ಬಡ ಚಾಲಕನ ಮಗನೊಬ್ಬ ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಸಂಬಳದ ಉದ್ಯೋಗವನ್ನು ತಿರಸ್ಕರಿಸಿದ್ದಾನೆ. ತನ್ನ ತಂದೆ ಇತರ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯುವುದನ್ನು ನೋಡಿ, ತಾನು ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿ ಅಧಿಕಾರಿಯಾಗಿ, ತಂದೆ ತಲೆ ಎತ್ತಿ ನಡೆಯುವಂತೆ ಮಾಡುವುದೇ ತನ್ನ ಗುರಿ ಎಂದು ಆ ಯುವಕ ಹೇಳಿಕೊಂಡಿದ್ದಾನೆ. ಈತನ ಛಲದ ಕಥೆ ಕೇಳಿ ಅಮಿತಾಭ್ ಬಚ್ಚನ್ ಕೂಡ ಭಾವುಕರಾದರು.

ತಿಂಗಳಿಗೆ ಒಂದೂವರೆ ಲಕ್ಷದ ಸಂಬಳದ ಉದ್ಯೋಗ ಸಿಗುತ್ತದೆ ಎಂದರೆ ಬಹುಶಃ ಯಾವ ಯುವಕರೂ ಅದನ್ನು ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ. ತಮ್ಮ ಶಿಕ್ಷಣಕ್ಕೆ ಈ ಸಂಬಳ ಕಡಿಮೆ ಆಯಿತು ಎಂದು ಎನ್ನಿಸಿದರೂ, ಆ ಕ್ಷಣದಲ್ಲಿ, ಉದ್ಯೋಗ ಬೇಡ ಎನ್ನುವ ತೀರ್ಮಾನ ಮಾಡುವುದೇ ಇಲ್ಲ. ಅದರಲ್ಲಿಯೂ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇರುವಾಗ, ಒಂದೂವರೆ ಲಕ್ಷ ಎನ್ನುವುದು ಅವರಿಗೆ ಕೋಟಿ ಕೋಟಿಯ ಸಮಾನವೇ. ನೂರಾರು ರೂಪಾಯಿಗಳನ್ನೇ ಕಣ್ತುಂಬ ನೋಡದ ಮನೆಯಲ್ಲಿ ತಿಂಗಳಿಗೆ ಲಕ್ಷ ಲಕ್ಷ ಬರುತ್ತೆ ಎಂದರೆ, ಅದು ಯಾವ ಪರಿಯಲ್ಲಿ ಸಂತೋಷ ತರುತ್ತದೆ ಎನ್ನುವುದು ಬರಿಯ ಶಬ್ದಗಳಲ್ಲಿ ಬಣ್ಣಿಸಲಾಗದ ಮಾತೇ.

ಆದರೆ ಇಲ್ಲೊಬ್ಬ ಬಡ ಡ್ರೈವರ್​ ಪುತ್ರ, ಒಂದೂವರೆ ಲಕ್ಷ ರೂಪಾಯಿ ಸಂಬಳದ ಉದ್ಯೋಗ ಸಿಕ್ಕರೂ ಅದನ್ನು ಒಪ್ಪಿಕೊಳ್ಳಲಿಲ್ಲ. ಆ ಒಂದೂವರೆ ಲಕ್ಷ ಎನ್ನುವುದು ಆ ಮನೆಯನ್ನು ಅದೆಷ್ಟೋ ಪಾಲಿಗೆ ಸ್ವರ್ಗ ಮಾಡಬಹುದಿತ್ತು. ಆದರೂ ಅದನ್ನು ಆ ಮಗ ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಕಾರಣ ಮಾತ್ರ ತುಂಬಾ ರೋಚಕ. ಇದನ್ನು ಕೌನ್​ ಬನೇಗಾ ಕರೋರ್​ಪತಿಯನ್ನು ನಟ ಅಮಿತಾಭ್​ ಬಚ್ಚನ್​ ಅವರು ಪ್ರಶ್ನಿಸಿದಾಗ, ಆ ಯುವಕ ಕೊಟ್ಟ ಉತ್ತರಕ್ಕೆ ಒಂದು ಕ್ಷಣ ಬಿಗ್​ ಬಿನೇ ಮೌನಕ್ಕೆ ಜಾರಿದರು. ಅಬ್ಬಾ ಅದೆಂಥ ಛಲ, ಕುಟುಂಬದ ಬಗ್ಗೆ ಅದೆಂಥ ಒಲವು ಎಂದು ನಟ ಭಾವುಕರಾದರು.

UPSC ಪರೀಕ್ಷೆಯ ಛಲ

ಅಷ್ಟಕ್ಕೂ ಆ ಯುವಕ, ಉದ್ಯೋಗ ಒಪ್ಪಿಕೊಳ್ಳದೇ ಇರಲು ಕಾರಣ, UPSC ಪರೀಕ್ಷೆಯನ್ನು ಬರೆದು ಪಾಸ್​ ಮಾಡುವುದಕ್ಕಾಗಿ! ಅದರಲ್ಲೇನು ವಿಶೇಷ ಅಂತೀರಾ? ಅಲ್ಲೇ ಇರೋದು ವಿಶೇಷ. ಯುಪಿಎಸ್ಸಿ ಪರೀಕ್ಷೆ ಬರೆದು ಪಾಸ್​ ಆದರೂ ಅವರಿಗೆ ಒಂದೂವರೆ ಲಕ್ಷದ ಉದ್ಯೋಗವೇ ಸಿಗಬಹುದು, ಇಲ್ಲವೇ ಕಡಿಮೆಯೇ ಇರಬಹುದು. ಆದರೆ ಈ ಯುವಕನಿಗೆ ಅದು ಮ್ಯಾಟರೇ ಆಗಿಲ್ಲ. ಏಕೆಂದರೆ ಅವನಿಗೆ ಅಪ್ಪ ತಲೆ ಎತ್ತಿ ತಿರುಗುವಂತೆ ಮಾಡಬೇಕಿತ್ತು. ಅದು ಸಾಧ್ಯವಾಗುವುದು ಸರ್ಕಾರಿ ನೌಕರಿಯಿಂದ ಮಾತ್ರ ಎನ್ನುವುದು ಆತನ ಮಾತು.

'ಅಪ್ಪ ಸೆಲ್ಯೂಟ್​ ಹೊಡೆದದ್ದು ಸಾಕು'

'ನಾನು ಇರುವ ಗ್ರಾಮದಲ್ಲಿ ಸರ್ಕಾರಿ ನೌಕರರಿಗೆ ತುಂಬಾ ಗೌರವ ಕೊಡುತ್ತಾರೆ. ನನ್ನ ಅಪ್ಪ ಡ್ರೈವರ್​ ಆಗಿ ಹಲವು ಸರ್ಕಾರಿ ನೌಕರರ ಕಾರುಗಳಿಗೆ ಡ್ರೈವರ್​ ಆಗಿದ್ದಾರೆ. ದಿನವೂ ಅವರು ಆ ಸರ್ಕಾರಿ ಅಧಿಕಾರಿಗಳಿಗೆ ಸೆಲ್ಯೂಟ್​ ಹೊಡೆಯುವುದು, ಕಾರಿನ ಬಾಗಿಲು ತೆರೆಯುವುದು, ಅವರ ಎದುರು ತಲೆ ಬಗ್ಗಿಸಿ ನಿಲ್ಲುವ ಕೆಲಸವಷ್ಟೇ. ಆ ದಿನಗಳು ಸಾಕೆಂದು ನನಗೆ ಎನ್ನಿಸಿತು. ನಾನೂ ಸರ್ಕಾರಿ ನೌಕರನಾಗಿ ಅಪ್ಪ ತಲೆ ಎತ್ತಿ ತಿರುಗುವಂತೆ ಮಾಡುವುದು ನನ್ನ ಧ್ಯೇಯ. ಅಧಿಕಾರಿಗಳು ಬಂದಾಗ ಡ್ರೈವರ್​ ಆಗಿ ಸೆಲ್ಯೂಟ್ ಮಾಡುವ ನನ್ನ ಅಪ್ಪನನ್ನು ಎಲ್ಲರೂ ಸೆಲ್ಯೂಟ್​ ಮಾಡಬೇಕು ಎನ್ನುವುದು ನನ್ನ ಆಸೆ. ಅದಕ್ಕಾಗಿಯೇ ಉದ್ಯೋಗ ಒಪ್ಪಿಕೊಳ್ಳಲಿಲ್ಲ. ಯುಪಿಎಸ್ಸಿ ಪರೀಕ್ಷೆ ಪಾಸ್​ ಮಾಡುವುದೇ ನನ್ನ ಧ್ಯೇಯ' ಎಂದಿದ್ದಾರೆ.​ ಎಂಥ ಮಾತು ಎಂದು ಅಮಿತಾಭ್​ ಬಚ್ಚನ್​ ಭಾವುಕರಾದರು. ಅಲ್ಲಿಯೇ ಇದ್ದ ಅಪ್ಪನ ಕಣ್ಣು ಕೂಡ ತೇವಗೊಂಡವು.