ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಸಿಲಿನ ಬೇಗೆಯಿಂದ ಪಾರಾಗಲು ಎಸಿ ಬದಲು ಕಿಸೆಯಲ್ಲಿ ಈರುಳ್ಳಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಮಧ್ಯಪ್ರದೇಶದ ಶಿವಪುರಿಯಲ್ಲಿ ಮಾತನಾಡಿದ ಅವರು, ತಾವೂ ಇದೇ ಹಳೆಯ ವಿಧಾನವನ್ನು ಪಾಲಿಸುವುದಾಗಿ ಹೇಳಿದ್ದು, ಅವರ ಈ ಹೇಳಿಕೆ ವೈರಲ್ ಆಗಿದೆ.

ಚಂಬಲ್‌ (ಏ.28): ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಬಿಸಿಲ ಬೇಗೆ ತಡೆಯಲಾಗದೇ ಜನತೆ ಹವಾನಿಯಂತ್ರಿತ ವ್ಯವಸ್ಥೆಗೆ (ಎಸಿ) ಮೊರೆ ಹೋಗುತ್ತಿರುವಾಗ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತ್ರ ಕಿಸೆಯಲ್ಲಿ ಈರುಳ್ಳಿ ಇಟ್ಟುಕೊಂಡೇ ಬಿಸಿಲ ಧಗೆ ನಿವಾರಿಸಿಕೊಳ್ಳುತ್ತಿದ್ದಾರಂತೆ.

Add Asianetnews Kannada as a Preferred SourcegooglePreferred

ಹೌದು.. ಈ ಖುದ್ದು ಸಿಂಧಿಯಾ ಈ ಹೇಳಿಕೆ ನೀಡಿದ್ದು, ಜನತೆಗೆ ನೀವೂ ಇದನ್ನೇ ಪಾಲಿಸಿ ಎಂದು ಸಲಹೆ ನೀಡಿದ್ದಾರೆ. ಸಚಿವರ ಈ ಹೇಳಿಕೆ ಭಾರೀ ವೈರಲ್‌ ಆಗಿದ್ದು, ಥರಾವರಿ ಪ್ರತಿಕ್ರಿಯೆಗಳಿಗೆ ಗುರಿಯಾಗಿದೆ.

ಮಧ್ಯಪ್ರದೇಶದ ಶಿವಪುರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಸಿಂಧಿಯಾ, ‘ನಾನು ನನ್ನ ಕಾರಿನಲ್ಲಿ ಹವಾನಿಯಂತ್ರಕ (ಎಸಿ) ಬಳಸುವುದಿಲ್ಲ, ಎಸಿ ವಾತಾವರಣದಲ್ಲಿ ಕುಳಿತುಕೊಳ್ಳುವುದಿಲ್ಲ’ ಎಂದರು.

‘ಮೇ ಮತ್ತು ಜೂನ್ ತಿಂಗಳ 51 ಡಿಗ್ರಿ ಶಾಖದಲ್ಲಿಯೂ ಹೇಗೆ ಇರುತ್ತೀರಿ ಎಂದು ಜನ ನನ್ನನ್ನು ಕೇಳುತ್ತಾರೆ. ಆಗ ನಾನು ‘ಇದು ಚಂಬಲ್ ಚರ್ಮ’ ಎನ್ನುತ್ತೇನೆ. ನಾನು ನಿಮಗೆ ಇನ್ನೊಂದು ವಿಷಯವನ್ನು ಹೇಳುತ್ತೇನೆ. ನಿಮ್ಮ ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳಿ. ಏನೂ ಆಗುವುದಿಲ್ಲ. ಇಂದಿನ ಕಾಲದಲ್ಲಿ, ಎಲ್ಲರೂ ಪೆಟ್ಟಿಗೆಗಳನ್ನು ಹೊತ್ತೊಯ್ಯುತ್ತಿದ್ದಾರೆ. ಆದರೆ ಸಂವಹನ ಸಚಿವರು (ತಾನು) ಈರುಳ್ಳಿಯನ್ನು ಹೊತ್ತೊಯ್ಯುತ್ತಿದ್ದಾರೆ. ಇವೆಲ್ಲ ಹಳೆಯ ವಿಧಾನಗಳು. ಆದರೆ ವೈದ್ಯಕೀಯ ಮುಂದುವರಿದಂತೆ, ನಾವು ಈ ವಿಷಯಗಳನ್ನು ಮರೆಯಬಾರದು’ ಎಂದರು.