ಐಪಿಎಲ್ ಫೈನಲ್ ಪಂದ್ಯವನ್ನು ರಾಜಕೀಯ ಪ್ರಭಾವ ಬಳಸಿ ಬೆಂಗಳೂರಿನಿಂದ ಅಹಮದಾಬಾದ್ಗೆ ಸ್ಥಳಾಂತರಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಬಿಸಿಸಿಐ ಸುಳ್ಳು ಹೇಳುತ್ತಿದ್ದು, ಗುಜರಾತ್ಗೆ ಆರ್ಥಿಕ ಲಾಭ ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಬೆಂಗಳೂರು (ಮೇ.9): ಐಪಿಎಲ್ ಫೈನಲ್ ಪಂದ್ಯ ಅಹಮದಾಬಾದ್ಗೆ ಸ್ಥಳಾಂತರಿಸಿರುವ ವಿಚಾರದಲ್ಲಿ ಬಿಸಿಸಿಐ ಸಂಪೂರ್ಣ ಮಾಹಿತಿ ನೀಡದೆ, ಸುಳ್ಳು ಹೇಳುತ್ತಿದೆ. ರಾಜಕೀಯ ಪ್ರಭಾವ ಬಳಸಿ ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್ಗೆ ಸ್ಥಳಾಂತರಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಬಿಸಿಸಿಐ ಕಾರ್ಯದರ್ಶಿ ಬೋಗಸ್ ಹೇಳಿಕೆ ನೀಡುತ್ತಿದ್ದು, ಸಂಪೂರ್ಣ ಮಾಹಿತಿ ನೀಡಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿ ವೀಕ್ಷಿಸಲು ಶಾಸಕರಿಗೆ ತಲಾ 2 ಟಿಕೆಟ್ ನೀಡುತ್ತಿದ್ದರು. ಅದು ಹೆಚ್ಚಾಗುತ್ತದೆಯೇ? ನಮ್ಮ ಮೇಲೆ ಆರೋಪಿಸುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರು, ತಾವು ಪಡೆದಿದ್ದ ಟಿಕೆಟ್ ವಾಪಸ್ ಕೊಡಬೇಕಿತ್ತು. ನಮ್ಮ ಶಾಸಕರಿಗೆ ಅವರದ್ದೇ ಸ್ಥಾನ, ಗೌರವವಿದೆ ಎಂದರು.
ಐಪಿಎಲ್ ಪಂದ್ಯ ಸ್ಥಳಾಂತರ ಬಿಜೆಪಿ ನಾಯಕತ್ವದಲ್ಲಿ ನಡೆಯುತ್ತಿದೆ. ಗುಜರಾತ್ಗೆ ದೊಡ್ಡ ಆರ್ಥಿಕ ಅನುಕೂಲ ಮಾಡಿಕೊಡಲು ಸ್ಥಳಾಂತರ ಮಾಡಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 30 ಸಾವಿರ ಆಸನ ಸಾಮರ್ಥ್ಯವಿದೆ. ಅಹಮದಾಬಾದ್ನಲ್ಲಿ 1 ಲಕ್ಷದವರೆಗೆ ಆಸನವಿದೆ. ಅದರಿಂದ ದೊಡ್ಡ ಲಾಭವಾಗುತ್ತದೆ ಎಂದು ಬಿಸಿಸಿಐ ಈ ಕ್ರಮ ಕೈಗೊಂಡಿದೆ. ಅದರ ಜತೆಗೆ ರಾಜಕೀಯ ಪ್ರಭಾವವೂ ಇದಕ್ಕೆ ಕಾರಣ. ಪ್ರತಿವರ್ಷ ಇದೇ ರೀತಿ ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರಿಸಲಾಗುತ್ತಿದೆ ಎಂದರು.
ಅಹಮದಾಬಾದ್ ಕ್ರೀಡಾಂಗಣ ಮಾದರಿಯಲ್ಲೇ ರಾಜ್ಯದಲ್ಲೂ ದೊಡ್ಡ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 2 ಕ್ರೀಡಾಂಗಣ ನಿರ್ಮಾಣಕ್ಕೆ ಅನುಮತಿಸಲಾಗಿದೆ. ಅದರ ಜತೆಗೆ ಚಿನ್ನಸ್ವಾಮಿ ಕ್ರೀಡಾಂಗಣವನ್ನು 60 ಸಾವಿರ ಆಸನ ಸಾಮರ್ಥ್ಯಕ್ಕೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಎಸ್ಸಿಎ ಜತೆಗೂ ಮಾತನಾಡಲಾಗಿದ್ದು, ಅದಕ್ಕೆ ಸರ್ಕಾರ ನೆರವು ನೀಡಲಿದೆ ಎಂದರು.


