ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ ಎಂದು ಹೇಳಿದ್ದಾರೆ. ಹಿಂದೆ ರಾಜೀವ್ ಗಾಂಧಿ ಅವರು ವೀರೇಂದ್ರ ಪಾಟೀಲ್ ಅವರಿಗೆ ಮಾಡಿದ ಅವಮಾನವನ್ನೇ, ಇಂದು ರಾಹುಲ್ ಗಾಂಧಿ ಸಿದ್ದರಾಮಯ್ಯನವರಿಗೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮಂಗಳೂರು (ಮೇ.28): ಕರ್ನಾಟಕದ ಜನಪ್ರಿಯ ನಾಯಕರಾದಂತ ಸಿದ್ದರಾಮಯ್ಯರನ್ನ ಕಾಂಗ್ರೆಸ್ ಹೈಕಮಾಂಡ್ ನಡೆಸಿಕೊಂಡ ರೀತಿ ಸರಿಯಿಲ್ಲ ಎಂದು ಕೇಂದ್ರ ಬಿಜೆಪಿ ಸಚಿವ ಪ್ರಹ್ಲಾದ್ ಜೋಶಿ ನುಡಿದರು.
ಕಾಂಗ್ರೆಸ್ ಸಿದ್ದರಾಮಯ್ಯರನ್ನ ನಡೆಸಿಕೊಂಡ ರೀತಿ ಸರಿಯಿಲ್ಲ
ಇಂದು ಸಿದ್ದರಾಮಯ್ಯ ರಾಜೀನಾಮೆ ಕೊಡುವ ನಿರ್ಧಾರ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ದರಾಮಯ್ಯರಷ್ಟು ರಾಜಕೀಯ ಅನುಭವವಿಲ್ಲದ, ವಯಸಲ್ಲೂ ಹಿರಿಯರಲ್ಲದ ರಾಹುಲ್ ಗಾಂಧಿ ಸಿದ್ದರಾಮಯ್ಯನವರನ್ನ ಆ ರೀತಿ ನಡೆಸಿಕೊಳ್ಳಬಾರದಿತ್ತು ಎಂದರು. ಇದೇ ವೇಳೆ ಕಾಂಗ್ರೆಸ್ ಅಧಿಕಾರ ಹಂಚಿಕೆ ಗೊಂದಲಗಳಿಂದ ಕರ್ನಾಟಕದಲ್ಲಿ ಸಂಪೂರ್ಣ ಪರಿಸ್ಥಿತಿ ಹದಗೆಟ್ಟಿದೆ. ಅಸ್ಥಿರತೆ, ಅರಾಜಕತೆ, ಅವಿಶ್ವಾಸ ನಿರ್ಮಾಣವಾಗಿದೆ. ನಿನ್ನೆ ಮೊನ್ನೆ ಇದರ ಪರಕಾಷ್ಠೆ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನ ಬೆಳಗಾದರೆ ಕಾಂಗ್ರೆಸ್ ಓಬಿಸಿ ಮಂತ್ರ
ಕಾಂಗ್ರೆಸ್ ದಿನ ಬೆಳಗಾದ್ರೆ ಓಬಿಸಿ ಮಂತ್ರ ಜಪಿಸುತ್ತಾರೆ. ಆದರೆ ಕರ್ನಾಟಕ ಒಬ್ಬ ಹಿಂದುಳಿದ ವರ್ಗದ ಮುಖ್ಯಮಂತ್ರಿಯನ್ನ ಯಾವ ರೀತಿ ನಡೆಸಿಕೊಂಡ್ರು? ಹಿಂದೆ ವೀರೇಂದ್ರ ಪಾಟೀಲ್ ಅವರನ್ನ ರಾಜೀವ್ ಗಾಂಧಿ ಯಾವ ರೀತಿ ಅಪಮಾನ ಮಾಡಿದ್ರೋ, ಅದೇ ರೀತಿ ಇಂದು ರಾಜೀವ್ ಮಗ ರಾಹುಲ್ ಗಾಂಧಿ ಸಿದ್ದರಾಮಯ್ಯರನ್ನ ನಡೆಸಿಕೊಂಡಿದ್ದಾರೆ. ಇದು ಅಪ್ಪನಿಂದ ರಾಹುಲ್ ಗೆ ಬಂದಿರುವ ಬಳುವಳಿ ಎಂದರು.
ಸಿದ್ದರಾಮಯ್ಯ ಯಡಿಯೂರಪ್ಪ ಕರ್ನಾಟಕ ಮಾಸ್ ಲೀಡರ್ಸ್
ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಕರ್ನಾಟಕದ ಮಾಸ್ ಲೀಡರ್ಗಳು. ಇಡೀ ದೇಶದಲ್ಲಿ ಕೇವಲ ನಾಲ್ಕು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಮೂರು ಕಡೆ ಮೇಲ್ಜಾತಿಯವರು ಮುಖ್ಯಮಂತ್ರಿಳನ್ನಾಗಿ ಮಾಡಿದ್ರು ಕಾಂಗ್ರೆಸ್ ಒಬಿಸಿ ಬಗ್ಗೆ ಮಾತನಾಡ್ತಾರೆ. ಆದರೆ ರಾಜ್ಯದ ಒಬ್ಬ ಒಬಿಸಿ ಮುಖ್ಯಮಂತ್ರಿಗೆ ತೊಂದರೆ ಕೊಟ್ಟಿದ್ದಾರೆ. ಹಾಗೆಂದು ಸಿದ್ದರಾಮಯ್ಯ ಅವರೇನೂ ಭಾರೀ ಪ್ರಾಮಾಣಿಕರೆಂದೇನೂ ಹೇಳುತ್ತಿಲ್ಲ. ಆದರೆ ರಾಹುಲ್ ಗಾಂಧಿ ಸಿದ್ದರಾಮಯ್ಯರನ್ನ ನಡೆಸಿಕೊಂಡ ರೀತಿ ಸರಿಯಿಲ್ಲ ಎಂದು ಪುನರುಚ್ಚರಿಸಿದರು.


