ಸರ್ಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಮನೆಮನೆಗೂ ಮಾಹಿತಿ ನೀಡುವ ಅಭಿಯಾನದ ಹೊಣೆಯನ್ನು ಜಿಲ್ಲಾ, ತಾಲೂಕು ಮತ್ತು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ವಹಿಸುವುದು, ಪಕ್ಷದ ಸಂಘಟನೆಗೆ ಚುರುಕು ಮುಟ್ಟಿಸುವುದು ಹಾಗೂ ಲೋಕಸಭೆ ಚುನಾವಣೆ ಕೈ ಪಡೆಯನ್ನು ಸನ್ನದ್ಧಗೊಳಿಸಿ ಕನಿಷ್ಠ 20 ಲೋಕಸಭೆ ಸ್ಥಾನಗಳನ್ನು ಗೆಲ್ಲಿಸುವ ಟಾಸ್ಕ್‌ ನೀಡುವುದು. ಇದಕ್ಕೆ ಯಾವ್ಯಾವ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಹಾಗೂ ಅದರಲ್ಲಿ ಕಾರ್ಯಕರ್ತರು, ನಾಯಕರ ಪಾತ್ರಗಳೇನು ಎಂಬ ಬಗ್ಗೆ ಚರ್ಚಿಸುವುದು ಸಭೆಯ ಮುಖ್ಯ ಉದ್ದೇಶ 

ಬೆಂಗಳೂರು(ಆ.14):  ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು ಪಕ್ಷ ಸಂಘಟನೆ ಹಾಗೂ ಲೋಕಸಭೆ ಚುನಾವಣೆ ಸಿದ್ಧತೆಗೆ ವೇಗ ನೀಡುವ ಉದ್ದೇಶದಿಂದ ಸೋಮವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಇಂದಿರಾಗಾಂಧಿ ಭವನದ ಭಾರತ್‌ ಜೋಡೋ ಸಭಾಂಗಣದಲ್ಲಿ ಕೆಪಿಸಿಸಿ ಸರ್ವ ಸದಸ್ಯರ ಸಭೆ ಕರೆದಿದೆ.

Add Asianetnews Kannada as a Preferred SourcegooglePreferred

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷರು, ಎಐಸಿಸಿ ಹಾಗೂ ಕೆಪಿಸಿಸಿ ಪದಾಧಿಕಾರಿಗಳು, ಸಚಿವರು, ಶಾಸಕರು ಹಾಗೂ ಎಲ್ಲಾ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ವಿಪಕ್ಷಗಳ ಕೂಟ ಹಳೇ ಬಾಟಲಿ, ಹಳೇ ಮದ್ಯ ಇದ್ದಂತೆ: ಅಮಿತ್‌ ಶಾ ವ್ಯಂಗ್ಯ

ಸರ್ಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಮನೆಮನೆಗೂ ಮಾಹಿತಿ ನೀಡುವ ಅಭಿಯಾನದ ಹೊಣೆಯನ್ನು ಜಿಲ್ಲಾ, ತಾಲೂಕು ಮತ್ತು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ವಹಿಸುವುದು, ಪಕ್ಷದ ಸಂಘಟನೆಗೆ ಚುರುಕು ಮುಟ್ಟಿಸುವುದು ಹಾಗೂ ಲೋಕಸಭೆ ಚುನಾವಣೆ ಕೈ ಪಡೆಯನ್ನು ಸನ್ನದ್ಧಗೊಳಿಸಿ ಕನಿಷ್ಠ 20 ಲೋಕಸಭೆ ಸ್ಥಾನಗಳನ್ನು ಗೆಲ್ಲಿಸುವ ಟಾಸ್ಕ್‌ ನೀಡುವುದು. ಇದಕ್ಕೆ ಯಾವ್ಯಾವ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಹಾಗೂ ಅದರಲ್ಲಿ ಕಾರ್ಯಕರ್ತರು, ನಾಯಕರ ಪಾತ್ರಗಳೇನು ಎಂಬ ಬಗ್ಗೆ ಚರ್ಚಿಸುವುದು ಸಭೆಯ ಮುಖ್ಯ ಉದ್ದೇಶ ಎಂದು ಮೂಲಗಳು ತಿಳಿಸಿವೆ.

ಅಸಮಾಧಾನ ಶಮನಕ್ಕೆ ಯತ್ನ:

ಇದೇ ವೇಳೆ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ವಿಧಾನಸಭೆ ಚುನಾವಣೆಯಲ್ಲಿ ತಳಮಟ್ಟದಲ್ಲಿ ದುಡಿದವರನ್ನು ಮರೆತಿದೆ ಎಂಬ ಆರೋಪವಿದೆ. ಈ ಬಗ್ಗೆ ಕಾರ್ಯಕರ್ತರಿಗೂ ಸರ್ಕಾರದ ಮೇಲೆ ಅಸಮಾಧಾನ ಇದೆ. ಹೀಗಾಗಿ ಕಾರ್ಯಕರ್ತರನ್ನು ಸಮಾಧಾನಪಡಿಸಿ ವಿಶ್ವಾಸಕ್ಕೆ ಪಡೆಯುವ ಪ್ರಯತ್ನವೂ ನಡೆಯಲಿದೆ ಎನ್ನಲಾಗಿದೆ.

ಮುಖ್ಯವಾಗಿ ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಪ್ರಚಾರ ಮಾಡಬೇಕು. ವಿಧಾನಸಭೆ ಚುನಾವಣೆಗೆ ಮಾಡಿದ್ದ ರೀತಿಯಲ್ಲೇ ಅಭಿಯಾನಗಳನ್ನು ರೂಪಿಸಬೇಕು. ಗ್ಯಾರಂಟಿಗಳ ಬಗ್ಗೆ ಕ್ಷೇತ್ರವಾರು ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಗೊಳಿಸಬೇಕು ಎಂಬ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ. ಜತೆಗೆ ಸದ್ಯದಲ್ಲೇ ನಿಗಮ-ಮಂಡಳಿ ನೇಮಕಕ್ಕೆ ಚಾಲನೆ ನೀಡಿ ಪಕ್ಷಕ್ಕಾಗಿ ದುಡಿದಿರುವವರಿಗೆ ಆದ್ಯತೆ ನೀಡಲಾಗುವುದು. ಎಲ್ಲಾ ರೀತಿಯಲ್ಲೂ ಅವಕಾಶಗಳನ್ನು ಸೃಷ್ಟಿಸಿಕೊಡಲಾಗುವುದು ಎಂದು ಹೇಳಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಿದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ಸ್ಥಾಪಿತ ಶಾಲೆಯಲ್ಲಿ ಮೋದಿ ವಿದ್ಯಾಭ್ಯಾಸ: ಖರ್ಗೆ ತಿರುಗೇಟು

ಇನ್ನು ಸಭೆಯಲ್ಲಿ ಕೆಪಿಸಿಸಿ ಕಾಯರ್ಕಾರಿ ಸಮಿತಿ ಸದಸ್ಯರು, ಎಐಸಿಸಿ, ಕೆಪಿಸಿಸಿ ಸದಸ್ಯರು, ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, 2019ರ ಲೋಕಸಭೆ ಹಾಗೂ 2023ರ ವಿಧಾನಸಭೆ ಅಭ್ಯರ್ಥಿಗಳು, ರಾಜ್ಯ ಮಟ್ಟದ ಎಲ್ಲಾ ನಿಗಮ- ಮಂಡಳಿ ಮಾಜಿ ಅಧ್ಯಕ್ಷರು, ಜಿಲ್ಲಾ ಮತ್ತು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು, ಎಲ್ಲಾ ಮುಂಚೂಣಿ ಘಟಕಗಳ ರಾಜ್ಯಾಧ್ಯಕ್ಷರುಗಳಿಗೆ ಸಭೆಯಲ್ಲಿ ಭಾಗವಹಿಸುವಂತೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಅವರು ಸಭೆ/ ನೋಟಿಸ್‌ ಮೂಲಕ ಸೂಚನೆ ನೀಡಿದ್ದಾರೆ.

ಏನೇನು ಚರ್ಚೆ?

- ಗ್ಯಾರಂಟಿ ಯೋಜನೆಗಳ ಬಗ್ಗೆ ಮನೆಮನೆಗೂ ಮಾಹಿತಿ ನೀಡುವ ಅಭಿಯಾನ
- ಜಿಲ್ಲಾ, ತಾಲೂಕು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ಅಭಿಯಾನದ ಹೊಣೆಗಾರಿಕೆ
- ಚುನಾವಣೆ ವೇಳೆ ಮಾಡಿದ್ದ ರೀತಿಯಲ್ಲೇ ಗ್ಯಾರಂಟಿ ಬಗ್ಗೆ ಪ್ರಚಾರ ಕಾರ‍್ಯಕ್ರಮ
- ಪಕ್ಷದ ಸಂಘಟನೆಗೆ ಚುರುಕು ಮುಟ್ಟಿಸಿ, ಲೋಕಸಭೆ ಚುನಾವಣೆಗೆ ತಯಾರಿ
- 20 ಸ್ಥಾನ ಗೆಲ್ಲಲು ಯಾವ್ಯಾವ ಕಾರ್ಯಕ್ರಮ ರೂಪಿಸಬೇಕು ಎಂದು ಚರ್ಚೆ
- ಕಾರ್ಯಕರ್ತರು, ನಾಯಕರ ಪಾತ್ರದ ಬಗ್ಗೆಯೂ ವಿಸ್ತೃತ ಸಮಾಲೋಚನೆ
- ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯಲು ನಿಗಮ-ಮಂಡಳಿ ನೇಮಕ ಚರ್ಚೆ