ಮೀಡಿಯಾ ಕನೆನ್ಟ್ ಸಂಸ್ಥೆಯ ಸಿಇಒ ಗೆ ಲಂಡನ್ ನಲ್ಲಿ ಪ್ರಶಸ್ತಿ ಗೌರವ/ ಲಂಡನ್ ಮಹಾನಗರದ ಹೌಸ್ ಆಫ್ ಕಾಮನ್ಸ್ ನಲ್ಲಿ ಯುನೈಟೆಡ್ ಕಿಂಗ್‍ಡಮ್‍ನ ಸಂಸದ ವೀರೇಂದ್ರ ಶರ್ಮಾ ಅವರಿಂದ ಪ್ರಶಸ್ತಿ ಪ್ರದಾನ/ ‘ಮಹಾತ್ಮ ಗಾಂಧಿ ಲೀಡರ್ ಶಿಪ್ ಅವಾರ್ಡ್’

ಲಂಡನ್(ಅ.23) ಮೀಡಿಯಾ ಕನೆಕ್ಟ್ ಸಂಸ್ಥೆಯ ಸಿಇಒ ಡಾ. ದಿವ್ಯಾ ರಂಗೇನಹಳ್ಳಿಗೆ ಭಾರತೀಯ ಕ್ಷೇಮಾಭಿವೃದ್ಧಿ ಸಂಘವು (ಯುಕೆ ಚಾಪ್ಟರ್) ಪ್ರತಿಷ್ಠಿತ ‘ಮಹಾತ್ಮ ಗಾಂಧಿ ಲೀಡರ್ ಶಿಪ್ ಅವಾರ್ಡ್’ನೀಡಿ ಗೌರವಿಸಿದೆ.

Add Asianetnews Kannada as a Preferred SourcegooglePreferred

ಲಂಡನ್ ಮಹಾನಗರದ ಹೌಸ್ ಆಫ್ ಕಾಮನ್ಸ್ ನಲ್ಲಿ ಯುನೈಟೆಡ್ ಕಿಂಗ್‍ಡಮ್‍ನ ಸಂಸದ ವೀರೇಂದ್ರ ಶರ್ಮಾ ಪ್ರತಿಷ್ಠಿತ ಪ್ರಶಸ್ತಿಯನ್ನು ದಿವ್ಯಾ ಅವರಿಗೆ ಪ್ರದಾನ ಮಾಡಿದರು. ದಿವ್ಯಾ ಅವರ ಜತೆಗೆ ವಿವಿಧ ಕ್ಷೇತ್ರಗಳ 25 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎನ್ ಆರ್ ಐ ಗಳಿಂದಲ್ಲೂ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೆರವು

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ ದಿವ್ಯಾ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನವನ್ನು ಆಚರಿಸುತ್ತಿರುವ ಈ ಅಪೂರ್ವ ಘಳಿಗೆಯಲ್ಲಿ ಅದೇ ಹೆಸರಿನ ಮಹಾತ್ಮ ಗಾಂಧಿ ಲೀಡರ್ ಶಿಪ್ ಅವಾರ್ಡ್ ಪಡೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

ದೇಶದ ಕೀರ್ತಿ ಹೆಚ್ಚಿಸಿದ ಹಾಗೂ ವಿಶೇಷ ಸಾಧನೆ ಮಾಡಿದ ಭಾರತೀಯರನ್ನ ಗುರುತಿಸಿ ಗೌರವಿಸುವ ಕಾರ್ಯವನ್ನ ಅನಿವಾಸಿ ಭಾರತೀಯ ಕ್ಷೇಮಾಭಿವೃದ್ಧಿ ಸಂಘವು (ಯುಕೆ ಚಾಪ್ಟರ್) ನಡೆಸಿಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಅಧ್ಯಕ್ಷ ಮತ್ತು ಚೇರಮನ್ ಗೋಹಾರ್ ನವಾಬ್ ಮತ್ತು ಸಂಘದ ಪ್ರಧಾನ ಕಾರ್ಯದರ್ಶಿ ಗುರಿಂದರ್ ಸಿಂಗ್ ಉಪಸ್ಥಿತರಿದ್ದರು.

ಭಾರತೀಯರು ಮತ್ತು ಅನಿವಾಸಿ ಭಾರತೀಯರ ನಡುವೆ ಸದಾ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುವ ಉದಾತ್ತ ಧ್ಯೇಯಗಳನ್ನ ಇಟ್ಟುಕೊಂಡು ಅನಿವಾಸಿ ಭಾರತೀಯ ಕ್ಷೇಮಾಭಿವೃದ್ಧಿ ಸಂಘವನ್ನ ಹುಟ್ಟುಹಾಕಲಾಯಿತು. ಈ ಸಂಘದ ಉದ್ದೇಶವೇ ಅನಿವಾಸಿ ಭಾರತೀಯರನ್ನ ಒಗ್ಗೂಡಿಸಿ ಅವರಲ್ಲಿ ತಮ್ಮ ತಾಯ್ನಾಡಿನ ಕುರಿತು ಹೆಮ್ಮೆ ಹಾಗೂ ಸದಾಭಿಪ್ರಾಯ ಮೂಡುವಂತೆ ಮಾಡುವುದಾಗಿದೆ.

ಈ ಅನಿವಾಸಿ ಭಾರತೀಯ ಕ್ಷೇಮಾಭಿವೃದ್ಧಿ ಸಂಘವು ಭಾರತೀಯರ ಹಾಗೂ ಅನಿವಾಸಿ ಭಾರತೀಯರ ಸಾಧನೆ, ಕೊಡುಗೆ ಹಾಗೂ ಶ್ರೇಷ್ಠ ಕಾರ್ಯಗಳನ್ನ ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತದೆ.