ಒರಾಕಲ್ ಕಂಪೆನಿಯಿಂದ ವಜಾಗೊಂಡ ಬೆಂಗಳೂರಿನ ಟೆಕ್ಕಿಯೊಬ್ಬರು 14 ವರ್ಷಗಳ ಸೇವೆ ನಂತರ ಕ್ಯಾಬ್ ಡ್ರೈವರ್ ಆಗಿ ಹೊಸ ಜೀವನ ಆರಂಭಿಸಿದ್ದಾರೆ. ಪೂರ್ವ ಉಳಿತಾಯ ಮತ್ತು ಸರಿಯಾದ ಹಣಕಾಸು ಯೋಜನೆಯಿಂದಾಗಿ ಅವರು ಈಗ ಒತ್ತಡವಿಲ್ಲದೆ ಸಂತೋಷದ ಜೀವನ ನಡೆಸುತ್ತಿದ್ದು, ಅವರ ಕಥೆ ಅನೇಕರಿಗೆ ಸ್ಫೂರ್ತಿಯಾಗಿದೆ.
ಒರಾಕಲ್ ಕಂಪೆನಿ ಇದಾಗಲೇ 30 ಸಾವಿರಕ್ಕೂ ಅಧಿಕ ತನ್ನ ಉದ್ಯೋಗಿಗಳನ್ನು ವಜಾ ಮಾಡಿದೆ. ನಸುಕಿನಲ್ಲಿಯೇ ಇ-ಮೇಲ್ ಕಳುಹಿಸುವ ಮೂಲಕ ಕೆಲಸಕ್ಕೆ ಬರಬೇಡಿ ಎಂದು ಹೇಳಿದೆ. ಇದರಿಂದ ಬಹುತೇಕ ಎಲ್ಲಾ ಎಂಜಿನಿಯರ್ಸ್ ಮುಂದಿನ ದಾರಿ ತೋರದೇ ತಲೆಯಮೇಲೆ ಕೈಹೊತ್ತು ಕುಳಿತಿದ್ದಾರೆ. ಅಷ್ಟಕ್ಕೂ ಇದು Oracle ಕಂಪೆನಿಯ ಒಂದೇ ಮಾತಲ್ಲ. AI ಟೆಕ್ನಾಲಾಜಿ ಕ್ಷೇತ್ರಕ್ಕೆ ಕಾಲಿಟ್ಟಮೇಲೆ ಇದಾಗಲೇ ಲಕ್ಷಾಂತರ ಸಾಫ್ಟ್ವೇರ್ ಎಂಜಿನಿಯರ್ಸ್ ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ. ಯಾವಾಗ, ಏನು ಬೇಕಾದರೂ ಆಗಬಹುದು ಎನ್ನುವ ಸ್ಥಿತಿ ಅವರದ್ದು. ಈಗ ಎಂಜಿನಿಯರಿಂಗ್ ಡಿಗ್ರಿ ಪಡೆಯುತ್ತಿರುವ ಹಲವರು ಕೂಡ ಚಿಂತಾಕ್ರಾಂತರಾಗಿದ್ದಾರೆ. ಕೆಲವೇ ಸಾವಿರ ರೂಪಾಯಿಗಳಿಗೆ ದುಡಿಯುವ ಸ್ಥಿತಿಯೂ ಇದೀಗ ನಿರ್ಮಾಣವಾಗಿದೆ.
ಒರಾಕಲ್ನ ಕೆಲಸ ಕಳೆದುಕೊಂಡ ಉದ್ಯೋಗಿ
ಇವೆಲ್ಲವುಗಳ ನಡುವೆಯೇ ಒರಾಕಲ್ನ ಕೆಲಸ ಕಳೆದುಕೊಂಡ ಉದ್ಯೋಗಿಯೊಬ್ಬನ ಸೋಷಿಯಲ್ ಮೀಡಿಯಾ ಪೋಸ್ಟ್ ನೋಡಿದ ಎಷ್ಟೋ ಮಂದಿ ತಾವೂ ಕೆಲಸ ಬಿಟ್ಟರೆ ಒಳ್ಳೆಯದು ಎಂದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ, 14 ವರ್ಷ ಸೇವೆಯ ಬಳಿಕ ಕೆಲಸ ಕಳೆದುಕೊಂಡಿರುವ ಆ ಟೆಕಿ ಹಾಕಿರುವ ಪೋಸ್ಟ್. ಒರಾಕಲ್ನಲ್ಲಿ ಕೆಲಸ ಕಳೆದುಕೊಂಡಿರುವ ಬೆಂಗಳೂರು ಟೆಕಿ ಈಗ ಕ್ಯಾಬ್ ಡ್ರೈವರ್ ಆಗಿದ್ದಾರೆ. ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈಗ ಲೈಫ್ ಎಷ್ಟು ಸುಂದರವಾಗಿದೆ ಎಂದು ಬರೆದುಕೊಂಡಿದ್ದಾರೆ. ಯಾವುದೇ ಭಯವಿಲ್ಲ, ಒತ್ತಡವಿಲ್ಲ, ಮತ್ತು ಸೋಷಿಯಲ್ ಮೀಡಿಯಾದಲ್ಲಿ ಗೋಳೋ ಎಂದು ಅಳುವ ಪ್ರಮೇಯವೂ ಇಲ್ಲ ಎಂದಿದ್ದಾರೆ ಇವರು.
ಸ್ನೇಹಿತನ ಬಗ್ಗೆ ಮಾತು
ಭುವನೇಶ್ವರ ಮೂಲದ ಈ ಸಾಫ್ಟ್ವೇರ್ ಎಂಜಿನಿಯರ್, ಇವರ ಬಗ್ಗೆ ಸ್ನೇಹಿತ ಸತ್ಯಾ ನಾಯಕ್ ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಾಗಲೇ ಆತ ಎರಡು ಜಂಟಿ ಖಾತೆಗಳಲ್ಲಿ ತಲಾ 15 ಲಕ್ಷ ರೂಪಾಯಿಗಳ ಅಂಚೆ ಸ್ಥಿರ ಠೇವಣಿ ಹೊಂದಿದ್ದಾನೆ. ಒಂದು ತನ್ನ ಹೆತ್ತವರ ಹೆಸರಿನಲ್ಲಿ, ಇನ್ನೊಂದು ದಂಪತಿ ಹೆಸರಲ್ಲಿ. ಇವುಗಳಿಂದ ಆತನಿಗೆ ಪ್ರತಿ ತಿಂಗಳು ಸುಮಾರು 28 ಸಾವಿರ ರೂಪಾಯಿ ಬಡ್ಡಿ ಬರುತ್ತಿದೆ ಅವನು ಕೆಲವು ಭಾರತೀಯ ಬ್ಯಾಂಕುಗಳಲ್ಲಿ ಸುಮಾರು 30 ಲಕ್ಷ ಮೌಲ್ಯದ ಸ್ಥಿರ ಠೇವಣಿಗಳನ್ನು ಹೊಂದಿದ್ದು, ಇದರಿಂದ 15 ಸಾವಿರ ರೂಪಾಯಿ ಬರುತ್ತಿದೆ.
ಕ್ಯಾಬ್ ಡ್ರೈವರ್
ಅವನು ಈಗ ತನ್ನ ಹೆತ್ತವರೊಂದಿಗೆ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾನೆ. ಅವನಿಗೆ ಹೇಗೆ ಚಾಲನೆ ಮಾಡಬೇಕೆಂದು ತಿಳಿದಿದೆ, ಆದ್ದರಿಂದ ಅವನು ತಕ್ಷಣ ತನ್ನ ಸ್ವಂತ ಅನುಕೂಲಕ್ಕೆ ತಕ್ಕಂತೆ ಉಬರ್ ಚಾಲಕನಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾನೆ. ಅವನಿಗೆ ಅದರಿಮದ 50 ಸಾವಿರ ರೂಪಾಯಿವರೆಗೂ ಬರುತ್ತಿದೆ. ಕೆಲಸ ಮಾಡುವ ಸಮಯದಲ್ಲಿ ಒಂದಿಷ್ಟು ಕೂಡಿಟ್ಟಿರುವ ಕಾರಣ ಅವನ ಲೈಫ್ ಈಗ ಕೂಲ್ ಕೂಲ್ ಆಗಿದೆ ಎನ್ನುತ್ತಿದ್ದಾನೆ. ಕೆಲಸ ಬಿಟ್ಟ ಮೇಲೆ ಜೀವನ ಎಷ್ಟು ಸುಂದರ ಎಂದು ಆತನಿಗೆ ಅನ್ನಿಸತೊಡಗಿದೆ ಎಂದಿದ್ದಾರೆ ಸತ್ಯ.
ದುಂದು ವೆಚ್ಚಕ್ಕೆ ಇಲ್ಲ ಆಸ್ಪದ
ಅವನಿಗೆ ಯಾವುದೇ ಮೆಟ್ರೋ ನಗರದ ಫ್ಲಾಟ್ಗೆ ಯಾವುದೇ ಇಎಂಐಗಳು ಮತ್ತು ಸಾಲಗಳಿಲ್ಲ. ಅದೇ ಸಮಯದಲ್ಲಿ, ಅವನು ತನ್ನ ಪೋಷಕರ ಸಹಾಯದಿಂದ ಸಣ್ಣ ವ್ಯವಹಾರವನ್ನು ಪ್ರಾರಂಭಿಸಲು ಶಾಂತವಾಗಿ ಯೋಜಿಸುತ್ತಿದ್ದಾನೆ. ತನ್ನ ದುಡಿಮೆಯನ್ನು ಆತ ಎಂದಿಗೂ ದುಂದು ವೆಚ್ಚ ಮಾಡಲಿಲ್ಲ. ಆದ್ದರಿಂದ ಇವೆಲ್ಲಾ ಸಾಧ್ಯವಾಯಿತು ಎಂದಿದ್ದಾರೆ. ಈ ಮಾತನ್ನು ಕೇಳಿದ ಹಲವರು ಕೆಲಸ ಮಾಡುವ ಸಮಯದಲ್ಲಿ ಒಂದಿಷ್ಟು ಕೂಡಿಟ್ಟರೆ ಎಷ್ಟು ಪ್ರಯೋಜನ ಎನ್ನುತ್ತಿದ್ದರೆ, ಮತ್ತೆ ಕೆಲವರು, ನಾನೂ ಸಾಕಷ್ಟು ಹಣ ಡಿಪಾಸಿಟ್ ಮಾಡಿದ್ದೇನೆ. ಕೆಲಸ ಬಿಡುವ ಯೋಚನೆ ಮಾಡುತ್ತಿದ್ದೇನೆ ಎನ್ನುತ್ತಿದ್ದಾರೆ.


