾಡಿ,ಆಮೇಲೆ ಸಂಧಾನ ಮಾಡಿಕೊಳ್ಳೋ ಪ್ರಸಂಗಗಳು ಅನೇಕ.ಅದೇ ಸೂತ್ರವನ್ನುಪತಿ ಹಾಗೂ ಪತ್ನಿಗೂ ಅನ್ವಯಿಸಿ ನೋಡೋ ಯೋಚನೆಯನ್ನು ಒಮ್ಮೆ ಮಾಡಿ ನೋಡಿ.ನಿಮ್ಮಿಬ್ಬರ ನಡುವೆ ಹೊಂದಾಣಿಕೆಗೆ ತೊಡಕಾಗಿರೋ ವಿಷಯಗಳನ್ನು ಗುರುತಿಸಿ.ನಿಮ್ಮ ಮಗು ಅಥವಾ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಂದಾಣಿಕೆಗೆ ಪ್ರಯತ್ನಿಸಿ.
ಕೂತು ಮಾತನಾಡಿ ಪರಿಹರಿಸಿಕೊಳ್ಳಲಾಗದಂತಹ ಸಮಸ್ಯೆಯೇ?
ಉಗುರಲ್ಲಿ ಆಗೋ ಕೆಲ್ಸಕ್ಕೆ ಕೊಡಲಿ ತೆಗೆದುಕೊಂಡ ಎಂಬ ಗಾಧೆಯಿದೆ. ಈ ಮಾತು ಇತ್ತೀಚೆಗಿನ ವಿಚ್ಛೇದನೆ ಪ್ರಕರಣಗಳಿಗೆ ಚೆನ್ನಾಗಿ ಅನ್ವಯಿಸುತ್ತದೆ. ಬಹುತೇಕ ವಿಚ್ಛೇದನೆಗಳ ಹಿಂದಿರೋದು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು. ಇಬ್ಬರೂ ಎದುರು-ಬದಿರು ಕೂತು ಮಾತನಾಡಿ ಪರಿಹರಿಸಿಕೊಳ್ಳಬಹುದಾದ ವಿಷಯಗಳು ಕೋರ್ಟ್ ಮೆಟ್ಟಿಲೇರಿ ವಿಚ್ಛೇದನೆಯಲ್ಲಿ ಕೊನೆಗೊಳ್ಳುತ್ತಿವೆಯಷ್ಟೇ. ಆದಕಾರಣ ವಿಚ್ಛೇದನೆ ನಿರ್ಧಾರ ಕೈಗೊಳ್ಳೋ ಮುನ್ನ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಲು ಪ್ರಯತ್ನಿಸಿ.
ಕೌನ್ಸೆಲಿಂಗ್ಗೆ ಪ್ರಯತ್ನಿಸಿ ನೋಡಬಾರದೇಕೆ?
ಇಬ್ಬರು ಕೂತು ಮಾತನಾಡಿದ್ರೂ ಸಮಸ್ಯೆ ಬಗೆಹರಿದಿಲ್ಲ ಎಂದಾದ್ರೆ ಆಪ್ತಸಮಾಲೋಚಕರನ್ನು ಭೇಟಿಯಾಗಿ ಕೌನ್ಸೆಲಿಂಗ್ಗೆ ಒಳಪಡೋ ಬಗ್ಗೆ ಯೋಚಿಸಬಹುದು. ಎಷ್ಟೋ ಸಮಸ್ಯೆಗಳು ಕೌನ್ಸೆಲಿಂಗ್ ಬಳಿಕ ಸುಖಾಂತ್ಯ ಕಂಡಿವೆ. ಹೀಗಾಗಿ ನೀವು ಕೂಡ ಈ ಪ್ರಯತ್ನವನ್ನು ಮಾಡಬಹುದು.
ಮದುವೆಯಾದ್ರೆ ಗಂಡ ಎಂಬ ಗೂಬೆ ಜೊತೆಗೇ ಇರುತ್ತೆ!
ವಿಚ್ಛೇದನೆ ಬಳಿಕ ಬದುಕು?
ಡೈವೋರ್ಸ್ ತೆಗೆದುಕೊಳ್ಳೋದು ಸುಲಭದ ಕೆಲಸ. ಆದ್ರೆ ಆ ನಂತರದ ಬದುಕು? ಈ ಬಗ್ಗೆ ಕೂಡ ಯೋಚಿಸೋದು ಅಗತ್ಯ. ವಿಚ್ಛೇದನೆ ಬಳಿಕ ಬದುಕು ಮೊದಲಿನಂತೆ ಖಂಡಿತಾ ಇರೋದಿಲ್ಲ. ಒಂದಿಷ್ಟು ಬದಲಾವಣೆಯಾಗಿಯೇ ಆಗುತ್ತೆ. ಅದನ್ನು ಎದುರಿಸಲು ನೀವು ಮಾನಸಿಕವಾಗಿ ಸಿದ್ಧರಿದ್ದೀರಾ ಎಂಬುದನ್ನು ಯೋಚಿಸಿ. ಮಗುವಿನಿಂದ ದೂರವಿರೋದು ಸಾಧ್ಯವೇ?ಮುಂದೆ ಒಂಟಿಯಾಗಿ ಇರುತ್ತೀರೋ ಅಥವಾ ಬೇರೆ ಸಂಗಾತಿಯನ್ನು ಆರಿಸಿಕೊಳ್ಳುತ್ತೀರೋ ಎಂಬ ಯೋಚನೆಯೂ ಅಗತ್ಯ.
ಮರುಮದುವೆಯಿಂದ ಮಗುವಿನ ಮೇಲಾಗೋ ಪರಿಣಾಮ
ಅಮ್ಮ ಅಥವಾ ಅಪ್ಪ ಮರುವಿವಾಹವಾದ್ರೆ ಅದು ಮಗುವಿನ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇನ್ನೊಬ್ಬರನ್ನು ಅಪ್ಪ ಅಥವಾ ಅಮ್ಮನ ಸ್ಥಾನದಲ್ಲಿ ನೋಡೋದು ಆ ಪುಟ್ಟ ಮನಸ್ಸಿಗೆ ಸಂಕಟದ ವಿಷಯವೇ ಸರಿ. ಹೀಗಾಗಿ ವಿಚ್ಛೇದನೆಗೂ ಮುನ್ನ ಮಗುವಿನ ದೃಷ್ಟಿಕೋನದಿಂದ ಪರಿಸ್ಥಿತಿಯನ್ನು ವಿಶ್ಲೇಷಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ.