ಕೋಲ್ಕತ್ತಾದ 19 ವರ್ಷದ ರಾಖಿ ದತ್ತಾ, ಗಂಭೀರ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ತಂದೆಯ ಜೀವ ಉಳಿಸಲು ತನ್ನ ಯಕೃತ್ತಿನ 65% ಭಾಗವನ್ನು ದಾನ ಮಾಡಿದ್ದಾಳೆ. ಹೆಣ್ಣುಮಕ್ಕಳನ್ನು ಹೊರೆ ಎಂದು ಪರಿಗಣಿಸುವ ಮನಸ್ಥಿತಿಗೆ ಸವಾಲೆಸೆಯುವ ಈ ಸ್ಪೂರ್ತಿದಾಯಕ ಘಟನೆಯು, ಮಗಳ ನಿಸ್ವಾರ್ಥ ಪ್ರೀತಿ ಮತ್ತು ತ್ಯಾಗಕ್ಕೆ ಸಾಕ್ಷಿಯಾಗಿದೆ.

ಸಮಾಜದಲ್ಲಿ ಇನ್ನೂ ಕೆಲವು ಜನರು ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳನ್ನು ಹೆಚ್ಚಾಗಿ ಮುದ್ದಿಸುವ ಮತ್ತು ಹೆಣ್ಣನನು ಹೊರೆಯೆಂದು ಪರಿಗಣಿಸುವ ಜನರಿದ್ದಾರೆ. ಕೆಲವು ಅಪ್ಪ-ಅಮ್ಮಂದಿರಿಗೆ ಹೆಣ್ಣು ಮಕ್ಕಳು ಎಷ್ಟು ಮಾಡಿದರೂ ಸಾಲುವುದಿಲ್ಲ. ಒಂದು ಗಂಡು ಮಗು ಇದ್ದರೆ ಎಷ್ಟು ಚೆನ್ನಾಗಿತ್ತು ಎನ್ನುವವರೇ. ಆದರೆ ಅದೆಷ್ಟೋ ಮನೆಗಳಲ್ಲಿ ಗಂಡು ಹೆತ್ತವರ ಪಾಡು ದೇವರಿಗೇ ಪ್ರೀತಿ. ಒಂದಾದರೂ ಹೆಣ್ಣುಮಗು ಇದ್ದರೆ ನನಗೆ ಆಸರೆಯಾಗುತ್ತಿದ್ದಳೇನೋ ಎನ್ನುವವರೂ ಇದ್ದಾರೆ. ಒಟ್ಟಿನಲ್ಲಿ ಯಾವುದು ಇದ್ಯೋ ಅದು ಬೇಡ ಅಷ್ಟೇ. ಅದೇನೇ ಇದ್ದರೂ ಗಂಡಿಗೆ ಹೋಲಿಸಿದರೆ ಹೆಣ್ಣಿನ ಬಗ್ಗೆ ಹೆಚ್ಚಿನ ಕುಟುಂಬದಲ್ಲಿ ಅಷ್ಟಕ್ಕಷ್ಟೇ ಎನ್ನುವ ಭಾವನೆ ಇದೆ. ಹೇಗಿದ್ದರೂ ಅವಳು ಬೇರೆಯವಳ ಸ್ವತ್ತು ಎನ್ನುವ ಮನೋಭಾವ.

ಯಕೃತ್ತು ಕಾಯಿಲೆ

ಕಳೆದ ಕೆಲವು ವರ್ಷಗಳಲ್ಲಿ ಈ ಮನಸ್ಥಿತಿ ಬದಲಾಗಿದ್ದರೂ, ಕೋಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ ಘಟನೆಯು ಹೆಣ್ಣುಮಕ್ಕಳನ್ನು ಹೊರೆಯೆಂದು ಪರಿಗಣಿಸುವವರ ಮನಸ್ಥಿತಿಯನ್ನು ಖಂಡಿತವಾಗಿಯೂ ಬದಲಾಯಿಸುತ್ತದೆ. ಕೋಲ್ಕತ್ತಾದ ನಿವಾಸಿ 19 ವರ್ಷದ ರಾಖಿ ದತ್ತಾ ಅವರ ತಂದೆ ಗಂಭೀರ ಯಕೃತ್ತಿನ (Liver) ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ವೈದ್ಯರು ಯಕೃತ್ತು ಕಸಿ ಮಾಡಿಸಿಕೊಂಡರೆ ಮಾತ್ರ ಬದುಕಲು ಸಾಧ್ಯ ಎಂದರು. ಆದರೆ ಲಿವರ್​ ದಾನವಾಗಿ ಪಡೆಯುವುದು ಸುಲಭದ ಮಾತಲ್ಲ. ಅಂಗಾಂಗ ದಾನವನ್ನು ಮಾಡುವಾಗ ಕೆಲವೊಮ್ಮೆ ದುಡ್ಡು ಸುರಿದರೂ ಸೂಕ್ತ ಅಂ ಸಿಗುವುದಿಲ್ಲ. ಆದ್ದರಿಂದ ಸಂಬಂಧಿಗಳಲ್ಲಿಯೇ ಅಂಗಾಂಗ ಹುಡುಕುವುದು ಇದೆ.

ಯೋಚಿಸದ ಮಗಳು

ಈ ಪ್ರಕರಣದಲ್ಲಿ ತನ್ನ ತಂದೆಯ ಜೀವವನ್ನು ಉಳಿಸಲು ರಾಖಿ ಹಿಂದೆ ಮುಂದೆ ಯೋಚಿಸಲಿಲ್ಲ. ತಂದೆಗೆ ಯಕೃತ್ತು ನೀಡಲು ಮುಂದಾದಳು. ಇದು ಕೆಲವೊಮ್ಮೆ ಜೀವಕ್ಕೂ ಕುತ್ತು ತರಬಹುದು. ಕೆಲವೊಮ್ಮೆ ಚಿಕಿತ್ಸೆ ಮಾಡುವಾಗ ಪ್ರಾಣ ಹೋಗುವ ಸಾಧ್ಯತೆ ಇದ್ದು, ವೈದ್ಯರು ಸ್ವಲ್ಪವೇ ಎಡವಟ್ಟು ಮಾಡಿದರೂ ಅಂಗಾಂಗ ಪಡೆದ, ತೆಗೆದುಕೊಂಡ ಇಬ್ಬರ ಪ್ರಾಣಪಕ್ಷಿಯೂ ಹಾರಿಹೋದ ಘಟನೆಗಳು ನಡೆದಿವೆ. ಇವೆಲ್ಲ ಗೊತ್ತಿದ್ದರೂ ಅಪ್ಪನ ಜೀವ ಉಳಿಸಲು ಮಗಳು ಯಕೃತ್ತು ದಾನಕ್ಕೆ ಮುಂದಾದಳು.

65 ಪ್ರತಿಶತ ದಾನ

ಕೊನೆಗೆ, ಮಗಳು ರಾಖಿ ತನ್ನ ಭವಿಷ್ಯವನ್ನು ಲೆಕ್ಕಿಸದೆ, ತನ್ನ ಯಕೃತ್ತಿನ 65 ಪ್ರತಿಶತವನ್ನು ತನ್ನ ತಂದೆಗೆ ದಾನ ಮಾಡಿದಳು. ಈ ಕೃತ್ಯವು ತನ್ನ ತಂದೆಯ ಜೀವವನ್ನು ಉಳಿಸಿತು. ಇಂದು, ಜನರು ರಾಖಿಯ ಈ ಕ್ರಮವನ್ನು ಶ್ಲಾಘಿಸುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಹೊರೆಯೆಂದು ಪರಿಗಣಿಸುವವರ ಮನಸ್ಥಿತಿಯನ್ನು ಇದು ಬದಲಾಯಿಸಬಹುದು ಎಂದು ಜನರು ಹೇಳುತ್ತಾರೆ. ಉದ್ಯಮಿ ಹರ್ಷ ಗೋಯೆಂಕಾ ಟ್ವಿಟರ್‌ನಲ್ಲಿ ಈ ವಿಷಯ ಹಂಚಿಕೊಂಡಿದ್ದರಿಂದ ಇದು ಬೆಳಕಿಗೆ ಬಂದಿದೆ. ಇದು ಯಕೃತ್ತು ದಾನದ ಸ್ಫೂರ್ತಿದಾಯಕ ಘಟನೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ವೈರಲ್ ಆಗುತ್ತಲೇ ಎಷ್ಟೋ ಮಂದಿ ತಮಗೆ ಹೆಣ್ಣುಮಕ್ಕಳೇ ಮಾಡಿರುವ ನೆರವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಮಗಳು ಹುಟ್ಟಿದರೆ ಅಸಡ್ಡೆ ತೋರುತ್ತಾರೆ, ಆದರೆ ಎಷ್ಟೋ ಮನೆಗಳಲ್ಲಿ ಅಪ್ಪ-ಅಮ್ಮಂದಿರನ್ನು ನೋಡಿಕೊಳ್ಳುವುದು ಹೆಣ್ಣುಮಕ್ಕಳೇ ಎನ್ನುತ್ತಿದ್ದಾರೆ.