ಮದುವೆಯಾಗಿ ಸುಖ ಸಂಸಾರದ ಕನಸು ಕಂಡಿದ್ದ ಮಹಿಳೆಗೆ ಗಂಡನೇ ತಲೆನೋವಾಗಿ ಪರಿಣಮಿಸಿದ್ದಾನೆ. ಗಂಡ ಬೇರೊಬ್ಬರೊಂದಿಗೆ ಮಲಗುವಂತೆ ಕಿರುಕುಳ ನೀಡುತ್ತಿದ್ದು, ರಕ್ಷಣೆ ಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ, ಈಗ ಪೊಲೀಸಪ್ಪನೇ ಮಹಿಳೆ ಬೆದರಿಸಿ ಕಾಮತೃಷೆ ತೀರಿಸಿಕೊಳ್ಳಲು ಮನೆಗೆ ಬಂದು ಮಲಗುತ್ತಿದ್ದಾನೆ.
ಮಂಗಳೂರು (ಜು.16): ಮದುವೆ ಮಾಡಿಕೊಂಡು ಸುಖ ಸಂಸಾರದ ಕನಸು ಕಂಡಿದ್ದ ಹೆಂಡತಿಗೆ ಗಂಡನೇ ತಲೆಹಿಡುಕನಾಗಿದ್ದಾನೆ. ಹೆಂಡತಿಯೊಂದಿಗೆ ಸಂಸಾರ ಮಾಡಿದ ಖಾಸಗಿ ವಿಡಿಯೋ ಮಾಡಿಟ್ಟುಕೊಂಡು ವೈರಲ್ ಮಾಡುವುದಾಗಿ ಬೆದರಿಸಿ, ಹಣಕ್ಕಾಗಿ ಕಂಡ, ಕಂಡವರ ಜೊತೆಗೆ ಮಲಗುವಂತೆ ಹೇಳುತ್ತಿದ್ದನು. ಗಂಡನ ಕಿರುಕುಳಕ್ಕೆ ಬೇಸತ್ತು ರಕ್ಷಣೆ ಕೋರಿ ಪೊಲೀಸರಿಗೆ ದೂರು ಕೊಟ್ಟರೆ, ಪೋಲಿ ಪೊಲೀಸಪ್ಪನೇ ಬಂದು ತನ್ನೊಂದಿಗೆ ಮಲಗುತ್ತಿದ್ದಾನೆ ಎಂದು ಸಂತ್ರಸ್ತ ಮಹಿಳೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ.
ಈ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆಗೆ ಮದುವೆಯಾಗಿ ಕೆಲವು ವರ್ಷಗಳು ಕಳೆದಿತ್ತು. ಹೆಂಡತಿಯೊಂದಿಗೆ ಸಂಸಾರ ಆರಂಭಿಸಿದ ಗಂಡ ಪತ್ನಿಯೊಂದಿಗೆ 4 ಗೋಡೆಯ ನಡುವೆ ನಡೆಯಬೇಕಿದ್ದ ಖಾಸಗಿ ಘಟನೆಯ ವಿಡಿಯೋವನ್ನು ಸೆರೆ ಹಿಡಿದಿದ್ದಾನೆ. ಗಂಡನಿಗೆ ತನು, ಮನವನ್ನೂ ಅರ್ಪಿಸಿದ ಗಂಡ ಖಾಸಗಿ ಕ್ಷಣದ ವಿಡಿಯೋ ಮಾಡಿದಾಗ ವಿರೋಧ ಮಾಡಬೇಕು ಎಂತಲೂ ಅನ್ನಿಸಿಲ್ಲ. ಆದರೆ, ಒಮ್ಮೆ ಈ ವಿಡಿಯೋವನ್ನು ಹೆಂಡತಿಗೆ ತೋರಿಸಿದ ಗಂಡ ಹಣಕ್ಕಾಗಿ ಬ್ಲಾಕ್ಮೇಲ್ ಮಾಡಲು ಆರಂಭಿಸಿದ್ದಾನೆ.
ಹೆಂಡತಿ ತನ್ನ ಬಳಿ ಹಣವಿಲ್ಲ ಎಂದಾಗ ತಾನು ಹೇಳಿದವರ ಜೊತೆ ಮಲಗು, ಅವರಿಂದ ನಾನು ಹಣ ಪಡೆಯುತ್ತೇನೆ ಎಂದು ಟಾರ್ಚರ್ ಕೊಟ್ಟಿದ್ದಾನೆ. ನೀನು ಇನ್ನೊಬ್ಬರ ಜೊತೆಗೆ ಮಲಗದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾನೆ. ಇದರೊಂದಿಗೆ ಗಂಡನೇ ತನ್ನ ಹೆಂಡತಿಯನ್ನು ಹತ್ತಾರು ಜನರಿಗೆ ತಲೆಹಿಡಿಯುವ ಕೆಲಸ ಮಾಡಿದ್ದಾರೆ. ಇದರಿಂದ ನೊಂದ ಮಹಿಳೆ ಅವರಿವರ ಕೈ-ಕಾಲು ಹಿಡಿದು ಪೊಲೀಸರಿಗೆ ದೂರು ನೀಡಿ ಕಿರುಕುಳದಿಂದ ಪಾರಾಗಬೇಕು ಎಂದು ಚಿಂತನೆ ಮಾಡಿ ಒಬ್ಬ ಪೊಲೀಸ್ ಕಾನ್ಸ್ಟೇಬಲ್ನನ್ನು ಸಂಪರ್ಕ ಮಾಡಿದ್ದಾಳೆ.
ವಿಡಿಯೋ ಡಿಲೀಟ್ ಮಾಡಿಸಿ, ಮಹಿಳೆ ಮೇಲೆ ಕಣ್ಣಾಕಿದ ಪೊಲೀಸ್:
ಸಂತ್ರಸ್ತ ಮಹಿಳೆ ಸಂಪರ್ಕ ಮಾಡಿದ್ದೇ ಈ ಪೋಲಿ ಪೊಲೀಸಪ್ಪ ಚಂದ್ರನಾಯಕ್ನನ್ನು. ಈ ಚಂದ್ರನಾಯಕ್ ತುಂಬಾ ನೊಂದಿದ್ದ ಸಂತ್ರಸ್ತ ಮಹಿಳೆಯ ಎಲ್ಲ ಕಷ್ಟಗಳನ್ನು ಆಲಿಸಿ ನೆರವು ನೀಡಲು ಮುಂದಾಗಿದ್ದಾನೆ. ಮಹಿಳೆಯ ಮನವಿಯಂತೆ ಆಕೆಯ ಗಂಡನ ಬಳಿಯಿದ್ದ ಖಾಸಗಿ ವಿಡಿಯೋವನ್ನು ಪೊಲೀಸ್ ಅಧಿಕಾರ ಬಳಸಿ ಡಿಲೀಟ್ ಮಾಡಿಸಿದ್ದಾನೆ. ನಂತರ, ಗಂಡ-ಹೆಂಡತಿ ಇಬ್ಬರನ್ನೂ ಕೂರಿಸಿ ರಾಜಿ ಮಾಡಿಸಿ ಇನ್ನುಮುಂದೆ ಇಂತಹ ಕೃತ್ಯ ಮಾಡದೇ ಸುಖ ಸಂಸಾರ ಮಾಡಿಕೊಂಡು ಹೋಗುವಂತೆ ಎಚ್ಚರಿಕೆ ನೀಡಿದ ಬಂದಿದ್ದಾನೆ. ಇದಾದ ನಂತರ ಮಹಿಳೆ ಮತ್ತು ಆಕೆಯ ಗಂಡನ ಜೊತೆಗೆ ವಿಶ್ವಾಸದಿಂದ ಇದ್ದ ಪೊಲೀಸಪ್ಪ, ಬರಬರುತ್ತಾ ಮಹಿಳೆಯ ಮೇಲೆ ಕಣ್ಣು ಹಾಕಿದ್ದಾನೆ.
ಕೊನೆಗೆ ಪೊಲೀಸಪ್ಪನೇ ಸಂತ್ರಸ್ತ ಮಹಿಳೆ ಪತಿಯ ಸಹಕಾರದಿಂದ ಆತನಿಗೆ ಒಂದಷ್ಟು ಹಣ ಕೊಟ್ಟು ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಲು ಮುಂದಾಗಿದ್ದಾನೆ. ತನಗೆ ಬೇಕೆನಿಸಿದಾಗಲೆಲ್ಲಾ ನೇರವಾಗಿ ಮಹಿಳೆಯ ಮನೆಗೆ ಹೋಗಿ ತನ್ನ ಲೈಂಗಿಕ ಕಾಮತೃಷೆ ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಇನ್ನು ತಲೆಹಿಡುಕ ಗಂಡನಿಗೆ ಪೊಲೀಸಪ್ಪನ ಸಹಕಾರ ಸಿಕ್ಕಿದ್ದೇ ತಡ, ಅವನೂ ಪುನಃ ಅನ್ಯ ಪುರುಷರೊಂದಿಗೆ ಹೆಂಡತಿಯನ್ನು ಮಲಗುವಂತೆ ಒತ್ತಾಹಿಸಿ ದೈಹಿಕ ಹಿಂಸೆ ನೀಡಲಾರಂಭಿಸಿದ್ದಾನೆ. ಈಗ ಮಹಿಳೆಯ ಸ್ಥಿತಿ ಬಾಣಲೆಯಿಂದ ಉರಿಯುವ ಬೆಂಕಿಗೆ ಬಿದ್ದಂತಾಗಿತ್ತು. ಕೊನೆಗೆ ತನ್ನ ಜೀವನಕ್ಕೆ ಯಾವುದೇ ದಾರಿ ಕಾಣದ ಮಹಿಳೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಬಳಿ ರಕ್ಷಣೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾಳೆ.
ಈ ಘಟನೆ ಇಡೀ ಕೌಟುಂಬಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಹುಟ್ಟಿದ ಮನೆಯನ್ನು ಬಿಟ್ಟು ಗಂಡನೊಂದಿಗೆ ಉತ್ತಮ ಜೀವನ ಕಟ್ಟಿಕೊಳ್ಳಬಯಸುವ ಒಬ್ಬ ಮಹಿಳೆಗೆ ಪುರುಷ ಪ್ರಧಾನ ಸಮಾಜದಿಂದ ಎಷ್ಟೆಲ್ಲಾ ಶೋಷಣೆ ಆಗುತ್ತಿದೆ ಎಂಬ ಚಿಂತನೆ ಬರುತ್ತದೆ. ಈ ಅಮಾನವೀಯ ಕೃತ್ಯ ಎಸಗಿದವರಿಗೆ ಸರಿಯಾದ ಕಾನೂನು ಶಿಕ್ಷೆ ಆಗಬೇಕೆಂಬುದು ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಯ ಆಶಯವಾಗಿದೆ.
