Asianet Suvarna News Asianet Suvarna News

ಅತ್ತೆಗೊಂದು ಕಾಲ ಮುಗೀತು, ಸೊಸೆ ಕಾಲ ಶುರುವಾಯ್ತು: ಅತ್ತೆಯ ಹಲ್ಲು ಮುರಿಯುವಂತೆ ಹೊಡೆದ ಕಿರಿ ಸೊಸೆ!

ಅತ್ತೆಗೊಂದು ಕಾಲ ಎಂಬುದು ಮುಗಿದೋಯ್ತು. ಇದೀಗ ಸೊಸೆಯ ಕಾಲ ಶುರುವಾಗಿದೆ. ರಾಮನಗರ ಜಿಲ್ಲೆಯಲ್ಲಿ ಸ್ನಾನ ಮಾಡುವ ವಿಚಾರಕ್ಕೆ ಕಿರಿ ಸೊಸೆಯೊಬ್ಬಳು ಅತ್ತೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. 

Ramanagara daughter in law assaulted her mother in law sat
Author
First Published Oct 3, 2024, 5:12 PM IST | Last Updated Oct 3, 2024, 5:12 PM IST

ರಾಮನಗರ (ಅ.03): ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬ ಗಾದೆಯನ್ನು ನಾವೆಲ್ಲರೂ ಕೇಳಿರುತ್ತೇವೆ. ಆದರೆ, ಆ ಮಾತು ರಾಮನಗರದಲ್ಲಿ ನಿಜವಾಗಿದೆ. ಮದುವೆ ಮಾಡಿಕೊಟ್ಟು ಮಗ ಚೆನ್ನಾಗಿರಲಿ ಎಂದು ಕೊನೆಯ ದಿನಗಳನ್ನು ದೂಡುತ್ತಿರುವ ಅತ್ತೆ ಸ್ನಾನ ಮಾಡುವುದರ ವಿಚಾರಕ್ಕೆ ಕಿರಿ ಸೊಸೆ ಜಗಳ ತೆಗೆದು ಅತ್ತೆಗೆ ಹೀನಾಮಾನವಾಗಿ ಹಲ್ಲೆ ಮಾಡಿದ್ದಾರೆ. ವಯಸ್ಸಾದ ಅತ್ತೆಯ ಬಾಯಿಗೆ ಗುದ್ದಿದ್ದು, ಹಲ್ಲುಗಳೆಲ್ಲವೂ ಅಲುಗಾಡುತ್ತಿವೆ.

ಈ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ನಾಗವಾರ ಗ್ರಾಮದಲ್ಲಿ ನಿನ್ನೆ ಮಧ್ಯಾಹ್ನದ ವೇಳೆ ನಡೆದಿದೆ. ಇಲ್ಲಿ ಒಂದೇ ಮನೆಯಲ್ಲಿರುವ ಕಿರಿಮಗನ ಹೆಂಡತಿ ಅಂದರೆ ಕಿರಿ ಸೊಸೆ ಹಾಗೂ ಅತ್ತೆಯ ನಡುವೆ ಸ್ನಾನ ಮಾಡಲು ಹೋಗುವ ವಿಚಾರಕ್ಕೆ ಜಗಳ ನಡೆದಿದೆ. ಈ ವೇಳೆ ಅತ್ತೆಯನ್ನು ಸ್ನಾನದ ಕೋಣೆಗೆ ಹೋಗಲು ಬಿಡದೇ ಅವರ ತಲೆ ಕೂದನ್ನು ಹಿಡಿದು ಹಲ್ಲೆ ಮಾಡಿದ್ದಾರೆ. ಇದರಿಂದ ನೋವುನಿಂದ ಬಳಲುತ್ತಾ ಸೊಸೆಯನ್ನು ಬೈಯುತ್ತಿದ್ದಾಗ ಮತ್ತೆ ಸಿಟ್ಟಿಗೆದ್ದ ಸೊಸೆ ಮನೆಯೊಳೆಗೆ ಅತ್ತೆಯ ಕೂದಲು ಹಿಡಿದು ಎಳೆದುಕೊಂಡು ಹೋಗಿ ಬಾಗಿಲು ಹಾಕಿ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ರೈತನಿಂದ ವಧು ದಕ್ಷಿಣೆ ಪಡೆದು ಮದುವೆಯಾದ ಹೆಂಡತಿ ಒಂದು ವಾರದಲ್ಲೇ ಬ್ರೋಕರ್‌ನೊಂದಿಗೆ ಪರಾರಿ!

ಮನೆಯ ಬಾಗಿಲು ಹಾಕಿ ಅತ್ತೆಯನ್ನು ನೆಲದ ಮೇಲೆ ಬೀಳಿಸಿ ಕೈ ಕಾಲುಗಳನ್ನು ತಿರುವಿ ಹೊಡೆದಿದ್ದಾಳೆ. ಬಾಯಿಯ ಮೇಲೆ, ಬೆನ್ನಿನ ಮೇಲೆ ಕೈಗಳಿಂದ ಗುದ್ದಿ, ಕಾಲಿನಿಂದ ಒದ್ದಿದ್ದಾಳೆ. ಇದನ್ನು ವಿರೋಧಿಸುವಾಗ ಅತ್ತೆಯ ಮೂಗಿನಲ್ಲಿದ್ದ ಮೂಗುಬೊಟ್ಟು, ಕಿವಿಯೋಲೆ ಮುರಿದಿವೆ. ಅತ್ತೆಯ ಕೊರಳಿನಲ್ಲಿದ್ದ ತಾಳಿಸರ ಹರಿದು ಹೋಗಿದೆ. ಇಷ್ಟು ಸಾಲದೆಂಬಂತೆ ಅತ್ತೆಯ ಕೈಗಳಿಗೆ ಚೆನ್ನಾಗಿ ಪರಚಿದ್ದು, ಕುತ್ತಿಗೆ ಭಾಗದಲ್ಲಿ ಕಚ್ಚಿ ಗಾಯಗೊಳಿಸಿದ್ದಾಳೆ. ಮುಂದುವರೆದು ನೀನು ಮನೆ ಬಿಟ್ಟು ಹೋಗದಿದ್ದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾಳೆ. ಇನ್ನು ಸೊಸೆಯನ್ನು ದೂಡಿ, ಬಾಗಿಲು ತೆಗೆದು ಸಹಾಯಕ್ಕೆ ಕೂಗಾಡಿದ್ದಾಳೆ. ಆಗ ನೆರೆಹೊರೆಯವರು ಬಂದು ನನ್ನನ್ನು ಕಾಪಾಡಿದ್ದಾರೆ ಎಂದು ಅತ್ತೆ ಆರೋಪ ಮಾಡಿದ್ದಾರೆ.

ಹಲ್ಲೆಗೊಳಗಾದ ಮಹಿಳೆ ಚನ್ನಪಟ್ಟಣ ನಿವಾಸಿ ಜಯಮ್ಮ. ಅವರ ಕಿರಿಯ ಮಗ ರಮೇಶನ ಹೆಂಡತಿ ಅಶ್ವಿನಿ ಹಲ್ಲೆ ಮಾಡಿದ ಸೊಸೆ ಆಗಿದ್ದಾರೆ. ಈ ಘಟನೆಯ ನಂತರ ಸ್ಥಳೀಯರು ಅತ್ತೆ ನರಳುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದಾದ ನಂತರ ಹಿರಿಯ ಮಗನಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಹಿರಿಯ ಸೊಸೆ ಬಂದು ಸಹಾಯ ಮಾಡಿದ್ದಾರೆ. ಅವರೊಂದಿಗೆ ಸ್ಥಳೀಯ ಚನ್ನಪಟ್ಟಣ ತಾಲೂಕಿನ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಸೊಸೆ ಹಲ್ಲೆ ಮಾಡಿದ ಕುರಿರು ದೂರು ನೀಡಿದ್ದಾರೆ. 

ಇದನ್ನೂ ಓದಿ: ಬಿಗ್ ಬಾಸ್ ಮನೆಯೊಳಗಿರುವ ಲಾಯರ್ ಜಗದೀಶನ ವಕೀಲಿಕೆ ಲೈಸೆನ್ಸ್ ಕ್ಯಾನ್ಸಲ್!

ಅತ್ತೆ ಸೊಸೆಗೆ ರಾಜೀ ಸಂಧಾನ ಮಾಡಿದ್ದ ಕುಟುಂಬಸ್ಥರು: ಇನ್ನು ಅತ್ತೆಯ ಮೇಲೆ ಸೊಸೆ ಹಲ್ಲೆ ಮಾಡಿದ ಘಟನೆ ಇದೇ ಮೊದಲಲ್ಲ. ಈ ಮೊದಲೂ ಹಲವು ಬಾರಿ ಸಣ್ಣ ಪುಟ್ಟ ವಿಚಾರಕ್ಕೆ ಅತ್ತೆಯನ್ನು ಮನೆ ಬಿಟ್ಟು ಹೋಗುವಂತೆ ಸೊಸೆ ಥಳಿಸಿದ್ದಳು. ಅತ್ತೆಗೆ ಕಿರುಕುಳ ನೀಡುತ್ತಿದ್ದಳು. ಈ ಬಗ್ಗೆ ಮಗನಿಗೆ ಹೇಳಿದರೂ ಅವನು ಒಂದೆರೆಡು ಮಾತುಗಳನ್ನು ಹೆಂಡತಿಗೆ ಬೈದು ಸುಮ್ಮನಾಗುತ್ತಿದ್ದನು. ಇದು ಇಷ್ಟಕ್ಕೆ ಬಗೆ ಹರಿಯುವುದಿಲ್ಲವೆಂದು ಅತ್ತೆಯೇ ಸೊಸೆಯ ಮನೆಯವರಿಗೆ ತಿಳಿಸಿದ್ದಳು. ಮನೆಯ ಹಿರಿಯರೆಲ್ಲರೂ ಸೇರು ಅತ್ತೆ ಸೊಸೆಯನ್ನು ಕೂಡಿಸಿ ರಾಜಿ ಸಂಧಾನ ಮಾಡಿಸಿದ್ದರು. ಇದಾದ ಬಳಿಕ ಬೆಂಗಳೂರಿನ ತನ್ನ ಮಗಳ ಮನೆಗೆ ತೆರಳಿದ್ದ ಅಜ್ಜಿ ಸೆ.30ರಂದು ಪುನಃ ತನ್ನ ಮನೆಗೆ ತೆರಳಿದ್ದರು. ಇದೀಗ ಪುನಃ ಅತ್ತೆಯ ಮೇಲೆ ಸೊಸೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios