ಪತ್ನಿ ಆಗಾಗ ತವರು ಮನೆಗೆ ಹೋಗುತ್ತಾಳೆಂಬ ಕೋಪಕ್ಕೆ ಗಂಡನೊಬ್ಬ ಜೆಸಿಬಿ ಬಳಸಿ ಆಕೆಯ ತವರು ಮನೆಯನ್ನೇ ಧ್ವಂಸಗೊಳಿಸಲು ಯತ್ನಿಸಿದ ವಿಚಿತ್ರ ಘಟನೆ ಜಾರ್ಖಂಡ್‌ನ ಗಿರಿದ್‌ನಲ್ಲಿ ನಡೆದಿದೆ. ಗಂಡನ ಕಿರುಕುಳದಿಂದ ಬೇಸತ್ತು ತವರಿಗೆ ಬಂದಿದ್ದೆ ಎಂದು ಪತ್ನಿ ಆರೋಪಿಸಿದ್ದಾಳೆ.

ಮದುವೆಯಾಗಿ ಹೋಗುವಾಗ ಹೆಣ್ಣು ತನ್ನ ತವರು, ಅಪ್ಪ ಅಮ್ಮ, ತಾನು ಪ್ರೀತಿ ಮಾಡುವ ಶ್ವಾನ ತಂಗಿ ತಮ್ಮ ಹೀಗೆ ಪ್ರತಿಯೊಬ್ಬರನ್ನು ಬಿಟ್ಟು ಹೊಸದಂದು ಮನೆಗೆ ಕಾಲಿಡುತ್ತಾಳೆ. ಅಲ್ಲಿ ಆಕೆಗೆ ಪ್ರತಿಯೊಂದು ಹೊಸದ್ದು, ಹೊಸ ಜೀವನಕ್ಕೆ ಪ್ರವೇಶಿಸುವ ಆಕೆಗೆ ತಾನು ಇಷ್ಟು ದಿನ ಆಡಿ ಬೆಳೆದ ತವರು ಮನೆಯನ್ನು ಮರೆಯುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಹೆಣ್ಣಿನ ಪಾಲಿಗೆ ಸದಾ ತವರು ತಂಪು ತಂಪು ತವರಿಗೆ ಹೋಗುವುದೆಂದರೆ ಆಕೆ ಅದಕ್ಕಿಂತ ದೊಡ್ಡ ಖುಷಿ ಬೇರಿಲ್ಲ, ತವರಿನವರು ತನ್ನ ನೋಡಲು ಬಂದರೆ ಅವಳಷ್ಟು ಖುಷಿ ಪಡೋರು ಬೇರಿಲ್ಲ. ತನಗೆ ತವರು ನೀಡಿದ ಉಡುಗೊರೆಯ ಮೇಲೆ ಆಕೆಗೆ ತುಸು ಹೆಚ್ಚೇ ಎನ್ನುವಂತಹ ಅಕ್ಕರೆ. ಆದರೆ ಇಲ್ಲೊಂದು ಕಡೆ ಹೆಣ್ಣಿಗೆ ತವರಿನ ಮೇಲಿರುವ ವ್ಯಾಮೋಹವೇ ಗಂಡನ ಕೋಪಕ್ಕೆ ತುತ್ತಾಗಿದೆ. ಹೆಂಡ್ತಿ ಆಗಾಗ ತವರಿಗೆ ಹೋಗುತ್ತಾಳೆ ಎಂದು ಸಿಟ್ಟಿಗೆದ್ದ ಗಂಡ ಜೆಸಿಬಿ ತರಿಸಿ ಹೆಂಡ್ತಿ ತವರು ಮನೆಯಲ್ಲೇ ಬೀಳಿಸಿದ್ದಾನೆ. ಇಂತಹ ವಿಚಿತ್ರ ಘಟನೆ ನಡೆದಿರುವುದ ಜಾರ್ಖಂಡ್‌ನ ಗಿರಿಧ್‌ನಲ್ಲಿ.

Add Asianetnews Kannada as a Preferred SourcegooglePreferred

ಹೆಂಡ್ತಿ ತವರು ಮನೆಗೆ ಹೋಗಿ ವಾರಗಟ್ಟಲೇ ಉಳಿಯುತ್ತಾಳೆ ಎಂದು ಸಿಟ್ಟಿಗೆದ್ದ ಗಂಡ ಆಕೆಯ ತವರು ಮನೆಯ ಮೇಲೆಯೇ ಜೆಸಿಬಿ ಹತ್ತಿಸಿದ್ದಾನೆ. ಇದು ಅಲ್ಲಿನ ಸುತ್ತಮುತ್ತಲ ಹಳ್ಳಿಗಳ ಜನರಲ್ಲಿ ಭಯ ಆತಂಕ ಮೂಡಿಸಿದೆ. ಇದಕ್ಕಿದ್ದಂತೆ ಜೆಸಿಬಿ ಮನೆಯನ್ನು ಧ್ವಂಸಗೊಳಿಸುತ್ತಿರುವ ಸದ್ದು ಕೇಳಿ ಅಕ್ಕಪಕ್ಕದ ಮನೆಗಳ ನಿವಾಸಿಗಳೆಲ್ಲಾ ಅಲ್ಲಿಗೆ ಓಡಿಬಂದು ನೋಡಿದ್ದಾರೆ. ಅಲ್ಲಿ ಜನ ಸೇರುತ್ತಿದ್ದಂತೆ ಆ ಸೈಕೋ ಆರೋಪಿ ಅಲ್ಲಿಂದ ಓಡಿ ಹೋಗಿದ್ದಾನೆ. ನಂತರ ಆತನ ಪತ್ನಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಗಿರಿದ್ ಜಿಲ್ಲೆಯ ಜಮುವಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿರ್ಸಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯುವಕ ಮೊದಲಿಗೆ ಮನೆಯ ಅವರಣದ ಗೋಡೆ ಕೆಡವಿದ್ದಾನೆ. ಈ ಸದ್ದು ಕೇಳಿ ಅಕ್ಕಪಕ್ಕದ ಮನೆಯವರು ಬಂದಾಗ ಆತ ಜೆಸಿಬಿ ಜೊತೆ ಓಡಿ ಹೋಗಿದ್ದಾನೆ.

ಪಿಂಟು ಮಂಡಲ್ ಎಂಬಾತನೇ ಹೀಗೆ ಅತ್ತೆ ಮನೆಯನ್ನೇ ಕೆಡವಲು ಯತ್ನಿಸಿದ ಕೋಪಿಷ್ಟ ಗಂಡ. ಪಿಂಟುವಿನ ಪತ್ನಿ ಉರ್ಮಿಳಾ ಅವರ ತವರು ಮನೆ ಹಾಗೂ ಗಂಡನ ಮನೆ ತುಂಬಾ ದೂರವೇನು ಇಲ್ಲ, ಉರ್ಮಿಳಾ ಅವರನ್ನು ಊರಿನಲ್ಲೇ ಇರುವ ಹುಡುಗನಿಗೆ ಮದುವೆ ಮಾಡಿಕೊಡಲಾಗಿದೆ. ಹೀಗಾಗಿ ಘಟನೆ ನಡೆದ ಸ್ಥಳಕ್ಕಿಂತ ಸ್ವಲ್ಪ ದೂರ ಇರುವ ಚುಂಗ್ಲೋ ಎಂಬಲ್ಲಿ ಉರ್ಮಿಳಾ ಗಂಡನ ಮನೆ ಇದೆ. ಗಂಡ ಪಿಂಟು ದಿನವೂ ಕುಡಿದು ಮನೆಗೆ ಬಂದು ಹೊಡೆಯುತ್ತಾನೆ ಇದೇ ಕಾರಣಕ್ಕೆ ತಾನು ಇಬ್ಬರು ಮಕ್ಕಳ ಜೊತೆಗೆ ತವರು ಮನೆಗೆ ಬಂದಿದ್ದೇನೆ. ಆಗಾಗ ಹೋಗಿ ಅತ್ತೆ ಮಾವನವರನ್ನು ಮಾತನಾಡಿಸಿಕೊಂಡು ಬರುತ್ತೇನೆ ಎಂದು ಉರ್ಮಿಳಾ ದೂರಿದ್ದಾರೆ.

ಇದನ್ನೂ ಓದಿ: ಚೈನೀಸ್ ಎಂದು ನಿಂದನೆ: ವಿರೋಧಿಸಿದಕ್ಕೆ ಚಾಕು ಇರಿತ: ನಾನು ಭಾರತೀಯ ಎಂದು ಹೇಳಿ ಕೊನೆಯುಸಿರೆಳೆದ ತ್ರಿಪುರಾ ವಿದ್ಯಾರ್ಥಿ

ರಾತ್ರಿ ಈ ಘಟನೆ ನಡೆದಿದ್ದು, ಘಟನೆ ನಡೆಯುವ ವೇಳೆ ಹಲವು ಜನರು ಪಿಂಟು ಜೊತೆ ಇದ್ದರು ಎಂದು ಉರ್ಮಿಳಾ ತಂದೆ ಹೇಳಿದ್ದಾರೆ. ಪತಿ ಪತ್ನಿಯ ನಡುವಿನ ಜಗಳದಲ್ಲಿ ಆವರಣ ಗೋಡೆ ಒಡೆದಿದೆ ಎಂದು ಜಮುವಾ ಪೊಲೀಸ್ ಠಾಣಾಧಿಕಾರಿ ವಿಭೂತಿದೇವ್ ಕುಮಾರ್ ತಿಳಿಸಿದ್ದಾರೆ. ಪಿಂಟು ಮಂಡಲ್ ಎಂಬ ಯುವಕ ಮನೆಯ ಆವರಣ ಗೋಡೆ ಒಡೆದಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು, ಆದರೆ ಆರೋಪಿ ಪಿಂಟು ಮಂಡಲ್ ಪರಾರಿಯಾಗಿದ್ದ. ಪ್ರಕರಣವು ಕೌಟುಂಬಿಕ ವಿವಾದವಾಗಿರುವುದರಿಂದ, ಇನ್ನೂ ಯಾವುದೇ ಲಿಖಿತ ದೂರು ದಾಖಲಿಸಿಲ್ಲ. ಅರ್ಜಿ ಸ್ವೀಕರಿಸಿದ ತಕ್ಷಣ, ಎಫ್‌ಐಆರ್ ದಾಖಲಿಸಲಾಗುವುದು ಮತ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಮುವಾ ಠಾಣೆ ಅಧಿಕಾರಿ ವಿಭೂತಿದೇವ್ ಹೇಳಿದ್ದಾರೆ.

ಇದನ್ನೂ ಓದಿ: ಕಣ್ಣಿಲ್ಲದ ತಾಯಿಗೆ ಕರುಳಬಳ್ಳಿಯ ಕಾವಲು: ಕಣ್ಣು ಕಾಣದೇ ಹೋದರು ತನ್ನ ಹೆಣ್ಣು ಮಕ್ಕಳ ಆರೈಕೆಯಿಂದ ಐದು ವರ್ಷಗಳ ಕಾಲ ಬದುಕಿದ ಸಿಂಹಿಣಿ