'ಏನ್ರಯ್ಯ.. ಮಂತ್ರಿ ಆದ್ರಲ್ಲ': ‘ಮಾಜಿ ಗುರು’ ಸಿದ್ದು ಜತೆ ನೂತನ ಸಚಿವರ ಕುಶಲೋಪರಿ!
‘ಮಾಜಿ ಗುರು’ ಸಿದ್ದು ಜತೆ ನೂತನ ಸಚಿವರ ಕುಶಲೋಪರಿ| ‘ಏನ್ರಯ್ಯ.. ಮಂತ್ರಿ ಆದ್ರಲ್ಲ... ನಿಮ್ಮನ್ನು ಬಯ್ಯಲ್ಲ’ ಎಂದ ಸಿದ್ದು!| ಇತ್ತೀಚಿನ ವೈರತ್ವ ಮರೆತು ಆಪ್ತ ಸಮಾಲೋಚನೆ| ‘ನಿಮಗೆಲ್ಲಾ ಒಳ್ಳೇದಾಗ್ಲಿ’ ಎಂದು ಶುಭ ಹಾರೈಕೆ| ಆದರೆ ಸುಧಾಕರ್, ಜಾರಕಿಹೊಳಿ ಮಾತ್ರ ಸಿದ್ದುರಿಂದ ದೂರ
ಬೆಂಗಳೂರು[ಫೆ.18]: ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಸಚಿವರಾಗಿರುವವರ ಪೈಕಿ ಹಲವರು ಪ್ರತಿಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರೆ ಕಾಂಗ್ರೆಸ್-ಜೆಡಿಎಸ್ ಮುಖಂಡರ ಜತೆ ಸಂತಸದಿಂದ ಕುಶಲೋಪರಿ ಚರ್ಚೆ ನಡೆಸಿದ ಪ್ರಸಂಗ ನಡೆಯಿತು.
ವಿಧಾನಸೌಧದಲ್ಲಿ ವಿಧಾನಮಂಡಲದ ಜಂಟಿಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ವಿ.ಆರ್. ವಾಲಾ ಭಾಷಣ ಮಾಡಿದ ಬಳಿಕ ವಿರಾಮದ ವೇಳೆ ಕಾಂಗ್ರೆಸ್ನ ನಾಯಕರ ಬಳಿ ತೆರಳಿ ನೂತನ ಸಚಿವರು ಮಾತನಾಡಿಸಿದರು. ಈ ವೇಳೆ ಸಿದ್ದರಾಮಯ್ಯ ಅವರಿಂದ ಆಶೀರ್ವಾದ ಕೋರಿದರು. ನೂತನ ಸಚಿವರಾದ ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು ಸೇರಿದಂತೆ ಇನ್ನು ಕೆಲವರು ಕಾಂಗ್ರೆಸ್ ಮುಖಂಡರ ಜತೆ ಮಾತನಾಡಿದರು. ಆದರೆ, ಸಚಿವರಾದ ರಮೇಶ್ ಜಾರಕಿಹೊಳಿ ಮತ್ತು ಡಾ. ಕೆ. ಸುಧಾಕರ್ ಮಾತ್ರ ಕಾಂಗ್ರೆಸ್ ನಾಯಕರ ಬಳಿ ಸುಳಿಯಲೇ ಇಲ್ಲ. ಅವರಿಬ್ಬರು ತಮ್ಮ ಆಸನದ ಬಳಿಯೇ ಇದ್ದರು.
ತಮ್ಮ ಭೇಟಿ ಮಾಡಿದ ನೂತನ ಸಚಿವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಅಭಿನಂದನೆ ಸಲ್ಲಿಸಿದರು. ಸಿದ್ದರಾಮಯ್ಯ ಅವರು, ‘ಏನ್ರಯ್ಯ... ಈಗ ಮಂತ್ರಿಗಳಾದ್ರಲ್ಲ... ಖುಷಿ ನಾ.. ಈಗ ನಿಮಗೆ ನಾನು ಏನು ಬೈಯೋದಿಲ್ಲ, ನಿಮಗೆಲ್ಲಾ ಒಳ್ಳೆಯದಾಗಲಿ’ ಎಂದು ಆಶಿಸಿದರು.
‘ಕುಮಟಳ್ಳಿ ಮಾತ್ರ ಮಂತ್ರಿ ಆಗಿಲ್ಲಲ್ವಾ ಯಾಕೆ’ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಮಹೇಶ್ ಕುಮಟಳ್ಳಿ, ‘ಸರ್... ಎಷ್ಟುಬೈಯ್ಯಬೇಕು ಬಯ್ಯಿರಿ’ ಎಂದರು. ತರುವಾಯ ಬಿ.ಸಿ.ಪಾಟೀಲ್ ಮಾತನಾಡಿ, ‘ಜೂನ್ನಲ್ಲಿ ಕುಮಟಳ್ಳಿಗೆ ಚಾನ್ಸ್’ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ಡಾ.ಜಿ.ಪರಮೇಶ್ವರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಇತರರು ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು