ಸಚಿವ ಸಂಪುಟ ವಿಸ್ತರಣೆ ಕುರಿತು ನನಗೆ ಏನೂ ಗೊತ್ತಿಲ್ಲ. ನಾನು ಸಹ ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ನೋಡಿದ್ದೇನೆ. ನವೆಂಬರ್ನಲ್ಲಿ ಕ್ರಾಂತಿಯೂ ಇಲ್ಲ ಏನೂ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಚಿಕ್ಕಮಗಳೂರು (ನ.19): ಸಚಿವ ಸಂಪುಟ ವಿಸ್ತರಣೆ ಕುರಿತು ನನಗೆ ಏನೂ ಗೊತ್ತಿಲ್ಲ. ನಾನು ಸಹ ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ನೋಡಿದ್ದೇನೆ. ನವೆಂಬರ್ನಲ್ಲಿ ಕ್ರಾಂತಿಯೂ ಇಲ್ಲ ಏನೂ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು. ಪ್ರಧಾನಿಯನ್ನು ಭೇಟಿ ಮಾಡಿ ಕಬ್ಬಿಗೆ ದರನಿಗದಿ ಹಾಗೂ ಪರಿಹಾರದ ವಿಷಯದ ಬಗ್ಗೆ ಮಾತನಾಡಿದ್ದಾರೆ ಎಂದರು.
ಮುಖ್ಯಮಂತ್ರಿ ದೆಹಲಿಗೆ ಹೋದಾಗ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡುವುದು ಸಹಜ. ಹೀಗಾಗಿಯೇ ದೆಹಲಿಗೆ ಹೋದ ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲಿ ಏನೆಲ್ಲಾ ಚರ್ಚೆ ನಡೆದಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಸಾರಿಗೆ ನೌಕರರ ವೇತನ ಪರಿಷ್ಕರಣೆ ಹೊರತುಪಡಿಸಿದರೆ ಇಲಾಖೆಯಲ್ಲಿ ಯಾವುದೇ ಸಮಸ್ಯೆಗಳು ಇಲ್ಲ. ವೇತನ ಪರಿಷ್ಕರಣೆ ಸಂಬಂಧಿಸಿದಂತೆ ಐದು ದಿನಗಳ ಹಿಂದೆಯೇ ಸಿಎಂ ಭೇಟಿ ಮಾಡಿದ್ದೆ. ಅಧಿವೇಶನಕ್ಕೂ ಮೊದಲು ಸಭೆ ಕರೆಯುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ ಎಂದು ಹೇಳಿದರು.
ಶೀಘ್ರ ಎಲ್ಲ ಜಿಲ್ಲೆಗಳಿಗೂ ಹೊಸ ಬಸ್ ವ್ಯವಸ್ಥೆ
ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹೊಸ ಬಸ್ಗಳನ್ನು ಒದಗಿಸುವುದಲ್ಲದೆ, ಚಿಕ್ಕಮಗಳೂರು - ಮೈಸೂರು ನಡುವೆ ಎರಡು ವೋಲ್ವೊ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗುವುದು, ಇಲ್ಲಿನ ಉಭಯ ಬಸ್ ನಿಲ್ದಾಣಗಳ ನಡುವೆ ಸ್ಕೈವಾಕ್ ವ್ಯವಸ್ಥೆಗೂ ಅನುಮೋದನೆ ನೀಡುವುದಾಗಿ ಹೇಳಿದರು. ಮೈಸೂರು ಹಾಗೂ ಚಿಕ್ಕಮಗಳೂರು ನಡುವೆ ವೋಲ್ವೊ ಬಸ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಉಭಯ ಬಸ್ ನಿಲ್ದಾಣಗಳ ನಡುವೆ ಸ್ಕೈವಾಕ್ ನಿರ್ಮಿಸುವಂತೆ ಶಾಸಕ ಎಚ್.ಡಿ.ತಮ್ಮಯ್ಯ ಅವರ ಬೇಡಿಕೆಗೆ ಸ್ಪಂದಿಸಿದ ಸಚಿವರು, ಈ ಬಾರಿಯ ಬಜೆಟ್ನಲ್ಲಿ ಎರಡು ಸಾವಿರ ಬಸ್ಗಳನ್ನು ಒಟ್ಟಾರೆ ನಿಗಮಕ್ಕೆ ಒದಗಿಸಲಾಗಿದ್ದು, ಅವುಗಳಲ್ಲಿ 900 ಬಸ್ಗಳನ್ನು ಕೆಎಸ್ಆರ್ಟಿಸಿಗೆ ನೀಡಲಾಗುವುದು. ಇನ್ನೂ 2-3 ತಿಂಗಳಲ್ಲಿ ಈ ಬೇಡಿಕೆ ಈಡೇರಲಿದೆ ಎಂದರು.
ತಾವು ಸಚಿವರಾದ ಬಳಿಕ ಎರಡೂವರೆ ವರ್ಷಗಳ ಅವಧಿಯಲ್ಲಿ ನಿಗಮಕ್ಕೆ ಸುಮಾರು 5,800 ಬಸ್ಗಳನ್ನು ಖರೀದಿಸಲಾಗಿದೆ. ಹಿಂದೆ ನಾಲ್ಕು ವರ್ಷಗಳಲ್ಲಿ ನಾನಾ ಕಾರಣಗಳಿಂದ ಕೆಎಸ್ಆರ್ಟಿಸಿಯಿಂದ ಬಸ್ ಖರೀದಿಸಿರಲಿಲ್ಲ. ಈ ನಡುವೆ ನಿಗಮಕ್ಕೆ 9 ಸಾವಿರ ಸಿಬ್ಬಂದಿಯನ್ನು ಭರ್ತಿ ಮಾಡಲಾಗಿದೆ. ಒಂದು ಸಾವಿರ ಮಂದಿಯನ್ನು ಅನುಕಂಪದ ಆಧಾರದಲ್ಲಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಇಲ್ಲಿನ ಒಂದೂವರೆ ಎಕರೆ ಪ್ರದೇಶದಲ್ಲಿ ಸುಮಾರು 20 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ. 14 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ನಿಲ್ದಾಣಕ್ಕೆ ಶಾಸಕರಾದ ಎಚ್.ಡಿ.ತಮ್ಮಯ್ಯ ಕಾರಣಕರ್ತರು. ಅಲ್ಲದೆ, ಸುಮಾರು 2.30 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ 12 ವಸತಿ ಗೃಹಗಳನ್ನು ಉದ್ಘಾಟಿಸಲಾಗಿದೆ ಎಂದರು.


