ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆತ್ಮಹತ್ಯೆ ಮತ್ತು ಸಾವಿನ ಭಾಗ್ಯವನ್ನೇ ನೀಡುತ್ತಿದೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. 

ಶಿವಮೊಗ್ಗ (ಜ.05): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆತ್ಮಹತ್ಯೆ ಮತ್ತು ಸಾವಿನ ಭಾಗ್ಯವನ್ನೇ ನೀಡುತ್ತಿದೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಾಜ್ಯದಲ್ಲಿ ಸಂಭವಿಸುತ್ತಿರುವ ಬಾಣಂತಿಯರು ಹಾಗೂ ಶಿಶುಗಳ ಮರಣ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿನ ದಿನಗಳಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಶಿವಮೊಗ್ಗದ ಚಂದ್ರಶೇಖರ್, ಕಾಂಗ್ರೆಸ್ ಶಾಸಕನ ಪುತ್ರನ ಕಿರುಕುಳದಿಂದ ಪಿಎಸ್‌ಐ ಪರಶುರಾಮ್, ಬೆಳಗಾವಿ ಸಚಿವರ ಪಿಎ ಕಿರುಕುಳದಿಂದ ಅಲ್ಲಿನ ತಹಸೀಲ್ದಾರ್ ಕಚೇರಿ ಎಸ್‌ಡಿಎ, ಗುಲ್ಬರ್ಗಾದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಬಲಗೈ ಬಂಟನ ಕಿರುಕುಳದಿಂದ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದರ ಜೊತೆಗೆ ರಾಜ್ಯದಲ್ಲಿ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ಬಾಣಂತಿಯರ ಸರಣಿ ಸಾವು ಸಂಭವಿಸಿದೆ. ಇದಲ್ಲದೆ, ಸಾವಿರಕ್ಕೂ ಹೆಚ್ಚು ನವಜಾತ ಶಿಶುಗಳ ಸಾವು ಆಗಿದೆ. 

ಹೊಸವರ್ಷ ದಿನವೇ ಭಿನ್ನರ ವಿರುದ್ಧ ಶಾಗೆ ವಿಜಯೇಂದ್ರ ದೂರು

ಆದರೂ ಈ ಸರ್ಕಾರದಲ್ಲಿ ಯಾರಿಗೂ ಕಿಂಚಿತ್ ಜವಾಬ್ದಾರಿ ಇಲ್ಲ. ಇದೊಂದು ಲಜ್ಜೆಗಟ್ಟ ಸರ್ಕಾರ. ಈ ಪ್ರಮಾಣದ ಸಾವುಗಳನ್ನು ಹಿಂದಿನ ಯಾವುದೇ ಸರ್ಕಾರದಲ್ಲಿ ಜನರು ನೋಡಿರಲಿಲ್ಲ ಎಂದು ಕಿಡಿಕಾರಿದರು. ಈ ಸರ್ಕಾರಕ್ಕೆ ಕಂದಮ್ಮಗಳ ಹಾಗೂ ಬಾಣಂತಿಯರ ಶಾಪ ತಟ್ಟುತ್ತದೆ ಎಂದು ಎಚ್ಚರಿಕೆ ನೀಡಿದರು.ಅಧಿಕಾರದ ಅಮಲಿನಲ್ಲಿರುವ ದುಷ್ಟ ಸರ್ಕಾರ ಇದು. ಅತ್ಯಂತ ಭಂಡ ಸರ್ಕಾರವನ್ನು ಜನರು ನೋಡುತ್ತಿದ್ದಾರೆ. ಕೂಡಲೇ ಮೃತಪಟ್ಟಿರುವ ಬಾಣಂತಿಯರ ಕುಟುಂಬಗಳಿಗೆ 25 ಲಕ್ಷ ರು. ಪರಿಹಾರ ಘೋಷಣೆ ಮಾಡಬೇಕು. 

ಅನಾಥವಾಗಿರುವ ಮಕ್ಕಳನ್ನು ಸರ್ಕಾರವೇ ದತ್ತು ತೆಗೆದುಕೊಂಡು ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಬೇಕೆಂದು ಆಗ್ರಹಿಸಿದರು.ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಹಿಳಾ ಮೋರ್ಚಾ ಜಿಲಾಧ್ಯಕ್ಷೆ ಗಾಯತ್ರಿ ದೇವಿ ಮಲ್ಲಪ್ಪ, ಪ್ರಮುಖರಾದ ಕೆ.ಜಿ.ಕುಮಾರಸ್ವಾಮಿ, ಎಸ್.ದತ್ತಾತ್ರಿ, ಮಾಲತೇಶ್, ಸುರೇಖಾ ಮುರುಳೀಧರ, ಡಾ.ಶ್ರೀನಿವಾರ ರೆಡ್ಡಿ, ಹರಿಕೃಷ್ಣ ಇನ್ನಿತರರು ಇದ್ದರು.

ವಿಜಯೇಂದ್ರ ನೇತೃತ್ವದಲ್ಲಿ ಖರ್ಗೆ ಮನೆಗೆ ಮುತ್ತಿಗೆ: ಬೀದರ್ ಮೂಲದ ಕಾಂಟ್ರಾಕ್ಟರ್ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್‌ ನೋಟ್‌ನಲ್ಲಿ ಆಪ್ತನ ಹೆಸರು ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ರಾಜೀನಾಮೆಗೆ ಆಗ್ರಹಿಸಿ ಶನಿವಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಕಲಬುರಗಿ ನಿವಾಸಕ್ಕೆ ಬಿಜೆಪಿ ಮುತ್ತಿಗೆ ಹಾಕಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುವ ಹೋರಾಟದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಎನ್. ರವಿಕುಮಾರ್‌ ಮುಂತಾದ ನಾಯಕರು ಭಾಗವಹಿಸಲಿದ್ದಾರೆ.

ಡ್ರಗ್‌ ಮಾಫಿಯಾ ಮಟ್ಟಹಾಕಲು ಸರ್ಕಾರ ಮುಂದಾಗಲಿ: ಬಿ.ವೈ.ವಿಜಯೇಂದ್ರ

ಸಚಿವ ಖರ್ಗೆಯವರ ಐವಾನ್‌ ಐ ಷಾಹಿ ಬಡಾವಣೆಯಲ್ಲಿರುವ ಲುಂಬಿನಿ ಮನೆಗೆ ಮುತ್ತಿಗೆ ಹಾಕಲು ಕಲಬುರಗಿಗೆ ಶನಿವಾರ ಬಿಜೆಪಿ ರಾಜ್ಯ ನಾಯಕರ ದಂಡೇ ಆಗಮಿಸುತ್ತಿದ್ದು, ಬೆಳಗ್ಗೆ 10 ಗಂಟೆಗೆ ಜಗತ್ ಸರ್ಕಲ್‌ನಿಂದ ಪ್ರತಿಭಟನೆ ಆರಂಭಿಸಿ ಮುಖ್ಯರಸ್ತೆಯಲ್ಲಿ ಸಾಗಿ ಪ್ರಿಯಾಂಕ್‌ ಮನೆಗೆ ಮುತ್ತಿಗೆ ಹಾಕಲಾಗುತ್ತಿದೆ ಎಂದು ಬಿಜೆಪಿ ಜನಾಂದೋಲನ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ ಹಿರೇಮನಿ ಹೇಳಿದ್ದಾರೆ. ಎರಡು ದಿನದಿಂದ ಕಲಬುರಗಿಯಲ್ಲಿ ಠಿಕಾಣಿ ಹೂಡಿರುವ ಜಗದೀಶ ಅವರು ಹೋರಾಟ ಸಿದ್ಧತೆಯಲ್ಲಿ ತೊಡಗಿದ್ದಾರೆ.