ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಮೂರು ಬಾರಿ ಸಿಎಂ ಸ್ಥಾನ ಕೈತಪ್ಪಿದ್ದರ ಬಗ್ಗೆ ಬಹಿರಂಗವಾಗಿ ಬೇಸರ. 2013, 2018 ಹಾಗೂ ಈ ಬಾರಿಯೂ ಸಿಎಂ ಹುದ್ದೆ ಸಿಗದಿರಲು ರಾಜಕೀಯ ಕಾರಣಗಳನ್ನು ಉಲ್ಲೇಖಿಸಿದ ಅವರು, ಪಕ್ಷಕ್ಕೆ ನಿಷ್ಠನಾಗಿರುವುದಾಗಿ ಭಾವುಕರಾಗಿ ನುಡಿದರು.

ತುಮಕೂರು (ಜೂ.9): ‘ನನ್ನ ಜೀವನದಲ್ಲಿ 3 ಬಾರಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದೆ’ ಎಂದು ಉಪ ಮುಖ್ಯಮಂತ್ರಿ, ಕಂದಾಯ ಸಚಿವ ಡಾ.ಜಿ.ಪರಮೇಶ್ವರ್(Dr G Parameshwar) ಬಹಿರಂಗ ಬೇಸರ ವ್ಯಕ್ತಪಡಿಸಿದ್ದಾರೆ. ತಮಗೆ ಸಿಎಂ ಹುದ್ದೆ ತಪ್ಪಿದರೂ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿರುವುದಾಗಿ ಅವರು ಭಾವುಕರಾಗಿ ನುಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನ್ನ ರಾಜಕೀಯ ಜೀವನದಲ್ಲಿ ಮೂರು ಬಾರಿ ಸಿಎಂ ಹುದ್ದೆ ಕೈತಪ್ಪಿದೆ

ಡಿ.ಕೆ.ಶಿವಕುಮಾರ್‌ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಡಿಸಿಎಂ ಹುದ್ದೆ ಪಡೆದ ಪರಂ ಅವರನ್ನು ಸೋಮವಾರ ಅವರ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಪರಮೇಶ್ವರ್‌, ‘ನನಗೆ ನನ್ನ ರಾಜಕೀಯ ಜೀವನದಲ್ಲಿ 3 ಬಾರಿ ಸಿಎಂ ಹುದ್ದೆ ಕೈತಪ್ಪಿತು. 2013ರಲ್ಲಿ ಚುನಾವಣೆಯಲ್ಲಿ ಸೋತೆ. ಸೋತಿದ್ದರಿಂದ ನನಗೆ ಸಿಎಂ ಹುದ್ದೆ ಕೈ ತಪ್ಪಿತು. ಬಹುಶಃ ಅಂದು ನಾನು ಗೆದ್ದಿದ್ದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುತ್ತಿರಲಿಲ್ಲ’ ಎಂದರು.

2018ರಲ್ಲಿ ನನ್ನ ಮುಖ್ಯಮಂತ್ರಿ ಮಾಡಬಹುದಿತ್ತು. ಕುಮಾರಸ್ವಾಮಿಗೆ ಕೊಟ್ಟರು!

‘2018ರಲ್ಲಿ ನಮ್ಮ‌ ಪಕ್ಷ 80 ಸೀಟು ಗೆದ್ದಿತ್ತು. ಆಗ, 30 ಸೀಟು ಗೆದ್ದಿದ್ದ ಜೆಡಿಎಸ್‌ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡ ಕಾರಣದಿಂದ ಎಚ್‌.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದರು. ಆವತ್ತು ನನ್ನನ್ನು ಮುಖ್ಯಮಂತ್ರಿ ಮಾಡಬಹುದಿತ್ತು. ಹೀಗಾಗಿ, ಎರಡನೇ ಬಾರಿಗೂ ಸಿಎಂ ಸ್ಥಾನ ಮಿಸ್ ಆಯ್ತು. ಈ ಬಾರಿ ಪ್ರಯತ್ನ ಮಾಡಿದೆ. ಈ ಬಾರಿಯಾದರೂ ನನಗೆ ಸಿಎಂ ಸ್ಥಾನ ಸಿಗುತ್ತೆ ಎಂಬ ವಿಶ್ವಾಸ ಇತ್ತು. ‘ಕೊಡಲು ಸಾಧ್ಯವಿಲ್ಲ ಅಂದರೆ ಹೇಳಿ. ನನಗೆ ಬಹಳ ದೊಡ್ಡ ಕೆಲಸಗಳಿವೆ, ವಾಪಸ್‌ ಹೋಗುತ್ತೇನೆ’ ಅಂತ ಹೇಳಿದ್ದೆ. ಆದರೆ, ರಾಜಕೀಯ ಕಾರಣಗಳು ಹಾಗೂ ತೀರ್ಮಾನಗಳು ಬೇರೆ ತರಹ ಆಗಿದ್ದರಿಂದ ನನಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ನನ್ನ ದುರಾದೃಷ್ಟವೋ, ಹಣೆಬರಹವೋ ಏನೋ ಏನೋ‌ ಗೊತ್ತಿಲ್ಲ. 3 ಬಾರಿ ಸಿಎಂ ಹುದ್ದೆ ತಪ್ಪಿದೆ. ಆದರೂ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ’ ಎಂದು ಭಾವುಕರಾಗಿ ನುಡಿದರು.‘

‘ನನಗೆ ನನ್ನ ಸಂಸ್ಥೆಯ ಶ್ರೇಯೋಭಿವೃದ್ಧಿ ಮುಖ್ಯ. ಜನರು ನಮ್ಮನ್ನು ಮೆಗ್ನಿಫೈಯಿಂಗ್‌ ಗ್ಲಾಸ್‌ ನಲ್ಲಿ ನೋಡುತ್ತಾರೆ. ಆದ್ದರಿಂದ ಜವಾಬ್ದಾರಿಯಿಂದ ನಡೆದುಕೊಳ್ಳುತ್ತೇನೆ’ ಎಂದರು.