ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಕಾಂಗ್ರೆಸ್‌ಗೆ ಕರ್ನಾಟಕ ಒಂದು ಎಟಿಎಂ ಇದ್ದಂತೆ ಎಂದು ಟೀಕಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೂ ಈ ಪರಿಸ್ಥಿತಿ ಬದಲಾಗುವುದಿಲ್ಲ ಎಂದ ಅವರು, ಸಿದ್ದರಾಮಯ್ಯನವರನ್ನು ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ಬಗ್ಗೆಯೂ ಟೀಕಿಸಿದ್ದಾರೆ.

ಧಾರವಾಡ (ಮೇ.31): ಡಿ.ಕೆ.ಶಿವಕುಮಾರ(DK Shivakumar) ಸಿಎಂ ಆಗುತ್ತಿರುವುದರಿಂದ ಏನೂ ವ್ಯತ್ಯಾಸ ಆಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad joshi) ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಕರ್ನಾಟಕ(Karnataka Congress) ಒಂದು ಎಟಿಎಂ ಇದ್ದಂತೆ. ಅದು ಡಿಕೆಶಿ ಅವಧಿಯಲ್ಲೂ ಯಥಾಪ್ರಕಾರ ಮುಂದುವರಿಯುತ್ತದೆ ಅಷ್ಟೇ. ಹೀಗಾಗಿ ಡಿಕೆಶಿ ಸಿಎಂ ಆಗುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದರು. ಕಾಂಗ್ರೆಸ್‌ ಪಕ್ಷಕ್ಕೆ 56 ವರ್ಷದ ಯುವಕ ನಾಯಕನಾಗಿದ್ದು ಅವರೇ ಭ್ರಷ್ಟಾಚಾರಿಯಾಗಿದ್ದಾರೆ. ಹೀಗಾಗಿ ಆ ಪಕ್ಷಕ್ಕೆ ಯಾವುದೇ ಗುರಿ ಇಲ್ಲ. ಅವರು ದೇಶದ ವಿರುದ್ಧ ಆಸಕ್ತಿಯಿಂದ ಮಾತನಾಡುವುದನ್ನು ಕಂಡಿದ್ದೇವೆ ಎಂದು ಪರೋಕ್ಷವಾಗಿ ರಾಹುಲ್‌ ಗಾಂಧಿಯನ್ನು ಟೀಕಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿ.ಎಸ್‌.ಯಡಿಯೂರಪ್ಪ(BS Yadiyurappa) ಬದಲಾವಣೆಯಾದಾಗ ಕಾಂಗ್ರೆಸ್‌ ಮುಖಂಡರೆಲ್ಲರೂ ಮಾತನಾಡಿದ್ದನ್ನು ನೋಡಿದ್ದೇವೆ. ನನಗೆ 80 ವರ್ಷ ಆದ ನಂತರ ನಾನು ರಾಜೀನಾಮೆ ಕೊಡುತ್ತೇನೆ ಎಂದು ಬಿಎಸ್‌ವೈ(BSY) ನನಗೆ ಹೇಳಿದ್ದರು. ಅದರಂತೆ ರಾಜೀನಾಮೆ ಕೊಟ್ಟಿದ್ದರು. ಹೀಗಾಗಿ ಈಗಲೂ ಸಹ ಪ್ರಧಾನಿ ಹಾಗೂ ಗೃಹ ಸಚಿವರು ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದು ಯಡಿಯೂರಪ್ಪ ಅವರಿಗೂ ಸಂತೃಪ್ತಿ ತಂದಿದೆ. ಆದರೆ ಸಿದ್ದರಾಮಯ್ಯ ಅವರನ್ನು ರಾಹುಲ್‌ ಗಾಂಧಿ ಹೇಗೆ ನಡೆಸಿಕೊಂಡರು ಎಂಬುದರ ಕುರಿತು ಮಾಧ್ಯಮಗಳೇ ವರದಿ ಮಾಡಿವೆ ಎಂದು ಹೇಳಿದರು.

ಹಿಮಂತ ಶರ್ಮಾ ಸೇರಿ ಬೇರೆ ಮುಖಂಡರ ಜತೆಗೆ ಕಾಂಗ್ರೆಸ್‌ ನಾಯಕರು ಹೇಗೆ ನಡೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದೇ ರೀತಿ ಸಿದ್ದರಾಮಯ್ಯ ಜತೆಗೆ ವರ್ತಿಸಿದ್ದಾರೆ ಎಂಬುದು ಮಾಧ್ಯಮಗಳ ವರದಿ ಇದೆ. ಸಿದ್ದರಾಮಯ್ಯ ಹಾಗೂ ಅವರ ಹಿರಿತನದ ಬಗ್ಗೆ ಅಪಾರ ಗೌರವವಿದೆ. ಆದರೆ, ಅವರ ಬಗ್ಗೆ ಜನರಲ್ಲಿ ಆಕ್ರೋಶವಿದೆ. ಕೆಟ್ಟ ಆಡಳಿತ ಕೊಟ್ಟರು ಎಂಬ ಅಸಮಾಧಾನವಿದೆ. ಇದನ್ನು ಹೊರತುಪಡಿಸಿ ರಾಹುಲ್‌ ಗಾಂಧಿ ಅವರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ ಎಂದರು.