ಪೀಣ್ಯಾದ ನೆಲಗೆದರನಹಳ್ಳಿಯಲ್ಲಿ, ಅಕ್ರಮ ಸಂಬಂಧವನ್ನು ಪ್ರಶ್ನಿಸಲು ಹೋದ ಯಮುನಾ ಮತ್ತು ಆಕೆಯ ತಮ್ಮ ಸುದೀಪ್ ಎಂಬುವವರನ್ನು ಮಹಿಳೆಯೊಬ್ಬಳ ಅಪ್ರಾಪ್ತ ಮಗ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ಘಟನೆಯಿಂದ ಮನನೊಂದ ಮೃತೆ ಯಮುನಾಳ ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬೆಂಗಳೂರು (ಮಾ.26): ಪೀಣ್ಯಾದ ನೆಲಗೆದರನಹಳ್ಳಿಯಲ್ಲಿ ಬುಧವಾರ ಸಂಜೆ ನಡೆದ ಘೋರ ಘಟನೆಯಲ್ಲಿ ಯಮುನಾ (36) ಮತ್ತು ಆಕೆಯ ತಮ್ಮ ಸುದೀಪ್ (34) ಎಂಬುವವರು ಹತ್ಯೆಯಾಗಿದ್ದಾರೆ. ಈ ಕೊಲೆಯನ್ನು ಛಾಯಾ ಎಂಬಾಕೆಯ ಅಪ್ರಾಪ್ತ ಮಗ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮೃತರಾದ ಯಮುನಾ ಅವರ ಪತಿ ಮಲ್ಲೇಗೌಡ ಮತ್ತು ಛಾಯಾ ಎಂಬಾಕೆಯ ನಡುವೆ ಅಕ್ರಮ ಸಂಬಂಧವಿತ್ತು ಎಂಬ ಶಂಕೆ ಇತ್ತು. ಈ ಹಿಂದೆ ಮಲ್ಲೇಗೌಡನ ಕುಟುಂಬ ತಿಗಳರಪಾಳ್ಯದಲ್ಲಿ ವಾಸವಿದ್ದಾಗ, ಛಾಯಾ ಅವರ ಮನೆ ಎದುರೇ ಇತ್ತು. ಈ ವೇಳೆ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಕೆಲವು ತಿಂಗಳ ಹಿಂದೆ ಛಾಯಾ ಮನೆ ಶಿಫ್ಟ್ ಮಾಡಿದ್ದರೂ, ಮಲ್ಲೇಗೌಡ ಅಲ್ಲಿಗೂ ಹೋಗುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಈಗಾಗಲೇ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.
ಕೊಲೆ ನಡೆದದ್ದು ಹೇಗೆ?
ಬುಧವಾರ ಮಲ್ಲೇಗೌಡನ ಪತ್ನಿ ಯಮುನಾ ಮತ್ತು ಆಕೆಯ ತಮ್ಮ ಸುದೀಪ್, ಈ ಸಂಬಂಧವನ್ನು ಪ್ರಶ್ನಿಸಲು ಛಾಯಾ ಅವರ ಮನೆಗೆ ತೆರಳಿದ್ದರು. ಈ ವೇಳೆ ಇವರ ನಡುವೆ ತೀವ್ರ ಗಲಾಟೆ ನಡೆದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಯಮುನಾ ಮತ್ತು ಸುದೀಪ್ ಅವರೇ ಚಾಕು ಹಿಡಿದು ಛಾಯಾ ಅವರ ಮನೆಗೆ ನುಗ್ಗಿದ್ದರು. ಈ ವೇಳೆ ತನ್ನ ತಾಯಿ ಛಾಯಾಳನ್ನು ಇವರು ಕೊಲ್ಲಬಹುದು ಎಂಬ ಭಯದಿಂದ ಅಪ್ರಾಪ್ತ ಬಾಲಕ, ಅವರ ಕೈಯಲ್ಲಿದ್ದ ಚಾಕುವನ್ನೇ ಕಸಿದುಕೊಂಡು ಇಬ್ಬರಿಗೂ ಹತ್ತಾರು ಬಾರಿ ಇರಿದಿದ್ದಾನೆ. ಇರಿತದ ತೀವ್ರತೆಗೆ ಯಮುನಾ ಮತ್ತು ಸುದೀಪ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಕೊಲೆಯ ನಂತರದ ಹೈಡ್ರಾಮಾ
ಕೊಲೆ ಮಾಡಿದ ನಂತರ ಗಾಬರಿಗೊಂಡ ಅಪ್ರಾಪ್ತ ಬಾಲಕ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಸ್ಥಳಕ್ಕೆ ಪೀಣ್ಯಾ ಪೊಲೀಸರು ಬಂದರೂ ಬಾಗಿಲು ತೆಗೆಯದ ಬಾಲಕ, ನಂತರ ತನ್ನ ತಂದೆ ಸ್ಥಳಕ್ಕೆ ಬಂದು ಹೇಳಿದ ಮೇಲೆ ಬಾಗಿಲು ತೆರೆದು ಹೊರಬಂದಿದ್ದಾನೆ.
ಯಮುನಾ ಮಗಳಿಂದ ಆತ್ಮಹತ್ಯೆ ಯತ್ನ
ಇನ್ನೊಂದೆಡೆ ತಾಯಿ ಯಮುನಾ ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಆಕೆಯ ಮಗಳು ತೀವ್ರ ಆಘಾತಕ್ಕೊಳಗಾಗಿದ್ದಾಳೆ. ಮನನೊಂದ ಆಕೆ ಬಾತ್ರೂಮ್ ಕ್ಲೀನಿಂಗ್ ಲಿಕ್ವಿಡ್ (ಆ್ಯಸಿಡ್) ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮೃತ ಸುದೀಪ್ ಮಾವ ಸುರೇಶ್ ಮಾತನಾಡಿ "ನಮ್ಮ ಮಗಳನ್ನು ಸುದೀಪ್ಗೆ ಮದುವೆ ಮಾಡಿಕೊಟ್ಟಿದ್ದೆವು. ಅವಳು ಈಗ ಗರ್ಭಿಣಿ. ಸುದೀಪ್ ಇಂದು ಆಫೀಸ್ಗೆ ಹೋಗುವುದಾಗಿ ಹೇಳಿ ಹೊರಟಿದ್ದ. ಅಕ್ಕನ ಮನೆಗೆ ಹೋಗಿ ನಂತರ ಅಲ್ಲಿಗೆ ಹೋಗಿದ್ದಾನೆ. ಈಗ ಅಳಿಯನನ್ನೇ ಕಳೆದುಕೊಂಡಿದ್ದೇವೆ" ಎಂದು ಕಣ್ಣೀರಿಟ್ಟಿದ್ದಾರೆ.
ಮೃತ ಯಮುನಾ ಪುತ್ರ ದೀಕ್ಷಿತ್ ಮಾತನಾಡಿ "ನಮ್ಮ ತಂದೆ ಮತ್ತು ಛಾಯಾ ನಡುವಿನ ಅಕ್ರಮ ಸಂಬಂಧದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆವು. ಇಂದು ಇಲ್ಲಿ ಗಲಾಟೆ ನಡೆದಾಗ ಛಾಯಾ ಮಗನೇ ಚಾಕು ಇರಿದು ಕೊಂದಿದ್ದಾನೆ" ಎಂದು ತಿಳಿಸಿದ್ದಾನೆ. ಪ್ರಸ್ತುತ ಪೀಣ್ಯಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.


