ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ಕಾಂಗ್ರೆಸ್ನವರು ಧಮ್ಕಿ ಹಾಕಿ ಮತ ಪಡೆಯಲು ಹೊರಟಿದ್ದಾರೆ. ಬಾಗಲಕೋಟೆಯ ಜನ ಅದಕ್ಕೆ ಹೆದರುವುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬಾಗಲಕೋಟೆ (ಏ.01): ಕಾಂಗ್ರೆಸ್ನವರು ಧಮ್ಕಿ ಹಾಕಿ ಮತ ಪಡೆಯಲು ಹೊರಟಿದ್ದಾರೆ. ಬಾಗಲಕೋಟೆಯ ಜನ ಅದಕ್ಕೆ ಹೆದರುವುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇಪ್ಪತ್ತು ವರ್ಷಗಳ ಹಿಂದಿನ ಬಾಗಲಕೋಟೆಗೂ ಇಂದಿನ ಬಾಗಲಕೋಟೆಗೂ ಇರುವ ಅಭಿವೃದ್ಧಿ ಬದಲಾವಣೆಯ ಕಾರಣಿಕರ್ತರನ್ನು ಹುಡುಕಿದರೆ ಸಿಗುವುದು ಚರಂತಿಮಠರು ಮಾತ್ರ. ರಾಜಧಾನಿ ಬೆಂಗಳೂರಿನಲ್ಲಿಯೂ ಈ ಮಾದರಿಯ ಸುಸಜ್ಜಿತ ರಸ್ತೆಗಳಿಲ್ಲ.
ರಾಜ್ಯದ ಯಾವ ಜಿಲ್ಲೆಯೂ ಬಾಗಲಕೋಟೆಯಷ್ಟು ವಿಶಾಲವಾಗಿ ಬೆಳೆದಿಲ್ಲ. ಇದೆಲ್ಲವನ್ನು ನೋಡಿದ ಜನ ಯಾರು ಗೆಲ್ಲಬೇಕೆಂದು ತೀರ್ಮಾನ ಮಾಡುತ್ತಾರೆ? ಎಂದು ಹೇಳಿದರು. ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿಗಳು ಹೆದರಿಸಿ ಮತ ಪಡೆಯಲು ಹೊರಟಿದ್ದು ನನ್ನ ಕೈ ಬಲಪಡಿಸಿ ಎಂದು ಹೇಳುತ್ತಿದ್ದಾರೆ. ಜನರು ಡಿಕೆಶಿ ಅವರ ಕಾಲೆಳೆಯುವ ಕೈಯನ್ನು ಬಲಪಡಿಸಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು.
ಸಿದ್ದರಾಮಯ್ಯ ನಿರ್ಗಮಿಸುವ ಸಿಎಂ
ಕಪ್ಪು ರಸ್ತೆಗೆ ಕೆಂಪು ಮಣ್ಣು ಹಾಕಿ ಮುಚ್ಚುತ್ತಿರುವ ಕಾಂಗ್ರೆಸ್ ಸರ್ಕಾರ ಅದೇ ಗುಂಡಿಯಲ್ಲಿ ಕೆಂಪು ಮಣ್ಣು ಹೊದ್ದು ಮಲಗುವ ಕಾಲ ಬಂದಿದೆ. ಸಿದ್ದರಾಮಯ್ಯ ನಿರ್ಗಮಿಸುವ ಸಿಎಂ ಆಗಿದ್ದು ಸದನ ಬರದೇ ಹೋಗಿದ್ದರೆ ಇಷ್ಟೊತ್ತಿಗೆ ರಾಜೀನಾಮೆ ಕೊಡಬೇಕಿತ್ತು. ಚುನಾವಣೆ ಸಮಯದಲ್ಲಿ ಸಿಎಂ ಬದಲಾವಣೆ ಮಾಡಿದರೆ ಸೋಲುತ್ತೇವೆ ಎಂಬ ಭಯದಲ್ಲಿ ಅವರನ್ನು ಇಟ್ಟುಕೊಂಡಿದ್ದಾರೆ. ಆದರೂ ಸೋಲು ಅವರಿಗೆ ಅನಿವಾರ್ಯವಾಗಿದ್ದು, ಅವರ ಪಾಲಿಗೆ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಹದಿನೈದು ದಿನಗಳ ಒಳಗೆ ಮುಖ್ಯಮಂತ್ರಿ ಸ್ಥಾನದಿಂದ ಹೊರಹೋಗಲಿದ್ದಾರೆ.
ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದಿತ್ತು. ಆದರೆ ತಮ್ಮ ಕಾಲನ್ನು ತಾವೇ ಎಳೆದುಕೊಳ್ಳುತ್ತ ಕಾಲಹರಣ ಮಾಡಿದ್ದು, ತುಂಡಾದ ಕೈಹಿಡಿದುಕೊಂಡು ಬಂದಿರುವ ಕಳ್ಳೆತ್ತು ಸುಳ್ಳೆತ್ತುಗಳು ಎರಡೂ ಕ್ಷೇತ್ರದಲ್ಲಿ ಸೋಲುತ್ತವೆ. ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ ಅವರು ಮಾಡಿದ ಕೆಲಸಗಳಿಂದಲೇ ಗೆಲ್ಲುತ್ತಾರೆ ಎಂದರು. ಮತಯಾಚನೆಯಲ್ಲಿ ಮಾಜಿ ಸಚಿವ ಎನ್.ಮಹೇಶ್, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ಎನ್.ಬಿ ಬಣ್ಣೂರ, ಶಿವಲೀಲಾ ಪಟ್ಟಣಶೆಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.


