ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುದುಚೇರಿಯ ತಿರುನಲ್ಲಾರ್ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಧಾರ್ಮಿಕ ಪ್ರವಾಸದ ನಡುವೆಯೇ, ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್ಗೆ ಬಂದಿದ್ದಾರೆ ಎಂಬ ರಾಜಕೀಯ ವದಂತಿಗಳನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡು–ಪುದುಚೇರಿ ಪ್ರವಾಸ ಕೈಗೊಂಡಿದ್ದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಪುದುಚೇರಿಯ ತಿರುನಲ್ಲಾರ್ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಪ್ರಸಿದ್ಧ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಸಂಜೆ ಸುಮಾರು 5 ಗಂಟೆಗೆ ಬೆಂಗಳೂರಿಗೆ ವಾಪಸ್
ತಿರುನಲ್ಲಾರ್ ಶನೇಶ್ವರ ದೇವಸ್ಥಾನವು ಪ್ರಸಿದ್ಧಿ ಹೊಂದಿದ್ದು, ವಿಶೇಷವಾಗಿ ಶನಿವಾರದಂದು ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಇದೇ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಶನೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಬಳಿಕ, ಅವರು ತಮಿಳುನಾಡಿನ ಕರೂರ್ನಲ್ಲಿ ಇರುವ ಸದಾಶಿವ ಬ್ರಹ್ಮೇಂದ್ರರ ಜೀವ ಸಮಾಧಿಗೆ ಭೇಟಿ ನೀಡಲಿದ್ದಾರೆ. ದಿನದ ಧಾರ್ಮಿಕ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಸಂಜೆ ಸುಮಾರು 5 ಗಂಟೆಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಪುದುಚೇರಿ ಪ್ರವಾಸದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಾನು ದೇವಸ್ಥಾನಕ್ಕೆ ಹೋಗುತ್ತಿದ್ದೇನೆ.ನಾನು ದೇವಸ್ಥಾನ ಕ್ಕೆ ಹೋಗ್ತಿದ್ದೇನೆ. ಬಹಳ ದಿನ ಆಗಿತ್ತು ಹೋಗಿರ್ಲಿಲ್ಲ. ಬಹಳ ದಿನ ಶನೇಶ್ವರನಾ ನೋಡಿರಲಿಲ್ಲ ಎಂದು ತಿಳಿಸಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ, ಏನಂದ್ರು ಡಿಕೆಶಿ
ಇದೇ ವೇಳೆ, ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದರು. ಯಾವ ಶಾಸಕರೂ ಈಗಲ್ಟನ್ ರೆಸಾರ್ಟ್ಗೆ ಬಂದಿಲ್ಲ. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾರೂ ನನಗೆ ಹೇಳಿಲ್ಲ, ಎಂದರು.
ಈಗಲ್ಟನ್ ರೆಸಾರ್ಟ್ ರಿಪೇರಿಗಾಗಿ ಮುಚ್ಚಲಾಗಿದೆ ಎಂದು ಕೇಳಿದ್ದೇನೆ. ಯಾರೋ ಹೇಳಿದ ಮಾತುಗಳು ಮಾತ್ರ. ಕೆಲವರು ಶಾಸಕರು ಹೈದರಾಬಾದ್ಗೆ ಹೋಗಿದ್ದಾರೆ ಎಂದೂ ಹೇಳುತ್ತಿದ್ದಾರೆ. ನಾನು ಟಿವಿಯಲ್ಲಿ ನೋಡಿದಷ್ಟೇ ಗೊತ್ತು ಎಂದರು. ಪಕ್ಷದ ಹೈಕಮಾಂಡ್ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಪಾರ್ಟಿ ಹೈಕಮಾಂಡ್ ಮಾತನಾಡಿದರೆ ಅದು ಬೇರೆ ವಿಚಾರ. ಆಗ ನಾನು ನನ್ನ ನಿಲುವು ಸ್ಪಷ್ಟಪಡಿಸುತ್ತೇನೆ. ಇದು ಪಕ್ಷದ ವಿಚಾರವಾಗಿದ್ದು, ಅದನ್ನು ಪಕ್ಷಕ್ಕೆ ಬಿಡುತ್ತೇನೆ ಎಂದರು.
ಇದೇ ವೇಳೆ, ನನಗೆ ಪ್ರಚಾರಕ್ಕೆ ಹೋಗಲು ಹೇಳಿದಾಗ ಹೋಗಿದ್ದೆ, ಮ್ಯಾನಿಫೆಸ್ಟೊ ಬಿಡುಗಡೆ ಮಾಡಲು ಹೇಳಿದಾಗ ಕೂಡ ಪಾಲ್ಗೊಂಡಿದ್ದೆ. ಆದರೆ ಈಗ ಯಾರೂ ಸಂಪರ್ಕದಲ್ಲಿಲ್ಲ. ತಮಿಳುನಾಡು ರಾಜಕೀಯ ಬೆಳವಣಿಗೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು. ಒಟ್ಟಾರೆ, ಧಾರ್ಮಿಕ ಪ್ರವಾಸದ ನಡುವೆ ರಾಜಕೀಯ ವದಂತಿಗಳಿಗೆ ಸ್ಪಷ್ಟನೆ ನೀಡಿದ ಡಿ.ಕೆ. ಶಿವಕುಮಾರ್ ಹೇಳಿಕೆಗಳು ಗಮನ ಸೆಳೆದಿವೆ.


