ಅಭಿಜೀತ್ ದಿಪ್ಕೆ ಸ್ಥಾಪಿಸಿದ ಕಾಕ್ರೋಚ್ ಜನತಾ ಪಾರ್ಟಿ (CJP) ಸೋಷಿಯಲ್ ಮೀಡಿಯಾದಲ್ಲಿ 2 ಕೋಟಿಗೂ ಹೆಚ್ಚು ಫಾಲೋವರ್ಸ್ ಗಳಿಸಿ, ಬಿಜೆಪಿ ವಿರೋಧಿ ನಿಲುವು ತಾಳಿದೆ. ಇದು ಯುವಕರ ನಿರುದ್ಯೋಗದ ಹತಾಶೆಯ ಧ್ವನಿ ಎಂದು ಹೇಳಲಾಗುತ್ತಿದ್ದರೂ, ಭಾರತದಲ್ಲಿ ಅಶಾಂತಿ ಮೂಡಿಸುವ ವಿದೇಶಿ ಪಿತೂರಿಯೇ ಎಂಬ ಅನುಮಾನಗಳೂ ವ್ಯಕ್ತವಾಗಿವೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರುವುದು ಕಾಕ್ರೋಚ್ ಜನತಾ ಪಾರ್ಟಿ (CJP). ಬಿಜೆಪಿಯ ಫಾಲೋವರ್ಸ್ ಅನ್ನು ಮೀರಿ 2 ಕೋಟಿಗೂ ಅಧಿಕ ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿ ಕೆಲವೇ ದಿನಗಳಲ್ಲಿ ದಾಖಲೆ ಬರೆದಿದೆ ಈ ಪಾರ್ಟಿ. ಮುಖ್ಯ ನ್ಯಾಯಮೂರ್ತಿ ಅವರು ಕೆಲವು ನಿರುದ್ಯೋಗಿಗಳು ಕೆಲಸಕ್ಕೆ ಬಾರದ ಪ್ರತಿಭಟನೆ, ಸೋಷಿಯಲ್ ಮೀಡಿಯಾ ಎಂದೆಲ್ಲಾ ಸಮಯ ವ್ಯರ್ಥ ಮಾಡುತ್ತಿದ್ದು, ಜಿರಳೆ ರೀತಿಯಾಗಿದ್ದಾರೆ ಎನ್ನುವ ಹೇಳಿಕೆಯಿಂದ ಆಕ್ರೋಶಗೊಂಡು ತಾವು ಇಂಥದ್ದೊಂದು ಪಕ್ಷ ಕಟ್ಟಿದೆವು ಎನ್ನುವುದು ಸಿಜೆಪಿಯ ಮಾತು. ಅಂದಹಾಗೆ ಇದರ ರೂವಾರಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಪುಣೆ ಮೂಲದ ಅಭಿಜೀತ್ ದಿಪ್ಕೆ.

ಅಮೆರಿಕದಲ್ಲಿಯೇ ಕುಳಿತು ತಮ್ಮ ದೇಶ ಭಾರತಕ್ಕೆ ಒಳಿತಾಗಬೇಕು ಎಂದು ಹಾಕಿರುವ ಎಲ್ಲಾ ವಿಡಿಯೋಗಳಲ್ಲಿಯೂ ಇರುವುದು ಹಾಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ. 2027ರಿಂದಲೇ ತಮ್ಮ ಪಕ್ಷ ಚುನಾವಣೆಗೆ ನಿಲ್ಲುವುದಾಗಿ ಘೋಷಣೆಯೊಂದಿಗೆ ಕಾರ್ಯಕ್ಕೆ ಇಳಿದಿದೆ ಈ ಪಕ್ಷ. ಏನೇ ಮಾಡಿಯಾದರೂ ಬಿಜೆಪಿಯನ್ನು ನೆಲಸಮ ಮಾಡುವ ದೊಡ್ಡ ಉದ್ದೇಶ ಇವರದ್ದು ಎನ್ನುವುದು ವಿಡಿಯೋಗಳಿಂದ ತಿಳಿಯುತ್ತಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ಸಿಗರು ಸೇರಿದಂತೆ ಟಿಎಂಸಿ ಮತ್ತು ಬಿಜೆಪಿಯೇತರ ಹಲವು ಪಕ್ಷಗಳು ಇದಕ್ಕೆ ಬೆಂಬಲ ಸೂಚಿಸಿವೆ. ಅಂದಹಾಗೆ ಭಾರತದ ಯುವಕರ ಮೇಲೆ ಇಷ್ಟೊಂದು ಪ್ರೀತಿ ಇಟ್ಟುಕೊಂಡು, ಭಾರತದಲ್ಲಿ ಪರಿವರ್ತನೆ ಮಾಡಬೇಕು ಎನ್ನುವ ಕನಸು ಕಾಣುತ್ತಿರುವ ಅಭಿಜೀತ್ ಅವರು ಈ ಮೊದಲು AAPನಲ್ಲಿ ಇದ್ದವರು. ಇದೇ ಕಾರಣಕ್ಕೆ ಆಪ್ ಪಕ್ಷ ಅಧಿಕಾರಕ್ಕೆ ಬರುವಾಗ ಭಾರತವನ್ನು ಭ್ರಷ್ಟಾಚಾರಮುಕ್ತ ಮಾಡುವುದೂ ಸೇರಿದಂತೆ ಏನೆಲ್ಲಾ ವಾಗ್ದಾನ ಮಾಡಿತ್ತೋ ಅವೆಲ್ಲವನ್ನೂ ಅಭಿಜೀತ್ ಈಗ ಮಾಡಿದ್ದಾರೆ. ಆಗಲೂ ಜನರು ಅವರಿಗೆ ಮನಸೋತಿದ್ದರೂ, ಈಗಲೂ ಜೆನ್ ಜಿಗಳು ಸಿಜೆಪಿಗೆ ಭಾರಿ ಬೆಂಬಲ ವ್ಯಕ್ತಪಡಿಸುತ್ತಿರುವುದು ಭಾರತ ಬದಲಾಗಬೇಕು ಎನ್ನುವ ಹಂಬಲ ಇರುವುದನ್ನು ತೋರಿಸುತ್ತಿದ್ದಾರೆ.
ಇದಾಗಲೇ ಕೆಲವರು ಈ ಪಕ್ಷದ ಫಾಲೋವರ್ಸ್ ಹೆಚ್ಚಿನವರು ಪಾಕಿಸ್ತಾನಿಗಳು, ಅದನ್ನು ಬಿಟ್ಟರೆ ಬಾಂಗ್ಲಾದೇಶಿಗಳು ಎಂದಿದ್ದಾರೆ. ಭಾರತದ ಫಾಲೋವರ್ಸ್ ಸಂಖ್ಯೆ ಕೇವಲ ಶೇಕಡಾ 9 ಎಂದು ಹೇಳುತ್ತಿದ್ದರೂ, ಅಭಿಜೀತ್ ಅವರು, ಇವೆಲ್ಲಾ ಸುಳ್ಳು, ಭಾರತದವರೇ ಅಧಿಕ ಮಂದಿ ಫಾಲೋವರ್ಸ್ ಇರುವುದಾಗಿ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.
ದೇಶ ಒಡೆಯುವ ಪಿತೂರಿ?
ಈ ಪಕ್ಷದ ಉದ್ದೇಶವೇ ಬೇರೆ. ಬೇರೆ ದೇಶಗಳಲ್ಲಿ ಆಗಿರುವಂತೆ ಭಾರತದಲ್ಲಿಯೂ ಜೆನ್ ಜೀಗಳು ಬೀದಿಗೆ ಬಂದು ಪ್ರತಿಭಟನೆ ಮಾಡಬೇಕು ಎನ್ನುವುದೇ ಇದರ ಉದ್ದೇಶವಾಗಿದೆ. ಇದಾಗಲೇ ರಾಹುಲ್ ಗಾಂಧಿ ಕೂಡ ಭಾರತದಲ್ಲಿಯೂ ಇಂತಹ ಹೋರಾಟದ ಅಗತ್ಯವಿದೆ ಎಂದು ಹೇಳಿದ್ದರು. ಜೆನ್ Zಗಳ ಹಾದಿ ತಪ್ಪಿಸಿ, ಭಾರತದಲ್ಲಿ ಅಶಾಂತಿ ಹರಡುವುದು, ನೇಪಾಳ ಸೇರಿ ವಿವಿಧ ದೇಶಗಳಲ್ಲಿ ಆದಂತೆ ದೇಶದ ಶಾಂತಿ, ನೆಮ್ಮದಿಯನ್ನು ಹಾಳು ಮಾಡಿ ಇಲ್ಲಿ ಅಭದ್ರತೆ ತರುವುದೇ ಇದರ ಉದ್ದೇಶ. ಇದೇನೂ ಈಗ ದಿಢೀರ್ ಹುಟ್ಟುಕೊಂಡ ಪಕ್ಷವಲ್ಲ. ಸಿಜಿಐ ಹೇಳಿಕೆ ತಿರುಚಿ ಒಂದು ನೆಪ ಮಾಡಿಕೊಂಡಿದ್ದಾರಷ್ಟೇ. ಆದರೆ ಇದರಲ್ಲಿ ಇರುವವರು ಹಲವರು ವಿದೇಶಿಗರು. ವಿದೇಶದಲ್ಲಿ ಇದ್ದುಕೊಂಡು ಭಾರತದ ಉದ್ಧಾರ ಮಾಡುತ್ತಾರೆ ಎಂದರೆ ನಂಬಲು ಸಾಧ್ಯವೆ, ಇದರ ಹಿಂದಿರುವ ಉದ್ದೇಶ ತಿಳಿಯದೇ ಯುವ ಸಮುದಾಯವು ಹಾದಿ ತಪ್ಪುತ್ತಿರುವುದು ನೋವಿನ ಸಂಗತಿ ಎಂದು ಹಲವರು ವಿಶ್ಲೇಷಿಸುತ್ತಿದ್ದಾರೆ.
ಅಭಿಜೀತ್ ಹೇಳಿದ್ದೇನು?
ಆದರೆ ಅಭಿಜೀತ್ ಅವರು ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ, "ವರ್ಷಗಳಿಂದ ಯುವಕರಲ್ಲಿ ಉಂಟಾಗುತ್ತಿರುವ ಹತಾಶೆ ಮತ್ತು ಕೋಪವೇ ಇಷ್ಟೊಂದು ದೊಡ್ಡ ಪ್ರತಿಕ್ರಿಯೆಗೆ ಕಾರಣವಾಗಿದೆ. ಸರ್ಕಾರದ ವೈಫಲ್ಯಗಳಿಂದಾಗಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅವರು ತಮ್ಮ ಹತಾಶೆ ಮತ್ತು ಕೋಪವನ್ನು ಹೊರಹಾಕಲು ಒಂದು ವೇದಿಕೆಯನ್ನು ಕಂಡುಕೊಂಡಿದ್ದಾರೆ ಎಂದಿದ್ದಾರೆ. ಮಾಜಿ ಕ್ರಿಕೆಟಿಗ ಮತ್ತು ಸಂಸದ ಕೀರ್ತಿ ಆಜಾದ್ ಅವರು ಪಕ್ಷಕ್ಕೆ ಸೇರಲು ಬಯಸಿರುವುದಾಗಿ ಹೇಳಿದರು. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೂಡ ಇದನ್ನು ಬೆಂಬಲಿಸಿದ್ದಾರೆ. ಇದಲ್ಲದೆ, ಇನ್ನೂ ಅನೇಕರು ನಮ್ಮನ್ನು ಬೆಂಬಲಿಸಿದ್ದಾರೆ, ಮತ್ತು ಇಂದು ಇದು ಚರ್ಚೆಯ ವಿಷಯವಾಗಿದೆ. ಮತ್ತು ಇದು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದಿದ್ದಾರೆ.


